ಒಕ್ಕೂಟ ಬಜೆಟ್ : ಒಂದು ಪ್ರತಿಗಾಮಿ ಸಂಕುಚನಕಾರಿ ಬಜೆಟ್ – ಸಿಪಿಐ(ಎಂ)

ನವದೆಹಲಿ:ಜುಲೈ 23ರಂದು ಮಂಡಿಸಿದ  ಒಕ್ಕೂಟ ಬಜೆಟ್ , ಒಂದು ಪ್ರತಿಗಾಮಿ ಸಂಕುಚನಕಾರಿ ಬಜೆಟ್, ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ.

ಈ ಬಜೆಟ್ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತಗೊಳಿಸಿ ಬಡವರನ್ನು ಬಡವರನ್ನಾಗಿಸುವ ಗುರಿಯನ್ನು ಹೊಂದಿದೆ. ಭಾರತದ ಅತಿ ಶ್ರೀಮಂತರ ಮೇಲೆ ಸಂಪತ್ತು ಅಥವಾ ಪಿತ್ರಾರ್ಜಿತ ತೆರಿಗೆಯ ಯಾವುದೇ ಪ್ರಸ್ತಾಪವನ್ನು ಪರಿಗಣಿಸಲು ನಿರಾಕರಿಸಿದೆ ಮತ್ತು  ಜನರ ಮೇಲಿನ ಪರೋಕ್ಷ ತೆರಿಗೆ ಹೊರೆಗೆ ಯಾವುದೇ ಪರಿಹಾರವನ್ನು ನೀಡಿಲ್ಲ. ಜನರ ಮತ್ತು ಅರ್ಥವ್ಯವಸ್ಥೆಯ  ತುರ್ತು ಸಮಸ್ಯೆಗಳನ್ನು ಪರಿಹರಿಸಲು ಬಜೆಟ್ ವಿಫಲವಾಗಿರುವುದರ  ವಿರುದ್ಧ ಪ್ರತಿಭಟಿಸಬೇಕೆಂದು  ಸಿಪಿಐ(ಎಂ) ಪೊಲಿಟ್ ಬ್ಯೂರೋ ಪಕ್ಷದ ಎಲ್ಲಾ ಘಕಗಳಿಗೆ ಕರೆ ನೀಡಿದೆ.

ವಿಪರೀತ ನಿರುದ್ಯೋಗ, ಹೆಚ್ಚಿನ ಆಹಾರ ಹಣದುಬ್ಬರ ದರ, ಅಸಮಾನತೆಗಳ ಅಭೂತಪೂರ್ವ ವಿಸ್ತರಣೆ ಮತ್ತು ಖಾಸಗಿ ಹೂಡಿಕೆಯ ನಿಧಾನಗತಿಯ ಆರ್ಥಿಕ ವಾಸ್ತವಗಳ ಸಂದರ್ಭದಲ್ಲಿ, ಬಜೆಟ್ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವತ್ತ ಗಮನ ಹರಿಸಬೇಕಿತ್ತು. ಬದಲಾಗಿ, ಅದರ ಪ್ರಸ್ತಾಪಗಳು ಜನರ ಮೇಲೆ ಮತ್ತಷ್ಟು ಸಂಕಷ್ಟಗಳನ್ನು ಹೇರುತ್ತವೆ ಮತ್ತು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಮಟ್ಟವನ್ನು ಕುಗ್ಗಿಸುತ್ತವೆ .ಎಂದು ಅದು ಟೀಕಿಸಿದೆ.

ಬಜೆಟ್ ಅಂಕಿಅಂಶಗಳ  ಪ್ರಕಾರ ಸರ್ಕಾರದ ಆದಾಯ ಗಳಿಕೆಗಳು 14.5 ಶೇ.ದಷ್ಟು ಹೆಚ್ಚಾಗಿವೆ, ಆದರೆ ವೆಚ್ಚಗಳು 5.94 ಶೇ.ದಷ್ಟು ಮಾತ್ರ ಬೆಳೆದಿವೆ. ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಲು ಈ ಆದಾಯಗಳನ್ನು ಬಳಸುವ ಬದಲು, ವಿತ್ತೀಯ ಕೊರತೆಯನ್ನು ಜಿಡಿಪಿಯ 5.4ಶೇ.ದಿಂದ 4.9%ಕ್ಕೆ ಇಳಿಸಲು, ಆಮೂಲಕ ಅಂತರರಾಷ್ಟ್ರೀಯ ಹಣಕಾಸು ಬಂಡವಾಳವನ್ನು ತೃಪ್ತಗೊಳಿಸಲು ಬಳಸಲಾಗಿದೆ ೆಂದು ಸಿಪಿಐ(ಎಂ) ಹೇಳಿದೆ.

ಮಾಹಿತಿ-ಠಕ್ಕುತನದ ಮತ್ತೊಂದು ಕಸರತ್ತು

ಬಜೆಟ್‌ನಲ್ಲಿ ತೋರಿಸಿರುವ  ಜಿಡಿಪಿ ಲೆಕ್ಕಾಚಾರಗಳು ಮಾಹಿತಿ – ಠಕ್ಕುತನದ ಮತ್ತೊಂದು ಕಸರತ್ತು ಎಂದು ಪೊಲಿಟ್‍ ಬ್ಯುರೊ ಖಂಡಿಸಿದೆ. ಹಣದುಬ್ಬರವನ್ನು ಗಣನೆಗೆ ತಗೊಳ್ಳದ ಜಿಡಿಪಿ ಬೆಳವಣಿಗೆ ಶೇ 10.5 ಎಂದು ಅಂದಾಜಿಸಲಾಗಿದೆ. ನಿಜ ಜಿಡಿಪಿ ಬೆಳವಣಿಗೆ 6.5 ರಿಂದ 7 ಶೇ.ದಷ್ಟು ಇರುತ್ತದೆ ಎಂದು ಅಂದಾಜು ಮಾಡಿರುವುದು, ‘ಮೂಲ’ ಹಣದುಬ್ಬರ 3ಶೇ. ಇರುತ್ತದೆ ಎಂಬ ಆಧಾರದಲ್ಲಿ. ಇದು 9.4ಶೇ.ದಷ್ಟು ದೊಡ್ಡ ಪ್ರಮಾಣದ ಆಹಾರ ಹಣದುಬ್ಬರವನ್ನು ಗಣನೆಗೆ ತಗೊಂಡಿಲ್ಲ, ಈ ಮೂಲಕ ನೈಜ ಜಿಡಿಪಿ ಬೆಳವಣಿಗೆಯನ್ನು ಬಹಳಷ್ಟು ಉತ್ಪ್ರೇಕ್ಷಿಸಿ ಹೇಳಲಾಗಿದೆ.

ಸರ್ಕಾರದ ವೆಚ್ಚವನ್ನು ಮತ್ತಷ್ಟು ಹಿಂಡಿ, ಸಬ್ಸಿಡಿಗಳನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ರಸಗೊಬ್ಬರ ಸಬ್ಸಿಡಿಯನ್ನು ರೂ. 24894 ಕೋಟಿಗಳಷ್ಟು ಮತ್ತು ಆಹಾರ ಸಬ್ಸಿಡಿ ರೂ. 7082 ಕೋಟಿಯಷ್ಟು ಕಡಿತ ಮಾಡಲಾಗಿದೆ. ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಯ ಮೇಲಿನ ವೆಚ್ಚಗಳು ಹೆಚ್ಚು ಕಡಿಮೆ ಹಾಗೆಯೇ ಉಳಿಯುತ್ತವೆ. ಮನರೇಗ  ಮತ್ತಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಬಜೆಟ್ ಹಂಚಿಕೆ ರೂ.86,000 ಕೋಟಿಗಳಾಗಿದ್ದು, ಇದು ಹಣಕಾಸು ವರ್ಷ  ’23 ರಲ್ಲಿ ಖರ್ಚು ಮಾಡಿದ್ದಕ್ಕಿಂತ ಕಡಿಮೆಯಾಗಿದೆ. ಇದರಲ್ಲಿ , ಈ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ರೂ.41,500 ಕೋಟಿಗಳನ್ನು ಈಗಾಗಲೇ ಖರ್ಚು ಮಾಡಲಾಗಿದೆ, ಅಂದರೆ ಉಳಿದ ಎಂಟು ತಿಂಗಳಿಗೆ ಕೇವಲ ರೂ.44,500 ಕೋಟಿಗಳು ಉಳಿಯುತ್ತವೆ. ಗ್ರಾಮೀಣ ಭಾರತದಲ್ಲಿ ಆಳವಾಗಿರುವ ನಿರುದ್ಯೋಗ ಬಿಕ್ಕಟ್ಟನ್ನು ನಿಭಾಯಿಸಲು ಇದು ಏನೇನೂ ಸಾಲದು ಎಂಬುದು ಸ್ಪಷ್ಟ.

ಇ.ಎಲ್‍.ಐ. ಗಿಮಿಕ್

ನಿರುದ್ಯೋಗ ನಿವಾರಣೆಯ ಹೆಸರಿನಲ್ಲಿ ಬಜೆಟ್ ಗಿಮಿಕ್ ನಡೆಸಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ  ಗೇಲಿ ಮಾಡಿದೆ. ಎಂಪ್ಲಾಯ್‌ಮೆಂಟ್ ಲಿಂಕ್ಡ್ ಇನ್ಸೆಂಟಿವ್ ,ಅಂದರೆ ಉದ್ಯೋಗಕ್ಕೆ ಕೊಂಡಿ ಹಾಕಿರುವ ಉತ್ತೇಜನೆ ಎಂಬ ಹೊಸ ಯೋಜನೆಯು ಔಪಚಾರಿಕ ವಲಯದಲ್ಲಿ ರೂ.1ಲಕ್ಷಕ್ಕಿಂತ ಕಡಿಮೆ ಆದಾಯದ ಹೊಸ ಉದ್ಯೋಗಿಗಳಿಗೆ ಒಂದು ತಿಂಗಳ ವೇತನವನ್ನು ನೀಡುತ್ತದೆ. ಅರ್ಹ ಕೆಲಸಗಾರರು ಗರಿಷ್ಠ ರೂ. 5,000. ಮೂರು ತಿಂಗಳ ಕಂತುಗಳಲ್ಲಿ ಪಡೆಯುತ್ತಾರೆ, ಆದರೆ, ಉದ್ಯೋಗದಾತರು ರೂ.1 ಲಕ್ಷದವರೆಗೆ ಮಾಸಿಕ ವೇತನದೊಂದಿಗೆ ನೇಮಕಗೊಂಡ ಪ್ರತಿ ಹೊಸ ಉದ್ಯೋಗಿಗೆ , ಅಂದರೆ ತಲಾ ಹೆಚ್ಚವರಿ ಉದ್ಯೋಗಕ್ಕೆ ರೂ.72,000 ದಂತೆ 24 ಮಾಸಿಕ ಕಂತುಗಳಲ್ಲಿ ಪಡೆಯುತ್ತಾರೆ. ಇದು ಹೊಸ ಉದ್ಯೋಗವನ್ನು ಸೃಷ್ಟಿಸುವ ಹೆಸರಿನಲ್ಲಿ ಕಾರ್ಪೊರೇಟ್‌ಗಳಿಗೆ ಸಬ್ಸಿಡಿ ನೀಡುವ ಮತ್ತೊಂದು ಮಾರ್ಗವಾಗಿದೆ. ಇಂತಹ ಗಿಮಿಕ್‌ಗಳಿಂದ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಕಾರ್ಪೊರೇಟ್ ವಲಯವು ಈ ಹಿಂದೆ ಗಳಿಸಿದ ಭಾರಿ ಲಾಭಗಳ ಫಲವಾಗಿ  ಯಂತ್ರೋಪಕರಣಗಳು ಮತ್ತು ಉತ್ಪಾದನೆಯಲ್ಲಿ ಹೂಡಿಕೆ ಹೆಚ್ಚಲಿಲ್ಲ,ಇದು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಕೊರತೆಯಿಂದಾಗಿ ಜನರಲ್ಲಿ ಕೊಳ್ಳುವ ಶಕ್ತಿ ಕುಗ್ಗಿರುವ ಪರಿಣಾಮವಾಗಿದೆ.

ಭಾರತದ ಯುವಕರಲ್ಲಿ ಕೌಶಲಗಳನ್ನು ಹೆಚ್ಚಿಸುವ ಯೋಜನೆಗಳನ್ನೂ ಬಜೆಟ್ ಎತ್ತಿ ತೋರಿಸುತ್ತದೆ. ಇದು ಕೂಡ  ಹೆಚ್ಚಿನ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವುದಿಲ್ಲ. 2016 ಮತ್ತು 2022 ರ ಅವಧಿಯಲ್ಲಿ ಕೌಶಲ್ಯ ಉತ್ತೇಜನ ಯೋಜನೆಗಳ ಮೂಲಕ ತರಬೇತಿ ಪಡೆದ ಕೇವಲ 18 ಶೇ. ಯುವಕರು ಮಾತ್ರ ಉದ್ಯೋಗವನ್ನು ಪಡೆದರು. ಇಲ್ಲಿಯೂ,  ಅರ್ಥವ್ಯವಸ್ಥೆಯು  ವಿಸ್ತರಿಸದ ಹೊರತು ಉದ್ಯೋಗಾವಕಾಶಗಳು ಬೆಳೆಯಲು ಸಾಧ್ಯವಿಲ್ಲ.

‘ಸಹಕಾರಿ ಒಕ್ಕೂಟ’ದ ಬಗ್ಗೆ ಬಹಳಷ್ಟು ಮಾತಾಡಿದರೂ, ರಾಜ್ಯ ಸರ್ಕಾರಗಳು, ರಾಜಕೀಯ ಒತ್ತಡಗಳಿಂದಾಗಿ  ಆಂಧ್ರ ಪ್ರದೇಶ ಮತ್ತು ಬಿಹಾರವನ್ನು ಹೊರತುಪಡಿಸಿ ಒರಟು ನಡೆಯನ್ನು ಎದರಿಸಬೇಕಾಗಿ ಬಂದಿದೆ,. ಈ ಎನ್‍.ಡಿ. ಮೈತ್ರಿ ಸರ್ಕಾರದ ಉಳಿವು ಮಿತ್ರಪಕ್ಷಗಳ, ವಿಶೇಷವಾಗಿ ತೆಲುಗು ದೇಶಂ ಪಕ್ಷ ಮತ್ತು ಜನತಾ ದಳ (ಯು) ಬೆಂಬಲವನ್ನು ಅವಲಂಬಿಸಿದೆ. ಆದಾಗ್ಯೂ, ರಾಜ್ಯಗಳಿಗೆ ಹಣಕಾಸು ಆಯೋಗದ ಅನುದಾನವನ್ನು (ತೆರಿಗೆ ಹಂಚಿಕೆ ಹೊರತುಪಡಿಸಿ) 2022-23 ರಲ್ಲಿ  ರೂ. 172760 ಕೋಟಿಗಳಿಂದ 2023-24 ರಲ್ಲಿ ರೂ.140429 ಕೋಟಿಗಳಿಗೆ ಇಳಿಸಲಾಗಿತ್ತು. ಈ ಬಜೆಟ್ ಅದನ್ನು ಮತ್ತಷ್ಟು ರೂ 132378 ಕೋಟಿಗಳಿಗೆ ಇಳಿಸಿದೆ.

ಒಟ್ಟಿನಲ್ಲಿ ಈ ಬಜೆಟ್ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತಗೊಳಿಸಿ ಬಡವರನ್ನು ಬಡವರನ್ನಾಗಿಸುವ ಗುರಿಯನ್ನು ಹೊಂದಿದೆ. ಭಾರತದ ಅತಿ ಶ್ರೀಮಂತರ ಮೇಲೆ ಸಂಪತ್ತು ಅಥವಾ ಪಿತ್ರಾರ್ಜಿತ ತೆರಿಗೆಯ ಯಾವುದೇ ಪ್ರಸ್ತಾಪವನ್ನು ಪರಿಗಣಿಸಲು ನಿರಾಕರಿಸಿತುದೆ ಮತ್ತು  ಜನರ ಮೇಲಿನ ಪರೋಕ್ಷ ತೆರಿಗೆ ಹೊರೆಗೆ ಯಾವುದೇ ಪರಿಹಾರವನ್ನು ನೀಡಿಲ್ಲ.

ಜನರ ಮತ್ತು ಅರ್ಥವ್ಯವಸ್ಥೆಯ  ತುರ್ತು ಸಮಸ್ಯೆಗಳನ್ನು ಪರಿಹರಿಸಲು ಬಜೆಟ್ ವಿಫಲವಾಗಿರುವುದರ  ವಿರುದ್ಧ ಪ್ರತಿಭಟಿಸಬೇಕೆಂದು  ಸಿಪಿಐ(ಎಂ) ಪೊಲಿಟ್ ಬ್ಯೂರೋ ಪಕ್ಷದ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

 

Donate Janashakthi Media

Leave a Reply

Your email address will not be published. Required fields are marked *