ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಆಧ್ಯಕ್ಷ:ಭಾ .ಮ ಹರೀಶ್

  • ನಿರ್ಮಾಪಕ ಭಾ.ಮಾ ಹರೀಶ್ ಗೆಲುವು
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ
  • ಭಾ.ಮ. ಹರೀಶ್ ಮತ್ತು ಸಾ.ರಾ. ಗೋವಿಂದು ಭಾರಿ ಪೈಪೋಟಿ

ಬೆಂಗಳೂರು:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 64ನೇ ವಾರ್ಷಿಕ‌ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ನಿರ್ಮಾಪಕ ಭಾ. ಮ ಹರೀಶ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಜೈರಾಜ್ ಅವರು ಅಧ್ಯಕ್ಷರಾಗಿದ್ದರು. ಅವಧಿ ಮುಗಿದಿದ್ದರಿಂದ ಚುನಾವಣೆ ಘೋಷಣೆ ಆಗಿತ್ತು.

ಈ ಬಾರಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನವು ನಿರ್ಮಾಪಕರ ವಲಯಕ್ಕೆ ಮೀಸಲಾಗಿತ್ತು. ಹಾಗಾಗಿ, ನಿರ್ಮಾಪಕ ಭಾ.ಮ. ಹರೀಶ್ ಮತ್ತು ನಿರ್ಮಾಪಕ ಸಾ.ರಾ. ಗೋವಿಂದು ನಡುವೆ ನೇರಾನೇರ ಪೈಪೋಟಿ ಇತ್ತು.

ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ನಟ ಜೈಜಗದೀಶ್‌, ವಿತರಕ ವಲಯದಿಂದ ಶ್ರೀನಿವಾಸ್‌ ಎಚ್‌.ಸಿ ಆಯ್ಕೆಯಾದರು. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ನಟ ಸುಂದರ್‌ ರಾಜ್ ಎಂ.ಕೆ, ವಿತರಕ ವಲಯದಿಂದ ಕುಮಾರ್‌ ಎಂ.ಎನ್‌ ಹಾಗೂ ಪ್ರದರ್ಶಕ ವಲಯದಿಂದ ಕುಶಾಲ್‌ ಎಲ್‌.ಸಿ. ಚುನಾಯಿತರಾದರು. ಖಜಾಂಚಿಯಾಗಿ ಟಿ.ಪಿ.ಸಿದ್ಧರಾಜುಆಯ್ಕೆಯಾದರು. ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದು, ಈ ಪೈಕಿ ರಂಗಪ್ಪ ಎನ್ನುವವರು ನ್ಯಾಯಾಲಯದಿಂದ ತಡೆ ತಂದಿರುವ ಕಾರಣ ಈ ಫಲಿತಾಂಶವನ್ನು ಘೋಷಿಸಿಲ್ಲ.

ನಿರ್ಮಾಪಕರ ವಲಯದಿಂದ ಒಟ್ಟು 769, ವಿತರಕ ವಲಯದಿಂದ 301 ಮತ್ತು ಪ್ರದರ್ಶಕ 679 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ ಭಾ.ಮ. ಹರೀಶ್‌ಗೆ 781 ಮತಗಳು ಬಂದರೆ, ಸಾ.ರಾ. ಗೋವಿಂದು ಅವರಿಗೆ 378 ಮತಗಳು ಸಿಕ್ಕಿವೆ. 410 ಮತಗಳ ಭಾರಿ ಅಂತರದಿಂದ ಭಾ.ಮ. ಹರೀಶ್‌ ಗೆಲುವು ಸಾಧಿಸಿ, ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಮಂಡಳಿಯ ಮಾಜಿ ಅಧ್ಯಕ್ಷ ಥಾಮಸ್‌ ಡಿಸೋಜ ಮತದಾನ ಪ್ರಕ್ರಿಯೆಯನ್ನು ನಡೆಸಿದರು. ಬ್ಯಾಲೆಟ್‌ ಪೇಪರ್‌ನಲ್ಲಿಯೇ ಮತದಾನ ನಡೆಯಿತು. ನಟಿಯರಾದ ಲೀಲಾವತಿ, ಜಯಮಾಲ, ಶೃತಿ, ನಟ ರಾಘವೇಂದ್ರ ರಾಜ್‌ಕುಮಾರ್‌, ಸಚಿವ, ನಿರ್ಮಾಪಕ ಮುನಿರತ್ನ ಹೀಗೆ ಹಲವರು ಮತ ಚಲಾಯಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *