ಪಟ್ನಾ: ಕೇಂದ್ರ ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಅಕ್ಟೋಬರ್ 6ರಂದು ಪ್ರಕಟಿಸಿದ್ದ ಬೆನ್ನಲ್ಲೇ ಮತಸಮರದ ಕಾವು ಏರಲಾರಂಭಿಸಿದ್ದು, ಇದೀಗ ಬಿಜೆಪಿಗೆ ನೇತೃತ್ವದ ಎನ್ಡಿಎಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ.
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆ ಇದೆ ಎಂಬ ವರದಿಗಳು ಬರುತ್ತಿವೆ. ಮೈತ್ರಿಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಎಲ್ಜೆಪಿ ಮೂಲಗಳೂ ಮಾಧ್ಯಮಗಳಿಗೆ ತಿಳಿಸಿವೆ.
ಮೂಲಗಳ ಪ್ರಕಾರ ಸೀಟು ಹಂಚಿಕೆ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗೆ ಉಂಟಾಗಿರುವ ಬಿಕ್ಕಟ್ಟಿನ ನಡುವೆ ಈ ಹೊಸ ಬೆಳವಣಿಗೆಯು ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಸೀಟು ಹಂಚಿಕೆಗಾಗಿ ಹಗ್ಗಜಗ್ಗಾಟ
ಬಿಹಾರದ ಒಟ್ಟು 243 ವಿಧಾನಸಭಾ ಸ್ಥಾನಗಳ ಪೈಕಿ ತಮ್ಮ ಪಕ್ಷಕ್ಕೆ 40 ಸ್ಥಾನಗಳನ್ನು ನೀಡಬೇಕೆಂದು ಚಿರಾಗ್ ಪಾಸ್ವಾನ್ ಅವರು ಪಟ್ಟು ಹಿಡಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಐದೂ ಸ್ಥಾನಗಳನ್ನು ಗೆಲ್ಲುವ ಮೂಲಕ ಶೇ. 100ರಷ್ಟು ಯಶಸ್ಸು ಸಾಧಿಸಿರುವುದು ಅವರ ಈ ಬೇಡಿಕೆಗೆ ಮತ್ತಷ್ಟು ಬಲ ತುಂಬಿದೆ.
ಇದನ್ನೂ ಓದಿ: ವೈದ್ಯಕೀಯ ವಿಮಾ ಹಕ್ಕು ನಿರಾಕರಣೆ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆ: ಕೇರಳ ಹೈಕೋರ್ಟ್
ಆದರೆ ಬಿಜೆಪಿ ಮಾತ್ರ ಎಲ್ಜೆಪಿಗೆ ಕೇವಲ 25 ಸ್ಥಾನಗಳನ್ನು ಬಿಟ್ಟುಕೊಡಲು ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ. ಅಷ್ಟೆ ಅಲ್ಲ, ನಮಗೆ ಕೇವಲ ಸೀಟುಗಳ ಸಂಖ್ಯೆ ಅಲ್ಲ, ಗೆಲ್ಲುವ ಸಾಮರ್ಥ್ಯವಿರುವ ಕ್ಷೇತ್ರಗಳೇ ಬೇಕು ಎಂಬುದೂ ಪಾಸ್ವಾನ್ ಅವರ ಬೇಡಿಕೆಯಾಗಿದೆ.
ಆದರೆ ಈ ಹಿಂದೆ ಅವರು ಸಂದರ್ಶನದಲ್ಲಿ ಯಾವೆಲ್ಲಾ ಕ್ಷೇತ್ರಗಳು ಬೇಕು ಎಂಬುದನ್ನು ಬಹಿರಂಗವಾಗಿ ಹೇಳಲಾಗದು ಎಂದು ಹೇಳಿದ್ದರು. ಇದು ಮೈತ್ರಿಧರ್ಮಕ್ಕೆ ವಿರುದ್ಧ ಎಂದು ಪ್ರತಿಪಾದಿಸಿದ್ದರು. ಆದರೆ ತೆರೆಮರೆಯಲ್ಲಿ ಸೀಟುಗಳಿಗಾಗಿ ಹಗ್ಗಜಗ್ಗಾಟ ಜೋರಾಗಿದೆ.
ಚುನಾವಣಾ ರಾಜಕೀಯಕ್ಕೆ ಮೊದಲ ಬಾರಿಗೆ ಪದಾರ್ಪಣೆ ಮಾಡುತ್ತಿರುವ ಪ್ರಶಾಂತ್ ಕಿಶೋರ್ ಅವರೊಂದಿಗೆ ಚಿರಾಗ್ ಪಾಸ್ವಾನ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಎಲ್ಜೆಪಿ ಮೂಲಗಳು ಅಲ್ಲಗಳೆದಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪ್ರಶಾಂತ್ ಕಿಶೋರ್ ಜೊತೆಗಿನ ಮೈತ್ರಿಯು ಬಿಜೆಪಿಯ ಮೇಲೆ ಸೀಟು ಹಂಚಿಕೆ ಮಾತುಕತೆಯಲ್ಲಿ ಒತ್ತಡ ಹೇರುವ ತಂತ್ರವೂ ಆಗಿರಬಹುದು ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆ ಒಮ್ಮೆ ಸೀಟು ಹಂಚಿಕೆ ಸಂಬಂಧ ಎಚ್ಚರಿಕೆ ನೀಡಿದ್ದ ಚಿರಾಗ್ ಪಾಸ್ವಾನ್, ‘ನಾನು ತರಕಾರಿಯಲ್ಲಿರುವ ಉಪ್ಪಿನಂತೆ, ಪ್ರತಿ ಕ್ಷೇತ್ರದಲ್ಲಿ 20,000 ದಿಂದ 25,000 ಮತಗಳ ಮೇಲೆ ಪ್ರಭಾವ ಬೀರಬಲ್ಲೆ. ಅಗತ್ಯಬಿದ್ದರೆ ಮೈತ್ರಿಕೂಟದಿಂದ ಹೊರನಡೆಯುವ ಆಯ್ಕೆಯೂ ನನ್ನ ಮುಂದಿದೆ’ ಎಂದು ಹೇಳಿದ್ದರು.
ಆದರೂ ಈ ಬೆದರಿಕೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ ಪಾಸ್ವಾನ್ ಅವರು ಪ್ರಧಾನಿ ಮೋದಿಯವರ ನಿಷ್ಠಾವಂತ ಬೆಂಬಲಿಗರಾಗಿದ್ದು, ಪಕ್ಷದೊಳಗಿನ ಕಾರ್ಯಕರ್ತರನ್ನು ಸಮಾಧಾನಪಡಿಸಲು ಹೀಗೆ ಹೇಳುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ಅಭಿಪ್ರಾಯಪಟ್ಟಿವೆ.
ಚುನಾವಣಾ ದಿನಾಂಕ ಘೋಷಣೆಯಾದ ನಂತರ ಸೀಟು ಹಂಚಿಕೆ ಅಂತಿಮಗೊಳಿಸುವುದು ಬಿಜೆಪಿಯ ತಂತ್ರವಾಗಿದ್ದು, ಟಿಕೆಟ್ ವಂಚಿತ ನಾಯಕರು ಕೊನೆ ಕ್ಷಣದಲ್ಲಿ ಪಕ್ಷಾಂತರ ಮಾಡುವುದನ್ನು ತಡೆಯಲು ಈ ವ್ಯೂಹವನ್ನು ರೂಪಿಸಿದೆ.
ಇದನ್ನೂ ನೋಡಿ: ನಿಮ್ಮ ಶ್ವಾನಕ್ಕೆ ನೀವೇ ತರಬೇತಿ ನೀಡಿ . ಡಾ : ಶ್ರೀಧರ Janashakthi Media
