ರಾಯಚೂರು | ತಳ ಸಮುದಾಯದವರು ಜಾಗೃತರಾಗದಿದ್ದರೆ ಮತ್ತೆ ಕಸ ಬಳಿಯಬೇಕಾಗುತ್ತದೆ – ಸಾಹಿತಿ ಕುಂ. ವೀರಭದ್ರಪ್ಪ

ರಾಯಚೂರು: ತಳ ಸಮುದಾಯದವರು ಜಾಗೃತರಾಗದಿದ್ದರೆ ಮತ್ತೆ ಕಸ ಬಳಿಯಬೇಕಾಗುತ್ತದೆ’  ‘ದೇಶದ ಸಂವಿಧಾನವನ್ನು ಮೂಲೆಗುಂಪು ಮಾಡುವ ಹಾಗೂ ದೇಶದ ಸಂಪನ್ಮೂಲವನ್ನೇ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವ ವ್ಯವಸ್ಥಿತ ಸಂಚು ನಡೆದಿದೆ. ಎಂದು ಸಾಹಿತಿ ಕುಂ. ವೀರಭದ್ರಪ್ಪ ಎಚ್ಚರಿಸಿದರು.

ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಭಾನುವಾರ ಇಲ್ಲಿಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಭಾನುವಾರ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ರಾ‌ಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ : ಬೆಳಗಾವಿ | 1 ಲೀಟರ್ ಹಾಲಿಗೆ 7 ರೂಪಾಯಿ ಸಹಾಯಧನವನ್ನು ಏರಿಕೆ ಮಾಡುತ್ತೇವೆ ಸಿಎಂ ಸಿದ್ದರಾಮಯ್ಯ ಘೋಷಣೆ

ಗಾಂಧೀಜಿ ಅವರನ್ನು ಕೇಳುವ ಹಾಗೆಯೇ ಇಲ್ಲ. ನರೇಗಾ ತೆಗೆದು ಜಿರಾಮಜಿ ಮಾಡುತ್ತಿದ್ದಾರೆ. ರಾಷ್ಟ್ರದ ಮುಖ್ಯ ಖಾತೆಗಳನ್ನು ಹಾಗೂ ಸಂಪತ್ತನ್ನು ಖಾಸಗಿಯವರಿಗೆ ವಹಿಸುತ್ತಿದ್ದಾರೆ.  ‘ಇವತ್ತಿನ ಸಂದರ್ಭದಲ್ಲಿ ಸಂವಿಧಾನ ಹಾಗೂ ನೆಹರು ಅವರ ಮೇಲೆ ವಾಗ್ದಾಳಿಗಳು ನಡೆಯುತ್ತಿವೆ. ಅಂಬೇಡ್ಕರ್‌ ಅವರನ್ನೂ ನೇಪತ್ಯಕ್ಕೆ ಸರಿಸುತ್ತಿದ್ದಾರೆ. ಅಣು ವಿದ್ಯುತ್‌ನ್ನೂ ಖಾಸಗಿಯವರಿಗೆ ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ದೇಶವನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡುವ ವ್ಯವಸ್ಥಿತ ಸಂಚು ನಡೆದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಇಂದು ಅನೇಕ ಲೇಖಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಯುತ್ತಿದೆ. ಮಹಿಳೆಯರ ಮಾನ ಭಂಗ ಆಗುತ್ತಿದೆ. ದಲಿತ ಸಚಿವರು ದೇವಸ್ಥಾನದ ಕಾರ್ಯಕ್ರಮದಲ್ಲಿ ಕುರ್ಚಿ ಮೇಲೆ ಕುಳಿತು ಬಂದರೆ ಕುರ್ಚಿಯನ್ನು ಶುಚಿಗೊಳಿಸುವ ಕೆಲಸ ನಡೆದಿದೆ. ದಲಿತರ ಮೇಲೆ ಹಲ್ಲೆ ನಡೆದಾಗ ರಾಜ್ಯದ ಪ್ರಗತಿಪರರೆಲ್ಲರೂ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದರು. ಇದು ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ’ ಎಂದು ಹೇಳಿದರು.

‘ದೇಶದಲ್ಲಿ ಇಂದು ಉಸಿರಿಗಟ್ಟುವ ವಾತಾವರಣ ಇದೆ. ವ್ಯವಸ್ಥೆ ಸರಿಪಡಿಸದಿದ್ದರೆ 10 ವರ್ಷದಲ್ಲಿ ಸಂವಿಧಾನ ನಮ್ಮ ಕೈಯಲ್ಲಿ ಇರುವುದಿಲ್ಲ. ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಪ್ರಶಸ್ತಿಗಳಿಗೆ ಅರ್ಥವೇ ಇರುವುದಿಲ್ಲ’ ಎಂದರು.

ಸಣ್ಣ ನೀರವಾರಿ, ಮಾಹಿತಿ ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಮಾತನಾಡಿ, ‘ಇಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಮೂಲಕ ಈ ಭಾಗದ ಸಾಹಿತಿಗಳು ಹಾಗೂ ಸಾಧಕರಿಗೆ ಗೌರವ ಲಭಿಸಿದೆ‘ ಎಂದು ಹೇಳಿದರು.

ಅತಿಥಿಗಳಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಕೃಷಿ ವಿಜ್ಞಾನಗಳ ಕೃಷಿ ವಿಶ್ವವಿದ್ಯಾಲಯ ಕುಲಪತಿ ಹನುಮಂತಪ್ಪ ಆಗಮಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷೆ ಜಯದೇವಿ ಗಾಯಕವಾಡ, ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ಉಪಸ್ಥಿತರಿದ್ದರು.

ಹುರುಗಲವಾಡಿ ರಾಮಯ್ಯ ನರಸಿಂಹಮೂರ್ತಿ ಹಾಗೂ ತಂಡದವರು ಅಂಬೇಡ್ಕರ್ ಗೀತೆಗಳನ್ನು ಹಾಡಿದರು. ಎಂ.ಬಿ.ಕಟ್ಟಿಮನಿ, ಕೆ.ಸಿ.ಸೋಮಲತ ನಿರೂಪಿಸಿದರು. ತಿಮ್ಮಣ್ಣ ಕಲ್ಮಂಗಿ ವಂದಿಸಿದರು.

ಇದನ್ನೂ ನೋಡಿ : ಡ್ರಗ್ಸ್ ಮಾಫಿಯಾ :ಯುವಜನ ಟಾರ್ಗೆಟ್ ಯಾಕೆ? ಪೊಲೀಸರ ಬಲೆಗೆ ಬೀಳದ ಪೆಡ್ಲರ್‌ಗಳು Janashakthi Media

 

Donate Janashakthi Media

Leave a Reply

Your email address will not be published. Required fields are marked *