ಬೆಂಗಳೂರು: ಸ್ವಯಂ ಕಾಮಗಾರಿಗಳ ಮೇಲ್ವಿಚಾರಣೆಗೆ ಗ್ರಾಹಕರಿಂದ ವಸೂಲಿಸುವ ಶುಲ್ಕವನ್ನು ನಿಗದಿ ಅಥವಾ ಪರಿಷ್ಕರಿಸುವ ಸ್ಪಷ್ಟ ಅಧಿಕಾರ ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL)ಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ರವಿ ವಿ. ಹೋಸ್ಮನಿ ಅವರು ಈ ಕುರಿತು ತೀರ್ಪು ನೀಡಿದ್ದು, ಅನುಷ್ಕಾ ರಿಯಾಲ್ಟಿ ಇಂಕ್ 2018ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ್ದಾರೆ.
ಅರ್ಜಿದಾರರು, 2018ರ ಜೂನ್ 27ರಂದು ಕೆಪಿಟಿಸಿಎಲ್ ಹೊರಡಿಸಿದ್ದ, ಸ್ವಯಂ ಕಾಮಗಾರಿಗಳಿಗಾಗಿ ಹಂತಾವಾರಿಯಾಗಿ ಮೇಲ್ವಿಚಾರಣಾ ಶುಲ್ಕ ನಿಗದಿ ಮಾಡಿದ ಆದೇಶವನ್ನು ಪ್ರಶ್ನಿಸಿದ್ದರು. ಜೊತೆಗೆ, ಆಗಸ್ಟ್ 4, 2018ರಂದು ಸುಮಾರು ₹1.02 ಕೋಟಿ ಮೇಲ್ವಿಚಾರಣಾ ಶುಲ್ಕ ಪಾವತಿಸುವಂತೆ ನೀಡಿದ್ದ ನೋಟಿಸ್ನ್ನೂ ಸವಾಲು ಮಾಡಿದ್ದರು.
ಇದನ್ನೂ ಓದಿ: ಮತದಾರರ ಪಟ್ಟಿಗೆ ಪಾಸ್ಪೋರ್ಟ್ ಮಾನ್ಯ ದಾಖಲೆ ಮುಂದುವರಿಕೆ: ಚುನಾವಣಾ ಆಯೋಗ ಸ್ಪಷ್ಟನೆ
ಈ ಪ್ರಕರಣವು ನಗರದ ಕೆಆರ್ ಪುರಂ ಪ್ರದೇಶದಲ್ಲಿರುವ ಬಹುಮಹಡಿ ವಸತಿ ಯೋಜನೆಗೆ ಸಂಬಂಧಿಸಿದೆ. ಅರ್ಜಿದಾರರು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಾವಳಿಗಳ ಪ್ರಕಾರ ₹15 ಲಕ್ಷ ಶುಲ್ಕ ಪಾವತಿಸಿ ಸ್ವಯಂ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಮನವಿ ಮಾಡಿದ್ದರು.
ನ್ಯಾಯಾಲಯ, ಕೆಪಿಟಿಸಿಎಲ್ ಹಾಗೂ ಬೆಸ್ಕಾಂಗೆ ನಿರ್ದೇಶನ ನೀಡಿದ್ದು, ಅರ್ಜಿದಾರರಿಂದ ಮೇಲ್ವಿಚಾರಣಾ ಶುಲ್ಕವನ್ನು ಸ್ವೀಕರಿಸಿ, ಇತರೆ ನಿಯಮಾವಳಿಗಳನ್ನು ಪಾಲಿಸಿರುವಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸಿರುವ ಅರ್ಜಿಯನ್ನು ಕಾನೂನುಬದ್ಧವಾಗಿ ಪ್ರಕ್ರಿಯೆಗೊಳಿಸಲು ಸೂಚಿಸಿದೆ.
ಹೆಚ್ಚುವರಿ ಹಣ ವಸೂಲಾಗಿದ್ದಲ್ಲಿ, ಅದನ್ನು ಎಂಟು ವಾರಗಳೊಳಗೆ ಹಿಂತಿರುಗಿಸಬೇಕು. ವಿಳಂಬವಾದಲ್ಲಿ ಠೇವಣಿ ಮಾಡಿದ ದಿನಾಂಕದಿಂದ ವರ್ಷಕ್ಕೆ 8% ಬಡ್ಡಿದರದಲ್ಲಿ ಮರುಪಾವತಿ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ನೋಡಿ: ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media
