ಬೆಂಗಳುರು : ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಮತೀಯ ಸಂಘರ್ಷ ತಡೆಗಟ್ಟಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ನೇತೃತ್ವದ ಸಚಿವ ಸಂಪುಟ (Cabinet Meeting) ಸಭೆಯಲ್ಲಿ ವಿಧೇಯಕವೊಂದಕ್ಕೆ ಅನುಮೋದನೆ ಸಿಕ್ಕಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಸಚಿವ ಹೆಚ್.ಕೆ ಪಾಟೀಲ್ ದ್ವೇಷ ಭಾಷಣ ತಡೆಗಟ್ಟುವ ಮಸೂದೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು ಮಸೂದೆಯ ಅಂಶಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇದೆ ಎಂದರು.
ಇದನ್ನೂ ಓದಿ : ಅಂಗನವಾಡಿ, ಆಶಾ ಸಿಬ್ಬಂದಿಗೆ ಕೆಲಸದ ಒತ್ತಡ ಕಡಿಮೆ ಮಾಡಲು ಕ್ರಮ: ಅನ್ನಪೂರ್ಣದೇವಿ ಭರವಸೆ
ವಿಧೇಯಕದಲ್ಲಿ ಏನಿದೆ? ದ್ವೇಷ ಭಾಷಣವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಜಾತಿ, ಧರ್ಮ, ಜನಾಂಗ, ಭಾಷೆ ಆಧರಿಸಿ ದ್ವೇಷ ಹರಡದಂತೆ ತಡೆಯಲು ಈ ವಿಧೇಯಕ ತರಲಾಗುತ್ತಿದೆ. ದ್ವೇಷ ಭಾಷಣ ಮಾಡುವವರ ವಿರುದ್ದ ಕಠಿಣ ಕ್ರಮ ಜಾರಿ ಕೈಗೊಳ್ಳಲಾಗುತ್ತದೆ.
ಮಸೂದೆ ಮೂಲಕ ಸಾಮಾಜಿಕ ಬಹಿಷ್ಕಾರ ತಡೆಯುವ ಗುರಿ ಹೊಂದಲಾಗಿದ್ದು, ದ್ವೇಷ ಭಾಷಣದ ನಿಯಂತ್ರಣದ ಅಧಿಕಾರ ಜಿಲ್ಲಾ ನ್ಯಾಯಾಧೀಶರಿಗೆ ನೀಡಲಾಗಿದೆ. ಅಲ್ಲದೇ ಮೆರವಣಿಗೆ, ಸಾರ್ವಜನಿಕ ಸಭೆ ನಿಯಂತ್ರಿಸುವ ಅಧಿಕಾರವೂ ಅವರಿಗೇ ಇರಲಿದೆ. ಒಂದು ವೇಳೆ ದ್ವೇಷ ಭಾಷಣ ಮಾಡಿದ ಆರೋಪ ಸಾಬೀತಾದರೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ₹5,000 ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ.
‘ದ್ವೇಷ ಭಾಷಣ’ ಎಂದರೇನು? ನಿರ್ದಿಷ್ಟ ಗುಂಪಿನ ವಿರುದ್ಧ ಆಕ್ರಮಣಕಾರಿ ಭಾಷೆ ಬಳಕೆ ಮಾಡಿ, ದ್ವೇಷವನ್ನು ಪ್ರಚಾರ ಮಾಡುವುದು ಕೂಡ ಅಪರಾಧ ಎನಿಸಿಕೊಳ್ಳುತ್ತದೆ. ಧರ್ಮ, ಜನಾಂಗ, ಜಾತಿಗೆ ಹಾನಿ ಮಾಡುವಂಥಾ ಮಾತು, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ನಿವಾಸ, ಅಂಗವೈಕಲ್ಯ, ಬುಡಕಟ್ಟುಗಳಿಗೆ ಮಾತಿನಿಂದಲೇ ಹಾನಿ ಮಾಡುವುದು, ದ್ವೇಷಕ್ಕೆ ಪ್ರೇರೇಪಣೆ ನೀಡುವಂಥಾ ಮಾತಾಡುವುದು ಅಪರಾಧ ಎನಿಸಿಕೊಳ್ಳುತ್ತದೆ.
ಮಸೂದೆ ಸುತ್ತ ವಿವಾದ : ಮಸೂದೆಯಲ್ಲಿ ಕೆಲವು ಅಂಶಗಳ ಬಗ್ಗೆ ಸ್ಪಷ್ಟತೆಯೇ ಇಲ್ಲ. ದ್ವೇಷ ಭಾಷಣ ತಡೆ ಮಸೂದೆ ಮಂಡನೆಗೂ ಮೊದಲೇ ವಿವಾದ ಶುರುವಾಗಿದೆ. ಪ್ರಸ್ತಾವಿತ ಮಸೂದೆ ಬಗ್ಗೆ ಈಗಾಗಲೇ ಹಲವರು ಅಸಮಾಧಾನ ಹೊರಹಾಕಿದ್ದಾರೆ. ದ್ವೇಷ ಮಾತು ಎಂದರೇನು? ಎಂಬ ಬಗ್ಗೆ ಸ್ಪಷ್ಟ ವ್ಯಾಖ್ಯಾನವೇ ಇಲ್ಲ. ಮಸೂದೆ ಮಂಡನೆಗೂ ಮೊದಲು ಈ ಬಗ್ಗೆ ಸ್ಪಷ್ಟ ಪಡಿಸಿ ಎಂದು ವಿಪಕ್ಷಗಳು ಕೇಳ್ತಿವೆ.
ರಾಜಕೀಯದ ಅಸ್ತ್ರವಾಗಿ ಈ ಮಸೂದೆ ಬಳಸಬಹುದು. ಮಸೂದೆ ರಾಜಕೀಯ ದ್ವೇಷಕ್ಕೆ ಬಳಕೆಯಾಗದಂತೆ ತಡೆಯೋದು ಹೇಗೆ? ಇದು ದ್ವೇಷ ಭಾಷಣ ಎಂದು ನಿರ್ಧರಿಸುವವರು ಯಾರು? ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಂಡಂತೆ ಆಗಲ್ವಾ? ಎಂದು ಪ್ರಶ್ನಿಸಲಾಗ್ತಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಉಲ್ಲೇಖಿಸಲಾಗಿತ್ತು. ಸಚಿವ ಪ್ರಿಯಾಂಕ್ ಖರ್ಗೆಯಿಂದಲೂ RSS ಬ್ಯಾನ್ ಪ್ರಸ್ತಾಪ ಆಗಿತ್ತು. RSS, ಬಜರಂಗದಳ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕೆ ಮಾಡುತ್ತಲೇ ಬಂದಿದ್ದಾರೆ. ಬಜರಂಗದಳ, ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ಗೆ ದ್ವೇಷವಾ? ಎಂದು ಬಿಜೆಪಿ ನಾಯಕರು ಸೇರಿದಂತೆ ಹಲವರು ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಜೂನ್ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೇ ಕರಡು ವಿಧೇಯಕ ಪ್ರಸ್ತಾಪ ಮಾಡಲಾಗಿತ್ತು. ಇಂದು ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿದೆ. ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದಕ್ಕೆ ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಈ ವಿಧೇಯಕವನ್ನು ಮಂಡಿಸಿ ಕಾನೂನು ಮಾಡಲು ಸರ್ಕಾರ ಮುಂದಾಗಿದೆ.
ಇದನ್ನೂ ನೋಡಿ : LIVE: ಸಂವಿಧಾನ ಸಂರಕ್ಷಿಸಿ ಮನುಸ್ಮೃತಿ ಹಿಮ್ಮೆಟ್ಟಿಸೋಣ ಜಾಗೃತಿ ಸಮಾವೇಶ
