ಶಾಸಕರು ಎಷ್ಟೇ ಬಾರಿ ಗೆದ್ದರೂ ಒಂದೇ ಪಿಂಚಣಿ: ಪಂಜಾಬ್‌ ಮುಖ್ಯಮಂತ್ರಿ ಘೋಷಣೆ

ಚಂಡೀಗಢ(ಪಂಜಾಬ್​): ಪಂಜಾಬ್​ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಭಗವಂತ್ ಮಾನ್ ಒಂದಿಲ್ಲೊಂದು ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿರುವ ಅವರು, ಶಾಸಕರ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಯಾರು ಎಷ್ಟೇ ಸಲ ಶಾಸಕರಾಗಿ ಆಯ್ಕೆಯಾದರೂ ಸಹ ಇನ್ಮುಂದೆ ಒಂದೇ ಸಲ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಘೋಷಣೆ ಮಾಡಿದ್ದಾರೆ.

ಕೇವಲ ಒಂದು ಅವಧಿಗೆ ಮಾತ್ರ ಶಾಸಕರಾಗಿ ಆಯ್ಕೆಯಾದರೂ ಕೂಡ ಅವರಿಗೆ ಜೀವನಪರ‍್ಯಾಂತ ಪಿಂಚಣಿ ಹಣ ನೀಡಲಾಗುತ್ತದೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಈ ಸಂಪ್ರದಾಯ ಜಾರಿಯಲ್ಲಿದೆ. ಆದರೆ, ಪಂಜಾಬ್​ನಲ್ಲಿ ಭಗವಂತ್ ಮಾನ್​ ಸರ್ಕಾರ ಈ ಯೋಜನೆಗೆ ಕಡಿವಾಣ​ ಹಾಕಲು ಮುಂದಾಗಿದ್ದಾರೆ. ಶಾಸಕರು ಎಷ್ಟು ಬಾರಿ ಗೆದ್ದರೂ ಕೂಡ ಒಂದೇ ಅವಧಿಗೆ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಜನರ ಸೇವೆ ಮಾಡುವ ಹೆಸರಿನಲ್ಲಿ ಶಾಸಕರು ರಾಜಕೀಯಕ್ಕೆ ಬಂದರೆ ಅವರಿಗೆ ಲಕ್ಷ ಲಕ್ಷ ರೂಪಾಯಿ ಪಿಂಚಣಿ ನೀಡುವುದು ಸಮರ್ಥನೀಯವಲ್ಲ. ಗೆಲುವು ಸಾಧಿಸುವ ಉದ್ದೇಶದಿಂದ ಜನರ ಮುಂದೆ ಹೋಗಿ ಮತ ಪಡೆದುಕೊಳ್ಳಲು ಕೈಮುಗಿಯುತ್ತಾರೆ. ಜೊತೆಗೆ ಅವರ ಸೇವೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ, ಚುನಾವಣೆಯಲ್ಲಿ ಸೋತರೂ ಕೂಡ 3 ರಿಂದ 5 ಲಕ್ಷದವರೆಗೆ ಪಿಂಚಣಿ ಹಣ ಪಡೆದುಕೊಳ್ಳುತ್ತಾರೆ. ಇದು ಪಂಜಾಬ್​ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಇನ್ನು ಮುಂದೆ ಇಂತಹ ಯೋಜನೆ ಜಾರಿಯಲ್ಲಿರುವುದಿಲ್ಲ ಎಂದು ಅವರು ತಿಳಿಸಿದರು.

ಇತರೆ ಪಿಂಚಣಿ ಕೂಡ ಕಡಿತ:

ರಾಜ್ಯದಲ್ಲಿ ಕೆಲ ಶಾಸಕರು ಹೆಚ್ಚಿನ ಪಿಂಚಣಿ ಹಣ ಪಡೆದುಕೊಳ್ಳುತ್ತಿದ್ದಾರೆ. ಇದು ನೇರವಾಗಿ ರಾಜ್ಯದ ಖಜಾನೆಗೆ ಹೊರೆಯಾಗುತ್ತಿದೆ. ಹೀಗಾಗಿ ಇದರ ಮೇಲೆ ಕಡಿವಾಣ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪಿಂಚಣಿಯಿಂದ ಉಳಿದುಕೊಳ್ಳುವ ಕೋಟ್ಯಂತರ ಹಣ ಜನರ ಕಲ್ಯಾಣಕ್ಕಾಗಿ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸಾಲದ ಸುಳಿಯಲ್ಲಿ ಪಂಜಾಬ್​:

ಪಂಜಾಬ್​ ಸದ್ಯ 3 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿದೆ. ಪಂಜಾಬ್​ ಆರ್ಥಿಕ ಸ್ಥಿತಿ ತೀವ್ರ ಸಂಕಷ್ಟದಲ್ಲಿದ್ದು, ನಮಗೆ ಕೇಂದ್ರದ ನೆರವು ಬೇಕಾಗಿದೆ. ಪ್ರಧಾನಿ ಮೋದಿ ಅವರಿಗೆ ಈ ಬಗ್ಗೆ ಮನದಟ್ಟು ಮಾಡಲಾಗಿದೆ ಎಂದು ತಿಳಿಸಿದ್ದು, 50,000 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್​ ನೀಡುವಂತೆ ಮನವಿ ಮಾಡಿರುವುದಾಗಿ ಭಗವಂತ್ ಮಾನ್ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *