ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣ : ತನಿಖಾ ವರದಿ ಸಲ್ಲಿಸಲು ಸರಕಾರಕ್ಕೆ ಸೂಚನೆ

ಸರ್ಕಾರ ಹಾಗೂ ಎಸ್‌ಐಟಿಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು : ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿ ಡಿ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಸೋಮವಾರ ರಾಜ್ಯ ಸರ್ಕಾರ, ಗೃಹ ಇಲಾಖೆ ಮತ್ತು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ನೋಟಿಸ್‌ ಜಾರಿಗೊಳಿಸಿದೆ.

ವಕೀಲ ಉಮೇಶ್ ಎಂಬುವವರು ಎಸ್ಐಟಿ ರಚನೆಯನ್ನ ಪ್ರಶ್ನಿಸಿ ಪಿಐಎಲ್ ಹಾಕಿದ್ದರು. ವಿಚಾರಣೆ ನಡೆಸಿದ ಕೋರ್ಟ್​,  ಪ್ರಕರಣದ ತನಿಖೆಯ ವರದಿಯನ್ನ ನೀಡುವಂತೆ ಎಸ್​ಐಟಿ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಇನ್ನು ವಕೀಲ ಜಿ.ಆರ್ ಮೋಹನ್ ಪ್ರಕರಣ ಸಿಬಿಐಗೆ ನೀಡಲು ‌ಕೋರಿದ್ದರು. ಎಸ್ಐಟಿಯಿಂದ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಆರೋಪವನ್ನೂ ಜಿ.ಆರ್ ಮೋಹನ್ ಮಾಡಿದ್ದರು.

2 ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್​ ನೋಟಿಸ್ ಜಾರಿಗೊಳಿಸಿದೆ. ಪ್ರಕರಣದ ತನಿಖೆ ಎಲ್ಲಿ ತನಕ ಬಂದಿದೆ? ಎಸ್ಐಟಿ ತನಿಖೆ ಎಲ್ಲಿಯವರೆಗೆ ಬಂದಿದೆ? ಕೇಸ್ ಯಾವ ಹಂತದಲ್ಲಿ ನಡೆಯುತ್ತಿದೆ? ಅಂತಾ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನ ನೀಡಬೇಕು ಎಂದು ಸೂಚಿಸಿದೆ. ಏಪ್ರಿಲ್ 17ರ ಒಳಗೆ ನೀಡಲು ವರದಿ ನೀಡಬೇಕು. ಅರ್ಜಿಗಳಿಗೆ ಯಾವುದೇ ಸಾಕ್ಷಿ ಇಲ್ಲದ ಕಾರಣ ಕ್ರಮತೆಗೆದುಕೊಳ್ಳಲು ಸಾಧ್ಯವಿಲ್ಲ ಅಂತಲೂ ಹೈಕೋರ್ಟ್ ಈ ವೇಳೆ ಅಭಿಪ್ರಾಯಪಟ್ಟಿತು.

ಮನವಿಯಲ್ಲಿ ಏನಿದೆ?: ರಮೇಶ್‌ ಜಾರಕಿಹೊಳಿ ಅವರದ್ದು ಎನ್ನಲಾದ ಸಿ ಡಿ ಪ್ರಕರಣವು ಹಾದಿ ತಪ್ಪುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷಗಳು ಸದರಿ ಪ್ರಕರಣವನ್ನು ಇಟ್ಟುಕೊಂಡು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಇದರಿಂದಾಗಿ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆಗಾಗಿ ಕರೆಯಲಾಗಿದ್ದ ಅಧಿವೇಶನವೂ ವ್ಯರ್ಥವಾಗಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಹಳಿ ತಪ್ಪಿದ್ದು, ಪ್ರಕರಣವು ರಾಜಕೀಯ ರಂಗು ಪಡೆದುಕೊಂಡಿರುವುದರಿಂದ ಎಸ್‌ಐಟಿ ಹಾಗೂ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ. ಹೀಗಾಗಿ, ಪ್ರಕರಣದ ವಿಚಾರಣೆಯನ್ನು ಸರಿಯಾದ ರೀತಿಯಲ್ಲಿ ನಡೆಸಿ, ತಪ್ಪಿತಸ್ಥರನ್ನು ಗುರುತಿಸಲು ಸಿಬಿಐಗೆ ಜವಾಬ್ದಾರಿ ನೀಡುವುದು ಅಗತ್ಯವಿದೆ ಎಂದು ಜಿ.ಆರ್ ಮೋಹನ್  ಮನವಿ ಮಾಡಿದ್ದರು.

ಇಲ್ಲವಾದಲ್ಲಿ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು. ಇದರ ಮೇಲ್ವಿಚಾರಣೆಯನ್ನು ಹೈಕೋರ್ಟ್‌ಗೆ ವಹಿಸಬೇಕು. ಪ್ರಕರಣದ ಕುರಿತು ಮಾಧ್ಯಮಗಳು ಪ್ರಚೋದನಕಾರಿ ಹಾಗೂ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಸುದ್ದಿ ಪ್ರಕಟಿಸುತ್ತಿವೆ. ಇದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಅರ್ಜಿದಾರರು ಮನವಿಯಲ್ಲಿ ವಿನಂತಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *