ರಾಣೆಬೆನ್ನೂರು |ಕೊಡಲಿಗಾಗಿ ಪೋಲಿಸ್‌ ಠಾಣೆ ಮೇಟ್ಟಿಲೇರಿದ ವೃದ್ದ

ರಾಣೆಬೆನ್ನೂರು: ತಾಲ್ಲೂಕಿನ ಗುಡಗೂರ ಗ್ರಾಮದ ಭೀಮಪ್ಪ ಗುಳೇದ ಅವರು ಪೊಲಿಸ್‌ ಠಾಣೆಗೆ ಬಂದು ಹೋಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ತುಮಕೂರು | ಸರ್ವೆ ಕಾರ್ಯಕ್ಕೆ ರೈತರು ವಿರೋಧ; ಜಿಲ್ಲಾ ಆಡಳಿತದ ವಿರುದ್ಧ ಆಕ್ರೋಶ

ತಮ್ಮ ತುರ್ತು ಕೆಲಸಕ್ಕಾಗಿ ನೆರೆಮನೆಯ ನಿವಾಸಿ ಪಡೆದಿದ್ದ ಹೊಸ ಕೊಡಲಿಯನ್ನು ನಿಗದಿತ ಸಮಯಕ್ಕೆ ವಾಪಸು ಕೊಡದಿದ್ದರಿಂದ ನೊಂದ 78 ವರ್ಷದ ವೃದ್ಧ ಭೀಮಪ್ಪ ತಿಮ್ಮಪ್ಪ ಗುಳೇದ ಎಂಬುವವರು, ರಾಣೆಬೆನ್ನೂರು ಗ್ರಾಮೀಣ ಠಾಣೆಗೆ ಹೋಗಿ ಅಳಲು ತೋಡಿಕೊಂಡಿದ್ದಾರೆ.

ಠಾಣೆ ಮೆಟ್ಟಿಲೇರಿದ್ದ ಕೊಡಲಿ ಪ್ರಕರಣವನ್ನು ಮಾನವೀಯತೆಯಿಂದ ಬಗೆಹರಿಸಿರುವ ಪೊಲೀಸರು, ನೆರೆಮನೆಯ ನಿವಾಸಿಗೆ ತಾಕೀತು ಮಾಡಿದ್ದಾರೆ. ಕೊಡಲಿಯನ್ನು ವಾಪಸು ಕೊಡುವಂತೆ ಎಚ್ಚರಿಕೆ ಸಹ ನೀಡಿದ್ದಾರೆ.

‘ವೃದ್ಧ ಭೀಮಪ್ಪನಿಗೆ ಕಿವಿ ಸರಿಯಾಗಿ ಕೇಳುವುದಿಲ್ಲ. ಊರುಗೋಲು ಹಿಡಿದು ಓಡಾಡುತ್ತಾರೆ. ಅವರು ನೆರೆಮನೆಯ ವ್ಯಕ್ತಿಗೆ ಕೊಡಲಿ ಕೊಟ್ಟಿದ್ದರು. ಇತ್ತೀಚೆಗೆ ವಾಪಸು ಕೊಡುವಂತೆ ಕೇಳಿದ್ದರು. ಆದರೆ, ನೆರೆಮನೆಯವ ಹಳೇ ಕೊಡಲಿ ಕೊಟ್ಟಿದ್ದ. ಅದು ತನ್ನದಲ್ಲವೆಂದು ವೃದ್ಧ ಹೇಳಿದ್ದರು. ಅದೇ ಕೊಡಲಿಯೆಂದು ವಾದಿಸಿದ್ದ ನೆರೆಮನೆಯವ, ‘ಕೊಡಲಿ ಕೊಡುವುದಿಲ್ಲ. ಏನುಬೇಕಾದರೂ ಮಾಡಿಕೊ’ ಎಂದು ಬೆದರಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪೊಲೀಸರಿಗೆ ದೂರು ನೀಡುವಂತೆ ಗ್ರಾಮದ ಕೆಲವರು ಸಲಹೆ ನೀಡಿದ್ದರು. ಊರುಗೋಲು ಹಿಡಿದು ಠಾಣೆಗೆ ಬಂದಿದ್ದ ವೃದ್ಧ, ‘ನನಗೆ ಯಾರೂ ಇಲ್ಲ. ಒಂಟಿಯಾಗಿ ವಾಸವಿದ್ದೇನೆ. ಊರಿನ ಹೊರಗೆ ಹೋಗಿ, ಕಟ್ಟಿಗೆ ಕಡಿದುಕೊಂಡು ಬಂದು ಜನರಿಗೆ ಮಾರಿ ಅವರು ಕೊಡುವ ಹಣದಲ್ಲಿಯೇ ಜೀವನ ನಡೆಸುತ್ತಿದ್ದೇನೆ. ಕಟ್ಟಿಗೆ ಕಡಿಯಲು ಹೊಸ ಕೊಡಲಿ ಖರೀದಿಸಿದ್ದೆ. ಅದೇ ನನಗೆ ಅನ್ನಕ್ಕೆ ದಾರಿಯಾಗಿತ್ತು. ಕೆಲಸವಿರುವುದಾಗಿ ಹೇಳಿ ಕೊಡಲಿ ಪಡೆದಿದ್ದ ನೆರೆಮನೆಯವರು ಮರಳಿ ಕೊಟ್ಟಿಲ್ಲ. ಕೊಡಲಿ ಕೊಡಿಸಿ’ ಎಂದು ಕೋರಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೃದ್ಧರ ಮುಗ್ಧತೆ ಕಂಡ ಪೊಲೀಸರಾದ ಹಾಲೇಶ ಮೇಗಳಮನಿ ಹಾಗೂ ಕೃಷ್ಣಾರೆಡ್ಡಿ, ಠಾಣೆಯೊಳಗೆ ಕರೆಸಿ ಕೂರಿಸಿದ್ದರು. ನಂತರ, ಅಲ್ಲಿಂದಲೇ ನೆರೆಮನೆಯ ಅಶೋಕ ಎಂಬಾತನಿಗೆ ಕರೆ ಮಾಡಿದ್ದರು. ಸಂಜೆಯೊಳಗೆ ಕೊಡಲಿ ವಾಪಸು ಕೊಡುವಂತೆ ಎಚ್ಚರಿಕೆ ನೀಡಿದ್ದಾರೆ. ನಂತರ, ವೃದ್ಧನನ್ನು ಆಟೊದಲ್ಲಿ ಹತ್ತಿಸಿ ಬಸ್‌ ನಿಲ್ದಾಣಕ್ಕೆ ಕಳುಹಿಸಿ, ಅಲ್ಲಿಂದ ಊರಿಗೆ ಬೀಳ್ಕೊಟ್ಟಿದ್ದಾರೆ.

ಇದನ್ನೂ ನೋಡಿ : ಪಿಚ್ಚರ್ ಪಯಣ – 165 | ಸಿನೆಮಾ: ಅನ್ನ, ನಿರ್ದೇಶನ -ಇಸ್ಲಾಹುದ್ದೀನ್ ಎನ್. ಎಸ್ ವಿಶ್ಲೇಷಣೆ : ಎಂ ನಾಗರಾಜ ಶೆಟ್ಟಿ

Donate Janashakthi Media

Leave a Reply

Your email address will not be published. Required fields are marked *