ಹಾಸನ ಜೂನ್ 20ರಂದು ನಿಧನರಾದ ಹಿರಿಯ ಕಾರ್ಮಿಕ ಮುಖಂಡ, ಸಿಐಟಿಯು ಹಾಸನ ಜಿಲ್ಲಾ ಹಿರಿಯ ಉಪಾಧ್ಯಕ್ಷ ಕಾಮ್ರೇಡ್ ಜಿ.ಪಿ. ಸತ್ಯನಾರಾಯಣ ಅವರಿಗೆ ಸಿಐಟಿಯು ಹಾಗೂ ಸಿಪಿಐ(ಎಂ) ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ನಿಷ್ಠಾವಂತ
ಸಭೆಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ, “ಜಿ.ಪಿ. ಸತ್ಯನಾರಾಯಣ ಅವರು ವರ್ಗರಹಿತ ಸಮಾಜ ನಿರ್ಮಾಣಕ್ಕಾಗಿ ಬದುಕಿನುದ್ದಕ್ಕೂ ಹೋರಾಡಿದ ನಿಷ್ಠಾವಂತ ಕಮ್ಯುನಿಸ್ಟ್. ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿದ ಅವರ ಅಗಲಿಕೆ ಕಾರ್ಮಿಕ ಚಳುವಳಿ ಹಾಗೂ ಕಮ್ಯುನಿಸ್ಟ್ ಚಳುವಳಿಗೆ ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದರು.
ಪ್ರಸ್ತುತ ಕಾರ್ಮಿಕ ವರ್ಗ ದಿನದಿಂದ ದಿನಕ್ಕೆ ಹೆಚ್ಚಿನ ಸಂಕಷ್ಟಕ್ಕೆ ಸಿಲುಕುತ್ತಿದ್ದು, ದುಡಿಯುವ ಜನರ ಬದುಕು ದುಸ್ತರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿದ್ದ ನಾಯಕನ ಅಗಲಿಕೆ ದೊಡ್ಡ ಶೂನ್ಯವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು. ನಿಷ್ಠಾವಂತ
ಇದನ್ನೂ ಓದಿ : ಕರ್ನಾಟಕದಲ್ಲಿ ಖರೀಫ್ ಬಿತ್ತನೆ ಕುಸಿತ: ಗುರಿಯ 43% ಮಾತ್ರ ಸಾಧನೆ

ರಾಜ್ಯದ ಹಲವು ಭಾಗಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಬೀದಿ ಬದಿ ವ್ಯಾಪಾರಿಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸುವ ಕ್ರಮಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಸರ್ಕಾರದ ಕೆಲವು ಸಚಿವರ ಹೇಳಿಕೆಗಳು ಆತಂಕ ಮೂಡಿಸಿದ್ದು, ಸುಪ್ರೀಂ ಕೋರ್ಟ್ ಆದೇಶದ ಹೆಸರಿನಲ್ಲಿ ಕ್ರಮಗಳನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ, ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಸಂಬಂಧಿತ ಕಾನೂನುಗಳನ್ನು ಜಾರಿಗೊಳಿಸುವ ಪ್ರಶ್ನೆ ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಹಾಸನ ಜಿಲ್ಲಾ ಅಧ್ಯಕ್ಷ ಧರ್ಮೇಶ್, “ಜಿ.ಪಿ. ಸತ್ಯನಾರಾಯಣ ಅವರು ಸಾಮಾನ್ಯ ಕಾರ್ಮಿಕರಾಗಿ ಜೀವನ ಆರಂಭಿಸಿ, ನಂತರ ಕಾರ್ಮಿಕ ನಾಯಕರಾಗಿ ಬೆಳೆದವರು. ಸಿಐಟಿಯು ಜಿಲ್ಲಾ ಖಜಾಂಚಿಯಾಗಿ ಮೂರು ಅವಧಿ ಹಾಗೂ ಹಾಲಿ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಕೊನೆಯ ಕ್ಷಣದವರೆಗೂ ಕಾರ್ಮಿಕರ ವಿಮೋಚನೆಗಾಗಿ ದುಡಿದ ನಾಯಕರು. ಅವರ ಅಗಲಿಕೆ ಕಾರ್ಮಿಕ ಚಳುವಳಿ ಹಾಗೂ ಕಮ್ಯುನಿಸ್ಟ್ ಪಕ್ಷಕ್ಕೆ ತುಂಬಲಾರದ ನಷ್ಟ” ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಿಐಟಿಯು ಹಿರಿಯ ಮುಖಂಡ ವಿ. ಸುಕುಮಾರ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಅರವಿಂದ, ಡಿವೈಎಫ್ಐ ಮುಖಂಡ ಪೃಥ್ವಿ, ವಿಜಯ್ ಕುಮಾರ್ ದಂಡೋರ, ಮೃತರ ಪತ್ನಿ ವನಜಾಕ್ಷಿ, ಪುತ್ರ ಕಾರ್ತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : 40 ಬೇಡಿಕೆಗಳೊಂದಿಗೆ ಜುಲೈ 10ಕ್ಕೆ ಅಂಗನವಾಡಿ-ಬಿಸಿಯೂಟ ನೌಕರರ ರಾಜ್ಯವ್ಯಾಪಿ ಮುಷ್ಕರ
