ಶಿಕಾರಿಪುರ: ಪಟ್ಟಣದ ಪಿಜಿ.ಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕಿಯೊಬ್ಬಳ ನಾಪತ್ತೆ ಪ್ರಕರಣ ಇದೀಗ ಕುತೂಹಲದ ಘಟ್ಟ ತಲುಪಿದೆ. ಈ ಸಂಬಂಧ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಗಂಗಾನಾಯ್ಕ ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ. ಇಟ್ಟಿಗೆಹಳ್ಳಿ ಗ್ರಾಮದ ವಾಸಿಯಾಗಿರುವ ಈತ ಬಿಜೆಪಿ ಮುಖಂಡ.ಜೊತೆಗೆ, ಶಿಕಾರಿಪುರ ತಾಲ್ಲೂಕಿನ ಬಂಜಾರ ಸಮಾಜದ ಅಧ್ಯಕ್ಷ.
ಗಂಗಾನಾಯ್ಕನ ಜೊತೆ ಆತನ ಎರಡನೇ ಪತ್ನಿ ಸೌಭಾಗ್ಯ @ ಭಾಗ್ಯಶ್ರೀಯನ್ನು ಕೂಡ ಬಂಧಿಸಿದ್ದಾರೆ. ಗಂಡ ತೊರೆದು ಬಂದಿದ್ದ ಸೌಭಾಗ್ಯ ಗಂಗಾನಾಯ್ಕನನ್ನು ವಿವಾಹವಾಗಿದ್ದಳೆಂದು ತಿಳಿದುಬಂದಿದೆ.
ಇದನ್ನೂ ಓದಿ: ವಲಸೆ ತಡೆಯಲು ಮಧ್ಯಮ – ಸಣ್ಣ ನಗರಗಳಲ್ಲಿ ಉದ್ಯಮ ಉತ್ತೇಜನ: ಸಿಎಂ ಡಿಕೆಶಿ
ಈ ಇಬ್ಬರ ಜೊತೆ ನ್ಯಾಮತಿ ತಾಲ್ಲೂಕಿನ ಸೋಗಿಲು ಗ್ರಾಮದ ರಂಜಿತ ಮತ್ತು ಪೂರ್ಯಾನಾಯ್ಕನನ್ನು ಕೂಡ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಶಿಕಾರಿಪುರದಲ್ಲಿ ಭಾಗ್ಯ @ ಸೌಭಾಗ್ಯ ನಡೆಸುತ್ತಿದ್ದ ಪಿಜಿಯಲ್ಲಿ ಆ ಹುಡುಗಿ ಕೆಲಸ ಮಾಡುತ್ತಿದ್ದಳು. ಪಿಜಿ ಕೆಲಸದಲ್ಲಿದ್ದ ಬಾಲಕಿ ವರ್ಷದ ಹಿಂದೆ ಕಣ್ಮರೆಯಾಗಿದ್ದಳು. ಈ ಬಗ್ಗೆ ಕಳೆದ ಶುಕ್ರವಾರ ಪ್ರಕರಣ ದಾಖಲಾಗಿತ್ತು. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಜೋಗ ಸಮೀಪದಲ್ಲಿ ಶವ ಹೂತಿಟ್ಟಿರುವುದಾಗಿ ಆರೋಪಿಗಳು ಹೇಳಿದ್ದಾರೆ.
ಕೊಲೆ ಮಾಡಿದ ನಂತರ ಬಾಲಕಿಯ ಶವ ಹೂತಿಡಲಾಗಿದೆಯೋ? ಸಾರ್ವಜನಿಕರಲ್ಲಿ ಬಾಲಕಿಯದು ಕೊಲೆಯೋ, ಅತ್ಯಾಚಾರದ ನಂತರ ಸಾವೋ, ಆತ್ಮಹತ್ಯೆಯೋ ಎಂಬ ಅನುಮಾನಗಳಿವೆ.
ಈ ಹಿಂದೆ ಇಟ್ಟಿಗೆ ಕೆಲಸಕ್ಕೆಂದು ಮಧ್ಯ ಕರ್ನಾಟಕದ ಜಡೆಯಿಂದ ಬಂದ ಭೋವಿ ಮಹಿಳೆಯ ಅತ್ಯಾಚಾರದ ಆರೋಪ ಕೂಡ ಗಂಗಾನಾಯ್ಕನ ಮೇಲೆ ಕೇಳಿ ಬಂದಿತ್ತಾದರೂ ಅದು ಅಲ್ಲಿಗೇ ಮುಚ್ಚಿಹೋಗಿತ್ತೆಂದು ಹೇಳಲಾಗುತ್ತಿದೆ.
ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೇ ಈ ಪ್ರಕರಣವನ್ನು ತನಿಖೆಗೊಳಪಡಿಸಿ ಆರೋಪಿಗಳಿಗೆ ಶಿಕ್ಷೆಕೊಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: ನವ ಉದಾರವಾದಿ ಆರ್ಥಿಕತೆಯಲ್ಲಿ ನಿರುದ್ಯೋಗದ ಬಿಕ್ಕಟ್ಟು -ನಾಗರಾಜ ಶಾನಭೋಗ Janashakthi Media
