ಹಾಸನ: ಕನ್ನಡದಲ್ಲಿ ಗುಣಮಟ್ಟದ ವಿಜ್ಞಾನ ಬರವಣಿಗೆ ಹೆಚ್ಚಾದರೆ, ವಿಜ್ಞಾನವು ಜನರ ಬದುಕಿನ ಭಾಗವಾಗುತ್ತದೆ. ಇದು ಭಾಷೆಯ ಸೇವೆಯಷ್ಟೇ ಅಲ್ಲ, ಸಮಾಜದ ಬೌದ್ಧಿಕ ಬೆಳವಣಿಗೆಯ ಸೇವೆಯೂ ಹೌದು ಎಂದು ನೆಹರುತಾರಾಲಯದ ಮಾಜಿ ನಿರ್ದೇಶಕಿ ಹಾಗೂ ಖಗೋಳ ವಿಜ್ಞಾನಿ ಬಿ.ಎಸ್. ಶೈಲಜ ಹೇಳಿದರು.
ಅವರು ಇತ್ತೀಚೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ಜಿಲ್ಲಾ ಸಮಿತಿಯು ನಗರದ ಬಿಜಿವಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ “ಆಗಸದ ಅಚ್ಚರಿಗಳು”- ಖಭೌತವಿಜ್ಞಾನಿಯೊಂದಿಗೆ ಸಂವಾದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಭಿಕರು ಕನ್ನಡದಲ್ಲಿ ವಿಜ್ಞಾನ ಪ್ರಸಾರದಲ್ಲಿ ಸಾಹಿತ್ಯದ ಜವಾಬ್ದಾರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿಸುತ್ತಾ ಹೇಳಿದರು.
ವಿಜ್ಞಾನವು ಪ್ರಯೋಗಶಾಲೆ ಮತ್ತು ಸಂಶೋಧನಾ ಪ್ರಬಂಧಗಳಿಗೆ ಮಾತ್ರ ಸೀಮಿತವಾಗದೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಲುಪಬೇಕು ಎಂದು ಹೇಳಿದರ ಅವರು ವಿಜ್ಞಾನವನ್ನು ಜನಸಾಮಾನ್ಯರ ಭಾಷೆಯಲ್ಲಿ ತಲುಪಿಸುವಲ್ಲಿ ಕನ್ನಡ ವಿಜ್ಞಾನ ಬರವಣಿಗೆಯ ಪ್ರಮಾಣ ಹೆಚ್ಚಾಗಬೇಕಿದೆ ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ವಿಜ್ಞಾನಿಗಳ ಹಾಗೂ ವಿಜ್ಞಾನಾಸಕ್ತರ ಜವಾಬ್ದಾರಿ ದೊಡ್ಡದಿದೆ ಎಂದರು
ಇದನ್ನೂ ಓದಿ: ಬೆಂಗಳೂರು | ಜೀವನ ನಿರ್ವಹಣೆಗಾಗಿ ಕುಸ್ತಿ ಪಟುಗಳಿಗೆ ಪ್ರತಿ ತಿಂಗಳು 6 ಸಾವಿರ ರೂ.ವರೆಗೆ ಮಾಸಾಶನ
ತಪ್ಪು ಪದಬಳಕೆ ಮತ್ತು ಅತಿರಂಜಿತ ಅನುವಾದಗಳು ವಿಜ್ಞಾನವನ್ನು ಅಂಧಶ್ರದ್ಧೆಯತ್ತ ಕರೆದೊಯ್ಯುವ ಅಪಾಯವಿದೆ – ಬಿ.ಎಸ್.ಶೈಲಜಾ
ಕನ್ನಡದಲ್ಲಿ ವಿಜ್ಞಾನ ಬರವಣಿಗೆಯಲ್ಲಿ ಕೇವಲ ಅನುವಾದವಲ್ಲ, ಅರ್ಥವನ್ನು ಸರಿಯಾಗಿ ಗ್ರಹಿಸಿ ಸರಿಯಾದ ಪದಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಬಹಳ ಮುಖ್ಯವೆಂದು ಅವರು ತಿಳಿಸಿದರು.
ತಪ್ಪು ಪದಬಳಕೆ ಮತ್ತು ಅತಿರಂಜಿತ ಅನುವಾದಗಳು ವಿಜ್ಞಾನವನ್ನು ಅಂಧಶ್ರದ್ಧೆಯತ್ತ ಕರೆದೊಯ್ಯುವ ಅಪಾಯವಿದೆ ಎಂದು ಎಚ್ಚರಿಸಿದ ಅವರು. ವಿಶೇಷವಾಗಿ ‘ಗಾಡ್ ಪಾರ್ಟಿಕಲ್’ ಎಂಬ ಪದವನ್ನು ‘ದೇವಕಣ’ ಎಂದು ಬಳಸುವುದು ವೈಜ್ಞಾನಿಕವಾಗಿ ತಪ್ಪು ಎಂದು ಅವರು ಹೇಳಿದರು.
ಮಾಧ್ಯಮಗಳು ಶೀರ್ಷಿಕೆ ಮತ್ತು ರೋಚಕತೆಯ ಹಿಂದೆ ಹೋಗದೆ ವಿಷಯದ ವೈಜ್ಞಾನಿಕ ಸ್ಪಷ್ಟತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.
ಪಂಚಾಂಗ, ಅಧಿಕ ವರ್ಷ, ನಕ್ಷತ್ರಗಳು ಇವೆಲ್ಲವೂ ಅಂಧನಂಬಿಕೆಗಳಲ್ಲ; ಅವು ಸೂರ್ಯ–ಚಂದ್ರ–ನಕ್ಷತ್ರಗಳ ಚಲನೆಯನ್ನು ಆಧರಿಸಿದ ವೈಜ್ಞಾನಿಕ ಕಾಲಗಣನಾ ವ್ಯವಸ್ಥೆಗಳೆಂದು ಅವರು ವಿವರಿಸಿದರು.
ಯುಎಫ್ಓ, ಏಲಿಯನ್, ಧೂಮಕೇತುಗಳ ಕುರಿತ ಚರ್ಚೆಗಳಲ್ಲೂ ವಿಜ್ಞಾನ ಮತ್ತು ಊಹೆಗಳ ನಡುವಿನ ಗಡಿ ಸ್ಪಷ್ಟವಾಗಿರಬೇಕು. ಯಾರು ಹೇಳಿದ್ದಾರೆ ಎಂಬುದಕ್ಕಿಂತ, ಯಾವ ಸಾಕ್ಷ್ಯ ಇದೆ ಎಂಬುದೇ ವಿಜ್ಞಾನದ ಅಳತೆಯಾಗಬೇಕು ಎಂದು ಅವರು ತಿಳಿಸಿದರು.
ನಕ್ಷತ್ರದಲ್ಲಿ ಜೀವ ಸಾಧ್ಯತೆ ಇದೆಯೇ? — ವಿಜ್ಞಾನ ಹೇಗೆ ಉತ್ತರ ಹುಡುಕುತ್ತದೆ : ಎಂದು ಪದವಿ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಸುತ್ತಾ ಈ ಪ್ರಶ್ನೆ ಮಾನವನನ್ನು ದಶಕಗಳಿಂದ ಕಾಡುತ್ತಿದೆ. ಆದರೆ ವಿಜ್ಞಾನ ಈ ಪ್ರಶ್ನೆಗೆ ಕಲ್ಪನೆಗಳ ಮೂಲಕ ಅಲ್ಲ, ಸಾಕ್ಷ್ಯ ಮತ್ತು ಕ್ರಮಬದ್ಧ ಪರಿಶೀಲನೆಯ ಮೂಲಕ ಉತ್ತರ ಹುಡುಕುತ್ತದೆ. ವಿಜ್ಞಾನಿಗಳು ಮೊದಲನೆಯದಾಗಿ ಗಮನಿಸುವುದು—ನಕ್ಷತ್ರದ ಆಯುಷ್ಯ. ಭೂಮಿಯ ಮೇಲೆ ಜೀವ ಉತ್ಪತ್ತಿಯಾಗಲು ಸುಮಾರು ಮೂರುವರೆ ಬಿಲಿಯನ್ ವರ್ಷಗಳು ಬೇಕಾಯಿತು.
ಹೀಗಾಗಿ, ಅಲ್ಪ ಆಯುಷ್ಯ ಹೊಂದಿರುವ ನಕ್ಷತ್ರಗಳಿಗಿಂತ, ದೀರ್ಘಕಾಲ ಸ್ಥಿರವಾಗಿ ಬೆಳಗುವ ನಕ್ಷತ್ರಗಳನ್ನು ವಿಜ್ಞಾನಿಗಳು ಮೊದಲು ಹುಡುಕುತ್ತಾರೆ. ನಂತರ, ಅದರ ಸುತ್ತ ಗ್ರಹಗಳಿವೆಯೇ ಎಂದು ಪತ್ತೆಹಚ್ಚಲಾಗುತ್ತದೆ ಎಂದು ಉದಾಹರಣೆಗಳ ಮೂಲಕ ಸರಳವಾಗಿ ವಿವರಿಸಿ ವಿಜ್ಞಾನಿಗಳು ಹೆಚ್ಚಾಗಿ ಭೂಮಿಯಂತೆಯೇ ಇರುವ ಕಾರ್ಬನ್ ಆಧಾರಿತ ಜೀವದ ಸಾಧ್ಯತೆಗಳ ಮೇಲೆ ತಮ್ಮ ಸಂಶೋಧನೆಯನ್ನು ಕೇಂದ್ರೀಕರಿಸುತ್ತಾರೆ. ಆಯ್ಕೆ ಮಾಡಿದ ಗ್ರಹದ ವಾತಾವರಣದಲ್ಲಿ ಯಾವ ಅನಿಲಗಳಿವೆ ಎಂಬುದನ್ನು ತಿಳಿಯಲು ಸ್ಪೆಕ್ಟ್ರಮ್ (Spectrum) ವಿಶ್ಲೇಷಣೆ ನಡೆಸಲಾಗುತ್ತದೆ. ಇದರ ಮೂಲಕ ಗ್ರಹದಲ್ಲಿ ಮೀಥೇನ್, ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್ ಅನಿಲಗಳಿವೆಯೇ ಎಂದು ಪರಿಶೀಲಿಸಲಾಗುತ್ತದೆ. ಈ ಅನಿಲಗಳ ಸಮತೋಲನವು ಭೂಮಿಯ ವಾತಾವರಣಕ್ಕೆ ಹೋಲಿಕೆಯಾದರೆ, ಅಲ್ಲಿ ಜೀವ ಇರುವ ಸಾಧ್ಯತೆ ಹೆಚ್ಚು ಎಂದು ಪರಿಗಣಿಸಲಾಗುತ್ತದೆ ಎಂದು ವಿವರವಾಗಿ ತಿಳಿಸಿದರು.
ಸೊನ್ನೆಯನ್ನು ಆರ್ಯಭಟ ಕಂಡುಹಿಡಿಯಲಿಲ್ಲ
ಸಾಮಾನ್ಯವಾಗಿ “ಸೊನ್ನೆಯನ್ನು ಆರ್ಯಭಟ ಕಂಡುಹಿಡಿದರು” ಎಂದು ಸರಳವಾಗಿ ಹೇಳಲಾಗುತ್ತದೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ಆರ್ಯಭಟರ ಕಾಲಮಾನ ಕ್ರಿ.ಶ. 470ರ ಸುತ್ತಮುತ್ತ ಆದರೆ ಆರ್ಯಭಟನಿಗಿಂತ 100–150 ವರ್ಷಗಳ ಮುಂಚೆಯೇ ಸೊನ್ನೆಯ ಅಸ್ತಿತ್ವ ಇದ್ದಿರುವುದು ಸಂಶೋಧನೆಗಳು ಧೃಢಪಡಿಸಿವೆ. ನಾಲ್ಕನೇ ಶತಮಾನಕ್ಕೆ ಸೇರಿದ ಅಸ್ಸಾಂನ ಶಿಲಾಶಾಸನಗಳಲ್ಲಿ ಸೊನ್ನೆಯ ಬಳಕೆಯ ಸಾಕ್ಷ್ಯ ಸಿಕ್ಕಿದೆ. ಏಳನೇ ಶತಮಾನದಲ್ಲಿ ಕ್ಯಾಂಬೋಡಿಯಾದಲ್ಲಿ ಸಂಸ್ಕೃತದಲ್ಲಿ ಬರೆಯಲಾದ ಶಿಲಾಶಾಸನಗಳಲ್ಲೂ ಸೊನ್ನೆಯ ಬಳಕೆಯಿದೆ. ಒಂಬತ್ತನೇ ಶತಮಾನಕ್ಕೆ ಬರಲು, ಸೊನ್ನೆ ವ್ಯಾಪಕವಾಗಿ ಪ್ರಚಾರದಲ್ಲಿತ್ತು. ಹೀಗಿರುವಾಗ, “ಸೊನ್ನೆಯನ್ನು ಯಾರು ಕಂಡುಹಿಡಿದರು?” ಎಂಬ ಪ್ರಶ್ನೆಗೆ ಒಂದು ಹೆಸರನ್ನು ಮಾತ್ರ ಹೇಳಿ ಬಿಡುವುದು ಮಕ್ಕಳನ್ನು ಗೊಂದಲಕ್ಕೆ ತಳ್ಳುತ್ತದೆ. ಅದಕ್ಕಿಂತಲೂ ಮುಖ್ಯವಾಗಿ, ಸೊನ್ನೆ ಹೇಗೆ, ಏಕೆ, ಯಾವ ಹಂತಗಳಲ್ಲಿ ಅಭಿವೃದ್ಧಿಯಾಯಿತು ಎಂಬುದನ್ನು ವಿವರಿಸುವುದು ಅಗತ್ಯ ಎಂದು ತಿಳಿಸಿದರು.
ಶಾಲಾ ಹಂತದಲ್ಲಿ ವಿಜ್ಞಾನ ಕಲಿಕೆ: ಮೂರು ಸೂತ್ರಗಳು (ಸರಳತೆ ಸತ್ಯ ಮತ್ತು ಪ್ರಶ್ನಿಸುವ ಮನೋಭಾವ)
ವಿಜ್ಞಾನವು ಅಂತಿಮ ಉತ್ತರಗಳ ಸಂಗ್ರಹವಲ್ಲ; ಅದು ಪ್ರಶ್ನೆಗಳು, ಸಂಶೋಧನೆ ಮತ್ತು ಸಾಕ್ಷ್ಯಗಳ ಪಯಣ. ಸೊನ್ನೆಯ ಕಥೆಯೂ ಹಾಗೆಯೇ. ಈ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕು, ಮತ್ತು ಆ ಸಂಶೋಧನೆಯ ಫಲಿತಾಂಶಗಳನ್ನು ಶಾಲಾ ಮಟ್ಟದಲ್ಲೇ ಸರಳವಾಗಿ, ಪ್ರಾಮಾಣಿಕವಾಗಿ ಮಕ್ಕಳಿಗೆ ತಲುಪಿಸಬೇಕು.
ಅಂತಿಮವಾಗಿ, ಮಕ್ಕಳಿಗೆ ವಿಜ್ಞಾನ ಕಲಿಸುವಾಗ ಸರಳತೆ, ಸತ್ಯ ಮತ್ತು ಪ್ರಶ್ನಿಸುವ ಮನೋಭಾವ—ಈ ಮೂರೂ ಒಂದಾಗಬೇಕು. ಇಲ್ಲದಿದ್ದರೆ, ವಿಜ್ಞಾನ ಪಾಠಗಳು ಅರ್ಥವಾಗದೆ ಭಯ ಹುಟ್ಟಿಸುವ ವಿಷಯವಾಗಿಯೇ ಉಳಿಯುತ್ತವೆ ಎಂದು ತಿಳಿಸಿದರು.
ಬಿಜಿವಿಎಸ್ ಕಾರ್ಯಕರ್ತ ಅಹಮದ್ ಹಗರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಬಿಜಿವಿಎಸ್ ಜಿಲ್ಲಾಧ್ಯಕ್ಷೆ ಸ.ಸೌಭಾಗ್ಯ ವಂದಿಸಿದರು.
ಸಂವಾದದಲ್ಲಿ ವಿಜಯಾ ಶಾಲೆಯ ಸಂಸ್ಥಾಪಕಿ ತಾರಾಸ್ವಾಮಿ, ಕವಯತ್ರಿ ಜ.ನಾ.ತೇಜಶ್ರೀ, ವಿಜ್ಞಾನ ಬರಹಗಾರ ಕೆ.ಎಸ್.ರವಿಕುಮಾರ್, ಬ್ಯಾಂಕ್ ನೌಕರರ ಸಂಘದ ಪರಮಶಿವಯ್ಯ, ಬಿಜಿವಿಎಸ್ ಸಮತ ಸಂಚಾಳಕಿ ಮಮತಶಿವು, ಬಿ.ಆರ್.ಪಿ. ಪ್ರಮೀಳ, ಬಿಜಿವಿಎಸ್ ತಾಲ್ಲೂಕು ಕಾರ್ಯದರ್ಶಿ ಲೋಲಾಕ್ಷಿ, ವಿವಿಧ ಶಾಲೆಗಳ ಶಿಕ್ಷಕರು, ಕಾಲೇಜಿನ ವಿದ್ಯಾರ್ಥಿಗಳು, ಬಿಜಿವಿಎಸ್ ಕಾರ್ಯಕರ್ತರು, ಹಾಗೂ ವಿವಿಧ ಸಂಘಟನಗಳ ಪ್ರತಿನಿಧಿಗಳು ಭಾಗವಹಿಸಿ ಸಂವಾದ ನಡೆಸಿದರು. ವಿಜ್ಞಾನಿಗಳು ಎಲ್ಲ ಬಗೆಯ ಪ್ರಶ್ನೆಗಳಿಗೂ ಸಮರ್ಥ ಉತ್ತರ ಹಾಗೂ ವಿವರಣೆ ನೀಡಿದರು.
ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಎಲ್ಲಾ ಹತ್ಯೆಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ Janashakthi Media
