ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ 700 ಕೋಟಿ ರೂ ಖಾಸಗಿ ಆಸ್ಪತ್ರೆಗೆ

ಬೆಂಗಳೂರು : ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ 40 ಲಕ್ಷ ಕೋವಿಡ್ ಲಸಿಕೆಗಳನ್ನು ನೀಡುವ ನೆಪದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ರೂಪಾಯಿಗಳನ್ನು ಧಾರೆ ಎರೆಯಲು ಹೊರಟಿದ್ದಾರೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕೈಗೊಂಡಿರುವ ಈ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ) ಸಿಐಟಿಯು ತೀವ್ರವಾಗಿ ಖಂಡಿಸಿದೆ. ಕೂಡಲೇ ಈ ತೀರ್ಮಾನವನ್ನು ಹಿಪಡೆಯಬೇಕೆಂದು ಆಗ್ರಹಿಸಿದೆ.

ಕಾರ್ಮಿಕ ಸಚಿವರು ಖಾಸಗಿ ಆಸ್ಪತ್ರೆಗಳ ಮಾಲಿಕರೊಂದಿಗೆ ಸಭೆ ನಡೆಸಿ ಪ್ರತಿ ಲಸಿಕೆಗೆ 780 ರೂಪಾಯಿ ದರದಲ್ಲಿ ರಾಜ್ಯದ 30 ಲಕ್ಷ ನೋಂದಾಯಿತ ಕಾರ್ಮಿಕರಿಗೆ ಹಾಗೂ 10 ಲಕ್ಷ ವಲಸೆ ಕಾರ್ಮಿಕರಿಗೆ ಲಸಿಕೆ ನೀಡುವ ತೀರ್ಮಾನ ಕೈಗೊಂಡಿರುವುದು ಮಂಡಳಿಯ ನಿಧಿಯನ್ನು ಖಾಲಿ ಮಾಡುವ ಹುನ್ನಾರವಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ನಿಧಿಯನ್ನು ಕಾರ್ಮಿಕ ಸಚಿವರು ಹಾಗೂ ಮಂಡಳಿ ಅಧಿಕಾರಿಗಳ ಕೂಟವು ದುರ್ಬಳಕೆ ಮಾಡಿಕೊಳ್ಳಲು ಇಂತಹ ಪ್ರಯತ್ನ ನಡೆಸಿದೆ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ದೇಶಾದ್ಯಾಂತ ಎಲ್ಲ ನಾಗರಿಕರಿಗೂ ಉಚಿತವಾಗಿ ಕೋವಿಡ್ ಲಸಿಕೆಗಳನ್ನು ವಿತರಿಸುತ್ತಿದೆ. ಕರ್ನಾಟಕದಲ್ಲೂ ನಿರ್ಮಾಣ ವಲಯದ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ವಲಸೆ ಕಾರ್ಮಿಕರು ಮೊದಲನೆ ಹಾಗೂ ಎರಡನೇ ಡೋಸ್‌ಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಹೀಗಿದ್ದೂ ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಖರೀದಿಸುವ ಅಗತ್ಯವಾದರೂ ಏನಿದೆ ಎಂದು ಕೆ. ಮಹಾಂತೇಶ್ ಪ್ರಶ್ನಿಸಿದ್ದಾರೆ.

ಈಗಾಗಲೇ ರೇಷನ್ ಕಿಟ್, ಟೂಲ್ ಕಿಟ್, ಬೂಸ್ಟಪ್ ಕಿಟ್ ಹಾಗೂ ಸುರಕ್ಷಾ ಕಿಟ್, ಹೊಸ ತಂತ್ರಾಂಶ ಅಳವಡಿಕೆ ಹಾಗೂ ಕಂಪ್ಯೂಟರ್ ಮತ್ತು ಟಿವಿಗಳ ಖರೀದಿಗಳಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ. ಅಲ್ಲದೆ 2021- 22 ಸಾಲಿನಲ್ಲಿ 2688.90 ಕೋಟಿ ಮಂಡಳಿ ಹಣವನ್ನು ವಿವಿಧ ಬಾಬ್ತುಗಳಿಗೆ ಖರ್ಚು ಮಾಡಲು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಕೆಪಿಟಿಟಿ ಕಾಯ್ದೆ 1999 ನ್ನು ಕಾರ್ಮಿಕ ಸಚಿವರು ಮತ್ತು ಮಂಡಳಿ ಹಿರಿಯ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ನಿಧಿಯನ್ನು ಮನಬಂದಂತೆ ದುರುಪಯೋಗ ಮಾಡುತ್ತಿದ್ದಾರೆ ಕಟ್ಟಡ ಕಾರ್ಮಿಕರ ಸಂಘ (ಸಿಐಟಿಯು) ಆರೋಪಿಸಿದೆ.

ಕೊರೊನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಅನ್ನ, ಆಹಾರ, ಆರೋಗ್ಯ, ಶಿಕ್ಷಣ ಮತ್ತು ಬದುಕಿನ ಭದ್ರತೆ ಒದಗಿಸುವುದು ಕೇಂದ್ರ ಮತ್ತು ರಾಜ್ಯಗಳ ಕೆಲಸವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ರಾಜ್ಯ ಸರ್ಕಾರ ಇದಕ್ಕಾಗಿ ಖಜಾನೆಯಿಂದ ಖರ್ಚು ಮಾಡುವ ಬದಲು, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಿಸುತ್ತಿದೆ.

ಇದೇ ಅವಕಾಶವನ್ನು ಬಳಸಿಕೊಂಡು ಕಾರ್ಮಿಕ ಸಚಿವರು ಹಾಗೂ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೋಟ್ಯಾಂತರ ಹಣ ಲೂಟಿ ಹೊಡೆಯುತ್ತಿದ್ದಾರೆ.

ಇದು ಬಡ ಕಾರ್ಮಿಕರ ಹೆಸರಲ್ಲಿ ನಡೆಸುತ್ತಿರುವ ಹಗಲು ದರೋಡೆಯಾಗಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ) ಸಿಐಟಿಯು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *