ನವದೆಹಲಿ: ಜಿರಳೆ ಜನತಾ ಪಾರ್ಟಿ (ಸಿಜೆಪಿ) ಹಿನ್ನೆಲೆಯ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ತಡೆಯುವ ಉದ್ದೇಶದಿಂದ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಡಿ ದೆಹಲಿ ಪೊಲೀಸರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸಿಪಿಎಂ ನಾಯಕಿ ಹಾಗೂ ಮಾಜಿ ಸಂಸದೆ ಬೃಂದಾ ಕಾರಟ್ ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಯುವತಿಗೆ
ಜೂನ್ 5ರಂದು ನ್ಯೂ ರಾಜಿಂದರ್ ನಗರದಲ್ಲಿರುವ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಅಹನಾ ಸಿಂಗ್ ಕೈತ್ ಅವರನ್ನು ಕೆಲ ಪೊಲೀಸ್ ಸಿಬ್ಬಂದಿ ಸಂಪರ್ಕಿಸಿ ವಿಚಾರಣೆಗೆ ಒಳಪಡಿಸಿದ್ದರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಅವರನ್ನು ಸಮೀಪದ ಕೋಚಿಂಗ್ ಕೇಂದ್ರಕ್ಕೆ ಕರೆದೊಯ್ದು ಹಲವು ಗಂಟೆಗಳ ಕಾಲ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಕುಟುಂಬದ ಹಿನ್ನೆಲೆ, ಶಿಕ್ಷಣ ಮತ್ತು ರಾಜಕೀಯ ಅಭಿಪ್ರಾಯಗಳ ಕುರಿತು ಪ್ರಶ್ನೆ ಕೇಳಿದ್ದಲ್ಲದೆ, ಸಿಜೆಪಿ ಪ್ರತಿಭಟನೆಗಳಲ್ಲಿ ಯಾರು ಭಾಗವಹಿಸುತ್ತಾರೆ ಎಂಬ ಮಾಹಿತಿ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶ ಇಲ್ಲ ಎಂದು ಅಹನಾ ಸ್ಪಷ್ಟಪಡಿಸಿದರೂ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಮೊಬೈಲ್ ಫೋನ್ ಪರಿಶೀಲಿಸಲು ಯತ್ನಿಸಿದ್ದು, ನ್ಯಾಯಾಲಯದ ಆದೇಶವಿದೆಯೇ ಎಂದು ಯುವತಿ ಪ್ರಶ್ನಿಸಿದ ಬಳಿಕವೂ ಕಿರುಕುಳ ನಿಂತಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಬಳಿಕ ತಮ್ಮ ಮೇಲೆ ನಿಗಾ ಇಡಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರೆಂದು ಆರೋಪಿಸಲಾಗಿದೆ. ಯುವತಿಗೆ
ಇದನ್ನೂ ಓದಿ : ತೈಲ, ಆಹಾರ ಬೆಲೆ ಏರಿಕೆ ಭೀತಿ: ಜನರ ಜೇಬಿಗೆ ಮತ್ತಷ್ಟು ಹೊರೆ?
ಅದೇ ದಿನ ರಾತ್ರಿ ಪೊಲೀಸ್ ಅಧಿಕಾರಿಯೊಬ್ಬರು ಅಹನಾ ಅವರನ್ನು ಭೇಟಿ ಮಾಡಿ, ಅವರು ಎಲ್ಲಿಗೆ ಹೋದರೂ ಮಾಹಿತಿ ನೀಡಬೇಕು ಹಾಗೂ ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಭಯಗೊಂಡಿದ್ದ ಅಹನಾ ಸಿಂಗ್ ತಮ್ಮನ್ನು ಸಂಪರ್ಕಿಸಿ ನಡೆದ ಘಟನೆಯನ್ನು ವಿವರಿಸಿದ್ದಾರೆ ಎಂದು ಬೃಂದಾ ಕಾರಟ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ನಡೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಿರುವ ಅವರು, ಯಾವುದೇ ವಾರಂಟ್ ಇಲ್ಲದೆ ಯುವತಿಯನ್ನು ಪ್ರಶ್ನಿಸುವುದು, ಮೊಬೈಲ್ ಪರಿಶೀಲಿಸಲು ಯತ್ನಿಸುವುದು ಹಾಗೂ ಗೃಹಬಂಧನದಲ್ಲಿರುವಂತೆ ವರ್ತಿಸುವುದು ಕಾನೂನುಬಾಹಿರ ಕ್ರಮಗಳಾಗಿವೆ ಎಂದು ಹೇಳಿದ್ದಾರೆ.
ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಪ್ರಜಾಸತ್ತಾತ್ಮಕ ಹಕ್ಕಾಗಿದ್ದು, ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೇ ರೀತಿಯ ಘಟನೆಗಳು ಇನ್ನೂ ಎಷ್ಟು ನಡೆದಿವೆ ಹಾಗೂ ಎಷ್ಟು ಜನರನ್ನು ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ತಡೆಯಲಾಗಿದೆ ಎಂಬುದರ ಕುರಿತು ಪ್ರಶ್ನೆ ಎತ್ತಿರುವ ಅವರು, ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಯ ವಿರುದ್ಧ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯುವತಿಗೆ
ಇದನ್ನೂ ನೋಡಿ : ದೇಶದ ಆರ್ಥಿಕತೆ ಮತ್ತು ಹಣದುಬ್ಬರ: ನಿಜ ಹೇಳಿ ಮೋದಿಜೀ.. nation wants to know #JanashakthiMedia
