ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ಸಂಬಂಧ ಹಿನ್ನಲೆ ದಿಲ್ಲಿಯ ಅಧಿಕೃತ ನಿವಾಸ ಖಾಲಿ ಮಾಡಿದ ರಾಹುಲ್‌ ಗಾಂಧಿ

ಹೊಸದಿಲ್ಲಿ: ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯದಲ್ಲಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ನಾಯಕ  ರಾಹುಲ್‌ ಗಾಂಧಿ ಅವರು ಸೆಂಟ್ರಲ್ ದಿಲ್ಲಿಯಲ್ಲಿನ ತಮ್ಮ ಅಧಿಕೃತ ನಿವಾಸವನ್ನು ಶನಿವಾರ ಖಾಲಿ ಮಾಡಿದ್ದಾರೆ. ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಅವರಿಗೆ ನೀಡಲಾಗಿದ ಗಡುವಿನ ಕೊನೆಯ ದಿನದಂದು ಅವರು ನಿವಾಸದಿಂದ ನಿರ್ಗಮಿಸಿದ್ದಾರೆ.

ನಿವಾಸ ತೆರವುಗೊಳಿಸುವುದಕ್ಕೂ ಮುನ್ನ, ರಾಹುಲ್ ಗಾಂಧಿ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಬೆಳಿಗ್ಗೆ ಎರಡು ಬಾರಿ ಬಂಗಲೆಗೆ ಭೇಟಿ ನೀಡಿದ್ದರು. 2005ರಿಂದಲೂ ರಾಹುಲ್ ಗಾಂಧಿ ಅವರು ನೆಲೆಸಿರುವ 12 ತುಘಲಕ್ ಲೇನ್ ಬಂಗಲೆಯನ್ನು ಏಪ್ರಿಲ್ 22ರ ವೇಳೆಗೆ ತೆರವುಗೊಳಿಸುವಂತೆ ಬಿಜೆಪಿ ಸಂಸದ ಸಿಆರ್ ಪಾಟೀಲ್ ನೇತೃತ್ವದ ಲೋಕಸಭಾ ಹೌಸಿಂಗ್ ಸಮಿತಿಯು ಅವರಿಗೆ ನೋಟಿಸ್ ಕಳುಹಿಸಿತ್ತು. ನಿಯಮಾವಳಿಗಳು, ಶಿಷ್ಟಾಚಾರಗಳಿಗೆ ಅನುಗುಣವಾಗಿ ಅವರು ಬಂಗಲೆಯನ್ನು ಖಾಲಿ ಮಾಡಬೇಕಿರುವುದು ಅನಿವಾರ್ಯವಾದರೂ, ಇದು ರಾಜಕೀಯ ಸೇಡಿನ ಕ್ರಮ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಅನರ್ಹಗೊಂಡ ಸಂಸದರು ಸರ್ಕಾರಿ ವಸತಿ ಸೌಲಭ್ಯ ಪಡೆಯಲು ಅರ್ಹರಾಗಿರುವುದರಿಂದ. ಹಾಗೆಯೇ ಅವರ ಅನರ್ಹತೆ ಅಸ್ತಿತ್ವಕ್ಕೆ ಬಂದ ಒಂದು ತಿಂಗಳಲ್ಲಿ ಅಧಿಕೃತ ನಿವಾಸವನ್ನು ಖಾಲಿ ಮಾಡಬೇಕಾಗುತ್ತದೆ. ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿದ್ದ ಗುಜರಾತ್‌ನ ಸೂರತ್ ನ್ಯಾಯಾಲಯವು, ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತ್ತು. ರಾಹುಲ್ ಅವರು ಸ್ವಲ್ಪ ತಡವಾಗಿ ಸೂರತ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಮನವಿಯನ್ನು ಕೋರ್ಟ್ ವಜಾಗೊಳಿಸಿದ್ದರಿಂದ ಅವರು ಮತ್ತೆ ಸಂಸದ ಸ್ಥಾನವನ್ನು ಪಡೆಯುವ ಅವಕಾಶ ಕಳೆದುಕೊಂಡಿದ್ದರು. ಹೀಗಾಗಿ ಅಧಿಕೃತ ನಿವಾಸವನ್ನು ಅನಿವಾರ್ಯವಾಗಿ ತೊರೆಯಬೇಕಾಗಿತ್ತು.

ಇದನ್ನೂ ಓದಿ : ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ನಾಲಿಗೆ ಕತ್ತರಿಸುವುದಾಗಿ ಬೆದರಿಕೆ

ಕೇರಳದ ವಯನಾಡು ಲೋಕಸಭೆ ಕ್ಷೇತ್ರದ ಸಂಸದರಾಗಿದ್ದ ರಾಹುಲ್ ಗಾಂಧಿ ಅವರು ಏ. 14ರಂದು ತಮ್ಮ ಕಚೇರಿಯನ್ನು ಹಾಗೂ ಕೆಲವು ವೈಯಕ್ತಿಕ ವಸ್ತುಗಳನ್ನು ಬಂಗಲೆಯಿಂದ ತಾಯಿ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸಕ್ಕೆ ಸ್ಥಳಾಂತರ ಮಾಡಿದ್ದರು. ಕೆಳ ನ್ಯಾಯಾಲಯದ ಆದೇಶವನ್ನು ಮೇಲಿನ ನ್ಯಾಯಾಲಯ ಎತ್ತಿಹಿಡಿದಿರುವುದು ಗಾಂಧಿ ಕುಟುಂಬಕ್ಕೆ ಮಾಡಿರುವ ಕಪಾಳಮೋಕ್ಷ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಕಾನೂನು ಎಲ್ಲರಿಗೂ ಒಂದೇ ಹಾಗೂ ಯಾವುದೇ ಕುಟುಂಬಕ್ಕೆ ವಿಶೇಷ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಕೋರ್ಟ್ ಸಾಬೀತುಪಡಿಸಿದೆ ಎಂದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *