ಧರ್ಮಸ್ಥಳ ಕೊಲೆಗಳ ಪ್ರಕರಣ: ರವಿಕೆ, ಪಾನ್ ಕಾರ್ಡ್, ATM ಕಾರ್ಡ್‌ಗಳು ಪತ್ತೆ

ಬೆಳ್ತಂಗಡಿ : ಧರ್ಮಸ್ಥಳದ ತಲೆಬರುಡೆ ಕೇಸ್‌ಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಮತ್ತೊಂದು ಆಶ್ಚರ್ಯಕರ ತಿರುವು ಸಿಕ್ಕಿದೆ. ಸುಮಾರು 20 ವರ್ಷಗಳ ಹಿಂದೆ ಅನಾಮಧೇಯ ಶವವನ್ನು ಧರ್ಮಸ್ಥಳದಲ್ಲಿ ಹೂಳಲಾಗಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸುತ್ತಿರುವ SIT ತಂಡ, ಸಮಾಧಿ ತೆಗೆದ ಸ್ಥಳದಲ್ಲಿ ಹರಿದ ಕೆಂಪು ರವಿಕೆ, ಎಟಿಎಂ ಕಾರ್ಡ್, ಪಾನ್ ಕಾರ್ಡ್, ಮತ್ತು ಒಂದು ಗುರುತಿನ ಚೀಟಿಯನ್ನು ಪತ್ತೆ ಮಾಡಿದೆ.

ಈ ಸಾಕ್ಷ್ಯಗಳು ಕೇಸ್‌ಗೆ ಹೊಸ ಆಯಾಮವನ್ನು ನೀಡಿವೆ ಎನ್ನಲಾಗುತ್ತಿದೆ. SIT ತಂಡವು ಧರ್ಮಸ್ಥಳದ 13 ಸ್ಥಳಗಳನ್ನು ಗುರುತಿಸಿ, ತನಿಖೆಯನ್ನು ಆರಂಭಿಸಿತ್ತು. ಈ ಪೈಕಿ ಮೂರು ಸ್ಥಳಗಳಲ್ಲಿ ಈಗಾಗಲೇ ಹುಡುಕಾಟ ಕಾರ್ಯ ಮುಕ್ತಾಯಗೊಂಡಿದೆ. ಆದರೆ, ಯಾವುದೇ ಸ್ಥಳದಲ್ಲಿ ಕಳೇಬರವು ಪತ್ತೆಯಾಗಿಲ್ಲ. ಮೊದಲ ಸ್ಥಳದಲ್ಲಿ ಒಂದು ಪಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ದೊರೆತಿದ್ದವು. ಇದೀಗ, ಎರಡೂವರೆ ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪುರುಷನ ಹೆಸರಿನ ಎಟಿಎಂ ಕಾರ್ಡ್, ಲಕ್ಷ್ಮಿ ಎಂಬ ಹೆಸರಿನ ಪಾನ್ ಕಾರ್ಡ್, ಮತ್ತು ಒಂದು ಗುರುತಿನ ಚೀಟಿಯನ್ನು SIT ತಂಡವು ವಶಪಡಿಸಿಕೊಂಡಿದೆ. ಈ ಐಡಿ ಕಾರ್ಡ್‌ಗಳು ಯಾರಿಗೆ ಸಂಬಂಧಿಸಿವೆ ಎಂಬುದರ ಕುರಿತು ತೀವ್ರ ತನಿಖೆ ನಡೆಯುತ್ತಿದೆ.

ಈ ಕಾರ್ಡ್‌ಗಳು ಕೇಸ್‌ನ ರಹಸ್ಯವನ್ನು ಬಿಡಿಸುವಲ್ಲಿ ಪ್ರಮುಖ ಸುಳಿವು ನೀಡಬಹುದೆಂದು ತನಿಖಾ ತಂಡ ಭಾವಿಸಿದೆ. ಲಕ್ಷ್ಮಿ ಎಂಬ ಹೆಸರಿನ ಪಾನ್ ಕಾರ್ಡ್ ಮತ್ತು ಪುರುಷನ ಹೆಸರಿನ ಎಟಿಎಂ ಕಾರ್ಡ್ ಯಾರಿಗೆ ಸೇರಿದ್ದು ಎಂಬುದನ್ನು ಖಚಿತಪಡಿಸಿಕೊಳ್ಳಲು ತಂಡವು ಡಿಜಿಟಲ್ ಮತ್ತು ದಾಖಲಾತಿ ತನಿಖೆಯನ್ನು ಚುರುಕುಗೊಳಿಸಿದೆ. ಈ ಸಾಕ್ಷ್ಯಗಳು 20 ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿರಬಹುದೇ ಎಂಬುದನ್ನು ತಿಳಿಯಲು ಪೊಲೀಸರು ಶ್ರಮಿಸುತ್ತಿದ್ದಾರೆ.

ತನಿಖೆಯ ಭಾಗವಾಗಿ, ಅನಾಮಿಕ ದೂರುದಾರನೊಬ್ಬ ಎರಡು ದಿನಗಳ ಕಾಲ ನಡೆದ SIT ವಿಚಾರಣೆಯಲ್ಲಿ ಹಲವರ ಹೆಸರನ್ನು ಉಲ್ಲೇಖಿಸಿದ್ದಾನೆ. ಅದರಲ್ಲಿ ಮಂಗಳೂರಿನ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬ ಅಧಿಕಾರಿಯ ಹೆಸರೂ ಸೇರಿದೆ. ಈ ಅಧಿಕಾರಿಗೆ SIT ತಂಡವು ನೋಟಿಸ್ ಜಾರಿಗೊಳಿಸಿದ್ದು, ಶೀಘ್ರದಲ್ಲಿಯೇ ವಿಚಾರಣೆಗೆ ಕರೆಯಲಾಗುವುದು ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *