ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಗ್ಡೆವಾರ್‌ ಭಾಷಣ-ಕೋಮುವಾದಿ ವಿಚಾರ ಸೇರ್ಪಡೆ ವಿರೋಧಿಸಿ ಎಸ್‌ಎಫ್‌ಐ ಪ್ರತಿಭಟನೆ

ಬೆಂಗಳೂರು: 2022-23ರ ಶೈಕ್ಷಣಿಕ ವರ್ಷದ ಶಾಲಾ ಪಠ್ಯ ಪುಸ್ತಕದಲ್ಲಿ ಸ್ವಾತಂತ್ಯ ಹೋರಾಟಗಾರ  ಭಗತ್ ಸಿಂಗ್ ಪಾಠ ಸೇರಿ ಅನೇಕ ಪ್ರಗತಿಪರ ಚಿಂತನೆಯ ಪೂರಕ ಪಾಠಗಳನ್ನು ಕೈ ಬಿಟ್ಟು ಸಂಘಪರಿವಾರದ ಸಂಸ್ಥಾಪಕ ಹೆಗ್ಡೇವಾರ್ ಭಾಷಣ ಸೇರಿದಂತೆ ಸೇರ್ಪಡೆಯೊಂದಿಗೆ ಶಿಕ್ಷಣದ ಕೇಸರೀಕರಣ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್ಎಫ್ಐ) ರಾಜ್ಯ ಸಮಿತಿ ಪ್ರತಿಭಟನೆ ನಡೆಸಿತು.

ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಇಂದು(ಮೆ 17) ಪ್ರತಿಭಟನೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆ  ಆಯುಕ್ತ ಆರ್. ವಿಶಾಲ್ ಅವರಿಗೆ ಮನವಿ ಸಲ್ಲಿಸಿದರು.

ಇದನ್ನು ಓದಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಾಠ ಕೈಬಿಟ್ಟಿರುವ ರಾಜ್ಯ ಸರಕಾರ : ಎಸ್.ಎಫ್.ಐ ಖಂಡನೆ

ಎಸ್ಎಫ್ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣನ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಬಗ್ಗೆ  10ನೇ ತರಗತಿ ಪಠ್ಯದಿಂದ ಕೈ ಬಿಟ್ಟು ಸ್ವಾತಂತ್ರ್ಯ ಚಳುವಳಿಯಿಂದ ದೂರವಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ. ಹೆಗ್ಡೇವಾರ್ ಭಾಷಣ ಸೇರಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಬಿಜೆಪಿ ವಸಾಹತುಶಾಹಿ ಬ್ರಿಟಿಷರ ಜೊತೆಗೆ ರಾಜಿಯಾದ ಸಾವರ್ಕರ್ ಸಂತತಿ ಆದ್ದರಿಂದಲೇ ಅಪ್ಪಟ ದೇಶಪ್ರೇಮಿ ಭಗತ್‌ ಸಿಂಗ್ ಪಠ್ಯವನ್ನು ತೆಗೆದಿದೆ ಎಂದರು.

ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಹೆಗ್ಡೆವಾರ್ ಅವರ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂಬ ಭಾಷಣವನ್ನು ಸೇರಿಸಲಾಗಿದೆ. ಈ ಪಠ್ಯದಲ್ಲಿ ಆರ್‌ಎಸ್‌ಎಸ್ ಶಾಖೆಯ ಕಾರ್ಯವಿಧಾನ , ಭಗಧ್ವಜ ಗೌರವಿಸಬೇಕು ಎಂದೆಲ್ಲಾ ಹೇಳಲಾಗಿದೆ. ಇದು ರಾಷ್ಟ್ರ ಧ್ವಜ ಮತ್ತು ಸಂವಿಧಾನಕ್ಕೆ ವಿರುದ್ದವಾದದ್ದು. ಇತ್ತೀಚಿಗೆ ಬಿಜೆಪಿಯ ಕೆ.ಎಸ್‌. ಈಶ್ವರಪ್ಪ ಹೇಳಿದ ಮಾತಿನಂತೆ ಬಿಜೆಪಿ ಕೇಸರಿ ಧ್ವಜವೇ ದೇಶದ ಧ್ವಜ ಎಂದು ಬಿಂಬಿಸುವ ರೀತಿಯಿದೆ ಎಂದರು.

ಇದನ್ನು ಓದಿ: ಸಾರ್ವಜನಿಕ ಶಿಕ್ಷಣದ ಮೇಲಿನ ವೆಚ್ಚ ಮತ್ತು ಪ್ರಭುತ್ವ

ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ ಮಾತನಾಡಿ , ನೂತನ ಶಿಕ್ಷಣ ನೀತಿಯ ಗುರಿಯೇ ಶಿಕ್ಷಣದ ಕೋಮುವಾದೀಕರಣ ಆಗಿರುವುದರಿಂದ ಎನ್ಇಪಿ-2020 ಜಾರಿ ಅಂದರೆ ರಾಜ್ಯದ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕಗಳಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ ಕೋಮುವಾದಿ ವಿಚಾರಗಳನ್ನು  ತುಂಬುವುದಾಗಿದೆ.  ಇದರ ಭಾಗವಾಗಿ ಪಠ್ಯಪುಸ್ತಕದಲ್ಲಿ 5ನೇ ಪಾಠವಾಗಿ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಪಾಠವನ್ನು ಸೇರಿಸಲಾಗಿದೆ. ಈ ಆದರ್ಶ ಪುರುಷ ಸಂಘಪರಿವಾರದವರಿಗೆ ಮಾತ್ರ ಆದರ್ಶ. ಆದರೆ, ಇಡೀ ದೇಶಕ್ಕೆ ಭಗತ್ ಸಿಂಗ್, ಮಹಾತ್ಮ ಗಾಂಧಿ, ಅಂಬೇಡ್ಕರ್, ಬಸವಣ್ಣ ರಂತಹವರು ಆದರ್ಶ ಆಗಿದ್ದಾರೆ ಎಂದರು.

ಪ್ರಗತಿಪರ ಸಾಹಿತಿಗಳಾದ  ಪಿ. ಲಂಕೇಶ್ ಅವರ “ಮೃಗ ಮಟ್ಟು ಸುಂದರಿ” ಮತ್ತು  ಜಿ. ರಾಮಕೃಷ್ಣ ಅವರ “ಭಗತ್ ಸಿಂಗ್”, ಸಾರಾ ಅಬೂಬಕ್ಕರ್ ಅವರ “ಯುದ್ಧ”, ಎ.ಎನ್. ಮೂರ್ತಿ ರಾವ್ ಅವರ “ವ್ಯಾಘ್ರ ಕಥೆ” ಮತ್ತು ಶಿವಕೋಟ್ಯಾಚಾರ್ಯರ “ಸುಕುಮಾರ ಸ್ವಾಮಿ ಕಥೆ”ಯನ್ನುಪಾಠಗಳನ್ನು ಸಹ ಕೈಬಿಡಲಾಗಿದೆ.

ಇದನ್ನು ಓದಿ: ಪಠ್ಯವಾಗುವಷ್ಟು ಯೋಗ್ಯವಾಗಿದೆಯೇ ಹೆಡ್ಗೆವಾರ್‌ ಹೇಳಿಕೆ

ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದಂತೆ ಕೆ.ಬಿ. ಹೆಗ್ಡೆವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ ಹೊರತು ಅವರ ಸಿದ್ಧಾಂತ ಅಥವಾ ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದು ತಿಳಿಸಿದ್ದಾರೆ. ಆದರೆ, ಇದು ಒಂದು ಕಪಟಿಯಾಗಿ ಕೋಮುವಾದ ಹರಡಿಸುವ ಹೇಳಿಕೆ ಆಗಿದೆ. ಈ ಪಠ್ಯ ವಿಧ್ಯಾರ್ಥಿಗಳು ಓದಿದರೆ ನಾಡಿನ ಸೌಹಾರ್ದತೆ ನಾಶವಾಗಲಿದೆ. ಯಾವುದೇ ವ್ಯಕ್ತಿಯ ಬರಹ ಸೈದ್ದಾಂತಿಕ ನೆಲೆಯಲ್ಲಿಯೇ ಗುರುತಿಸಬೇಕೆ ವಿನಹಃ ಅವರ ಬರಹಗಾರ ಎಂಬ ಹಣೆ ಪಟ್ಟೆಯಲ್ಲಿ ಅಲ್ಲಾ ಎಂಬುದು ಸ್ಪಷ್ಟ ಎಂದು ಎಸ್‌ಎಫ್‌ಐ ಆಗ್ರಹವಾಗಿದೆ.

ಅಷ್ಟಕ್ಕೂ ಈ  ಹೆಗ್ಡೆವಾರ್ ಯಾವ ಸಾಮಾಜಿಕ ನೆಲೆಯಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ತಿಳಿಸಬೇಕು ಎಂದು ಎಸ್‌ಎಫ್‌ಐ ಸಂಘಟನೆ ಸವಾಲು ಹಾಕಿದೆ. ಕನ್ನಡ ನಾಡಿನ ಹಲವು ಬರಹಗಾರರ ಪಠ್ಯ ನೀಡಬೇಕಿತ್ತು. ಬದಲಿಗೆ ಸಂಘಪರಿವಾರದ ಸಂಸ್ಥಾಪಕನನ್ನು ಪರಿಚಯಿಸಿ ಶಿಕ್ಷಣದ ಕೇಸರೀಕರಣ, ಕೋಮುವಾದೀಕರಣ ಮೂಲಕ ವಿಷ ಬೀಜ ಬಿತ್ತುವ ಕೆಲಸಕ್ಕೆ ರಾಜ್ಯ ಬಿಜೆಪಿ ಸರ್ಕಾರ ಕೈ ಹಾಕಿರುವುದಕ್ಕೆ ನಾಡಿನ ಪ್ರಜ್ಞಾವಂತ ಜನರ ವಿರೋಧವಿದೆ ಎಂದಿದ್ದಾರೆ.

ಹೆಗ್ಡೆವಾರ್ ಅವರ ಭಾಷಣ ಸಂಘ ಪರಿವಾರಕ್ಕೆ ಆದರ್ಶ ಅನಿಸಬಹುದು ಆದರೆ, ಈ ನಾಡಿನ ವಿದ್ಯಾರ್ಥಿಗಳಿಗಲ್ಲಾ ಎಂದಿರುವ ಎಸ್ ಎಫ್ ಐ ರಾಜ್ಯ ಸಮಿತಿಯು ಸರ್ಕಾರವು ತಕ್ಷಣವೇ ಪಠ್ಯವನ್ನು ಮೊದಲಿನಂತೆ ಯತಾವತ್ತಾಗಿ ಜಾರಿ ಮಾಡಬೇಕು. ಜಾರಿ ಮಾಡದಿದ್ದರೆ ಸಾರ್ವಜನಿಕರು, ದೇಶಪ್ರೇಮಿಗಳು, ಶಿಕ್ಷಣ ಪ್ರೇಮಿಗಳ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಪಾಲಕರನ್ನು ಒಳಗೊಂಡು ರಾಜ್ಯದಾದ್ಯಂತ ತೀವ್ರ ಹೋರಾಟಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಎಸ್ಎಸ್ಐ ರಾಜ್ಯ ಉಪಾಧ್ಯಕ್ಷ ದಿಲಿಪ್ ಶೆಟ್ಟಿ, ರಾಜ್ಯ ಪದಾಧಿಕಾರಿಗಳಾದ ಸೋಮಶೇಖರ್, ಶಿವಪ್ಪ, ದೊಡ್ಡ ಬಸವರಾಜ್, ಗಣೇಶ್, ಅಂಕಿತಾ, ರಾಥೋಡ್ , ಬಸವರಾಜ್ ಭೋವಿ, ಆನಂದ್, ರಾಜಶ್ವೇರಿ, ಅಭಿಷೇಕ್, ಮಹೇಶ್ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *