ಟೆಲಿಗ್ರಾಮ್ ನಿಷೇಧ ವಿವಾದ: ವಿದ್ಯಾರ್ಥಿಗಳ ಮೇಲೆ ಹೊರೆ ಹಾಕಿ ಸಮಸ್ಯೆ ಮರೆಮಾಚಲು ಯತ್ನ- ರಾಹುಲ್ ಗಾಂಧಿ

ನವದೆಹಲಿ: NEET-UG ಪುನರ್ ಪರೀಕ್ಷೆ ಜೂನ್ 21 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್ ಮೇಲೆ ಸರ್ಕಾರ ಹೇರಿರುವ ತಾತ್ಕಾಲಿಕ ನಿರ್ಬಂಧವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.

ಸರ್ಕಾರದ ಈ ಕ್ರಮವನ್ನು “ಬಲಿಪಶುವಿನ ಬಾಗಿಲಿಗೆ ಬೀಗ ಹಾಕಿದಂತೆ” ಎಂದು ಹೋಲಿಸಿದ ಅವರು, ಇದು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತದೆ ಎಂದು ಹೇಳಿದ್ದಾರೆ.

“ಟೆಲಿಗ್ರಾಮ್ ನಿಷೇಧ – ಪೇಪರ್ ಲೀಕ್ ತಡೆಯಲು ಮೋದಿ ಸರ್ಕಾರದ ಹೊಸ ತಂತ್ರ. ಕಳ್ಳನನ್ನು ಹಿಡಿಯುವುದಕ್ಕೆ ಬದಲಾಗಿ ಬಲಿಪಶುವಿನ ಬಾಗಿಲಿಗೆ ಬೀಗ ಹಾಕಿದಂತಾಗಿದೆ,” ಎಂದು ರಾಹುಲ್ ಗಾಂಧಿ X (ಹಳೆಯ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸುರತ್ಕಲ್ ಆರೋಗ್ಯ ಕೇಂದ್ರ ಮೇಲ್ದರ್ಜೆ ಪ್ರಸ್ತಾಪ ತಿರಸ್ಕಾರ: ಭರತ್ ಶೆಟ್ಟಿ ವಿರುದ್ಧ ಮುನೀರ್ ಕಾಟಿಪಳ್ಳ ಆರೋಪ

ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಟೆಲಿಗ್ರಾಮ್ ಮೂಲಕ ನೋಟ್ಸ್, ಟೆಸ್ಟ್ ಸೀರಿಸ್ ಮತ್ತು ಅಧ್ಯಯನ ಚರ್ಚೆಗಳಿಗೆ ಅವಲಂಬಿತರಾಗಿದ್ದಾರೆ ಎಂದು ಹೇಳಿದ ಅವರು, ಆ ಸೌಲಭ್ಯವನ್ನು ಕಿತ್ತುಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವು ಟೆಲಿಗ್ರಾಮ್ ಮೇಲೆ ಜೂನ್ 22ರವರೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದು, ಪರೀಕ್ಷಾ ಪೇಪರ್ ಲೀಕ್, ವಂಚನೆ ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.

ಅಧಿಕಾರಿಗಳು ಟೆಲಿಗ್ರಾಮ್‌ಗೆ ಭಾರತದಲ್ಲಿ ಜೂನ್ 30ರವರೆಗೆ ಸಂದೇಶ ಸಂಪಾದನೆ (message editing) ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ ಸೂಚಿಸಿರುವುದಾಗಿ ವರದಿಯಾಗಿದೆ. ಇದು ಪರೀಕ್ಷಾ ಪೇಪರ್ ಲೀಕ್ ಕುರಿತು ಕೃತಕ ಸಾಕ್ಷ್ಯಗಳನ್ನು ಸೃಷ್ಟಿಸಲು ದುರುಪಯೋಗವಾಗಬಹುದು ಎಂಬ ಕಾರಣ ನೀಡಲಾಗಿದೆ.

ಈ ಕ್ರಮ ಪರಿಣಾಮಕಾರಿಯಲ್ಲ ಎಂದು ಹೇಳಿದ ರಾಹುಲ್ ಗಾಂಧಿ, “ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಗೊತ್ತಿದೆ, ಪೇಪರ್ ಲೀಕ್ ಮಾಫಿಯಾಕೂ ಗೊತ್ತಿದೆ. ಮುಂದಿನ ನಿಷೇಧ WhatsApp ಮೇಲೆಯೇ ಇರಬಹುದೇ?” ಎಂದು ಪ್ರಶ್ನಿಸಿದ್ದಾರೆ.

ಪರೀಕ್ಷಾ ದಿನದ ಭದ್ರತಾ ಕ್ರಮಗಳನ್ನು ವ್ಯಂಗ್ಯವಾಗಿ ಉಲ್ಲೇಖಿಸಿದ ಅವರು, “ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗುತ್ತದೆ, ಪಾಕೆಟ್‌ಗಳನ್ನು ಕತ್ತರಿಸಲಾಗುತ್ತದೆ, ಪ್ರಶ್ನೆ ಪತ್ರಿಕೆಗಳನ್ನು ವಾಯುಪಡೆಯ ಮೂಲಕ ಕಳುಹಿಸಲಾಗುತ್ತದೆ — ನಾಟಕೀಯತೆ ಮಾತ್ರ ಹೆಚ್ಚಿದೆ,” ಎಂದು ಹೇಳಿದ್ದಾರೆ.

ಮೂಲ ಸಮಸ್ಯೆಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, “ಪೇಪರ್ ಲೀಕ್ ಮಾಫಿಯಾ ಸರ್ಕಾರದ ಮೇಲ್ವಿಚಾರಣೆಯಲ್ಲೇ ಬೆಳೆಯುತ್ತಿದೆ, ಯುವಕರು ನೋವಿನಲ್ಲಿ ಅಳುತ್ತಿದ್ದಾರೆ,” ಎಂದು ಟೀಕಿಸಿದ್ದಾರೆ.

“ಮೋದಿ ಜೀ, ನಾಟಕ ಬಿಟ್ಟು ಸಮಸ್ಯೆಯ ಮೂಲಕ್ಕೆ ಹೊಡೆದಿರಿ. ವಿದ್ಯಾರ್ಥಿಗಳ ಮಾತು ಕೇಳಿರಿ,” ಎಂದು ಅವರು ಒತ್ತಾಯಿಸಿದ್ದಾರೆ.

ಈ ನಡುವೆ ರಾಹುಲ್ ಗಾಂಧಿ ರಾಜಸ್ಥಾನದ ಕೋಟಾದಲ್ಲಿ NEET ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇದು ಯುವಜನತೆ, ಉದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆ ಸುಧಾರಣೆ ಕುರಿತು ಕಾಂಗ್ರೆಸ್‌ನ ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿದೆ.

ಇತ್ತ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್‌ನಲ್ಲಿ ಈ ತಾತ್ಕಾಲಿಕ ನಿಷೇಧದ ವಿರುದ್ಧ ಅರ್ಜಿ ಸಲ್ಲಿಸಿದೆ. ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡ್ಯುರೋವ್ ಅವರು ರಿಲಯನ್ಸ್ ಗುಂಪು ಮತ್ತು ವಾಟ್ಸಾಪ್ ಈ ನಿಷೇಧದ ಹಿಂದೆ ಇರಬಹುದು ಎಂಬ ಆರೋಪವನ್ನು ಮಾಡಿದ್ದಾರೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ -174| ಸಿನಿಮಾ – ವಲವಾರ, ಗ್ರಾಮೀಣ ಬದುಕಿನ ಸೊಗಡು | ವಿಶ್ಲೇಷಣೆ – ಎಂ.‌ನಾಗರಾಜ ಶೆಟ್ಟಿ

Donate Janashakthi Media

Leave a Reply

Your email address will not be published. Required fields are marked *