ಶಾಲೆ – ಕಾಲೇಜುಗಳ ಆರಂಭದೊಂದಿಗೆ ಹಾಸ್ಟೆಲ್‌ಗಳನ್ನು ಆರಂಭಿಸಲು ಎಸ್ಎಫ್ಐ ಆಗ್ರಹ

ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ₹4,500ಕ್ಕೆ ಹೆಚ್ಚಿಸಿ: ಮಹಾಲಿಂಗ ದೊಡ್ಡಮನಿ
ದೇವದುರ್ಗ: 2026-27ನೇ ಶೈಕ್ಷಣಿಕ ವರ್ಷ ಆರಂಭಗೊಂಡು ಶಾಲೆ-ಕಾಲೇಜುಗಳಲ್ಲಿ ತರಗತಿಗಳು ಪ್ರಾರಂಭವಾಗಿದ್ದರೂ, ವಿದ್ಯಾರ್ಥಿ ನಿಲಯಗಳನ್ನು (ಹಾಸ್ಟೆಲ್‌ಗಳನ್ನು) ಇನ್ನೂ ಆರಂಭಿಸದಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ದೇವದುರ್ಗ ತಾಲೂಕು ಸಮಿತಿ ಮುಖಂಡರು ಖಂಡಿಸಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬರೆದ ಮನವಿ ಪತ್ರವನ್ನು ನಾಡ ತಹಸೀಲ್ದಾರ್ ಗೋವಿಂದ ಅವರ ಮೂಲಕ ಜೂನ್‌ 9ರಂದು ಸಲ್ಲಿಸಿದರು. ಶಾಲೆ

ಜಾಲಹಳ್ಳಿ ಅಂಬೇಡ್ಕರ್ ಸರ್ಕಲ್ ಬಳಿ ನೂರಾರು ವಿದ್ಯಾರ್ಥಿಗಳು,ಪಾಲಕರ ಜೊತೆ ಸೇರಿ ಎಸ್‌ಎಫ್‌ಐ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದರು.

ಬಳಿಕ ಎಸ್ ಎಫ್ ಐ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ ಮಾತನಾಡಿ ಶಾಲೆ-ಕಾಲೇಜುಗಳ ಆರಂಭದೊಂದಿಗೆ ಹಾಸ್ಟೆಲ್‌ಗಳನ್ನು ಕೂಡ ತಕ್ಷಣ ಆರಂಭಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಇದನ್ನೂ ಓದಿ: ಬಿಪಿಎಲ್ ರೋಗಿಗಳಿಂದ ಶುಲ್ಕ ಬೇಡ: ಖಾಸಗಿ ಆಸ್ಪತ್ರೆಗಳಿಗೆ ಖಾದರ್ ಎಚ್ಚರಿಕೆ

ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಆಯ್ಕೆ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಲ್ಲಿ ಪ್ರತಿದಿನ ದೂರದ ಗ್ರಾಮಗಳಿಂದ ಕಾಲೇಜುಗಳಿಗೆ ಸಂಚರಿಸಿ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದಾರೆ. ಸಮರ್ಪಕ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಆಯ್ಕೆ ಪಟ್ಟಿ ಪ್ರಕಟಿಸಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದಂತೆ ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಒದಗಿಸಬೇಕು. ಅಲ್ಲದೆ, ಮೆರಿಟ್ ಆಧಾರಿತ ಆಯ್ಕೆ ಪದ್ಧತಿಯನ್ನು ಕೈಬಿಟ್ಟು, ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ವಿಸ್ತರಿಸಬೇಕು ಎಂದು ಹೇಳಿದರು.

ಬಳಿಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ. ಮಾತನಾಡಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಸ್ಥಾಪಿಸಿ, ಉತ್ತಮ ಗುಣಮಟ್ಟದ ಆಹಾರ, ಶುಚಿತ್ವ ಕಿಟ್‌ಗಳು, ತಟ್ಟೆ, ಲೋಟ, ಹಾಸಿಗೆ, ಬೆಡ್‌ಶೀಟ್ ಹಾಗೂ ಹೊದಿಕೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಬೇಕು ಜೊತೆಗೆ ಸುಸಜ್ಜಿತ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಕಂಪ್ಯೂಟರ್ ಲ್ಯಾಬ್, ಉಚಿತ ವೈ-ಫೈ, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕೈಬಿಟ್ಟು, ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ₹4,500ಕ್ಕೆ ಹೆಚ್ಚಿಸಬೇಕೆಂದು ಹೇಳಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಂಡು, ಹಾಸ್ಟೆಲ್‌ಗಳನ್ನು ಕೂಡಲೇ ಆರಂಭಿಸಬೇಕು , ಜಾಲಹಳ್ಳಿ ಯಲ್ಲಿ ಮಹಿಳಾ ವಸತಿ ನಿಲಯ ಮಂಜೂರು ಮಾಡಲು ಒತ್ತಾಯಿಸಿದರು.

ಇದೆ ಸಂದರ್ಭದಲ್ಲಿ ಎಸ್ ಎಫ್ ಐ ತಾಲೂಕು ಸಮಿತಿ ಮುಖಂಡರಾದ ಸಂತೋಷ್ ತ್ಯಾಪ್ಲಿ, ಅಭಿಷೇಕ್ . ಸಿಐಟಿಯು ಜಿಲ್ಲಾ ಮುಖಂಡ ಗಿರಿಯಪ್ಪ ಪೂಜಾರಿ,ಡಿವೈಎಫ್ಐ ಅಧ್ಯಕ್ಷ ರಿಯಾಜ್ ಆರ್ಥಿ, ಕಾರ್ಯದರ್ಶಿ ರಾಜು ನಾಯಕ, ಮೌನೇಶ, ಗ್ರಾಮ ಪಂಚಾಯಿತಿ ಸದಸ್ಯ ಮುಕ್ತಂ ಪಾಷಾ, ಬಸವರಾಜ ವಂದಲಿ, ಹನುಮಂತ ಮಡಿವಾಳ,ರಾಮಣ್ಣ, ಮೌನೇಶ ಚಪ್ಪಳಿಕಿ, ಬಾಲು ಘೋಷಾಲ್, ಅಮೀರ್ ಪಾಟೀಲ್, ರಿಯಾಜ್ ಖುರ್ಷಿ ಮತ್ತು ಇತರರು ಭಾಗವಹಿಸಿದ್ದರು.

ಇದನ್ನೂ ನೋಡಿ: ಖಾತೆ ಹಂಚಿಕೆಯಲ್ಲಿ ಅಸಮಾಧಾನ: ಹಿರಿತನ ಪರಿಗಣಿಸುತ್ತಿಲ್ಲ ಎಂದ ಸಚಿವ ಕೆ ಹೆಚ್ ಮುನಿಯಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *