ಕಸಾಪ ಚುನಾವಣೆ : ಮಹೇಶ್ ಜೋಷಿ ತಿರಸ್ಕರಿಸುವಂತೆ ಸಾಹಿತಿಗಳ ಮನವಿ

  • ರಾಜಕೀಯ ಪಕ್ಷಗಳ ಭಾಗವಹಿಸುವಿಕೆಗೆ ವಿರೋಧ
  • ರಾಜಕೀಯ ಪಕ್ಷಗಳ ಭಾಗವಹಿಸುವಿಕೆ ಕಸಾಪ ಆಶಯಕ್ಕೆ ವಿರುದ್ಧ
  • ರಾಜಕೀಯ ಪಕ್ಷಗಳ ಬೆಂಬಲ ಪಡೆದಿರುವ ಅಭ್ಯರ್ಥಿಗಳಿಗೆ ಮತ ನೀಡಬೇಡಿ

ಬೆಂಗಳೂರು : ಇದೇ ನವಂಬರ್ 21ರಂದು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಬಹಿರಂಗ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಭಾಗವಹಿಸಿದ್ದು ಅಪಾಯಕಾರಿ ಬೆಳವಣಿಗೆ ನಾವು ಇದನ್ನು ವಿರೋಧಿಸಬೇಕು ಎಂದು ಸಾಹಿತ್ಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ. ನೂರು ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಈ ಸಂಸ್ಥೆ ಕನ್ನಡ ಸಾಹಿತ್ಯದ ಪರಿಚಾರಕ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಾ ಬಂದಿದೆ. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಕನ್ನಡ ಜನತೆ ಎದುರಿಸುವ ಭಾಷಿಕ, ಪ್ರಾದೇಶಿಕ ಮತ್ತು ಇತರ ಸಾಂಸ್ಕೃತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಬಂದಿದೆ.

ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳೂ ಸಮಾನ ಅವಕಾಶದೊಂದಿಗೆ ಸಮಸ್ತ ಜನ
ಸಮುದಾಯಗಳನ್ನೊಳಗೊಂಡಂತೆ ಪ್ರಗತಿ ಸಾಧಿಸುತ್ತಾ ಬಂದಿದೆ. ಒಂದು ಸಮಾಜಮುಖಿ ಸಂವೇದನಾಶೀಲ ಕನ್ನಡ ಸಾಹಿತ್ಯ ಪರಂಪರೆಯನ್ನು ಪೋಷಿಸುವ ಸಲುವಾಗಿ , ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತ ಬಂದಿದೆ.

ದುರಾದೃಷ್ಟವಶಾತ್ ಇತ್ತೀಚಿನ ಕೆಲವು ವರ್ಷಗಳಲ್ಲಿ ಕ ಸಾ ಪ ಚುನಾವಣೆಗಳಲ್ಲಿ ಜಾತಿ ಪ್ರಭಾವ, ಭ್ರಷ್ಟ ಹಣ ಹಂಚುವಿಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇದು ಸಾಂಸ್ಕೃತಿಕ ಲೋಕಕ್ಕೆ ದೊಡ್ಡ  ಆಘಾತಕಾರಿ ಸಮಸ್ಯೆಯಾಗಿ ಎದುರಾಗಿತ್ತು.
ಇದರ ಜೊತೆಗೆ ಈ ವರ್ಷದ ಕ.ಸಾ.ಪ ಚುನಾವಣೆಯಲ್ಲಿ ಆಡಳಿತಾರೂಢ ರಾಜಕೀಯ ಪಕ್ಷದ ನೇರ ಪ್ರವೇಶ ದಿಗ್ಭ್ರಮೆ ಹುಟ್ಟಿಸಿದೆ ಅಷ್ಟೇ ಅಲ್ಲ, ಒಂದು ದುಷ್ಟ ಬೆಳವಣಿಗೆಯಾಗಿದೆ.

ಇದುವರೆಗೂ ನಡೆದ ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷವು ಈ ರೀತಿಯಾಗಿ ನೇರ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ ಭಾ.ಜ.ಪ.ವು ಸಾಂಸ್ಕೃತಿಕ ಕ್ಷೇತ್ರಕ್ಕೂ ತನ್ನ ಹಸ್ತಕ್ಷೇಪ ವನ್ನು ಆಕ್ರಮಣಕಾರಿಯಾಗಿ ವಿಸ್ತರಿಸಿ ಎಲ್ಲವನ್ನೂ ಹಾಳುಗೆಡಹಲು ಹೊರಟಿದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಆರೋಪಿಸಿದ್ದಾರೆ.

ಮಹೇಶ್ ಜೋಶಿಯವರು ಒಬ್ಬ ಸಾಂಸ್ಕೃತಿಕ ಮನಸ್ಸಿನ ಅಭ್ಯರ್ಥಿಯಾಗಿ  ಈ ಚುನಾವಣೆಯಲ್ಲಿ ಎಲ್ಲರಂತೆ ಭಾಗವಹಿಸಿದ್ದರೆ ನಾವು ಯಾರೂ ವಿರೋಧಿಸುತ್ತಿರಲಿಲ್ಲ. ಈ ಚುನಾವಣೆಯ ಪ್ರಾರಂಭದಲ್ಲಿ ಅವರು ಹಾಗೆಯೇ ನಡೆದುಕೊಂಡಿದ್ದರಿಂದ ನಾವು ಯಾರೂ ಚಕಾರವೆತ್ತಿರಲಿಲ್ಲ. ಆದರೆ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಯಾದ ಕಸಾಪಕ್ಕೆ ಆಳುವ ಪಕ್ಷದ ಬೆಂಬಲವನ್ನು ನೇರವಾಗಿ ಪೋಷಿಸಿಕೊಂಡು ಚುನಾವಣೆ ಗೆ ಹೊರಟಿರುವುದು ಖಂಡನೀಯ ಎಂದು ಕವಯಿತ್ರಿ ಕೆ.ಷರೀಫಾ ಆರೋಪಿಸಿದ್ದಾರೆ.

ಮಹೇಶ್ ಜೋಶಿಯವರ ನಡೆ ಕಸಾಪದ ಮೂಲ ಆಶಯಕ್ಕೆ ವಿರುದ್ದವಾಗಿದೆ. ಅವರು ಅಧ್ಯಕ್ಷ ಪದವಿಗೆ ಸ್ಪರ್ಧಿಸುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಪಕ್ಷ ವೊಂದರ ಈ ಪರಿಯ ಬೆಂಬಲವನ್ನು ಸಾಂಸ್ಕೃತಿಕ ಮನಸ್ಸಿನ ವ್ಯಕ್ತಿಯಾಗಿ ಅವರು ನಿರಾಕರಿಸಬೇಕಿತ್ತು. ಇದುವರೆಗೆ ತಾವು ಮಾಡಿದ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳೇ ತಮ್ಮ ಚುನಾವಣೆಯ ನೈತಿಕ ಬಲಗಳಾಗಿ ಘೋಷಿಸಿಕೊಳ್ಳಬೇಕಿತ್ತು. ಅದು ಬಿಟ್ಟು ರಾಜಕೀಯ ಪುಡಾರಿಯಂತೆ ಈ ಚುನಾವಣೆಯನ್ನು ಕಲುಷಿತಗೊಳಿಸುತ್ತಿರುವುದು ಖಂಡನೀಯ ಎಂದು ಲೇಖಕಿ ಕೆ.ನೀಲಾ ಆರೋಪಿಸಿದ್ದಾರೆ.

ಮಹೇಶ್ ಜೋಶಿಯವರು ಆಡಳಿತಾರೂಢ ಬಿಜೆಪಿ  ಮತ್ತು ಆರ್.ಎಸ್.ಎಸ್ ಮತ್ತದರ ಅಂಗ ಸಂಸ್ಥೆಗಳ ಕಾರ್ಯಕರ್ತರಿಗೆ ತಮ್ಮನ್ನು ಆಯ್ಕೆ ಮಾಡುವಂತೆ ವಿನಂತಿಸುತ್ತಿರುವುದು ಖಂಡನೀಯ. ಇದು ಕ ಸಾಪದ ಇತಿಹಾಸದಲ್ಲೇ ಮೊದಲ ಬಾರಿ ಹೀಗಾಗುತ್ತಿದ್ದು, ರಾಜಕೀಯ ಪಕ್ಷಗಳ ಅಥವಾ ಗುಂಪುಗಳ ನೇರ ಪ್ರವೇಶಕ್ಕೆ ಯಾವುದೇ ರೀತಿಯಲ್ಲೂ ಕಸಾಪ ದಲ್ಲಿ ಅವಕಾಶ ನೀಡುವುದು ತರವಲ್ಲ ಎಂದು ಸಾಹಿತಿ ನಾ.ದಿವಾಕರ ಪ್ರತಿಕ್ರಿಯಿಸಿದ್ದಾರೆ.

ಮಹೇಶ್ ಜೋಷಿ ಅವರು ಕೋಮುವಾದಿ ಪಕ್ಷ ಸಂಘಟನೆಗಳ ನೇರ ಬೆಂಬಲ ಪಡೆಯಲು ಮುಂದಾಗಿರುವುದನ್ನು ಸಾಹಿತಿಗಳಾದ ಡಾ.ವಿಜಯಾ, ಡಾ.ವಸುಂಧರಾ ಭೂಪತಿ, ವಿಮಲಾ ಕೆ.ಎಸ್, ಟಿ.ಸುರೇಂದ್ರ ರಾವ್, ಎಲ್ ಜಗನ್ನಾಥ್, ಅಚ್ಯುತ, ಎಸ್. ದೇವೇಂದ್ರ ಗೌಡ, ಡಾ.ಲೀಲಾ ಸಂಪಿಗೆ, ಡಾ.ಎನ್.ಗಾಯತ್ರಿ, ಪಿ.ಆರ್.ವೆಂಕಟೇಶ್ ಬಳ್ಳಾರಿ ವೀರಹನುಮಾನ್‌ ರಾಯಚೂರು, ಡಾ.ವಿ.ಎನ್.ಲಕ್ಷ್ಮಿ ನಾರಾಯಣ್, ಎನ್.ಕೆ.ವಸಂತ ರಾಜ್ ಬಿ.ಐ.ಇಳಿಗೇರ್, ಜೆ.ಸಿ‌.ಶಶಿಧರ್. ಬಿ.ಶ್ರೀಪಾದ ಭಟ್ ಸೇರಿದಂತೆ ಅನೇಕರು ಈ ನಡೆಯನ್ನು ವಿರೋಧಿಸಿದ್ದಾರೆ. ಮಹೇಶ್ ಜೋಷಿಯವರಿಗೆ ಚುನಾವಣೆಯಲ್ಲಿ ಮತ ನೀಡದಿರುವಂತೆ ಎಲ್ಲ ಸಾಹಿತ್ಯಕ ಮನಸುಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಈ ರೀತಿಯ ಧೋರಣೆಯನ್ನು ಅನುಸರಿಸುವ ಯಾವುದೇ ಇತರ ಅಭ್ಯರ್ಥಿಯನ್ನೂ ತಿರಸ್ಕರಿಸುವಂತೆ ಮತದಾರರಲ್ಲಿ ವಿನಂತಿಸುತ್ತೇವೆ ಎಂದು ತಿಳಿಸಿದ್ದಾರೆ.

Donate Janashakthi Media

One thought on “ಕಸಾಪ ಚುನಾವಣೆ : ಮಹೇಶ್ ಜೋಷಿ ತಿರಸ್ಕರಿಸುವಂತೆ ಸಾಹಿತಿಗಳ ಮನವಿ

Leave a Reply

Your email address will not be published. Required fields are marked *