ಸದನ – ಘನತೆ ಮತ್ತು ಸ್ಥಾನ – ಮಾನಗಳು

ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಸ್ಥಾನ ಮೌಲ್ಯದ ಅರಿವು ಇರಲೇ ಬೇಕು
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಶಾಸನ ಸಭೆಗಳನ್ನು ‘ಜನ ಪ್ರತಿನಿಧಿಗಳ ಸಭೆ’ ಎಂದೂ ಕರೆಯಲಾಗುತ್ತದೆ. ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಶಾಸಕರಾಗಿ, ಸಂಸದರಾಗಿ ಸಮಾಜದ ಒಳಿತಿಗಾಗಿ ಶ್ರಮಿಸುವ ಒಂದು ಭೂಮಿಕೆಯಾಗಿ ಈ ಪ್ರತಿನಿಧಿಗಳ ಸಭೆಗೆ ಸಾಂವಿಧಾನಿಕ ಮಾನ್ಯತೆ ಇರುವ ಹಾಗೆಯೇ ಸಾಮಾಜಿಕ ಘನತೆಯೂ ಇದೆ. ಪ್ರಮಾಣ ವಚನ ಸ್ವೀಕರಿಸುವ Ritualistic ಪ್ರಕ್ರಿಯೆಯನ್ನು ಬದಿಗಿಟ್ಟು ನೋಡಿದಾಗ, ಇದರೊಳಗೆ ಪ್ರವೇಶಿಸುವವರು ಪಕ್ಷಾತೀತವಾಗಿ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಅರಿತಿರುವುದು ಅತ್ಯವಶ್ಯ. ಇದು ಸಭಾಧ್ಯಕ್ಷರನ್ನೂ ಒಳಗೊಂಡಂತೆ ಎಲ್ಲ ಸದಸ್ಯರನ್ನೂ ಒಳಗೊಳ್ಳುವ ಅಲಿಖಿತ ನಿಯಮವಾಗಿರುತ್ತದೆ. 

– ನಾ ದಿವಾಕರ

ಈ ನಿಯಮಗಳಲ್ಲಿ ಪ್ರಧಾನವಾಗಿ ಗುರುತಿಸಬೇಕಿರುವುದು ಸದನದ ಘನತೆ ಮತ್ತು ಶಿಸ್ತು, ಸದಸ್ಯರ ಸಭ್ಯ ವರ್ತನೆ, ಭಾಷಾ ಸೌಜನ್ಯ, ಸಂಯಮ ಮತ್ತು ಸಾರ್ವಜನಿಕ ಉತ್ತರದಾಯಿತ್ವ. ಜನಪ್ರತಿನಿಧಿಗಳು ಸದನದ ಕಲಾಪದಲ್ಲಿ ಆಡುವ ಮಾತುಗಳು, ನೀಡುವ ಹೇಳಿಕೆಗಳು ಸಭಾಧ್ಯಕ್ಷರಿಗೆ ಒಪ್ಪಿಸುವುದು ಸಹಜವಾದರೂ, ಈ ಮಾತು ಅಥವಾ ವರ್ತನೆಗಾಗಿ ಇವರು ಉತ್ತರದಾಯಿಗಳಾಗಬೇಕಿರುವುದು ಮತದಾರರಿಗೆ, ಸಾರ್ವಜನಿಕರಿಗೆ. ಡಿಜಿಟಲ್‌ ತಂತ್ರಜ್ಞಾನದ ಯುಗದಲ್ಲಿ ಏನನ್ನೂ ಮುಚ್ಚಿಡಲಾಗದ ಅಥವಾ ಬಚ್ಚಿಡಲಾಗದ ರೀತಿಯಲ್ಲಿ ಸಂವಹನದ ಸಾಧನಗಳು 24 x 7 ಕ್ರಿಯಾಶೀಲವಾಗಿರುವುದರಿಂದ, ಸದನದಲ್ಲಿ ನಡೆಯುವ ಚಟುವಟಿಕೆಗಳೆಲ್ಲವೂ ಸಾರ್ವಜನಿಕರಿಗೆ ಕ್ಷಣ ಮಾತ್ರದಲ್ಲಿ ತಲುಪುತ್ತವೆ. ಘನತೆ

ಘನತೆ ಗೌರವ ಮತ್ತು ಪ್ರಜಾತಂತ್ರ

ಜನಪ್ರತಿನಿಧಿಗಳಲ್ಲಿ ಸಭ್ಯತೆ, ಭಾಷಾ ಸೌಜನ್ಯ, ಸಂಯಮ, ಉತ್ತರದಾಯಿತ್ವ ಇವೆಲ್ಲವೂ ಚರಿತ್ರೆಯ ಪುಟಗಳನ್ನು ಸೇರಿಹೋಗಿದ್ದರೂ, ಸದನದ ಘನತೆ ಮತ್ತು ಶಿಸ್ತು ವರ್ತಮಾನದಲ್ಲೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಕೆಲವು ಸಂದರ್ಭಗಳಲ್ಲಿ ಇದೂ ಸಹ ಉಲ್ಲಂಘನೆಗೊಳಗಾಗಿದ್ದು, ಜನಪ್ರತಿನಿಧಿಗಳು ಸದನದ ಕಲಾಪಗಳಲ್ಲೇ ಬೀದಿ ರಂಪಾಟ ಸೃಷ್ಟಿಸಿರುವ ಪ್ರಸಂಗಗಳು ಹೇರಳವಾಗಿ ದಾಖಲಾಗಿವೆ. ಆದರೆ ಸಾರ್ವಜನಿಕರು ಇದನ್ನು ಮರೆತು ಇದೇ ಅಶಿಸ್ತಿನ ಪಡೆಗಳನ್ನೇ ಮತ್ತೆಮತ್ತೆ ಚುನಾಯಿಸುತ್ತಿದ್ದಾರೆ. ‘ಸದನ ಘನತೆ’ ಮತ್ತಿತರ ನಿಬಂಧನೆಗಳು ಯಾವ ಪ್ರಣಾಳಿಕೆಯಲ್ಲೂ ಪ್ರಮಾಣೀಕರಣವಾಗುವುದಿಲ್ಲ ಅಥವಾ ಮತದಾರರ ಪೂರ್ವಷರತ್ತು ಆಗುವುದಿಲ್ಲ. ಪಕ್ಷಗಳಲ್ಲಿ ಟಿಕೆಟ್‌ ವಿತರಿಸಲು ಇದು ಮಾನದಂಡವೂ ಆಗುವುದಿಲ್ಲ. ಇದೊಂದು ಕಾಲ್ಪನಿಕ (Utopian) ಆಲೋಚನೆಯಷ್ಟೆ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ 6 ವರ್ಷ ಉಚ್ಚಾಟನೆ

ಆದರೆ ಸದನದೊಳಗೆ ಪ್ರವೇಶಿಸುವ ಚುನಾಯಿತ ಸದಸ್ಯರಿಗೆ ಈ ಪ್ರಜ್ಞೆ ಇರಬೇಕು. ಬಹುಮಟ್ಟಿಗೆ ಇಲ್ಲ ಎನ್ನುವುದು ವಾಸ್ತವ.  ಮಾತಿನ ಮೇಲೆ ನಿಗಾ ಇರುವುದಿಲ್ಲ, ನಾಲಿಗೆಯ ಮೇಲೆ ಹತೋಟಿ ಇರುವುದಿಲ್ಲ, ಸದನದ ಘನತೆಯ ಅರಿವು ಸುತರಾಂ ಇರುವುದಿಲ್ಲ. ಈ ಅಶಿಸ್ತಿನ ನಡುವೆಯೇ ಕರ್ನಾಟಕದ ಮತ್ತು ಭಾರತದ ಜನತೆ ತಮ್ಮ ಸಾಂವಿಧಾನಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಲೇ ಬಂದಿದ್ದಾರೆ. “ನಾವು ಉತ್ತರದಾಯಿಯಾಗಿರಬೇಕಿರುವುದು ಮತದಾರರಿಗೆ ಮತ್ತು ನಾಗರಿಕರಿಗೇ ಹೊರತು ಕೇವಲ ಸಭಾಧ್ಯಕ್ಷರಿಗೆ ಅಲ್ಲ ” ಎಂಬ ಕನಿಷ್ಠ ಪರಿವೆಯೇ ಇಲ್ಲದ ಒಂದು ರಾಜಕೀಯ ಸಂತತಿಯನ್ನು ನಾವು ಒಪ್ಪಿಕೊಂಡುಬಿಟ್ಟಿದ್ದೇವೆ. ಆದರೂ ಸದನದಲ್ಲಿ ನಡೆಯುವ ಕೆಲವು ಪ್ರಸಂಗಗಳು ಸಾರ್ವಜನಿಕ ನೈತಿಕತೆಗೆ ಘಾಸಿ ಉಂಟುಮಾಡುತ್ತಲೇ ಇರುತ್ತದೆ. ಕರ್ನಾಟಕದ ವಿಧಾನಮಂಡಲ ಮತ್ತೊಮ್ಮೆ ಇದಕ್ಕೆ ಸಾಕ್ಷಿಯಾಗಿದೆ. ಘನತೆ

ಅಂತರ್ಗತವಾದ ದುರ್ವರ್ತನೆ

ನಿನ್ನೆ (26-ಮಾರ್ಚ್‌ 2026) ನಡೆದ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಬಿಜೆಪಿ ಪಕ್ಷದ ಮುನಿರತ್ನ ಅವರ ನಡುವೆ ವಾಗ್ವಾದ ನಡೆದಿದೆ. ಬಿಸಿ ಬಿಸಿ ಚರ್ಚೆಯಲ್ಲಿ ನೀನು-ತಾನು ಎಂಬ ಏಕವಚನ ಪ್ರಯೋಗವೇನೂ ಕರ್ನಾಟಕದ ಸದನಕ್ಕೆ ಹೊಸತಲ್ಲ. ಏಕವಚನ ಪ್ರಯೋಗ ಊಳಿಗಮಾನ್ಯ ಅಹಮಿಕೆಯ ಒಂದು ಪಳೆಯುಳಿಕೆಯಾಗಿ ಪ್ರಜಾಪ್ರಭುತ್ವವನ್ನೂ ಆಕ್ರಮಿಸಿದೆ. ಚರ್ಚೆ, ವಾಗ್ವಾದದ ನಡುವೆ ಸವಾಲು-ಪ್ರತಿಸವಾಲುಗಳು ಬಂದಾಗ ಇಬ್ಬರೂ ನಾಯಕರು ಬಳಸಿರುವ ಭಾಷೆ ಅಥವಾ ಅಸಭ್ಯ ಪದವನ್ನು ಸಭಾಧ್ಯಕ್ಷ ಯು.ಟಿ. ಖಾದರ್‌ ಕಡತಗಳಿಂದ ತೆಗೆದಹಾಕಿರುವುದೇ ಅಲ್ಲದೆ, “ಯಾವುದೇ ಕಾರಣಕ್ಕೂ ಇದನ್ನು ವರದಿ ಮಾಡಬೇಡಿ, ಇದು ರಾಜ್ಯದ ಮರ್ಯಾದೆಯ ಪ್ರಶ್ನೆ  ” ಎಂದು ಮಾಧ್ಯಮದವರ ಮುಂದೆ ಅಂಗಲಾಚಿ ಬೇಡಿಕೊಂಡಿದ್ದಾರೆ. ಘನತೆ

ಕಡತಗಳಿಂದ ತೆಗೆದುಹಾಕುವುದು, ʼ ನಾನು ಆ ಪದವನ್ನು ಬಳಸಿಯೇ ಇಲ್ಲ ʼ ಎಂದು ಸಮರ್ಥಿಸಿಕೊಳ್ಳುವುದು, ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ವಿಷಯವನ್ನು ಮುಚ್ಚಿಹಾಕುವುದು ಇವೆಲ್ಲವೂ ಸಾಮಾನ್ಯವಾಗಿ ಕಾಣುವ ವಿದ್ಯಮಾನ. ಏನೇ ಆದರೂ ಈ ರೀತಿಯ ಅಸಭ್ಯತೆಗೆ ಜನಪ್ರತಿನಿಧಿಗಳ ಮೇಲೆ ದಂಡ ವಿಧಿಸಲಾಗುವುದಿಲ್ಲ, ಅವರಿಗೆ ಕನಿಷ್ಠ ಶಿಕ್ಷೆಯನ್ನೂ ನೀಡಲಾಗುವುದಿಲ್ಲ. ಮಹಿಳಾ ಸಚಿವೆಗೆ ಅಪಮಾನಕರ ಪದ ಬಳಸಿದ ವಿರೋಧ ಪಕ್ಷದ ನಾಯಕರು ಇಂದಿಗೂ ಸದನದಲ್ಲಿ ರಾರಾಜಿಸುತ್ತಲೇ ಇದ್ದಾರೆ. ಇಲ್ಲಿ ಪ್ರಶ್ನೆ ಎಂದರೆ ರಾಜ್ಯದ ಮರ್ಯಾದೆಗೆ ಭಂಗ ತರುವಂತಹ ಆ ಪದ ಯಾವುದು ?ಘನತೆ

ಸಭಾಧ್ಯಕ್ಷರು ಮಾಧ್ಯಮಗಳ ಮುಂದೆ ಅಂಗಲಾಚುವಷ್ಟು ಅಸಭ್ಯತೆ ಆ ಪದ ಬಳಕೆಯಲ್ಲಿ ಕಾಣುವುದೇ ಆದರೆ, ಅದು ಹೇಗೆ ಕ್ಷಮಾರ್ಹವಾಗುತ್ತದೆ ? ಆ ಪದ ಇನ್ನೆಷ್ಟು ಹೊಲಸಾಗಿರಬೇಕು ? ಇಂತಹ ಹೊಲಸು ಪದಗಳನ್ನು ಬಳಸುವವರು ಸದನವನ್ನು ಪ್ರತಿನಿಧಿಸುವ ನೈತಿಕ ಅರ್ಹತೆಯನ್ನಾದರೂ ಹೇಗೆ ಪಡೆಯಲು ಸಾಧ್ಯ ? ಮತದಾರರಿಗೆ, ಸಾರ್ವಜನಿಕರಿಗೆ ಇದನ್ನು ತಿಳಿದುಕೊಳ್ಳುವ ಸಾಂವಿಧಾನಿಕ ಹಕ್ಕು ಇದೆ ಅಲ್ಲವೇ ? ತಮ್ಮ ಸಂತತಿಯನ್ನು ಅಥವಾ ಅದರ So called ಗೌರವವನ್ನು ಕಾಪಾಡಿಕೊಳ್ಳಲು ಸದನದ ಘನತೆಯನ್ನೇ ಘಾಸಿಗೊಳಿಸುವಂತಹ ಅಸಭ್ಯ, ಅಶ್ಲೀಲ ಭಾಷೆಗೆ ಏಕೆ ಮಾನ್ಯತೆ ನೀಡಬೇಕು.

ಕಡತಗಳಿಂದ ತೆಗೆದುಹಾಕಿದ ಪದಗಳು, ಆ ಶಾಸಕರ ಮನಸ್ಸಿನಿಂದ, ಭಾವನೆಯಿಂದ ತೆಗೆದುಹಾಕಲಾಗುವುದೇ ? ಮತ್ತೊಂದು ಅನಿರ್ಬಂಧಿತ ವೇದಿಕೆಯಲ್ಲಿ ಅದನ್ನೇ ಬಳಸುತ್ತಾರೆ. ಇಲ್ಲಿ ಸರಿಪಡಿಸಬೇಕಿರುವುದು ಕಡತಗಳನ್ನಲ್ಲ ಅಥವಾ ಆ ಸಂದರ್ಭದ ಅನಾಹುತಗಳನ್ನಲ್ಲ. ದುರಸ್ತಿಯಾಗಬೇಕಿರುವುದು ನಮ್ಮ ಚುನಾಯಿತ ಪ್ರತಿನಿಧಿಗಳ ಮನೋಭಾವ, ಭಾಷಾ ಸೌಜನ್ಯ ಮತ್ತು ಅಸಭ್ಯ ವರ್ತನೆಗಳು. ಕರ್ನಾಟಕದ ವಿಧಾನಸಭೆಯಲ್ಲೇ ಇದೇನೂ ಮೊದಲ ಸಲ ಅಲ್ಲ. ಇಂತಹ ದುರ್ವರ್ತನೆಗಳು ದಾಖಲಾಗುತ್ತಲೇ ಇವೆ. ನಿನ್ನೆ ನಡೆದ ಸಂಭಾಷಣೆ ಈಗಾಗಲೇ ಸೋಷಿಯಲ್‌ ಮೀಡಿಯಾಗಳ ಮೂಲಕ ಹರಿದಾಡಿ ಆಗಿದೆ. ಪತ್ರಿಕೆಗಳಿಗೆ ತಲುಪಿಲ್ಲ. ಅಂದರೆ ಡಿಜಿಟಲ್‌ ಮಾಧ್ಯಮಗಳನ್ನೇ ಅವಲಂಬಿಸುವ ಯುವ ಜನಾಂಗಕ್ಕೆ ನಮ್ಮ ಪ್ರತಿನಿಧಿಗಳ ನೈತಿಕತೆಯ ದುರ್‌ ದರ್ಶನ ಆಗಿಯೇ ಇರುತ್ತದೆ ಅಲ್ಲವೇ ? ಅಲ್ಲಿ ಆಗಿರುವ ಅನಾಹುತ ಸರಿಪಡಿಸುವುದು ಹೇಗೆ ?

ರೂಪಾಂತರವಾಗಿರುವ ವಿಐಪಿ ಸಂಸ್ಕೃತಿ

ಈ ಅಸಹನೀಯ ಬೆಳವಣಿಗೆಗಳ ನಡುವೆಯೇ ಕರ್ನಾಟಕದ ಜನಪ್ರತಿನಿಧಿಗಳು ಅಪರೂಪವಾಗಿ ಪಕ್ಷಾತೀತ ಒಕ್ಕೊರಲ ಹಕ್ಕೊತ್ತಾಯವೊಂದನ್ನು ಮಂಡಿಸಿದ್ದಾರೆ. ಬಹುಶಃ ವೇತನ, ಭತ್ಯೆ ಇತರ ಸೌಲಭ್ಯಗಳ ಹೆಚ್ಚಳ ಆದಾಗ ಮಾತ್ರ ಈ ರೀತಿಯ ಏಕದನಿ ಕೇಳಿಬರುತ್ತದೆ. ಈ ಬಾರಿ ಇದು ವ್ಯಕ್ತವಾಗಿರುವುದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್‌ ಕ್ರಿಕೆಟ್‌ ಪಂದ್ಯದ ಟಿಕೆಟ್‌ಗಾಗಿ. ಮುಂಬರುವ ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಲು ಎಲ್ಲ ಶಾಸಕರಿಗೂ ಮುಂಗಡವಾಗಿ ಟಿಕೆಟ್‌ಗಳನ್ನು ವಿತರಿಸಲು ವಿಶೇಷ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್‌ ಶಾಸಕ ವಿಜಯಾನಂದ್‌ ಕಾಶಪ್ಪನವರ್‌ ಎಲ್ಲರ ಪರವಾಗಿ ಹಕ್ಕೊತ್ತಾಯ ಮಂಡಿಸಿದ್ದಾರೆ. ಇದನ್ನು ಇಡೀ ಸದನವೇ ಅನುಮೋದಿಸಿದೆ.

ಶಾಸಕರು ಸಾರ್ವಜನಿಕರ ಹಾಗೆ ಸಾಲಿನಲ್ಲಿ (ಕ್ಯೂ ) ನಿಂತು ಟಿಕೆಟ್‌ ಖರೀದಿಸುವ ಶ್ರಮವನ್ನು ತಪ್ಪಿಸಲು ಈ ವಿಶೇಷ ವ್ಯವಸ್ಥೆ ಮಾಡುವಂತೆ ಆಗ್ರಹಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಭಾಧ್ಯಕ್ಷರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲ್ಲ ಐಪಿಎಲ್‌ ಪಂದ್ಯಗಳಿಗೆ ಪ್ರತಿಯೊಬ್ಬ ಶಾಸಕರಿಗೆ ನಾಲ್ಕು ವಿಐಪಿ ಪಾಸ್‌ ಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ನಾವು ವಿಐಪಿಗಳು ಹಾಗಾಗಿ ಕ್ಯೂನಲ್ಲಿ ನಿಲ್ಲಲಾಗುವುದಿಲ್ಲ ಎಂಬ ಕಾಶಪ್ಪನವರ್‌ ಅವರ ಹೇಳಿಕೆ, ಚುನಾಯಿತ ಪ್ರತಿನಿಧಿಗಳನ್ನು ʼ ಅನ್ಯಲೋಕದ ಅತಿಮಾನುಷ ವ್ಯಕ್ತಿಗಳಂತೆ ʼ ಬಿಂಬಿಸುವ ಪ್ರಯತ್ನವಾಗಿದೆ.

ಶಾಸಕರಿಗೆ ಮುಂಗಡ ಟಿಕೆಟ್‌ ಕೊಡುವುದೇ ಅಲ್ಲದೆ, ಕ್ರೀಡಾಂಗಣದ ಒಳಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡುವುದಕ್ಕೂ ಆಗ್ರಹಿಸಲಾಗಿದೆ. “ ಕಳೆದ ಬಾರಿ ನಾವು ಸಾಮಾನ್ಯ ಜನರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ನೋಡಿದೆವು ಇದನ್ನು ಒಪ್ಪಲಾಗುವುದಿಲ್ಲ, ನಮಗೂ ಸ್ವಲ್ಪ ಗೌರವ ಇರಬೇಕು ” ಎಂಬ ಆಗ್ರಹ ಊಳಿಗಮಾನ್ಯ ದೊರೆಗಳ, ರಾಜಪ್ರಭುತ್ವದ ಪ್ರತಿನಿಧಿಗಳ ಧ್ವನಿಯನ್ನು ಪ್ರತಿಧ್ವನಿಸುತ್ತದೆ. ಸರ್ಕಾರದಿಂದ ಸಕಲ ಸೌಲಭ್ಯಗಳನ್ನೂ ಪಡೆಯುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಲಿ (KSCA) ಶಾಸಕರನ್ನು ಗೌರವಿಸಬೇಕು ಎಂಬ ಬೇಡಿಕೆಯೇ ಪಾಳೆಗಾರಿಕೆಯ ಸಂಕೇತವಾಗಿ ಕಾಣುತ್ತದೆ.  ಚುನಾವಣೆ ಬಂದಾಗ ಇದೇ ಸಾಮಾನ್ಯ ಜನತೆಯ ಮನೆಮನೆಗೆ ಹೋಗಿ ಮತ ಯಾಚನೆ ಮಾಡುವಾಗ ಈ ಪ್ರಜ್ಞೆ ಇರುವುದಿಲ್ಲವೇ ?

ಪ್ರಾಚೀನ ಮನಸ್ಥಿತಿಯ ದ್ಯೋತಕ

ಇದನ್ನೇ ಮನೋಭಾವ ಅಥವಾ ಮನಸ್ಥಿತಿ ಎನ್ನುವುದು. ಕ್ರಿಕೆಟ್‌ ಚೆಂಡಿನ ತೂಕ, ಎರಡು ಬದಿಯ ವಿಕೆಟ್‌ಗಳ ನಡುವೆ ಇರುವ ಅಂತರವನ್ನೂ ಅರಿಯದ, ಜೀವನದಲ್ಲಿ ಒಮ್ಮೆಯೂ ಕ್ರಿಕೆಟ್‌ ಬ್ಯಾಟ್‌ ಹಿಡಿಯದ ವ್ಯಕ್ತಿಗಳು ಬಿಸಿಸಿಐ, ಐಸಿಸಿ ಅಧ್ಯಕ್ಷರಾಗಿರುವ ಹೊತ್ತಿನಲ್ಲಿ, ನಮ್ಮ ಚುನಾಯಿತ ಪ್ರತಿನಿಧಿಗಳು ಪಂದ್ಯ ವೀಕ್ಷಿಸಲು ಈ ವಿಶೇಷ ಬೇಡಿಕೆಗಳನ್ನು ಸಲ್ಲಿಸುವುದು ವಿಶೇಷ ಎನಿಸುವುದಿಲ್ಲ. ಎಷ್ಟು ಶಾಸಕರಿಗೆ ಕ್ರಿಕೆಟ್‌ ಕುರಿತ ಕನಿಷ್ಠ ಅರಿವು ಅಥವಾ ಆಡಿರುವ ಅನುಭವ ಇದೆ ಎನ್ನುವುದೂ ಯೋಚಿಸಬೇಕಾದ ವಿಚಾರ. ಈಗಾಗಲೇ ಸಚಿವರು, ಮುಖ್ಯಮಂತ್ರಿಗಳು ರಸ್ತೆಯಲ್ಲಿ ಹಾದುಹೋದರೆ, ಒಂದು ನರಪಿಳ್ಳೆ ಅಲ್ಲಿ ಕಾಣಿಸದಂತೆ ಏರ್ಪಾಟು ಮಾಡುವ ರಾಜಪ್ರಭುತ್ವದ ಲಕ್ಷಣಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಈಗ ಇದೇ ವಿಐಪಿ ಸಂಸ್ಕೃತಿ ಕ್ರೀಡಾಂಗಣಗಳನ್ನೂ ಆಕ್ರಮಿಸುವ ಸೂಚನೆಗಳನ್ನು ಕರ್ನಾಟಕ ವಿಧಾನ ಸಭೆ ನೀಡಿದೆ.

ವಿಐಪಿ ಸಂಸ್ಕೃತಿ ಬ್ರಿಟೀಷರು ಬಿಟ್ಟುಹೋದ ಬಳುವಳಿ ಎಂಬ ಪ್ರತೀತಿ/ನಂಬಿಕೆ ಇದೆ. ಆದರೆ ಭಾರತೀಯ ಸಮಾಜದಲ್ಲಿ ಇದು ಶತಮಾನಗಳಿಂದಲೂ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಯಜಮಾನ್‌ ಪರಂಪರೆ ಜೀವಂತವಾಗಿದೆ. ಬ್ರಾಹ್ಮಣಶಾಹಿಯ ಜಾತಿ ಶ್ರೇಷ್ಠತೆ, ರಾಜಪ್ರಭುತ್ವದ ರಾಜಶಾಹಿ ಸಂಸ್ಕೃತಿ, ಊರ ಗೌಡರು, ಪಟೇಲ್-ಶಾನುಭೋಗರು ಇತ್ಯಾದಿ ಹುದ್ದೆಗಳಿಗೆ ಸಲ್ಲುತ್ತಿದ್ದ ಗೌರವ ಇವೆಲ್ಲವೂ ವಿಐಪಿ ಸಂಸ್ಕೃತಿಯ ವಿವಿಧ ಆಯಾಮಗಳು. ಊರ ಯಜಮಾನರ ಮುಂದೆ, ಮೇಲ್ಜಾತಿಯವರ ಮುಂದೆ ಕೆಳಸ್ತರದ ಜನರು ಕೈಕಟ್ಟಿ ತಲೆಬಾಗಿ ನಿಲ್ಲುವ ಒಂದು ಪರಂಪರೆಯನ್ನೇ ನಾವು ಬೆಳೆಸಿದ್ದೇವೆ. ಇಲ್ಲಿ ಸಮಾಜವನ್ನು ವಿಂಗಡಿಸಿ, ಶ್ರೇಷ್ಠ-ಕನಿಷ್ಠ ಅಥವಾ ಮೇಲು-ಕೀಳುಗಳ ಪ್ರತ್ಯೇಕತೆಯನ್ನು ಸೃಷ್ಟಿಸುವ ಒಂದು ವಿಧಾನ ಇದೆ.

ಬಹುಶಃ ಈ ಪ್ರಾಚೀನ/ಮಧ್ಯಕಾಲೀನ ವಿಧಾನವೇ ಕರ್ನಾಟಕದ ʼವಿಧಾನಸಭೆʼಯಲ್ಲೂ ಧ್ವನಿಸಿದೆ. ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಗ್ಯಾಲರಿಯಲ್ಲಿ ʼಸಾಮಾನ್ಯರೊಡನೆʼ ಕೂರಲು ʼಜನಪ್ರತಿನಿಧಿಗಳುʼ ಹಿಂಜರಿಯುತ್ತಿದ್ದಾರೆ. ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಸಲು ಅವರಿಗೆ ಮುಜುಗರವಾಗುತ್ತಿದೆ. ಎಂತಹ ವಿಪರ್ಯಾಸ ಅಲ್ಲವೇ ? ಈ ಶಾಸಕರ ಸಂತತಿಯನ್ನು ನಾವು “ಸಂಸದೀಯ ಪ್ರಜಾಪ್ರಭುತ್ವದ ಪ್ರತಿನಿಧಿಗಳು” ಎಂದು ಭಾವಿಸುತ್ತೇವೆ. ಇವರ ಅಸಭ್ಯತೆ ಮತ್ತು ಸೌಜನ್ಯರಹಿತ ಭಾಷೆಯನ್ನು ಸಹಿಸಿಕೊಳ್ಳುವುದೇ ಅಲ್ಲದೆ, ʼ ಅನ್ಯಲೋಕದ ʼ ವಿಶೇಷ ಜೀವಿಗಳಂತೆ ನೋಡಬೇಕು ಎಂದು ಆಜ್ಞಾಪಿಸಲಾಗುತ್ತಿದೆ. ಇದರ ವಿರುದ್ಧ ಒಂದೇ ಒಂದು ವಿರೋಧದ ರಾಜಕೀಯ ದನಿಯೂ ದಾಖಲಾಗದಿರುವುದು ವಸ್ತುಸ್ಥಿತಿಯನ್ನು ಸಂಕೇತಿಸುತ್ತದೆ.

ಆದರೂ ನಾವು “ಸಮಾಜವಾದಿ ತತ್ವಗಳನ್ನಾಧರಿಸಿದ ಸಾಂವಿಧಾನಿಕ ಪ್ರಜಾಸತ್ತಾತ್ಮಕ ಆಳ್ವಿಕೆಯಲ್ಲಿದ್ದೇವೆ ” ಎಂದು ಬೆನ್ನುತಟ್ಟಿಕೊಳ್ಳಬೇಕಿದೆ. ಮೇರಾ ಭಾರತ್‌ ಮಹಾನ್.‌

ಇದನ್ನೂ ನೋಡಿ: ಬಜೆಟ್ ನಿರ್ಲಕ್ಷ್ಯ: ಅಂಗನವಾಡಿ ನೌಕರರ ಅನಿರ್ದಿಷ್ಟ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *