ಯಾಂತ್ರೀಕರಣ ಮತ್ತು ನಿರುದ್ಯೋಗ

ಬಂಡವಾಳಶಾಹಿಯ ಬಗ್ಗೆ ಈಗಲೂ ಇರುವ ಒಂದು ಮಿಥ್ಯೆ

ಯಂತ್ರೋಪಕರಣಗಳ ಬಳಕೆಯು ತಕ್ಷಣವೇ ನಿರುದ್ಯೋಗಕ್ಕೆ ಕಾರಣವಾಗುತ್ತದೆಯಾದರೂ, ಕಾಲಕ್ರಮದಲ್ಲಿ ಅದು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ-ಆದ್ದರಿಂದ ಭಾರತದಂತಹ ಜಾಗತಿಕ ದಕ್ಷಿಣದ ದೇಶಗಳು ಲಂಗುಲಗಾಮಿಲ್ಲದ ಬಂಡವಾಳಶಾಹಿಯನ್ನು ಅನುಸರಿಸುವುದರಿಂದ ತಮ್ಮ ನಿರುದ್ಯೋಗ ಮತ್ತು ಬಡತನವನ್ನು ನಿವಾರಿಸಬಹುದು ಎಂದು ವಿಶ್ವ ಬ್ಯಾಂಕ್, ಐಎಂಎಫ್ ಮತ್ತು ಇತರ ಏಜೆನ್ಸಿಗಳು ಹೇಳುತ್ತವೆ ಮತ್ತು ಈ ಹೇಳಿಕೆಗೆ ಬೆಂಬಲವಾಗಿ ಪಶ್ಚಿಮ ಯುರೋಪಿನ ಉದಾಹರಣೆಯನ್ನು ಕೊಡುತ್ತವೆ. ಅದನ್ನು ವೇದವಾಕ್ಯವೆಂದು ಒಪ್ಪಿಕೊಳ್ಳಲಾಗಿದೆ. ಆದರೆ, ಇದು ಬಂಡವಾಳಶಾಹಿಯ ಸಿದ್ಧಾಂತ ಮತ್ತು ಅದರ ಇತಿಹಾಸ ಇವೆರಡರದ್ದೂ ಪೂರಾ ತಪ್ಪು ವ್ಯಾಖ್ಯಾನ. ಪುನಃ ಹರಡಿಸುತ್ತಿರುವ ಬಂಡವಾಳಶಾಹಿಯ ಕುರಿತ ಇನ್ನೂರು ವರ್ಷಗಳಷ್ಟು ಹಳೆಯದಾದ ಇಂತಹ ಮಿಥ್ಯೆಗಳನ್ನು ನಾವು ಎಷ್ಟು ಬೇಗ ತೊರೆಯುತ್ತೇವೆಯೋ ಅಷ್ಟೂ ಒಳ್ಳೆಯದು. ಯಾಂತ್ರೀಕರಣ

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು: ಕೆ. ಎಂ. ನಾಗರಾಜ್

ಬಂಡವಾಳಶಾಹಿಯ ಬಗ್ಗೆ ಅರ್ಥಶಾಸ್ತ್ರಜ್ಞರು ಹೆಣೆದಿರುವ ಅನೇಕ ತಪ್ಪು ಕಲ್ಪನೆಗಳಿವೆ. ಇವುಗಳ ಪೈಕಿ ಡೇವಿಡ್ ರಿಕಾರ್ಡೊ ಎರಡು ಶತಮಾನಗಳ ಹಿಂದೆ ಹೆಣೆದಿರುವ ಒಂದು ತಪ್ಪು ಕಲ್ಪನೆಯು ಈಗಲೂ ಚಾಲ್ತಿಯಲ್ಲಿದೆ. ಯಂತ್ರೋಪಕರಣಗಳ ಬಳಕೆಯ ಆರಂಭದಲ್ಲಿ ಅದನ್ನು ರಿಕಾರ್ಡೊ ಬಹಳ ಸಂಭ್ರಮದಿಂದ ಬೆಂಬಲಿಸಿದ್ದರು ಮತ್ತು ಅದು ನಿರುದ್ಯೋಗಕ್ಕೆ ಕಾರಣವಾಗುತ್ತದೆ ಎಂಬ ಅವರ ಕಾಲದ ಕಾರ್ಮಿಕರ ಸಂಘಟನೆಗಳ ವಾದವನ್ನು ತಳ್ಳಿಹಾಕಿದ್ದರು. ಆದರೆ, ʼಪ್ರಿನ್ಸಿಪಲ್ಸ್ʼಎಂಬ ಅವರ ಕೃತಿಯ ಮೂರನೇ ಆವೃತ್ತಿಯಲ್ಲಿ “ಯಂತ್ರಗಳ ಕುರಿತು” ಎಂಬ ಶೀರ್ಷಿಕೆ ಹೊಂದಿದ ಒಂದು ಅಧ್ಯಾಯವನ್ನು ಅವರು ಸೇರಿಸಿದರು. ಅದರಲ್ಲಿ ಅವರು ಯಂತ್ರೋಪಕರಣಗಳ ಬಳಕೆಯು ತಕ್ಷಣವೇ ನಿರುದ್ಯೋಗಕ್ಕೆ ಕಾರಣವಾಗುತ್ತದೆ ಎಂಬ ಕಾರ್ಮಿಕರ ಸಂಘಟನೆಗಳ ಅಭಿಪ್ರಾಯವನ್ನು ಒಪ್ಪಿಕೊಂಡರು. ಆದರೆ, ಯಂತ್ರೋಪಕರಣಗಳ ಬಳಕೆಯು ಲಾಭದ ದರವನ್ನು ಹೆಚ್ಚಿಸುವ ಕಾರಣ ಮತ್ತು ಅದರಿಂದಾಗಿ ಉದ್ಯೋಗ ಬೆಳವಣಿಗೆಯ ದರವೂ ಒಳಗೊಂಡಂತೆ ಬಂಡವಾಳದ ಸಂಗ್ರಹಣೆ ಮತ್ತು ಬೆಳವಣಿಗೆಯ ದರವು ವೃದ್ಧಿಸುವ ಕಾರಣ, ಅದು ಸಂಭವಿಸದಿದ್ದರೆ ಇರುತ್ತಿದ್ದುದಕ್ಕಿಂತಲೂ ಹೆಚ್ಚಿನ ಉದ್ಯೋಗಗಳನ್ನು ಕಾಲಕ್ರಮದಲ್ಲಿ ಅದು ಸೃಷ್ಟಿಸುತ್ತದೆ ಎಂದು ವಾದಿಸಿದರು. ಯಾಂತ್ರೀಕರಣ

ಮಾರ್ಕ್ಸ್ ತಮ್ಮ ಮಿಗುತಾಯ ಮೌಲ್ಯದ ಸಿದ್ಧಾಂತದಲ್ಲಿ ತೀವ್ರವಾಗಿ ವಿಮರ್ಶೆಗೊಳಪಡಿಸಿದ ರಿಕಾರ್ಡೊ ಅವರ ಈ ಹೇಳಿಕೆಯು ಹಲವಾರು ಕಾರಣಗಳಿಗಾಗಿ ದೋಷಪೂರಿತವೇ ಆಗಿದೆ. ಮೊದಲನೆಯದಾಗಿ, ರಿಕಾರ್ಡೊ ಅವರ ಇಡೀ ಚರ್ಚೆಯು ಯಂತ್ರೋಪಕರಣ ಬಳಕೆಯ ಜಾರಿ ಒಮ್ಮೆ-ಮಾತ್ರವೇ ಇರುತ್ತದೆ ಎಂಬುದಾಗಿತ್ತು. ಆದರೆ, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ತಾಂತ್ರಿಕ ಬದಲಾವಣೆಗಳು ನಿರಂತರವಾಗಿ ಉಂಟಾಗುತ್ತಲೇ ಇರುತ್ತವೆ. ಯಂತ್ರೋಪಕರಣಗಳ ಮಾರ್ಪಾಟು ಕೊನೆಯಿಲ್ಲದಂತೆ ಮುಂದುವರಿಯುತ್ತಾ ಹೋಗುತ್ತದೆ. ಹಾಗಾಗಿ, ತಾಂತ್ರಿಕ ಪ್ರಗತಿಯ ಮೂಲಕ ಲಾಭದ ದರ ಮತ್ತು ಆ ಮೂಲಕ ಬಂಡವಾಳದ ಸಂಗ್ರಹಣೆ ಮತ್ತು ಉದ್ಯೋಗ ಬೆಳವಣಿಗೆಯ ದರವು ಹೆಚ್ಚುತ್ತಲೇ ಇರುತ್ತದೆ ಎಂದು ಊಹಿಸಿಕೊಂಡರೂ, ಈ ಯಾಂತ್ರೀಕರಣದಿಂದ ಸೃಷ್ಟಿಯಾಗುವ ಇಡೀ ನಿರುದ್ಯೋಗವು ಅಂತಿಮವಾಗಿ ಕೊನೆಗೊಳ್ಳುವ ದಿನವು ಒಂದು ಬಿಸಿಲ್ಗುದುರೆಯಂತೆ ಮುಂದೆ ಮುಂದೆ ಹೋಗುತ್ತಲೇ ಇರುತ್ತದೆ. ಯಾಂತ್ರೀಕರಣ

ಇದನ್ನೂ ಓದಿ: ‘ಹೆಬ್ಬುಲಿ ಕಟ್’ ಸಿನೆಮಾ ಕತೆ ನನಗೆ ತುಂಬಾ ಕನೆಕ್ಟ್‌ ಆಗುತ್ತದೆ: ಸತೀಶ್‌ ನೀನಾಸಂ

ಅವಾಸ್ತವಿಕ ಮತ್ತು ಅಸಮರ್ಥನೀಯ

ಎರಡನೆಯದಾಗಿ, ರಿಕಾರ್ಡೊ ಅವರ ಇಡೀ ವಾದವು ಸೇ’ ಅವರ ನಿಯಮವನ್ನು ಮಾನ್ಯ ಮಾಡುತ್ತದೆ. ಅಂದರೆ, ಒಟ್ಟಾರೆ ಬೇಡಿಕೆಯ ಸಮಸ್ಯೆ ಎಂದಿಗೂ ಇರುವುದಿಲ್ಲ ಎಂದು ಭಾವಿಸುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಹೂಡಿಕೆಯು ಮಾರುಕಟ್ಟೆಯ ಬೆಳವಣಿಗೆಯಿಂದ ಎಂದಿಗೂ ನಿರ್ಬಂಧಿತವಲ್ಲ, ಏಕೆಂದರೆ, ಬಳಕೆಯಾಗದ ಎಲ್ಲ ಲಾಭಗಳೂ (ಕೂಲಿಯ ಎಲ್ಲವೂ ಬಳಕೆಯಾಗುತ್ತವೆ ಎಂದು ಭಾವಿಸಲಾಗಿದೆ) ಎಲ್ಲ ಉಳಿತಾಯಗಳಿಗೆ ಸಮನಾಗಿರುತ್ತವೆ ಮತ್ತು ಅದನ್ನು ಹೂಡಿಕೆ ಮಾಡಲಾಗುತ್ತದೆ ಎಂದು ಭಾವಿಸಲಾಗುವುದು. ಈ ಭಾವನೆಯು ಸಂಪತ್ತನ್ನು ಹಿಡಿದಿಟ್ಟುಕೊಳ್ಳಬಹುದಾದ ಬೇರೆ ಯಾವ ರೂಪವೂ ಇಲ್ಲ ಎಂದು ಮೊದಲೇ ಊಹಿಸಿಕೊಂಡಿರುತ್ತದೆ. ಅಂದರೆ, ಹಣವು ಸಂಪತ್ತನ್ನು ಎಂದಾದರೂ ಹಿಡಿದಿಟ್ಟುಕೊಳ್ಳಬಹುದಾದ ಒಂದು ರೂಪವಲ್ಲ ಎಂಬುದು. ಈ ಭಾವನೆಯು ಅವಾಸ್ತವಿಕ ಮಾತ್ರವಲ್ಲ, ತಾರ್ಕಿಕವಾಗಿ ಅಸಮರ್ಥನೀಯವೂ ಹೌದು.

ಹೂಡಿಕೆಯು ಮಾರುಕಟ್ಟೆಯ ಬೆಳವಣಿಗೆಯಿಂದ ನಿರ್ಧಾರಗೊಳ್ಳುತ್ತದೆ ಎಂಬುದನ್ನು ನಾವು ಒಮ್ಮೆ ಗುರುತಿಸಿದರೆ, ಆಗ ಯಂತ್ರೋಪಕರಣಗಳ ಬಳಕೆಯಿಂದಾಗಿ ಮಿಗುತಾಯವು ಕೂಲಿಯಿಂದ ಲಾಭದತ್ತ ಹೊರಳುವ ಬದಲಾವಣೆಯು ಬಂಡವಾಳ ಸಂಗ್ರಹಣೆಯ ದರವನ್ನು ಇಳಿಕೆ ಮಾಡುತ್ತದೆ. ಯಂತ್ರೋಪಕರಣಗಳ ಬಳಕೆಯು ತಕ್ಷಣವೇ ನಿರುದ್ಯೋಗದ ಏರಿಕೆಗೆ ಕಾರಣವಾಗುವುದರಿಂದ, ಯಾಂತ್ರೀಕರಣದ ಮೂಲಕ ಕಾರ್ಮಿಕ ಉತ್ಪಾದಕತೆ ಹೆಚ್ಚಾದಂತೆಯೇ ಕೂಲಿಯೇನೂ ಏರಿಕೆಯಾಗುವುದಿಲ್ಲ. ಈ ವಿದ್ಯಮಾನವು ಕೂಲಿಯಿಂದ (ಹೀರಿಕೊಳ್ಳಲಾಗುತ್ತಿದ್ದ ಮಿಗುತಾಯವು) ಲಾಭದ ರೂಪ ಪಡೆಯುವ ಬದಲಾವಣೆಗೆ ಕಾರಣವಾಗುತ್ತದೆ. ಕೂಲಿಯು ಹೆಚ್ಚು ಕಡಿಮೆ ಇಡಿಯಾಗಿ ಬಳಕೆಯಾಗುವುದರಿಂದ ಮತ್ತು ಲಾಭದ ಒಂದು ಸಣ್ಣ ಭಾಗ ಮಾತ್ರವೇ ಬಳಕೆಯಾಗುವುದರಿಂದ, ಕೂಲಿಯಿಂದ ಲಾಭಕ್ಕೆ ಹೊರಳುವ ಬದಲಾವಣೆಯು ಒಟ್ಟು ವರಮಾನದಲ್ಲಿ ಬಳಕೆಯ ಅನುಪಾತವನ್ನು ಕಡಿಮೆ ಮಾಡುತ್ತದೆ. ಇದು ಅತಿ-ಉತ್ಪಾದನೆಯ ಪ್ರವೃತ್ತಿಯನ್ನು ಉಂಟುಮಾಡುತ್ತದೆ. ಇದು ವಾಸ್ತವವಾಗಿ ಬಂಡವಾಳ ಸಂಗ್ರಹಣೆಯ ದರವನ್ನು ಇಳಿಕೆ ಮಾಡುತ್ತದೆ. ಯಾಂತ್ರೀಕರಣ

ಆದ್ದರಿಂದ, ರಿಕಾರ್ಡೊ ಹೇಳಿದ ಹಾಗೆ ಉದ್ಯೋಗ ಬೆಳವಣಿಗೆ ದರ ಹೆಚ್ಚುವುದರ ಬದಲು, ಯಂತ್ರೋಪಕರಣಗಳ ಬಳಕೆಯು ಅದನ್ನು ಇಳಿಕೆ ಮಾಡುತ್ತದೆ. ಕೆಲವು ಸ್ವಾಯತ್ತ ಕಾರಣಗಳಿಂದಾಗಿ ಬಂಡವಾಳ ಸಂಗ್ರಹಣೆಯ ದರವು ಏರಿಕೆಯಾಗಬಹುದಾದ ಅವಧಿಗಳು ಇರಬಹುದು ಮತ್ತು ಅಂತಹ ಅವಧಿಗಳಲ್ಲಿ ಇನ್ನೂ ಹೊಸ ಹೊಸ ಯಂತ್ರೋಪಕರಣಗಳ ಬಳಕೆಯಾಗಿಲ್ಲ ಎಂದು ಗುರುತಿಸಿದರೆ, ಆಗ ನಿರುದ್ಯೋಗದ ಮಟ್ಟವು ನಿಜಕ್ಕೂ ಇಳಿಯಬಹುದು; ಆದರೆ ಅಂತಹ ಇಳಿಕೆಯು ಯಂತ್ರೋಪಕರಣಗಳ ಆರಂಭಿಕ ಬಳಕೆಯಿಂದಲೇ ಆಗಿರುವುದಿಲ್ಲ. ಆದ್ದರಿಂದ, ಯಂತ್ರೋಪಕರಣಗಳ ಬಳಕೆಯು, ಕಾಲಾವಧಿಯಲ್ಲಿ, ಅದು ಆರಂಭದಲ್ಲಿ ಸೃಷ್ಟಿಸಿದ ನಿರುದ್ಯೋಗವನ್ನು ಅದೇ ನಿವಾರಿಸುತ್ತದೆ ಎಂದು ನಂಬಲು ಯಾವುದೇ ಕಾರಣವಿಲ್ಲ ಎಂಬುದನ್ನು ನಾವು ಖಚಿತವಾಗಿ ಹೇಳಬಹುದು. ಯಾಂತ್ರೀಕರಣ

ರಿಕಾರ್ಡೊ ಅವರು ಚಿತ್ರಿಸಿದ ಬಂಡವಾಳಶಾಹಿಯ ಚಿತ್ರಣವು – ಆರಂಭದಲ್ಲಿ ಅದು ಉಂಟುಮಾಡುವ ಕಷ್ಟ ನಷ್ಟಗಳು ಏನೇ ಇದ್ದರೂ ಅಂತಿಮವಾಗಿ ಅದು ಎಲ್ಲರಿಗೂ ಹೆಚ್ಚಿನ ಸಮೃದ್ಧಿಯನ್ನು ತರುತ್ತದೆ – ಅದರ ಒಂದು ಸಾಮಾನ್ಯ ಹೆಗ್ಗುರುತಾಗಿ ಸ್ವೀಕರಿಸಲ್ಪಟ್ಟಿದೆ. ಆದರೆ, ಈ ಚಿತ್ರಣವು ನಿಜವಲ್ಲ: ಆರಂಭದಲ್ಲಿ ಅದು ಉಂಟುಮಾಡುವ ಕಷ್ಟಗಳನ್ನು ನಾವು ಕಂಡಿದ್ದೇವೆ, ಕಾಲಾನಂತರದಲ್ಲಿಯೂ ಅದು ಸುಧಾರಿಸುವುದಿಲ್ಲ; ಈ ಆರಂಭಿಕ ಕಷ್ಟಗಳನ್ನು ನಿವಾರಿಸುವಲ್ಲಿ ಕೊಡುಗೆ ನೀಡುವ ಯಾವುದೇ ಅಂಶವೂ ಬಂಡವಾಳಶಾಹಿಯ ಆಂತರಿಕ ಚಾಲಕಶಕ್ತಿಗಳಿಗಿಲ್ಲ. ಯಾಂತ್ರೀಕರಣ

ಪಶ್ಚಿಮ ಯುರೋಪಿನ ಒಗಟು

ಹಾಗಾದರೆ, ಒಂದು ಪ್ರಶ್ನೆ ಉದ್ಭವಿಸುತ್ತದೆ: ಬಂಡವಾಳಶಾಹಿಯ ಆರಂಭದ ವರ್ಷಗಳಿಗೆ ಹೋಲಿಸಿದರೆ, ಬಂಡವಾಳಶಾಹಿಯು ಜನ್ಮ ತಳೆದ ಮತ್ತು ಅದರ ತವರು ಮನೆಯಾಗಿಯೇ ಮುಂದುವರೆದಿರುವ ಪಶ್ಚಿಮ ಯುರೋಪಿನಲ್ಲಿ ಜನರ ಜೀವನ ಪರಿಸ್ಥಿತಿಗಳಲ್ಲಿ ನಿಜಕ್ಕೂ ಕಂಡುಬರುವ ಸುಧಾರಣೆಯ ಅಂಶವನ್ನು ನಾವು ಹೇಗೆ ವಿವರಿಸುತ್ತೇವೆ? ನಾವು ಗಮನಿಸಿದ ಈ ವಿದ್ಯಮಾನವನ್ನು ಬಂಡವಾಳಶಾಹಿಯು ಆರಂಭದಲ್ಲಿ ಉಂಟುಮಾಡುವ ಕಷ್ಟ ನಷ್ಟಗಳು, ಅವು ಹಿಮ್ಮೆಟ್ಟುವುದರ ಬದಲು, ಕಾಲಾನಂತರದಲ್ಲಿ ತಾವಾಗಿಯೇ ಉಲ್ಬಣಗೊಳ್ಳುವ ಪ್ರವೃತ್ತಿಯನ್ನು ಹೊಂದಿವೆ ಎಂಬ ಸೈದ್ಧಾಂತಿಕ ವಾದದೊಂದಿಗೆ ಹೇಗೆ ಸಮನ್ವಯಗೊಳಿಸುತ್ತೇವೆ? ಯಾಂತ್ರೀಕರಣ

ಈ ಒಗಟನ್ನು ಬಂಡವಾಳಶಾಹಿಯ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಚಾರಿತ್ರಿಕ ಸಂದರ್ಭಗಳು ವಿವರಿಸುತ್ತವೆ. ಕೆನಡಾ, ಅಮೆರಿಕಾ (ನಂತರ ಅದು ಯುನೈಟೆಡ್ ಸ್ಟೇಟ್ಸ್ ಎಂದು ಬದಲಾಯಿತು), ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ವಿಶ್ವದ ಸಮಶೀತೋಷ್ಣ ಪ್ರದೇಶಗಳಿಗೆ ಯುರೋಪಿನ ದೇಶಗಳಿಂದ ಹೊರ ಹೋದ ಬೃಹತ್ ಸಂಖ್ಯೆಯ ಜನರ ವಲಸೆಯೇ ಮೊದಲನೆಯ ಚಾರಿತ್ರಿಕ ಸಂದರ್ಭ. ಈ ದೇಶಗಳು ಭಾರತ, ಇಂಡೋನೇಷ್ಯಾ ಅಥವಾ ಇಂಡೋ-ಚೀನಾದಂತಹ “ಜಯಿಸಿದ ವಸಾಹತು”ಗಳಿಗಿಂತ ಭಿನ್ನವಾದ “ನೆಲಸಿಗ ವಸಾಹತು”ಗಳಾದವು. ಈ ಪ್ರದೇಶಗಳಿಗೆ (ಅಂದರೆ, ಈ ಹೊಸ ನೆಲಸಿಗ ವಸಾಹತುಗಳಿಗೆ) ಯುರೋಪಿನ ದೇಶಗಳಿಂದ ಬಂದ ವಲಸಿಗರು ಅಲ್ಲಿನ ಮೂಲ ನಿವಾಸಿಗಳಿಗೆ ಸೇರಿದ ಭೂಮಿಯನ್ನು ಕಿತ್ತುಕೊಂಡರು ಮತ್ತು ಅದನ್ನು ಸಾಗುವಳಿ ಮಾಡುವ ಮೂಲಕ ಉನ್ನತ ಮಟ್ಟದ ಆದಾಯವನ್ನು ಗಳಿಸಿದರು. ಯಾಂತ್ರೀಕರಣ

ಈ ವಿದ್ಯಮಾನವು ಅವರ ತಾಯ್ನಾಡಿನ (ಯುರೋಪಿನ ದೇಶಗಳ) ಕಾರ್ಮಿಕರು ಪಡೆಯಬಹುದಾದ ಕನಿಷ್ಠ ಕೂಲಿಯನ್ನು ಏರಿಕೆ ಮಾಡುವಷ್ಟು ಪರಿಣಾಮಕಾರಿಯಾಗಿತ್ತು ಮತ್ತು ಅವರ ತಾಯ್ನಾಡಿನಲ್ಲಿ ಉದ್ಯೋಗದ ಮಟ್ಟ ಮತ್ತು ವೇತನ ದರ ಎರಡೂ ಏರಿಕೆ ಕಂಡವು. ಅಂದರೆ, ಒಂದು ವೇಳೆ ವಲಸೆ ಸಂಭವಿಸದೆ ಇದ್ದಿದ್ದರೆ, ಯುರೋಪಿನ ದೇಶಗಳಲ್ಲಿ ಇರಬಹುದಾಗಿದ್ದ ಉದ್ಯೋಗದ ಮಟ್ಟ ಮತ್ತು ವೇತನ ದರ ಮಟ್ಟಕ್ಕಿಂತ ಉನ್ನತವಾದ ಪರಿಸ್ಥಿತಿಯನ್ನು ಈ ದೇಶಗಳು ವಲಸೆಯ ಪರಿಣಾಮವಾಗಿ ಹೊಂದಿದವು ಮತ್ತು ಆ ಮೂಲಕ ಯಾಂತ್ರೀಕರಣದ ಪ್ರತಿಕೂಲ ಪರಿಣಾಮವನ್ನು ನಿವಾರಿಸಿಕೊಂಡವು.

ಯುರೋಪಿನ ಜನಸಂಖ್ಯೆಗೆ ಹೋಲಿಸಿದರೆ ಅಲ್ಲಿಂದ ಹೋದ ವಲಸೆಯ ಪ್ರಮಾಣವು ಅಗಾಧವಾಗಿತ್ತು. “ದೀರ್ಘ ಹತ್ತೊಂಬತ್ತನೇ ಶತಮಾನ”ಎನ್ನಲಾಗುವ ಅವಧಿಯಲ್ಲಿ (ಮೊದಲ ಮಹಾಯುದ್ಧದವರೆಗೆ) ಯುರೋಪಿನ ದೇಶಗಳಿಂದ ಐವತ್ತು ಮಿಲಿಯನ್ ಜನರು ವಿಶ್ವದ ಸಮಶೀತೋಷ್ಣ ಪ್ರದೇಶಗಳಿಗೆ (ಯುರೋಪಿನ ವಸಾಹತುಗಳಾದ ಕೆನಡಾ, ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ) ವಲಸೆ ಬಂದಿದ್ದಾರೆಂದು ಅಂದಾಜಿಸಲಾಗಿದೆ. ಯಂತ್ರಗಳು ಮೊದಲು ಕಾಣಿಸಿಕೊಂಡ ಕೈಗಾರಿಕಾ ಕ್ರಾಂತಿಯ ಮೂಲ ತಾಣವಾದ ಬ್ರಿಟನ್‌ನಿಂದ ಪ್ರತಿ ವರ್ಷವೂ ಹೋದ ವಲಸೆಯ ಪ್ರಮಾಣವು ಅದೆಷ್ಟು ದೊಡ್ಡದಾಗಿತ್ತು ಎಂದರೆ, ಅಲ್ಲಿ ಪ್ರಕೃತಿ-ಸಹಜವಾಗಿ ಹೆಚ್ಚಳವಾಗುತ್ತಿದ್ದ ವಾರ್ಷಿಕ ಜನಸಂಖ್ಯೆಯ ಅರ್ಧದಷ್ಟು ಜನರು ತಮ್ಮ ದೇಶವನ್ನು ತೊರೆದು ಸಮಶೀತೋಷ್ಣ ಪ್ರದೇಶಗಳಿಗೆ ವಲಸೆ ಹೋದರು. ಅಷ್ಟೊಂದು ವರ್ಷಗಳ ಕಾಲ ಅಷ್ಟೊಂದು ಪ್ರಮಾಣದಲ್ಲಿ ನಿರುದ್ಯೋಗಿಗಳನ್ನು ವಿದೇಶಗಳಿಗೆ ವಲಸೆ ಕಳುಹಿಸಿದ ಅಂಶವು ಕಾರ್ಮಿಕ ಮಾರುಕಟ್ಟೆಯಲ್ಲಿ ಒಂದು ಬಿಗಿತವನ್ನು ಸೃಷ್ಟಿಸುವ ಮಟ್ಟಿಗೆ ಕೆಲಸ ಮಾಡಿತು. ಆದ್ದರಿಂದ, ಯಂತ್ರೋಪಕರಣಗಳ ಬಳಕೆಯಿಂದ ಸೃಷ್ಟಿಯಾದ ನಿರುದ್ಯೋಗವು ಕಾಲಾನಂತರದಲ್ಲಿ ಉಲ್ಬಣಗೊಳ್ಳುವ ಬದಲು ನಿಜಕ್ಕೂ ಇಳಿಕೆಯಾದುದರ ಹಿಂದಿರುವ ಅಂಶವು ಈ ಬಾಹ್ಯ ವಿಸ್ತರಣಾ ಅಂಶವಾದ ವಲಸೆಯೇ ವಿನಃ, ಬಂಡವಾಳಶಾಹಿಯ ಆಂತರಿಕ ಚಾಲಕಶಕ್ತಿಗಳಲ್ಲ.

ಅದೇ ನಿಟ್ಟಿನಲ್ಲಿ ಕೆಲಸ ಮಾಡಿದ ಎರಡನೇ ಅಂಶವೆಂದರೆ, ಯೂರೋಪಿನ ದೇಶಗಳಲ್ಲಿ ತಯಾರಾದ ಮತ್ತು ಅಪ-ಕೈಗಾರಿಕೀಕರಣಗೊಳಿಸುವ ರಫ್ತುಗಳನ್ನು ಅದಾಗಲೇ ಅದೇ ವಸ್ತುಗಳನ್ನು ಉತ್ಪಾದಿಸುತ್ತಿದ್ದ ‘ಜಯಿಸಿದ ವಸಾಹತು’ಗಳಿಗೆ ರಫ್ತು ಮಾಡಿದ ವಿದ್ಯಮಾನ. ಈ ರೀತಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಸೃಷ್ಟಿಯಾದ ನಿರುದ್ಯೋಗವು ಆ ದೇಶಗಳಿಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಅದರ ಬಹುಪಾಲು ಭಾಗವು ಈ ದೇಶಗಳು ಮಾಡಿದ ಅಪ-ಕೈಗಾರಿಕೀಕರಣಗೊಳಿಸುವ ರಫ್ತುಗಳ ಮೂಲಕ ‘ಜಯಿಸಿದ ವಸಾಹತು’ಗಳಲ್ಲಿ ಸೃಷ್ಟಿಯಾಯಿತು. ಬೃಹತ್ ಸಂಖ್ಯೆಯ ನಿರುದ್ಯೋಗಿಗಳನ್ನು ಹೊಂದಿರುವ ಜಾಗತಿಕ ದಕ್ಷಿಣ ದೇಶಗಳಲ್ಲಿ ಇಂದಿಗೂ ಈ ಸಮಸ್ಯೆಯು ಹಾಗೆಯೇ ಉಳಿದಿದೆ.

ಈ ಸಮಸ್ಯೆ ಹಾಗೆಯೇ ಉಳಿದಿದೆ ಏಕೆಂದರೆ, ಈ ಮೀಸಲುಗಳು ಮುಂದುವರೆದ ದೇಶಗಳ ಕೈಗಾರಿಕಾ ಬಂಡವಾಳಶಾಹಿಯು ಬಳಕೆಗೆ ತಂದ ಯಾಂತ್ರೀಕರಣದಿಂದ ಉದ್ಭವಿಸಿದವು ಎಂದು ನಾವು ಸಾಮಾನ್ಯವಾಗಿ ನೋಡುವುದಿಲ್ಲ ಮತ್ತು ಯಾಂತ್ರೀಕರಣದ ಪರಿಣಾಮವನ್ನು ಮೌಲ್ಯಮಾಪನ ಮಾಡುವಾಗ ಮುಂದುವರೆದ ದೇಶಗಳೊಳಗೆ ಸೃಷ್ಟಿಯಾದ ನಿರುದ್ಯೋಗದ (ಅಲ್ಲಿ ಇದು ವಲಸೆಯ ಮೂಲಕ ಇಳಿಕೆ ಕಂಡಿತು) ಮೇಲೆ ಮಾತ್ರ ಗಮನಹರಿಸುವುದರಿಂದ, ಈ ನಿರುದ್ಯೋಗವು ಕಾಲಾನಂತರದಲ್ಲಿ ಬಂಡವಾಳಶಾಹಿಯ ಆಂತರಿಕ ಚಾಲಕಶಕ್ತಿಗಳ ಮೂಲಕ ಇಲ್ಲದಂತಾಯಿತು ಎಂಬ ಅನಿಸಿಕೆ ನಮಗೆ ಬರುತ್ತದೆ. ಆದರೆ, ಬಂಡವಾಳಶಾಹಿಯ ಆಂತರಿಕ ಚಾಲಕಶಕ್ತಿಗಳು ನಿರುದ್ಯೋಗವನ್ನು ಇಲ್ಲವಾಗಿಸುವ ಯಾವ ಪರಿಣಾಮವನ್ನೂ ವಾಸ್ತವವಾಗಿ ಬೀರಿಲ್ಲ.

ಪೂರಾ ತಪ್ಪಾದ ವ್ಯಾಖ್ಯಾನ

ಇದೆಲ್ಲವೂ ಇಂದು ಜಾಗತಿಕ ದಕ್ಷಿಣದ ದೇಶಗಳಿಗೆ ಬಹು ಗುರುತರವಾದ ಪರಿಣಾಮಗಳನ್ನು ಹೊಂದಿದೆ. ಜಾಗತಿಕ ದಕ್ಷಿಣದ ದೇಶಗಳು ಲಂಗುಲಗಾಮಿಲ್ಲದ ಈ ಬಂಡವಾಳಶಾಹಿಯನ್ನು ಅನುಸರಿಸುವುದರಿಂದ ತಮ್ಮ ನಿರುದ್ಯೋಗ ಮತ್ತು ಬಡತನವನ್ನು ನಿವಾರಿಸಬಹುದು ಎಂದು ವಿಶ್ವ ಬ್ಯಾಂಕ್, ಐಎಂಎಫ್ ಮತ್ತು ಇತರ ಏಜೆನ್ಸಿಗಳು ಹೇಳುತ್ತವೆ ಮತ್ತು ಈ ಹೇಳಿಕೆಯ ಬೆಂಬಲವಾಗಿ ಪಶ್ಚಿಮ ಯುರೋಪಿನ ಉದಾಹರಣೆಯನ್ನು ಕೊಡುತ್ತವೆ. ಅದನ್ನು ವೇದವಾಕ್ಯವೆಂದು ಒಪ್ಪಿಕೊಳ್ಳಲಾಗಿದೆ. ಆದರೆ, ಇದು ಬಂಡವಾಳಶಾಹಿಯ ಸಿದ್ಧಾಂತ ಮತ್ತು ಅದರ ಇತಿಹಾಸ ಈ ಎರಡರದ್ದೂ ಪೂರಾ ತಪ್ಪು ವ್ಯಾಖ್ಯಾನವಾಗುತ್ತದೆ.

ಈ ಸಂಗತಿಯನ್ನು ಭಾರತದ ಅಭಿವೃದ್ಧಿ ಯೋಜನೆಗಳ ಆರಂಭ ಕಾಲದ ಯೋಜನಾ ಪರಿಣತರುಗಳಲ್ಲಿ ಒಬ್ಬರಾಗಿದ್ದ ಪಿ.ಸಿ. ಮಹಾಲನೋಬಿಸ್ ಚೆನ್ನಾಗಿ ಅರಿತಿದ್ದರು. ರಾಷ್ಟ್ರದ ಅಭಿವೃದ್ಧಿಗಾಗಿ ಅವರು ಲಂಗುಲಗಾಮಿಲ್ಲದ ಬಂಡವಾಳಶಾಹಿಗಿಂತ ಮಿಗಿಲಾಗಿ ನಿಯಂತ್ರಣ ನೀತಿಗಳ ಆಳ್ವಿಕೆಯನ್ನು ಹೊಂದಬಯಸಿದರು. ಈ ನಿಯಂತ್ರಣ ನೀತಿಗಳ ಆಳ್ವಿಕೆಯಡಿಯಲ್ಲಿಯೂ ಸಹ, ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ರಕ್ಷಣೆ ಇರಬೇಕೆಂದು ಅವರು ಬಯಸಿದರು. ಭಾರತದ ಎರಡನೇ ಪಂಚ ವಾರ್ಷಿಕ ಯೋಜನೆಭಾರೀ ಕೈಗಾರಿಕೆಗೆ ಒತ್ತು ನೀಡಿತುಎಂಬಖ್ಯಾತಿ ಹೊಂದಿದ್ದರ ಹೊರತಾಗಿಯೂ, ಆ ಯೋಜನೆಯ ಪ್ರಸ್ತಾವನೆಯಲ್ಲಿ ಒಂದು ಅಂಶವನ್ನು ಮಹಾಲನೋಬಿಸ್ ವಿಶೇಷವಾಗಿ ಪ್ರಸ್ತಾಪಿಸಿದರು. ಈ ಪ್ರಸ್ತಾಪವು ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ವಿಸ್ತರಣೆಯ ಮೂಲಕ ಅರ್ಥವ್ಯವಸ್ಥೆಯಲ್ಲಿ ಉದ್ಯೋಗವನ್ನು ಸೃಷ್ಟಿಸುವ ಹೊತ್ತಿನಲ್ಲೇ ಗ್ರಾಹಕ ಸರಕುಗಳ ಲಭ್ಯತೆಯನ್ನು ಬಲಪಡಿಸುವುದಕ್ಕೆ ಸಂಬಂಧಿಸಿತ್ತು. ಇದೇ ರೀತಿಯ ನೀತಿಯನ್ನು ಜಾಗತಿಕ ದಕ್ಷಿಣದ ಜನಸಂಖ್ಯಾ ಬಾಹುಳ್ಯ ಹೊಂದಿದ ದೇಶವಾದ ಚೀನಾದಲ್ಲಿ ವಸಾಹತುಶಾಹಿ ಮತ್ತು ಅರೆ-ವಸಾಹತುಶಾಹಿ ಕಾಲದಿಂದಲೂ ಒಂದು ಪರಂಪರೆಯಾಗಿ ಪಡೆದ ನಿರುದ್ಯೋಗ ಮತ್ತು ಬಡತನದ ಸಮಸ್ಯೆಯನ್ನು ನಿವಾರಿಸಲು “ಎರಡು ಕಾಲುಗಳ ಮೇಲೆ ನಡೆ” ಎಂಬ ವಿಚಾರದ ಮೂಲಕ ಅದೇ ಸಮಯದಲ್ಲಿ ಅನುಸರಿಸಲಾಗಿತ್ತು.

ವಿಷಾದಕರವಾದ ಒಂದು ಸಂಗತಿಯೆಂದರೆ, ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಚರ್ಚೆಯು ಇಂದು ದೇಶದಲ್ಲಿ ಒಂದು ತೀರಾ ಎಳಸು ಮಟ್ಟವನ್ನು ತಲುಪಿದೆ. ಬಂಡವಾಳಶಾಹಿಯ ಬಗ್ಗೆ ಇನ್ನೂರು ವರ್ಷಗಳಷ್ಟು ಹಳೆಯದಾದ ತಪ್ಪು ಕಲ್ಪನೆಗಳನ್ನು ಪುನಃ ಹರಡಲಾಗುತ್ತಿದೆ ಮತ್ತು ಜಾಗತಿಕ ದಕ್ಷಿಣದಲ್ಲಿ ಬಡತನ ನಿವಾರಣೆಯಾಗಿರುವ ಬಗ್ಗೆ ಎಲ್ಲಾ ರೀತಿಯ ಸುಳ್ಳು ಹೇಳಿಕೆಗಳ ಮೂಲಕ ಅವೇ ತಪ್ಪು ಕಲ್ಪನೆಗಳನ್ನು ಉಳಿಸಿಕೊಳ್ಳಲಾಗುತ್ತಿದೆ. ಇಂತಹ ತಪ್ಪು ಕಲ್ಪನೆಗಳನ್ನು ನಾವು ಎಷ್ಟು ಬೇಗ ತೊರೆಯುತ್ತೇವೆಯೋ ಅಷ್ಟೂ ಒಳ್ಳೆಯದು.

ಇದನ್ನೂ ನೋಡಿ: ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ | ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾJanashakthi Media

Donate Janashakthi Media

Leave a Reply

Your email address will not be published. Required fields are marked *