ಈಶ್ವರಪ್ಪ ರಾಜೀನಾಮೆ ಸಾಧ್ಯತೆ!? ಯಡಿಯೂರಪ್ಪ ಪದಚ್ಯುತಿಗಾಗಿ ಸಿದ್ಧತೆ!!?

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದ್ದು, ಈ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪದಚ್ಯುತಿಗೆ ಪಕ್ಷದ ವಲಯದಲ್ಲೇ ವೇದಿಕೆ ಸಿದ್ದವಾಗುತ್ತಿದೆ. ಯಾವುದೇ ಕ್ಷಣದಲ್ಲಿ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಲಕ್ಷಣಗಳು ಗೋಚರಿಸುತ್ತಿವೆ. ಜೊತೆಗೆ ಇನ್ನು ಇಬ್ಬರು ಹಿರಿಯ ಸಚಿವರು ಕೂಡ ಅದೇ ತಂತ್ರವನ್ನು ಅನುಸರಿಸಲಿದ್ದು, ಪರೋಕ್ಷವಾಗಿ ಬಿಎಸ್‍ವೈ ಹಠಾವೋ, ಬಿಜೆಪಿ ಬಚಾವೊ ಅಭಿಯಾನಕ್ಕೆ ಕಮಲ ಪಡೆ ಚಾಲನೆ ಕೊಟ್ಟಂತಾಗಿದೆ.

ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಸಚಿವ ಕೆಎಸ್‌ ಈಶ್ವರಪ್ಪ ರಾಜೀನಾಮೆ ಸಲ್ಲಿಸಬಹುದು ಎಂಬ ವದಂತಿ ಹರಡಿದೆ. ಆದರೆ, ಅಂತಹ ನಿರ್ಧಾರ ಕೈಗೊಳ್ಳಬಾರದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಸೂಚಿಸಿದ್ದಾರೆ.

ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಬಹುದು ಎಂಬ ಸುದ್ದಿ ಬುಧವಾರವೇ ಹರಿದಾಡುತ್ತಿತ್ತು. ಇದರ ಮಧ್ಯೆಯೇ ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಅರುಣ್‌ ಸಿಂಗ್‌, ಈ ಪ್ರಕರಣ ಬೆಳೆಸುವ ಅಗತ್ಯವಿಲ್ಲ. ಉಪ ಚುನಾವಣೆ ಗೆಲುವಿಗೆ ಗಮನ ಹರಿಸಬೇಕು ಎಂಬ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ.

ಈ ಬೆಳವಣಿಗೆಗೆ ಹಲವು ಕಾರಣಗಳಿವೆ: ಈಶ್ವರಪ್ಪನವರು ರಾಜಿನಾಮೆ ನೀಡುವ ಕುರಿತು ಯೋಚಿಸಲು ಹಲವು ಆಯಾಮಗಳಿವೆ ಅವುಗಳನ್ನು ತೆರೆದು ನೋಡುವುದಾದರೆ, ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿದ್ದಾರೆ ಎಂಬುದು ಕೇವಲ ಒಂದು ಕುಂಟು ನೆಪವಷ್ಟೇ. ಯಡಿಯೂರಪ್ಪನವರನ್ನು ಸಿಎಂ ಖುರ್ಚಿಯಿಂದ ಇಳಿಸುವ ಪ್ರಯತ್ನವೂ ಇದರ ಹಿಂದಿದೆ.

ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದರೆ ಯಡಿಯೂರಪ್ಪನವರ ಖುರ್ಚಿ ಅಲಗಾಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದನ್ನು ಮನಗಂಡಿರುವ ಯಡಿಯೂರಪ್ಪನವರ ವಿರೋಧಿ ಬಣ, ಈಶ್ವರಪ್ಪ ಹಾಗೂ ಸಂಘ ಪರಿವಾರಕ್ಕೆ ನಿಷ್ಠರಾಗಿರುವ ಇಬ್ಬರು ಸಚಿವರಿಂದ ರಾಜೀನಾಮೆ ಕೊಡಿಸಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷದಲ್ಲಿ ವೇದಿಕೆಯನ್ನು ಸಿದ್ದಪಡಿಸಲಾಗುತ್ತಿದೆ.

ಇದನ್ನೂ ಓದಿ : ಬಿಎಸ್​ವೈ ವಿರುದ್ಧ ಹೈಕಮಾಂಡ್​ಗೆ ದೂರು ನೀಡಿದ ಸಚಿವ ಈಶ್ವರಪ್ಪ

ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ನೇರವಾಗಿಯೇ ಹೇಳಿದ್ದರು. ಈಗ ಈಶ್ವರಪ್ಪ ಮುಖ್ಯಮಂತ್ರಿ ವಿರುದ್ಧವೇ ರಾಜ್ಯಪಾಲರು ಹಾಗೂ ಹೈಕಮಾಂಡ್‍ಗೆ ದೂರು ನೀಡಿದ್ದಾರೆ. ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಿನ್ನೆ ದೂರು ನೀಡಿರುವುದು ಸಾಕಷ್ಟು ಸಂಚಲನ ಉಂಟು ಮಾಡಿದೆ.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ನಿರಂತರ ಪ್ರಹಾರ ಮಾಡುತ್ತಾ ಬಂದರೂ ಹೈಕಮಾಂಡ್ ಯಾವುದೇ ಕ್ರಮ ಕೈಗೊಂಡಿಲ್ಲ. ನೆಪಮಾತ್ರಕ್ಕೆ ಹೈಕಮಾಂಡ್ ನಾಯಕರು ಹೇಳಿಕೆಗಳನ್ನು ನೀಡಿ ಸುಮ್ಮನಾಗಿದ್ದಾರೆ. ಆದರೆ ಈಶ್ವರಪ್ಪನವರ ಹಠ ಅಂತಿತದ್ದಲ್ಲ, ಸಂಘಪರಿವಾರಕ್ಕೆ ಸಾಕಷ್ಟು ಹತ್ತೀರವಾಗಿರುವ ವ್ಯಕ್ತಿ, ಸಂಘಪರಿವಾರದ ಸಂತೋಷ ಆಪ್ತರಲ್ಲಿ ಕೆ.ಎಸ್. ಈಶ್ವರಪ್ಪ ಒಬ್ಬರೂ. ಯಡಿಯೂರಪ್ಪನವರ ಮೇಲೆ ಸಂತೋಷ ರವರು ಆಗಾಗ ಗದಾಪ್ರಹಾರ ನಡೆಸಿದ್ದನ್ನು ನಾವೆಲ್ಲ ನೋಡಿದ್ದೇವೆ. ಯಡಿಯೂರಪ್ಪನವರ ವಿರೋಧಿಗಳಿಬ್ಬರೂ ಖುರ್ಚಿ ಉರುಳಿಸಲು ಕೈ ಕೈ ಸೇರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ಡಿನೋಟಿಫಿಕೇಶನ್ : ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ

ಯಡಿಯೂರಪ್ಪಗೆ ಹೈ ಟೆನ್ಷನ್ : ಮೂರು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತಮ್ಮ ಪಕ್ಷದ ಮಾಜಿ ಸಚಿವರ ಮೇಲೆ ಬಂದಿರುವ ಗಂಭೀರ ಆರೋಪ ಒಂದೆಡೆಯಾದರೆ, ಈಶ್ವರಪ್ಪ ಮುಖ್ಯಮಂತ್ರಿಗಳ ಮೇಲೆ ಆರೋಪ ಮತ್ತೊಂದೆಡೆ. ಅಲ್ಲದೆ ನ್ಯಾಯಾಲಯದಿಂದ ಹಲವು ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಆದೇಶ ನೀಡಿರುವುದು ಯಡಿಯೂರಪ್ಪನವರು ಸಂಕಷ್ಟಕ್ಕೆ ತಳ್ಳಿದೆ. ಈ ಘಟನೆಗಳು ಪಕ್ಷಕ್ಕೆ ಮುಜುಗರ ತರುತ್ತಿದ್ದು, ಖುರ್ಚಿ ಅಲಗಾಡಿಸುವಿಕೆಗೆ ಇವನ್ನೆ ಮುಂದೆ ಮಾಡುವ ಸಾಧ್ಯತೆಯೂ ಇದೆ.

ಹೀಗಾಗಿ ಪಂಚ ರಾಜ್ಯಗಳ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಫಲಿತಾಂಶ ಬರುವುದಕ್ಕೆ ಮುನ್ನವೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲು ಹೈಕಮಾಂಡ್, ಸಂಘಪರಿವಾರ, ಬಿಎಸ್‍ವೈ ವಿರೋಧಿ ಬಣ ವ್ಯವಸ್ಥಿತ ಜಾಲ ಹೆಣೆದಿದೆ ಎಂದು ಹೇಳಲಾಗುತ್ತಿದೆ.

17 ಶಾಸಕರನ್ನು ಬಿಜೆಪಿಗೆ ಕರೆತಂದು ಸರ್ಕಾರ ರಚನೆ ಮಾಡಿದ ಯಡಿಯೂರಪ್ಪನವರಿಗೆ ಆರಂಭದಿಂದಲೂ ಅಡಚಣೆಯಾಗುತ್ತಲೇ ಬಂದಿದೆ. ಇತ್ತೀಚೆಗೆ ಸಾಕಷ್ಟು ಮುಜುಗರದ ಘಟನೆಗಳು ನಡೆದಿವೆ. ಮುಂದಿನ ವಿಧಾನಸಭೆ ಚುನಾವಣೆಗೆ ಹೋಗಬೇಕಾದರೆ ನಾಯಕತ್ವ ಬದಲಾವಣೆ ಮಾಡಬೇಕೆಂಬುದು ಬಿಎಸ್‍ವೈ ವಿರೋಧಿ ಬಣ ಹಾಗೂ ಸಂಘ ಪರಿವಾರದ ಹಲವರ ಅಭಿಪ್ರಾಯವಾಗಿದೆ. ಏಕಾಏಕಿ ನಾಯಕತ್ವ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅದಕ್ಕಾಗಿ ತಕ್ಕ ವೇದಿಕೆಯನ್ನು ಸಿದ್ದ ಮಾಡಲಾಗುತ್ತಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ

Donate Janashakthi Media

Leave a Reply

Your email address will not be published. Required fields are marked *