ಶ್ರೀನಗರ: ಭದ್ರತಾ ಪರಿಸ್ಥಿತಿ ಸುಧಾರಣೆ ಮತ್ತು ಸಾಮಾನ್ಯ ಪರಿಸ್ಥಿತಿ ಮರಳುತ್ತಿರುವುದನ್ನು ಪ್ರತಿಬಿಂಬಿಸುವ ಮಹತ್ವದ ಹೆಜ್ಜೆಯಾಗಿ, ಆಡಳಿತವು ಪರಂಪರೆಯ 8ನೇ ಮೊಹರಂ ಮೆರವಣಿಗೆಗೆ ಅನುಮತಿ ನೀಡಿದೆ. ಜೂನ್ 24ರಂದು ನಡೆಯುವ ಈ ಮೆರವಣಿಗೆಗೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.
ಜಿಲ್ಲಾಧಿಕಾರಿ ಹೊರಡಿಸಿದ ಆದೇಶದ ಪ್ರಕಾರ, ಮೆರವಣಿಗೆ ಗುರುಬಜಾರ್ನಿಂದ ಆರಂಭವಾಗಿ ಬುದ್ಶಾ ಕದಲ್ ಹಾಗೂ ಎಂ.ಎ. ರಸ್ತೆ ಮೂಲಕ ಡಾಲ್ಗೇಟ್ವರೆಗೆ ತನ್ನ ಸಂಪ್ರದಾಯಿಕ ಮಾರ್ಗವನ್ನು ಅನುಸರಿಸುತ್ತದೆ.
1990ರಲ್ಲಿ ಉಗ್ರ ಚಟುವಟಿಕೆಗಳು ಆರಂಭವಾದ ಬಳಿಕ ಕಾಶ್ಮೀರದಲ್ಲಿ 8ನೇ ಹಾಗೂ 10ನೇ ಮೊಹರಂ ಮೆರವಣಿಗೆಗಳಿಗೆ ನಿಷೇಧ ಹೇರಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಈ ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆದುಹಾಕಲಾಗಿದೆ.
ಇದನ್ನೂ ಓದಿ: ಅನಕಾಪಲ್ಲಿ ಕಾರ್ಖಾನೆಯಲ್ಲಿ ಬೆಂಕಿ ದುರಂತ: ಇಬ್ಬರು ಸಜೀವದಹನ
ಆದೇಶದ ಪ್ರಕಾರ, ಮೆರವಣಿಗೆ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದೆ. ಜಹಾಂಗೀರ್ ಚೌಕ್ ಅನ್ನು 7 ಗಂಟೆಗೆ ಹಾಗೂ ಜೆ & ಕೆ ಬ್ಯಾಂಕ್ ಮುಖ್ಯ ಕಚೇರಿ ಪ್ರದೇಶವನ್ನು ಬೆಳಿಗ್ಗೆ 8.30ರೊಳಗೆ ದಾಟುವ ನಿರೀಕ್ಷೆಯಿದೆ. ಸಾವಿರಾರು ಶಿಯಾ ಸಮುದಾಯದ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮೆರವಣಿಗೆಗಾಗಿ ಎಂ.ಎ. ರಸ್ತೆಯ ಒಂದು ಭಾಗವನ್ನು ಮಾತ್ರ ಬಳಸಲು ಅನುಮತಿ ನೀಡಲಾಗಿದ್ದು, ಮತ್ತೊಂದು ಭಾಗವನ್ನು ತುರ್ತು ಸೇವಾ ವಾಹನಗಳಿಗಾಗಿ ತೆರೆಯಿಡಲಾಗುತ್ತದೆ.
ಆಡಳಿತವು ಸ್ಪಷ್ಟಪಡಿಸಿರುವಂತೆ, ಯಾವುದೇ ರೀತಿಯ ರಾಷ್ಟ್ರವಿರೋಧಿ, ಪ್ರಚೋದನಾತ್ಮಕ ಭಾಷಣ, ಘೋಷಣೆ ಅಥವಾ ಪ್ರಚಾರಕ್ಕೆ ಅವಕಾಶ ಇರುವುದಿಲ್ಲ. ಧಾರ್ಮಿಕ, ಸಾಮಾಜಿಕ, ಪ್ರಾದೇಶಿಕ ಸೌಹಾರ್ದತೆಗೆ ಧಕ್ಕೆಯುಂಟು ಮಾಡುವ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪ್ರಚೋದನಾತ್ಮಕ ಘೋಷಣೆಗಳಿರುವ ಧ್ವಜಗಳು, ಭಯೋತ್ಪಾದಕರ ಚಿತ್ರಗಳು ಅಥವಾ ನಿಷೇಧಿತ ಸಂಘಟನೆಗಳ ಚಿಹ್ನೆಗಳನ್ನು ಪ್ರದರ್ಶಿಸುವುದು ಸಂಪೂರ್ಣವಾಗಿ ನಿಷೇಧವಾಗಿದೆ.
ಮೆರವಣಿಗೆಯಲ್ಲಿ ಡ್ರೋನ್ ಬಳಕೆಗೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಬಾರದು, ಟ್ರಾಫಿಕ್ ಸಂಚಾರಕ್ಕೆ ಅಡ್ಡಿಯಾಗಬಾರದು ಮತ್ತು ಶಬ್ದ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಎಚ್ಚರಿಸಿದೆ.
ಇದನ್ನೂ ನೋಡಿ: ದಲಿತ ಪ್ಯಾಂಥರ್ಸ್ ಮುಂದೆ ಆರೆಸ್ಸೆಸ್ ಮಂಡಿಯೂರಿದ್ದು ಹೇಗೆ? : ಕಾರವಾನ್ Janashakthi Media
