ಕೇಂದ್ರದೊಂದಿಗೆ ಮಾತುಕತೆಗೆ ನಿರಾಕರಿಸಿದ ರೈತ ಸಂಘಟನೆಗಳು

  • ಸ್ಥಳದ ಸಮಸ್ಯೆ ಉಂಟಾಗಿಲ್ಲ, ರಸ್ತೆಯಲ್ಲೇ ಅನಿರ್ದಿಷ್ಟ ಪ್ರತಿಭಟನೆ ಆರಂಭ: ರೈತ ಸಂಘಟನೆಗಳು

ನವದೆಹಲಿ: ಸುಮಾರು 30 ರೈತ ಸಂಘಗಳ ಜಂಟಿ ವೇದಿಕೆಯು ಭಾನುವಾರ ಕೃಷಿ ಕಾನೂನುಗಳ ಕುರಿತ ಬಿಕ್ಕಟ್ಟು ಪರಿಹರಿಸಲು ಮಾತುಕತೆ ನಡೆಸುವ ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿವೆ. ಯಾವುದೇ ಪೂರ್ವ ಷರತ್ತುಗಳು ಇಲ್ಲದಿದ್ದಲ್ಲಿ ಮಾತ್ರ ಪ್ರತಿಭಟನಾನಿರತ ರೈತರು ಸರ್ಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ತಿಳಿಸಿವೆ.

‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ದೆಹಲಿಗೆ ಹೋಗುವ ರಸ್ತೆಗಳಲ್ಲಿ ಅನಿರ್ದಿಷ್ಟ ಧರಣಿಯನ್ನು ಪ್ರಾರಂಭಿಸಿರುವುದರಿಂದಾಗಿ ಸಾವಿರಾರು ರೈತರಿಗೆ ಪ್ರತಿಭಟನಾ ಸ್ಥಳದ ಸಮಸ್ಯೆ ಉಂಟಾಗಿಲ್ಲ ಎಂದು ಜಂಟಿ ವೇದಿಕೆ ತಿಳಿಸಿದೆ.

ಇದನ್ನೂ ಓದಿ: ದೆಹಲಿ ಚಲೋ: ಪ್ರತಿಭಟನಾ ಸ್ಥಳದಲ್ಲೇ ಭವಿಷ್ಯದ ರೂಪು ರೇಷೆ ಚರ್ಚೆ

ಇದಕ್ಕೂ ಮುನ್ನ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ಪ್ರತಿಭಟನಾನಿರತ ರೈತರ ಜೊತೆ ಮಾತುಕತೆ ನಡೆಸಲು ಭಾರತ ಸರ್ಕಾರ ಸಿದ್ಧವಿದೆ. ಈ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಕೃಷಿ ಸಚಿವರು ಡಿಸೆಂಬರ್ 3ರಂದು ರೈತರನ್ನು ಆಹ್ವಾನಿಸಿದ್ದಾರೆ. ರೈತರ ಪ್ರತಿಯೊಂದು ಸಮಸ್ಯೆ ಮತ್ತು ಬೇಡಿಕೆಯನ್ನು ಸರ್ಕಾರ ಆಲಿಸಲಿದೆ’ ಎಂದು ತಿಳಿಸಿದ್ದರು.

ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಕೆಲವು ವಾರಗಳಲ್ಲಿ ಪಂಜಾಬ್ ಮತ್ತು ಹರಿಯಾಣ ಮೂಲದ ಸಾವಿರಾರು ರೈತರು ಬೀದಿಗಿಳಿದಿದ್ದು, ಈ ಕಾನೂನುಗಳಿಂದಾಗಿ ಮಾರುಕಟ್ಟೆಯಲ್ಲಿ ರೈತರ ಗಳಿಕೆಯಾಗುತ್ತದೆ ಮತ್ತು ನಿಗಮಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ: ರೈತರಿಗೆ ಅಮಿತ್ ಶಾ ಮನವಿ

ಶುಕ್ರವಾರ ಮಧ್ಯಾಹ್ನ, ಬುರಾರಿಯ ನಿರಂಕಾರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುವ ದೆಹಲಿ ಪೊಲೀಸರ ಪ್ರಸ್ತಾವವನ್ನು ರೈತರು ಒಪ್ಪಿಲ್ಲ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಚಲೋ ಆರಂಭಿಸಿರುವ ವಿವಿಧ ರೈತ ಸಂಘಟನೆಗಳ ಸಾವಿರಾರು ರೈತರು ದೆಹಲಿಯ ಸಿಂಘು ಗಡಿಯಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *