ನವದೆಹಲಿ: ಕೃಷಿ ಆದಾಯಗಳು ದ್ವಿಗುಣಗೊಂಡಿವೆ ಎಂಬ ಕೇಂದ್ರ ಸರಕಾರದ ಹೇಳಿಕೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ (SKM) ತಿರಸ್ಕರಿಸಿದ್ದೂ, ಕಳೆದ 12 ವರ್ಷಗಳಲ್ಲಿ ಐದು ಲಕ್ಷಕ್ಕೂ ಅಧಿಕ ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಬೆಟ್ಟು ಮಾಡಿ, ನರೇಂದ್ರ ಮೋದಿ ಆಡಳಿತದಡಿ ರೈತರ ಆದಾಯಗಳು ದ್ವಿಗುಣಗೊಂಡಿವೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ ಚೌಹಾಣ್ ಅವರು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯನ್ನು SKM ಟೀಕಿಸಿದೆ.
ಹೆಚ್ಚುತ್ತಿರುವ ಸಾಲದ ಹೊರೆಯಿಂದಾಗಿ ಪ್ರತಿದಿನ ಸರಾಸರಿ 31 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಿರುವ SKM, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕುರಿತು ಸರಕಾರದ ಭರವಸೆ ಪೂರ್ಣವಾಗಿ ಕಾರ್ಯಗತಗೊಂಡಿಲ್ಲ,ಶೇ.15ಕ್ಕಿಂತ ಕಡಿಮೆ ಬೆಳೆಗಳನ್ನು ಮಾತ್ರ ಭರವಸೆ ನೀಡಿದ್ದ ದರಗಳಲ್ಲಿ ಖರೀದಿಸಲಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: ಅಮೇರಿಕಾ| ಟ್ರಂಪ್ ವಿರುದ್ಧ ‘ನೊ ಕಿಂಗ್ಸ್’ ಹೋರಾಟ: ಕೋಟ್ಯಾಂತರ ಜನರ ಪ್ರತಿಭಟನೆ
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಖಿಲ ಭಾರತ ಕಿಸಾನ ಸಭಾ (ಎಐಕೆಎಸ್) ನಾಯಕ ಪಿ.ಕೃಷ್ಣ ಪ್ರಸಾದ ಅವರು,ರೈತರು ತಮ್ಮ ಬೆಳೆಗಳನ್ನು ಎಂಎಸ್ಪಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು. ಸಮಗ್ರ ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟು ಅಧಿಕ ಎಂಎಸ್ಪಿಯನ್ನು ನಿಗದಿಗೊಳಿಸಲು ಶಿಫಾರಸು ಮಾಡಿರುವ ಸ್ವಾಮಿನಾಥನ್ ಸಮಿತಿಯ ಸಿ2 ಸೂತ್ರಕ್ಕಾಗಿ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.
ಕೃಷಿ ಕ್ಷೇತ್ರದಲ್ಲಿಯ ಪ್ರಸ್ತುತ ಸಂಕಷ್ಟಗಳಿಗೆ ಕೇಂದ್ರ ಸರಕಾರ ನೀತಿಗಳೇ ಕಾರಣ ಎಂದು ಎಐಕೆಎಸ್ ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್ ಆರೋಪಿಸಿದರು.
ಪ.ಏಷ್ಯಾ ಸಂಘರ್ಷದ ನಡುವೆ ಕೇಂದ್ರ ಸರಕಾರದ ವಿದೇಶಾಂಗ ನೀತಿಯು ಕೃಷಿ ಕ್ಷೇತ್ರದಲ್ಲಿಯ ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ ಎಂದೂ ಆರೋಪಿಸಿದ ಅವರು,ಭಾರತದ ಅರ್ಧಕ್ಕಿಂತ ಹೆಚ್ಚಿನ ಕಚ್ಚಾತೈಲವು ಕೊಲ್ಲಿ ಪ್ರದೇಶದಿಂದ ಆಮದಾಗುತ್ತದೆ ಎಂದು ಬೆಟ್ಟು ಮಾಡಿದರು.
ಇದನ್ನೂ ನೋಡಿ: “ನಮ್ಮ ಆರೋಗ್ಯ ಮತ್ತು ಕರ್ನಾಟಕ ಬಜೆಟ್ 2026–27” Janashakthi Media
