ಬೆಂಗಳೂರು: ನೂತನ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿಯೇ ಈಗಾಗಲೇ ಎಲ್ಲಾ ವಿದ್ಯಾರ್ಥಿನಿಯರಿಗೆ ಇದ್ದ ಉಚಿತ ಬಸ್ ಪಾಸ್ ಸೌಲಭ್ಯವನ್ನು ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತರಿಸಿರುವುದು ಅತ್ಯಂತ ಸ್ವಾಗಾತಾರ್ಹ ಬೆಳವಣಿಗೆ ಎಂದು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ .ಪಿ ತಿಳಿಸಿದರು.
ಇದಕ್ಕಾಗಿ ಪಾಫ್ರೆ ಸಿಎಂ ಡಿಕೆ ಶಿವಕುಮಾರ್ ರವರನ್ನು ಅಭಿನಂದಿಸುತ್ತದೆ. ಹಲವು ದಶಕಗಳಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನು ಪಾಫ್ರೆ ಹಾಗು ವಿವಿಧ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸುತ್ತಾ ಬಂದಿದ್ದವು ಎಂದರು.
ಇದನ್ನೂ ಓದಿ: ಡಿಕೆಶಿ ಕ್ಯಾಬಿನೆಟ್ನಲ್ಲಿ ಪರಮೇಶ್ವರ್ಗೆ ಉಪಮುಖ್ಯಮಂತ್ರಿ ಸ್ಥಾನ
ಅಂತಿಮವಾಗಿ ವಿದ್ಯಾರ್ಥಿಗಳ ಈ ಬೇಡಿಕೆ ಈಡೇರಿದೆ .ಈ ಮೂಲಕ ರಾಜ್ಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಉಚಿತವಾಗಿ ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡಬುಹುದಾಗಿದೆ . ಸರ್ಕಾರದ ಈ ಕ್ರಮ ವಿಶೇಷವಾಗಿ ಬಡ ಹಾಗು ಅವಕಾಶವಂಚಿತ ಸಮುದಾಯದ ಮಕ್ಕಳಿಗೆ ತಮ್ಮ ಶಿಕ್ಷಣವನ್ನು ಪೂರೈಸಲು ಒಂದು ದೊಡ್ಡ ಸಹಾಯವಾಗಲಿದೆ.ಜೊತೆಗೆ ಸ್ವಲ್ಪ ಮಟ್ಟಿಗಾದರೂ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಾಫ್ರೆ ಮಾನ್ಯ ಡಿಕೆ ಶಿವಕುಮಾರ್ ರವರ ಗಮನಕ್ಕೆ ಮತ್ತೊಂದು ಪ್ರಮುಖ ವಿಷಯವನ್ನು ತರಬಯಸುತ್ತದ. ಅದೇನೆಂದರೆ , ಅವರದೇ ಯುಪಿಎ ಸರ್ಕಾರ ಕೇಂದ್ರದಲ್ಲಿದ್ದಾಗ 2009ರಲ್ಲಿ ರೂಪಿಸಿ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯಿದೆ ರಾಜ್ಯದಲ್ಲಿ ಪೂರ್ಣವಾಗಿ ನೆನೆಗುದಿಗೆ ಬಿದ್ದಿದೆ. ಅದನ್ನು ಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒಂದು ವಿಸ್ತೃತವಾದ ನೀಲಿ ನಕಾಶೆಯನ್ನು ಶೀಘ್ರವಾಗಿ ತಯಾರಿಸಿ ಜಾರಿಗೊಳಿಸಬೇಕೆಂದು ಪಾಫ್ರೆ ಒತ್ತಾಯಿಸುತ್ತದೆ.
ಜೊತೆಗೆ ರಾಜ್ಯದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸಿ , ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಎಲ್ಲಾ ಮೂಲ ವಾರಸುದಾರರರ ಒಂದು ಸಭೆಯನ್ನು ಆದಷ್ಟು ಶೀಘ್ರವಾಗಿ ಕರೆಯಬೇಕೆಂದು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಒತ್ತಾಯಿಸುತ್ತದೆ ಎಂದರು.
ಇದನ್ನೂ ನೋಡಿ: ಪಿಣರಾಯಿ ವಿಜಯನ್ ಮೇಲಿನ ಇ.ಡಿ. ದಾಳಿ: ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ Janashakthi Media
