ಬೇಡಿಕೆ ಈಡೇರಿಸುವ ಭರವಸೆ : ಅಂಗನವಾಡಿ ನೌಕರರ ಹೋರಾಟ ವಾಪಸ್

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ನೌಕರರ ಹೋರಾಟವನ್ನು ವಾಪಸ್ಸು ಪಡೆಯಲಾಗಿದೆ.

ಸಚಿವರು ಹಾಗೂ ಅಧಿಕಾರಿಗಳು ನೀಡಿದ ಭರವಸೆಯ ಮೇಲೆ ಹೋರಾಟವನ್ನು‌ ವಾಪಸ್ಸ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ತಿಳಿಸಿದ್ದಾರೆ.

ಅಂಗನವಾಡಿ ಸಹಾಯಕಿಯರಿಗೆ ಮತ್ತು ಮಿನಿ ಕಾರ್ಯಕರ್ತೆಯರಿಗೆ ಈಗ ಬಜೆಟ್​​ನಲ್ಲಿ ಹೆಚ್ಚಳವಾಗಿರುವ ಸೇವಾ ಜೇಷ್ಠತೆಯನ್ನು ಸಮಪ್ರಮಾಣದಲ್ಲಿ ಕೊಡಲು ಶಿಫಾರಸು ಮಾಡುವುದಾಗಿ ಸಚಿವರು ಒಪ್ಪಿದ್ದಾರೆ. ಹಾಗೆಯೇ ಅನುಕಂಪದ ಆಧಾರದ ಮೇಲೆ ಮಗಳು ಮತ್ತು ಸೊಸೆಗೆ ಕೆಲಸ ಕೊಡಲು ಆದೇಶಿಸಿದ್ದಾರೆ. ಅಲ್ಲದೆ, ಕೋಳಿ ಮೊಟ್ಟೆ ಹಣವನ್ನು ಮುಂಗಡವಾಗಿ ಕೊಡಲು ಸರ್ಕಾರ ಒಪ್ಪಿದೆ ಎಂದು ವರಲಕ್ಷ್ಮಿ ಮಾಹಿತಿ ನೀಡಿದ್ದಾರೆ.

ಇನ್ನೊಂದಿಷ್ಟು ಬೇಡಿಕೆಗಳು ಈಡೇರಬೇಕಿದೆ. ಸೋಮುವಾರ ಉಳಿದ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಚಿವರು ಹಾಗೂ ಅಧಿಕಾರಿಗಳು ಸಭೆ ಕರೆದಿದ್ದಾರೆ ಹಾಗಾಗಿ ಹೋರಾಟವನ್ನು ತಾತ್ಕಾಲಿಕವಾಗಿ ವಾಪಸ್ಸ ಪಡೆಯುತ್ತಿದ್ದೇವೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಉಷಾರವರು ಲಿಖಿತ ಆದೇಶದ ಪ್ರತಿ ನೀಡಿ, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದವರು. ಉಳಿದ ಬೇಡಿಕೆಗಳು ಈಡೇರದೆ ಇದ್ದಲ್ಲಿ ನಾವು ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಪ್ರತಿಭಟನೆಕಾರರು ಎಚ್ಚರಿಸಿದರು. ಈ ವೇಳೆ ಸಂಘಟನೆಯ ಮುಖಂಡರಾದ ಜಿ. ಕಮಲಾ, ಶಾಂತಾ ಘಂಟೆ, ಯಮುನಾ ಗಾಂವ್ಕರ್, ಗುಲ್ಜಾರ್, ಕಲಾವತಿ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಪ್ರತಿಭಟನೆಕಾರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *