ಜಾತಿ ತಾರತಮ್ಯ, ಮೀಸಲಾತಿ, ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳಿಗೆ ʻಕೇಂದ್ರ ಕಾರಣʼ : ಮುಂಬೈ ಐಐಟಿ ಎಸ್‍ಸಿ/ಎಸ್‌ಟಿ ಸೆಲ್‍ ಸಮೀಕ್ಷೆ

ಆತನ ಸಾವಿಗೆ ಕ್ಯಾಂಪಸ್‌ ನಲ್ಲಿರುವ ತಾರತಮ್ಯದ ವಾತಾವರಣ ಕಾರಣ ಎಂಬ ತೀವ್ರ ಆರೋಪದ ಹಿನ್ನೆಲೆಯಲ್ಲಿ ಐಐಟಿ, ಬಾಂಬೆ ನೇಮಿಸಿದ ತನಿಖಾ ಸಮಿತಿ ಆತನ ಆತ್ಮಹತ್ಯೆಗೆ ಜಾತಿ ತಾರತಮ್ಯ ಕಾರಣವಲ್ಲ, ಶೈಕ್ಷಣಿಕವಾಗಿ ತನ್ನ ಪರಿಸ್ಥಿತಿ ಹದಗೆಡುತ್ತಿದೆ ಎಂಬ ತೀವ್ರ ನಿರಾಸೆ ಕಾರಣವಾಗಿರಬಹುದು ಎಂದು ತನ್ನ ಮಧ್ಯಂತರ ವರದಿಯಲ್ಲಿ ಹೇಳಿತ್ತು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಬಾಂಬೆಯ ಪರಿಶಿಷ್ಟ ಜಾತಿ/ಬುಡಕಟ್ಟು  ವಿದ್ಯಾರ್ಥಿ ಕೋಷ್ಠ(ಸೆಲ್) ನಡೆಸಿದ ಸಮೀಕ್ಷೆಯ ಪ್ರಕಾರ, ಕ್ಯಾಂಪಸ್‌ನಲ್ಲಿ ಮೀಸಲಾತಿ ವರ್ಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಜಾತಿ ತಾರತಮ್ಯವು ʻʻಕೇಂದ್ರ ಕಾರಣʼʼ.

ಕಳೆದ ವರ್ಷ ಜೂನ್‌ನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ನಾಲ್ಕನೇ ಒಂದು ಭಾಗದಷ್ಟು ಪರಿಶಿಷ್ಟ ಜಾತಿ/ಬುಡಕಟ್ಟು ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರಲ್ಲಿ 7.5% ದಷ್ಟು ವಿದ್ಯಾರ್ಥಿಗಳು ಸ್ವಯಂ-ಹಾನಿಯ ಪ್ರವೃತ್ತಿಯನ್ನು ತೋರುವಷ್ಟು ತೀವ್ರವಾದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಆತ್ಮಹತ್ಯೆಯ ಪ್ರಯತ್ನವನ್ನೂ ಒಳಗೊಳ್ಳುತ್ತದೆ ಎಂಬುದನ್ನು ಗಮನಿಸಬಹುದು.

ಇದನ್ನು ಓದಿ: ಸಾಮಾಜಿಕ ಅಸ್ಪೃಶ್ಯತೆಗಿಂತಲೂ ಧಾರ್ಮಿಕ ಅಸ್ಪೃಶ್ಯತೆ ಬಹುದೊಡ್ಡ ಅಪಾಯಕಾರಿ

ಪರಿಶಿಷ್ಟ ಜಾತಿ/ಬುಡಕಟ್ಟು  ವಿದ್ಯಾರ್ಥಿ ಕೋಷ್ಠ, 2022 ರಲ್ಲಿ ಎರಡು ಸಮೀಕ್ಷೆಗಳನ್ನು ನಡೆಸಿತು. ಫೆಬ್ರವರಿಯಲ್ಲಿ ನಡೆದ ಮೊದಲ ಸಮೀಕ್ಷೆಯು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಕ್ಯಾಂಪಸ್ ಜೀವನದ ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಒಳನೋಟಗಳನ್ನು ಪಡೆಯಲು ದತ್ತಾಂಶಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದರೆ, ಜೂನ್‌ನಲ್ಲಿ ನಡೆಸಲಾದ ಎರಡನೇ ಸಮೀಕ್ಷೆಯು ಮೀಸಲು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸಿತ್ತು ಎಂದು ವರದಿಯಾಗಿದೆ (ನ್ಯೂಸ್‍ ಕ್ಲಿಕ್, ಮಾರ್ಚ್‍13).

ಈ ಸಮೀಕ್ಷೆಗಳು ಇತ್ತೀಚೆಗೆ, ಫೆಬ್ರವರಿ 12 ರಂದು ಈ ಉನ್ನತ ಶಿಕ್ಷಣ ಸಂಸ್ಥೆಯ 18 ವರ್ಷದ ವಯಸ್ಸಿನ ದಲಿತ ವಿದ್ಯಾರ್ಥಿ ದರ್ಶನ್‍ ಸೋಲಂಕಿಯ ಸಾವಿನ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. ಆತ ತನ್ನ ಸೆಮಿಸ್ಟರ್ ಪರೀಕ್ಷೆಗಳು ಮುಗಿದ ಮರುದಿನ ಐಐಟಿ ಬಾಂಬೆಯ ಹಾಸ್ಟೆಲ್ ಬ್ಲಾಕ್‌ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

ಆತನ ಸಾವಿಗೆ ಕ್ಯಾಂಪಸ್‌ ನಲ್ಲಿರುವ ತಾರತಮ್ಯದ ವಾತಾವರಣ ಕಾರಣ ಎಂಬ ತೀವ್ರ ಆರೋಪದ ಹಿನ್ನೆಲೆಯಲ್ಲಿ ಐಐಟಿ, ಬಾಂಬೆ ನೇಮಿಸಿದ ತನಿಖಾ ಸಮಿತಿ ಆತನ ಆತ್ಮಹತ್ಯೆಗೆ ಜಾತಿ ತಾರತಮ್ಯ ಕಾರಣವಲ್ಲ, ಶೈಕ್ಷಣಿಕವಾಗಿ ತನ್ನ ಪರಿಸ್ಥಿತಿ ಹದಗೆಡುತ್ತಿದೆ ಎಂಬ ತೀವ್ರ ನಿರಾಸೆ ಕಾರಣವಾಗಿರಬಹುದು ಎಂದು ತನ್ನ ಮಧ್ಯಂತರ ವರದಿಯಲ್ಲಿ ಹೇಳಿತ್ತು.

ಇದನ್ನು ಬಲವಾಗಿ ತಿರಸ್ಕರಿಸುವುದಾಗಿ ಹೇಳಿರುವ ಐಐಟಿ, ಬಾಂಬೆಯ ಅಂಬೇಡ್ಕರ್‍ ಪೆರಿಯಾರ್‍ ಫುಲೆ ಸ್ಟಡಿ ಸರ್ಕಲ್‍ ಇದು ʻʻಒಂದು ವೈಜ್ಞಾನಿಕ ಶಿಕ್ಷಣ ಸಂಸ್ಥೆಯ ಅತ್ಯಂತ ಅವೈಜ್ಞಾನಿಕ ದಸ್ತಾವೇಜುʼʼ ಎಂದು ಬಲವಾಗಿ ಟೀಕಿಸಿದೆ.

ಇದನ್ನು ಓದಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 4 ದಿನಗಳಲ್ಲಿ 3 ವಿದ್ಯಾರ್ಥಿಗಳ ಆತ್ಮಹತ್ಯೆ

ಮೇಲೆ ಹೇಳಿದ  ಸಮೀಕ್ಷೆಗಳು ಇದನ್ನು ಪುಷ್ಟೀಕರಿಸುವಂತೆ ಕಾಣುತ್ತದೆ. ಇವು ದರ್ಶನ್‍ ಸೋಲಂಕಿಯ ಆತ್ಮಹತ್ಯೆಯ ಎಷ್ಟೋ ಮೊದಲು ನಡೆಸಿದ ಸಮೀಕ್ಷೆಗಳು ಎನ್ನುವುದು ಕೂಡ ಗಮನಾರ್ಹ. ಈಗ ಆತನ ಸಾವಿನ ನಂತರ ಬೆಳಕಿಗೆ ಬಂದಿದೆ.

ಸುಮಾರು 2,000 ದಷ್ಟಿರುವರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಲ್ಲಿ 388 ವಿದ್ಯಾರ್ಥಿಗಳು ಫೆಬ್ರವರಿ ಸಮೀಕ್ಷೆಯಲ್ಲಿ ಮತ್ತು 134 ವಿದ್ಯಾರ್ಥಿಗಳು ಜೂನ್ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಜೂನ್ 2022 ರ ಸಮೀಕ್ಷೆಯ ಪ್ರಕಾರ ಈ ಕ್ಯಾಂಪಸ್‍ ನಲ್ಲಿ 23.5% ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸಹಾಯದ ಅಗತ್ಯವಿದೆ, ಆದರೆ ಈ ಸಮೀಕ್ಷೆಯಲ್ಲಿ ಭಾಗವಹಿಸಿದ 27.4ಶೇ.ದಷ್ಟು ವಿದ್ಯಾರ್ಥಿಗಳಿಗೆ ಸಂಸ್ಥೆಯು ಒದಗಿಸುವ ಮಾನಸಿಕ ಆರೋಗ್ಯ ಸೇವೆಗಳಲ್ಲಿ ನಂಬಿಕೆಯ ಕೊರತೆ ಕಂಡುಬಂದಿದೆ.

ತಮ್ಮ ಜಾತಿಯನ್ನು ಕಂಡುಹಿಡಿಯುವ ಉದ್ದೇಶದಿಂದ ಸಹ-ವಿದ್ಯಾರ್ಥಿಗಳು ತಮ್ಮ ಪ್ರವೇಶ ಪರೀಕ್ಷೆಯ ರ‍್ಯಾಂಕ್‌  ಕೇಳಿದ್ದಾರೆ ಎಂದು 37% ಕ್ಕೂ ಹೆಚ್ಚು ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. (ಸ್ಕ್ರಾಲ್‍.ಇನ್, ಮಾರ್ಚ್‍12)

ಸಮೀಕ್ಷೆಯಲ್ಲಿ ಭಾಗವಹಿಸಿದ 388 ವಿದ್ಯಾರ್ಥಿಗಳ ಪೈಕಿ 77 ವಿದ್ಯಾರ್ಥಿಗಳು ಕ್ಯಾಂಪಸ್‌ ನಲ್ಲಿ ತಾವು ಅಧ್ಯಾಪಕರು ಮತ್ತು ಸಹ-ವಿದ್ಯಾರ್ಥಿಗಳಿಂದ ತಾರತಮ್ಯಕ್ಕೆ ಒಳಗಾಗಿರುವುದಾಗಿ  ಹೇಳಿದರು.

ಇದನ್ನು ಓದಿ: ಭಾರತೀಯರಿಗೆ; ಜೀವನವೇ ಜಾತಿ, ಜಾತಿಯೇ ಜೀವನ

ಕ್ಯಾಂಪಸ್‌ ನಲ್ಲಿ ಮೇಲ್ವರ್ಗದ ವಿದ್ಯಾರ್ಥಿಗಳು ಜಾತಿವಾದಿ ಅಥವಾ ಮೀಸಲಾತಿ ವಿರೋಧಿ ತಮಾಷೆಗಳು, ವ್ಯಂಗ್ಯೋಕ್ತಿಗಳು, ಅಥವಾ ಹಾಡುಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ ಎಂದು 93 ವಿದ್ಯಾರ್ಥಿಗಳು ಹೇಳಿದ್ದಾರೆ. ಕನಿಷ್ಠ ಒಂಬತ್ತು ವಿದ್ಯಾರ್ಥಿಗಳು ಅಧ್ಯಾಪಕರಿಂದಲೇ ತಮ್ಮ ಜಾತಿಯ ಬಗ್ಗೆ ವ್ಯಂಗ್ಯೋಕ್ತಿಗಳನ್ನು ಎದುರಿಸಿದ್ದಾರೆ.

ಮೇಲ್ಜಾತಿಯ ಸಹಪಾಠಿಯೊಬ್ಬ ಕಂಪ್ಯೂಟರ್ ಅಪ್ಲಿಕೇಷನ್‌ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಆತನನ್ನು ʻʻಮೀಸಲು ಕೋಟಾʼʼ ಗೆ ಸೇರಿದವನು ಎಂದು ತಮಾಷೆ ಮಾಡಿದ ಘಟನೆಯ ಅನುಭವವನ್ನು ಒಬ್ಬ ವಿದ್ಯಾರ್ಥಿ ತಿಳಿಸಿದ. ವಿಷಯದ ಜ್ಞಾನದ ಕೊರತೆ ದಲಿತ /ಆದಿವಾಸಿ ವಿದ್ಯಾರ್ಥಿಗಳ ಲಕ್ಷಣ ಎಂದೇ ಮೇಲ್ಜಾತಿ ಸಹಪಾಠಿಗಳು ತಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ಹೇಳುತ್ತಾರೆ.

ಸಮೀಕ್ಷೆಗಳಲ್ಲಿ ಪ್ರತಿಕ್ರಿಯಿಸಿದ ಸುಮಾರು 26% ವಿದ್ಯಾರ್ಥಿಗಳು ತಮ್ಮ ಜಾತಿಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ತಮ್ಮ ಉಪನಾಮವನ್ನು ಕೇಳಿದ್ದಾರೆ ಎಂದು ಹೇಳಿದ್ದಾರೆ.

ಈ ಸಮೀಕ್ಷೆಗಳಲ್ಲದೆ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿ ಕೋಷ್ಠ ದಲಿತ ಮತ್ತು ಆದಿವಾಸಿ ಸಮುದಾಯದ ವಿದ್ಯಾರ್ಥಿಗಳು ತಮ್ಮ ಜಾತಿ ತಾರತಮ್ಯದ ಅನುಭವಗಳನ್ನು ಹಂಚಿಕೊಳ್ಳುವ ಬಹಿರಂಗ ಸಭೆಯನ್ನು ನಡೆಸಿತು. ಇದರಲ್ಲಿಯೂ ಸಹಪಾಠಿಗಳಿಂದ ಮತ್ತು ಅಧ್ಯಾಪಕರಿಂದ ತಾರತಮ್ಯದ ಹಲವು ಉದಾಹರಣೆಗಳು ಬೆಳಕಿಗೆ ಬಂದಿದ್ದವು.

ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಸೆಲ್ ನಡೆಸಿದ ಈ ಸಮೀಕ್ಷೆಗಳಿಗೆ ಪ್ರತಿಕ್ರಿಯಿಸುತ್ತ ಐಐಟಿ ಬಾಂಬೆ ತಮಗೆ ಇನ್ನೂ ಸಮೀಕ್ಷೆಯ ಫಲಿತಾಂಶಗಳು ತಲುಪಿಲ್ಲ, ಆದರೆ ಸಮೀಕ್ಷೆಗಳಲ್ಲಿ ಎದ್ದಿರುವ ಸಮಸ್ಯೆಗಳನ್ನು ಪರಿಹರಿಸಲು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿ ಕೋಷ್ಠವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *