ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಗಸ್ಟ್ 18ರಿಂದ ಆರಂಭವಾಗಿರುವ ಅರ್ಜಿ ಪ್ರಕ್ರಿಯೆಗೆ ಸೆಪ್ಟೆಂಬರ್ 7 ಕೊನೆಯ ದಿನಾಂಕ. ಅರ್ಜಿ ಶುಲ್ಕ ಪಾವತಿಸಲು ಸೆಪ್ಟೆಂಬರ್ 10ರವರೆಗೆ ಅವಕಾಶವಿದೆ. ನೇಮಕಾತಿ
ಈ ನೇಮಕಾತಿಯಲ್ಲಿ ವಿವಿಧ ಜಿಲ್ಲೆಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಒಂದೇ ಅರ್ಜಿಯ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡುವ ಮಾಹಿತಿಯಲ್ಲಿ ತಪ್ಪಾದರೆ ಅಥವಾ ಅಪೂರ್ಣ ಮಾಹಿತಿ ನೀಡಿದರೆ ನಂತರ ತಿದ್ದುಪಡಿಗೆ ಅವಕಾಶ ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
15,000 ಹುದ್ದೆಗಳು ಯಾವುವು?
ಒಟ್ಟು 15,000 ಹುದ್ದೆಗಳಲ್ಲಿ ವಿವಿಧ ಶಿಕ್ಷಕರ ಹುದ್ದೆಗಳು ಸೇರಿವೆ.
ಪಿಎಸ್ಟಿ, ಪಿಇ ಗ್ರೇಡ್-2: 1,050
ಜಿಪಿಟಿ, ಸಿಎಸ್ಟಿ: 9,000
ಎಎಂ, ಪಿಇ ಗ್ರೇಡ್-2, ಗ್ರೇಡ್-1: 4,950
ಒಟ್ಟು: 15,000 ಹುದ್ದೆಗಳು
ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದ ಸೇರಿದಂತೆ ವಿವಿಧ ಜಿಲ್ಲೆ ಮತ್ತು ವಿಷಯವಾರು ಹುದ್ದೆಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಯು ಅರ್ಹತೆ ಹೊಂದಿರುವ ವಿವಿಧ ಕೇಡರ್ಗಳ ಹುದ್ದೆಗಳಿಗೆ ಮತ್ತು ಬೇರೆಬೇರೆ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಒಂದೇ ಅರ್ಜಿಯಲ್ಲಿ ಆಯ್ಕೆ ನೀಡಬಹುದು. ಪಿಎಸ್ಟಿ, ಪಿಇ, ಜಿಆರ್-1, ಎಎಂ ಮತ್ತು ಪಿಇ, ಜಿಆರ್-2 ಸೇರಿದಂತೆ ಅಧಿಸೂಚನೆಯಲ್ಲಿ ಸೂಚಿಸಿರುವ ಕೇಡರ್ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಭರ್ತಿ ಮಾಡುವಾಗ ಮೀಸಲಾತಿಗೆ ಸಂಬಂಧಿಸಿದ ಕಾಲಂ ಅನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ಮೀಸಲಾತಿ ಸೌಲಭ್ಯ ಪಡೆಯುವ ಅಭ್ಯರ್ಥಿಗಳು ತಮ್ಮ ವರ್ಗವನ್ನು ಸರಿಯಾಗಿ ಪರಿಶೀಲಿಸಿ ನಮೂದಿಸಬೇಕು.
ಮೀಸಲಾತಿ ಕಾಲಂ ಖಾಲಿ ಬಿಟ್ಟರೂ ಅಥವಾ ತಪ್ಪಾದ ವರ್ಗವನ್ನು ನಮೂದಿಸಿದರೂ ನಂತರ ತಿದ್ದುಪಡಿಗೆ ಅವಕಾಶವಿಲ್ಲ. ಅಂತಹ ತಪ್ಪಿನ ಸಂಪೂರ್ಣ ಹೊಣೆ ಅಭ್ಯರ್ಥಿಯದ್ದೇ ಆಗಿರುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
1ರಿಂದ 8ನೇ ತರಗತಿವರೆಗೆ ಬೋಧಿಸುವ ಶಿಕ್ಷಕರ ಹುದ್ದೆಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತಾ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ.
ಆದರೆ ಪ್ರೌಢಶಾಲಾ ಸಹಶಿಕ್ಷಕರು, ಪ್ರೌಢಶಾಲಾ ದೈಹಿಕ ಶಿಕ್ಷಕರು ಗ್ರೇಡ್-1 ಹಾಗೂ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರು ಗ್ರೇಡ್-2 ಹುದ್ದೆಗಳಿಗೆ ಟಿಇಟಿ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಇಲಾಖೆ ತಿಳಿಸಿದೆ. ನೇಮಕಾತಿ
ಇದನ್ನೂ ಓದಿ : ಬಿಡದಿ | : ಆಸ್ಪತ್ರೆ, ಔಷಧ ಅಂಗಡಿಗಳಿಗೂ ಸರಬರಾಜು; ಐಸಿಯುಗಳಲ್ಲೂ ಬಳಕೆಯಾಗಿರುವ ಶಂಕೆ

ಈ ಬಾರಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ
ಈ ಬಾರಿ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ವಿವರಣಾತ್ಮಕ ಪ್ರಶ್ನೆಗಳನ್ನು ಕೈಬಿಟ್ಟು ಸಂಪೂರ್ಣ ವಸ್ತುನಿಷ್ಠ ಮಾದರಿ (ಎಂಸಿಕ್ಯೂ) ಅನುಸರಿಸಲಾಗುತ್ತಿದೆ. ಅಭ್ಯರ್ಥಿಗಳು ಒಎಂಆರ್ ಉತ್ತರ ಪತ್ರಿಕೆಯಲ್ಲಿ ಉತ್ತರಗಳನ್ನು ಗುರುತಿಸಬೇಕಾಗುತ್ತದೆ. ಅಭ್ಯರ್ಥಿಯು ಯಾವ ಕೇಡರ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೋ, ಆ ಕೇಡರ್ಗೆ ಸಂಬಂಧಿಸಿದಂತೆ ಪತ್ರಿಕೆ-1 ಮತ್ತು ಪತ್ರಿಕೆ-2 ಎರಡೂ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳು ಅಕ್ಟೋಬರ್ 5 ಮತ್ತು 6ರಂದು ನಡೆಯಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿಯಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಆಧಾರ್ ಸಂಖ್ಯೆ, ಭಾವಚಿತ್ರ, ಸಹಿ ಸೇರಿದಂತೆ ವೈಯಕ್ತಿಕ ಮಾಹಿತಿಗಳು ಅಭ್ಯರ್ಥಿಯದ್ದೇ ಆಗಿರಬೇಕು.
ಅಪೂರ್ಣ, ಅಸ್ಪಷ್ಟ ಅಥವಾ ಸುಳ್ಳು ಮಾಹಿತಿ ನೀಡಿದರೆ ಅಭ್ಯರ್ಥಿತನ ರದ್ದಾಗಬಹುದು. ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಮಾಹಿತಿಯ ನೈಜತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯೂ ಅಭ್ಯರ್ಥಿಯದ್ದೇ ಎಂದು ಇಲಾಖೆ ಎಚ್ಚರಿಸಿದೆ.
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ, ಮೀಸಲಾತಿ ವರ್ಗ, ಜಿಲ್ಲೆ, ಕೇಡರ್, ಭಾವಚಿತ್ರ, ಸಹಿ, ಆಧಾರ್ ಸಂಖ್ಯೆ ಹಾಗೂ ಸಂಪರ್ಕ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸುವುದು ಅತ್ಯಂತ ಮುಖ್ಯ.
ಅರ್ಜಿಯನ್ನು ಸಲ್ಲಿಸಿದ ನಂತರ ತಿದ್ದುಪಡಿಗೆ ಅವಕಾಶ ಇಲ್ಲದಿರುವುದರಿಂದ, ಆತುರದಲ್ಲಿ ಅರ್ಜಿ ಸಲ್ಲಿಸಿ ತಪ್ಪು ಮಾಡುವುದಕ್ಕಿಂತ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಮಾಹಿತಿ ಪರಿಶೀಲಿಸಿದ ಬಳಿಕ ಅರ್ಜಿ ಸಲ್ಲಿಸುವುದು ಸೂಕ್ತ.
ಅಭ್ಯರ್ಥಿಗಳಿಗೆ ಸಹಾಯವಾಣಿ
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಗೊಂದಲ ಅಥವಾ ತಾಂತ್ರಿಕ ಸಮಸ್ಯೆ ಎದುರಾದರೆ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಸಹಾಯವಾಣಿ: 080-22483145 / 9483024723
ಸಮಯ: ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ.
15,000 ಶಿಕ್ಷಕರ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶವಾಗಿದ್ದರೂ, ಅರ್ಜಿ ಸಲ್ಲಿಸುವಾಗ ಮಾಡುವ ಒಂದು ಸಣ್ಣ ತಪ್ಪೂ ಅವಕಾಶ ಕಳೆದುಕೊಳ್ಳುವಂತೆ ಮಾಡಬಹುದು. ಹೀಗಾಗಿ ಅಧಿಸೂಚನೆಯ ನಿಯಮಗಳನ್ನು ಸಂಪೂರ್ಣವಾಗಿ ಓದಿ, ದಾಖಲೆಗಳನ್ನು ಪರಿಶೀಲಿಸಿ, ಮೀಸಲಾತಿ ಮತ್ತು ವೈಯಕ್ತಿಕ ಮಾಹಿತಿಯನ್ನು ನಿಖರವಾಗಿ ನಮೂದಿಸುವುದು ಅಭ್ಯರ್ಥಿಗಳ ಮೊದಲ ಆದ್ಯತೆಯಾಗಬೇಕು.
ಇದನ್ನೂ ನೋಡಿ : SIR ಕರ್ನಾಟಕ | ಮತದಾನದ ಹಕ್ಕಿಗಾಗಿ ಭಿಕ್ಷೆ ಬೇಡುವಂತೆ ಮಾಡಬೇಡಿ: ನಟ ಪ್ರಕಾಶ್ ರಾಜ್ Janashakthi Media
