ನವದೆಹಲಿ: ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಸಾಲಿನಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದರೂ, ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಬೆಲೆ ಏರಿಕೆ ದೇಶದ ಆರ್ಥಿಕತೆಗೆ ಈಗಿನ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ಆರ್ಥಿಕ ವಿಶ್ಲೇಷಣಾ ಸಂಸ್ಥೆ ನುವಾಮಾ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಎಚ್ಚರಿಕೆ ನೀಡಿದೆ.
ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, 2026-27ನೇ ಹಣಕಾಸು ವರ್ಷದಲ್ಲಿ ಚಿಲ್ಲರೆ ಬೆಲೆ ಏರಿಕೆ ಪ್ರಮಾಣ ಸರಾಸರಿ ಶೇ.5.7ರಷ್ಟಾಗುವ ಸಾಧ್ಯತೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿರುವ ಶೇ.4.6ಕ್ಕಿಂತ ಇದು ಗಮನಾರ್ಹವಾಗಿ ಹೆಚ್ಚಾಗಿದೆ. ಅಂದರೆ ಆಹಾರ ಪದಾರ್ಥಗಳು, ಇಂಧನ, ಸಾರಿಗೆ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ವರದಿಯ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಕಚ್ಚಾ ತೈಲದ ಬೆಲೆಯನ್ನು ಮೇಲಕ್ಕೆತ್ತುವ ಅಪಾಯವಿದೆ. ಕಚ್ಚಾ ತೈಲದ ಬೆಲೆ ಏರಿದರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಮಾತ್ರವಲ್ಲದೆ, ಸಾರಿಗೆ ವೆಚ್ಚವೂ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಕೃಷಿ ಉತ್ಪನ್ನಗಳಿಂದ ಹಿಡಿದು ಗ್ರಾಹಕ ವಸ್ತುಗಳವರೆಗೆ ಬಹುತೇಕ ಎಲ್ಲ ಸರಕುಗಳ ಬೆಲೆ ಹೆಚ್ಚಾಗಬಹುದು.
ಇದರ ಜೊತೆಗೆ ಹವಾಮಾನ ವೈಪರೀತ್ಯವೂ ಮತ್ತೊಂದು ದೊಡ್ಡ ಆತಂಕವಾಗಿದೆ. ಎಲ್ ನಿನೋ ಪರಿಣಾಮ ಮತ್ತು ಮಳೆಯ ಕೊರತೆಯಿಂದ ಕಾಳುಗಳು, ಎಣ್ಣೆ ಬೀಜಗಳು, ತರಕಾರಿಗಳು ಹಾಗೂ ಮಸಾಲೆ ಬೆಳೆಗಳ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಸಾಮಾನ್ಯ ಮಳೆಯ ಪ್ರಮಾಣದ ಕೇವಲ ಶೇ.90ರಷ್ಟು ಮಳೆಯಷ್ಟೇ ದಾಖಲಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಮಳೆ ಕೊರತೆಯಾದರೆ ಬೆಳೆ ಉತ್ಪಾದನೆ ಕಡಿಮೆಯಾಗಿ ಆಹಾರ ವಸ್ತುಗಳ ಬೆಲೆ ಮತ್ತಷ್ಟು ಏರಬಹುದು.
ಇದನ್ನೂ ಓದಿ : ಹಗೇವು ಒಪ್ಪಂದಗಳಲ್ಲಿ ಎಫ್ಸಿಐ ನ ʼಏಕಸ್ವಾಮ್ಯ – ವಿರೋಧಿʼ ಕಲಮನ್ನೆ ಕೈಬಿಟ್ಟ ಸರಕಾರ
ವರದಿ ವಿಶೇಷವಾಗಿ ಗ್ರಾಮೀಣ ಭಾರತದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಗ್ರಾಮೀಣ ಕುಟುಂಬಗಳ ಒಟ್ಟು ಖರ್ಚಿನಲ್ಲಿ ಆಹಾರದ ಪಾಲು ನಗರ ಪ್ರದೇಶಗಳಿಗಿಂತ ಹೆಚ್ಚಿರುತ್ತದೆ. ಹೀಗಾಗಿ ಅಕ್ಕಿ, ಬೇಳೆ, ತರಕಾರಿ, ಅಡುಗೆ ಎಣ್ಣೆ ಮೊದಲಾದ ವಸ್ತುಗಳ ಬೆಲೆ ಏರಿಕೆಯ ಹೊರೆ ಗ್ರಾಮೀಣ ಜನರ ಮೇಲೆ ಹೆಚ್ಚು ಬೀಳಲಿದೆ. ಇದರಿಂದ ಅವರ ಖರೀದಿ ಸಾಮರ್ಥ್ಯ ಕುಗ್ಗಿ, ಟ್ರ್ಯಾಕ್ಟರ್ಗಳು, ದ್ವಿಚಕ್ರ ವಾಹನಗಳು, ಗೃಹೋಪಯೋಗಿ ವಸ್ತುಗಳು ಮತ್ತು ದಿನನಿತ್ಯದ ಬಳಕೆಯ ಉತ್ಪನ್ನಗಳ ಮಾರಾಟದ ಮೇಲೂ ಪರಿಣಾಮ ಬೀಳಬಹುದು.
ಬೆಲೆ ಏರಿಕೆ ನಿಯಂತ್ರಣ ತಪ್ಪಿದರೆ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಈ ಹಣಕಾಸು ವರ್ಷದ ಕೊನೆಯ ಭಾಗದಲ್ಲಿ ಬಡ್ಡಿದರಗಳಲ್ಲಿ 50 ಬೇಸಿಸ್ ಪಾಯಿಂಟ್ಗಳವರೆಗೆ (ಶೇ.0.50) ಏರಿಕೆ ಸಂಭವಿಸಬಹುದು. ಬಡ್ಡಿದರ ಏರಿದರೆ ಮನೆ, ವಾಹನ ಹಾಗೂ ಉದ್ಯಮ ಸಾಲಗಳ ಮೇಲಿನ ಬಡ್ಡಿ ಹೊರೆ ಹೆಚ್ಚಾಗಲಿದೆ.
ಭಾರತದ ಆರ್ಥಿಕ ಬೆಳವಣಿಗೆ ದರ ಉತ್ತಮವಾಗಿದ್ದರೂ, ಜನರ ಜೇಬಿನ ಮೇಲೆ ನೇರ ಹೊರೆ ಬೀರುವ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಮುಂದೆ ಇರುವ ಪ್ರಮುಖ ಸವಾಲಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಇದನ್ನೂ ನೋಡಿ : ದೇಶದ ಆರ್ಥಿಕತೆ ಮತ್ತು ಹಣದುಬ್ಬರ: ನಿಜ ಹೇಳಿ ಮೋದಿಜೀ.. nation wants to know #JanashakthiMedia
