ವಿದ್ಯಾರ್ಥಿನಿ ಸಾವು: ಶಾಲೆಗೆ ಬಿಗಿ ಬಂದೋಬಸ್ತ್​, ಶಿಕ್ಷಕ ಸೇರಿ ಮೂವರ ಬಂಧನ

ತಮಿಳುನಾಡು: 12ನೇ ತರಗತಿಯ ವಿದ್ಯಾರ್ಥಿನಿ ನಿಗೂಢ ಸಾವಿನಿಂದ ಆಕ್ರೋಶಗೊಂಡ ಜನರು ನಡೆಸಿದ ಪ್ರತಿಭಟನೆ ತಮಿಳುನಾಡಿನಲ್ಲಿ ಭಾರಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಕ್ಕೆ ಕಾರಣವಾಗಿತ್ತು. ಇದೀಗ ಘಟನೆ ನಡೆದ ಕಲ್ಲಕುರಿಚಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮೂವರನ್ನು ಬಂಧಿಸಲಾಗಿದೆ.

ಕಲ್ಲಕುರಿಚಿಯ ಖಾಸಗಿ ಶಾಲೆಯ ಹಾಸ್ಟೆಲ್​ ಮೇಲಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಳು ಎನ್ನಲಾಗಿತ್ತು. ಮೊದಲು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದ ಮೇಲೆ ಗಾಯದ ಗುರುತುಗಳಿರುವುದು ಪತ್ತೆಯಾಗಿದೆ.

ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಕುಟುಂಬಸ್ಥರು ಮತ್ತು ಬೆಂಬಲಿಗರು ಶಾಲೆಯ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹಾಕಲಾಗಿದ್ದ ಬ್ಯಾರಿಕೇಡ್​ಗಳನ್ನು ಕೆಡವಿ ಪೊಲೀಸರ ಜೊತೆಗೇ ವಾಗ್ವಾದ ನಡೆಸಿ, ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭ ಪೊಲೀಸರೂ ಗಾಯಗೊಂಡಿದ್ದರು.

ಇದನ್ನೂ ಓದಿ : ಶಿಕ್ಷಕರಿಂದ ಚಿತ್ರಹಿಂಸೆ-ಶಾಲಾ ಬಾಲಕಿ ಆತ್ಮಹತ್ಯೆ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಹೈಕೋರ್ಟ್ ಕಳವಳ : ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವುದು ಪಡೆದುಕೊಂಡಿದೆ. ಸಾವಿಗೂ ಮುನ್ನ ವಿದ್ಯಾರ್ಥಿನಿಯ ದೇಹದಲ್ಲಿ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿದ್ದಿದೆ. ಇತ್ತ ಮದ್ರಾಸ್ ಹೈಕೋರ್ಟ್ ಹೊಸದಾಗಿ ಪೋಸ್ಟ್ ಮಾರ್ಟಂ ಮಾಡಲು ಸೂಚಿಸಿದೆ. ಈ ಮೂಲಕ ನ್ಯಾಯ ಕೇಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿ ಕುಟುಂಬಕ್ಕೆ ಹೊಸ ಆಶ್ವಾಸಸನೇ ಸಿಕ್ಕಿದೆ. ಪ್ರಕರಣದ ಕುರಿತು ಆತಂಕ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್ ಶಕ್ತಿ ಇಂಟರ್‌ನ್ಯಾಷನಲ್ ಸ್ಕೂಲ್  ಶಿಕ್ಷಣ ಸಂಸ್ಥೆಯಲ್ಲಿ ಆಗಿರುವ ಸಾವುಗಳ ಕುರಿತು ಸಿಬಿ- ಸಿಐಡಿ ತನಿಖೆ ನಡೆಸಲು ಹೈಕೋರ್ಟ್ ಸೂಚಿಸಿದೆ.

ವಾಹನಗಳಿಗೆ ಬೆಂಕಿ: ಉದ್ರಿಕ್ತರ ಗುಂಪು ಶಾಲೆಗೆ ನುಗ್ಗಿ ಪೀಠೋಪಕರಣಗಳನ್ನು ಹೊರ ತಂದು ಸುಟ್ಟು ಹಾಕಿದೆ. ಬಳಿಕ ಶಾಲೆಗೆ ಸೇರಿದ ವಾಹನಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಶಾಲೆಯ ಗೋಡೆಯನ್ನೂ ಒಡೆದು ಹಾಕಲಾಗಿದೆ. ಭುಗಿಲೆದ್ದ ಹಿಂಸಾಚಾರಕ್ಕೆ ಕಲ್ಲಕುರಿಚಿ-ಸೇಲಂ ಹೆದ್ದಾರಿಯ ಶಾಲಾ ಆವರಣದ ಹೊರಗೆ ಸುಟ್ಟು ಕರಕಲಾದ ಬಸ್‌ಗಳು ಮತ್ತು ಧ್ವಂಸಗೊಂಡ ಶಾಲಾವರಣದಲ್ಲಿನ ಅವಶೇಷಗಳೇ ಸಾಕ್ಷಿಯಾಗಿವೆ. ನಿನ್ನೆ ನಡೆದ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಗಿತ್ತು.

ಶಾಲೆಯ ಮೂವರ ಬಂಧನ: ಘಟನೆಗೆ ಸಂಬಂಧಿಸಿದಂತೆ ಶಕ್ತಿ ಮೆಟ್ರಿಕ್ಯುಲೇಷನ್ ಶಾಲೆಯ ರವಿಕುಮಾರ್, ಕಾರ್ಯದರ್ಶಿ ಶಾಂತಿ ಮತ್ತು ಪ್ರಾಂಶುಪಾಲ ಶಿವ ಶಂಕರನ್​ರನ್ನು ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಡಿಜಿಪಿ ಸಿ.ಸೈಲೇಂದ್ರ ಬಾಬು ತಿಳಿಸಿದರು. ಪ್ರಕರಣವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು. ಹಿಂಸಾಚಾರದಲ್ಲಿ ತೊಡಗಬೇಡಿ ಮತ್ತು ವದಂತಿಗಳಿಗೆ ಗಮನ ಕೊಡಬೇಡಿ ಎಂದು ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *