ಒಳಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಒತ್ತಾಯಿಸಿ ಸೆಪ್ಟಂಬರ್‌ 16ರಂದು ಹಕ್ಕೊತ್ತಾಯ ಸಭೆ

ಬೆಂಗಳೂರು: ಒಳಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಒತ್ತಾಯಿಸಿ ಸೆಪ್ಟಂಬರ್‌ 16ರಂದು ಹಕ್ಕೊತ್ತಾಯ ಸಭೆ ನಡೆಯಲಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಮತ್ತು ದಲಿತ ಸಂಘರ್ಷ ಸಮೀತಿಗಳ ಒಕ್ಕೂಟ ತಿಳಿಸಿದೆ.

ಸುಮಾರು ಮೂರು ದಶಕಗಳ ಕಾಲ ಹೋರಾಟದ ಫಲವಾಗಿ ಆಗಸ್ಟ್ 1, 2024 ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ಯಾವುದೇ ಸಾಂವಿಧಾನಿಕ ತೊಡಕುಗಳಿಲ್ಲ ಹಾಗೂ ರಾಜ್ಯ ಸರ್ಕಾರಕ್ಕೆ ಆ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಇಡೀ ಭಾರತ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ರಾಜ್ಯದ ಪರಿಸ್ಥಿತಿಯು ಒಳಮೀಸಲಾತಿ ಜಾರಿಗೆ ಬಹಳ ಅನುಕೂಲಕರವಾಗಿದೆ. ಸುಗ್ರೀವಾಜ್ಞೆ

2023 ರ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಕರ್ನಾಟಕದ ಕಾಂಗ್ರಸ್‌ ಪಕ್ಷವು ಚಿತ್ರದುರ್ಗದಲ್ಲಿ ನಡೆಸಿದ ‘ಕಾಂಗ್ರೆಸ್‌ ಐಕ್ಯತಾ ಸಮಾವೇಶʼದಲ್ಲಿ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲಿಯೇ ಒಳಮೀಸಲಾತಿ ಜಾರಿಗಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ರಾಹುಲ್‌ ಗಾಂಧಿಯವರ ಜಿಸ್ ಕಿ ಜಿತ್ನಿ ಆಬಾದಿ, ಉಸ್ ಕಿ ಉತ್ನಿ ಭಾಗೀದಾರಿ ಎಂಬ ಘೋಷವಾಕ್ಯದ ಜೊತೆಗೆ ಬಿಜಾಪುರದಲ್ಲಿ ದಲಿತ ನಾಯಕರಿಗೆ ಕೊಟ್ಟ ಮಾತಿನಂತೆ, ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ‘ಒಳಮೀಸಲಾತಿ ಜಾರಿʼ ಆಶ್ವಾಸನೆಯನ್ನು ನೀಡಿತ್ತು.

ಇದನ್ನೂ ಓದಿ: ವಚನ ದರ್ಶನ: ಕೋಮುವಾದಿ ರಾಜಕಾರಣದ ದುಷ್ಟ ಉತ್ಪಾದನೆ

ಅದರಂತೆ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ಮೇಲೆ ಒಳಮೀಸಲಾತಿ ಜಾರಿಗಾಗಿ ಸಂವಿಧಾನ ತಿದ್ದುಪಡಿ ಮಾಡಬೇಕೆಂಬ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆನಂತರ ಸುಪ್ರೀಂಕೋರ್ಟ್‌ ತೀರ್ಪು ಬಂದ ದಿನ ಮುಖ್ಯಮಂತ್ರಿಗಳು ತೀರ್ಪನ್ನು ಸ್ವಾಗತಿಸಿದ್ದಾರೆ. ಆದರೆ ಒಂದೂವರೆ ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಪರಿಶಿಷ್ಟ ಜಾತಿಗಳಲ್ಲಿ ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ.

ಈ ಕುರಿತಂತೆ, ಸೆಪ್ಟೆಂಬರ್‌ 17 ರಂದು ಕಲುಬುರ್ಗಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ‘ಒಳಮೀಸಲಾತಿ ಜಾರಿʼ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಕರ್ನಾಟಕ ಸರ್ಕಾರವನ್ನು ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟʼವು ಆಗ್ರಹಿಸುತ್ತದೆ. ಅದಕ್ಕಾಗಿ ಸೆಪ್ಟಂಬರ್‌ 16 ರಂದು , ಸಂಜೆ 4 ಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಕ್ಕೊತ್ತಾಯ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.

ಇದನ್ನೂ ನೋಡಿ: ದುರ್ಬಲವಾಗುತ್ತಿರುವ ಸರ್ಕಾರಿ ಶಾಲೆಗಳು : ಸರ್ಕಾರ ಏನು ಮಾಡುತ್ತಿದೆ? – ಕೃಷ್ಣಮೂರ್ತಿ ಬಿಳಿಗೆರೆJanashakthi Media

Donate Janashakthi Media

Leave a Reply

Your email address will not be published. Required fields are marked *