ಜನಪರ ನೀತಿಗಳಿಗಾಗಿ ಆಗ್ರಹಿಸಿ ಕಾರ್ಮಿಕರ ಅಖಿಲ ಭಾರತ ಸಮ್ಮೇಳನ

ಬೆಂಗಳೂರು : ಸಿಐಟಿಯು 17 ನೇ ಅಖಿಲ ಭಾರತ ಸಮ್ಮೇಳನ ಜನವರಿ 18 ರಿಂದ 22 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ತಿಳಿಸಿದರು.

ಇಂದು ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಐಟಿಯು ಸಂಘಟನೆಯ ವಿವಿಧ ವಿಭಾಗದ ಕಾರ್ಮಿಕರನ್ನು ಪ್ರತಿನಿಧಿಸಿ ಸುಮಾರು 1500 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ. ವಿಶೇಷವಾಗಿ ‘ವರ್ಲ್ಡ್ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ಸ್’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಂಬಿಸ್ ಕಿರ್ತಿಸಿಸ್  ಸಮ್ಮೇಳನಕ್ಕೆ ಶುಭಕೋರಿ ಮಾತನಾಡುವರು. ಜನವರಿ ೧೯ ರಂದು ಕ್ಯೂಬಾ ಕ್ರಾಂತಿಯ ನಾಯಕ ಚೆ ಗೆವಾರ ಅವರ ಮಗಳು ಆಲಿಡಾ ಗೆವಾರ ಭಾಗವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ನಾಯಕರು ಭಾಗವಹಿಸಿ ಶುಭಕೋರಿ ಮಾತನಾಡುವರು. ಇವರಿಗೆ ನಾಗರಿಕ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 22 ರಂದು ಮಧ್ಯಾಹ್ನ 1 ಗಂಟೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಮಿಕರ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಫ್ಯಾಸಿಸ್ಟ್ ಮಾದರಿಯ ಜನ ವಿರೋಧಿ ಸರ್ಕಾರದ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಭವಿಷ್ಯದ ಹೋರಾಟಗಳ ರೂಪುರೇಷೆ ಸಿದ್ಧತೆಗೆ ವಿಶೇಷ ಚರ್ಚೆ ನಡೆಯಲಿದ್ದು, ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿಬಹುಭಾಷಾ ಕವಿಗೋಷ್ಠಿ ಕುರಿತ ಸುದ್ದಿಯು ತಪ್ಪು ಶೀರ್ಷಿಕೆಯಡಿ ಪ್ರಕಟ; ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮೀ ಮಾತನಾಡಿ, ಸಮ್ಮೇಳನದಲ್ಲಿ ವಿಶೇಷವಾಗಿ ಜನವರಿ 21 ರಂದು ಒಟ್ಟು ಪ್ರತಿನಿಧಿಗಳನ್ನು ನಾಲ್ಕು ವಿಶೇಷ ಆಯೋಗಗಳಾಗಿ ವಿಂಗಡಿಸಿ ಇಡೀ ದಿನ ಚರ್ಚೆ ನಡೆಸಲಿವೆ. 1. ಆಧುನಿಕಾ ತಯಾರಿಕಾ ವಲಯದ ಕಾರ್ಮಿಕರನ್ನು ಸಂಘಟಿಸುವುದರ ಮಹತ್ವ ಮತ್ತು ಸವಾಲು 2. ವಲಸೆ ಕಾರ್ಮಿಕರ ಪರಿಸ್ಥಿತಿ, ಸಂಘಟನೆ ಸವಾಲು, 3. ಬದಲಾಗುತ್ತಿರುವ ಉದ್ಯೋಗದ ಸ್ವರೂಪಗಳು, 4. ಕಾರ್ಮಿಕ ವರ್ಗದ ಐಕ್ಯತೆ ಮತ್ತು ಕೋಮುವಾದದ ಅಪಾಯಗಳು.
ಸಮ್ಮೇಳನದ ಆವರಣದ ಮಾಧ್ಯಮ ಕೇಂದ್ರದಲ್ಲಿ ಪ್ರತಿ ದಿನ ಮಾಧ್ಯಮಗೋಷ್ಠಿ ಇರಲಿದ್ದು, ಸಮ್ಮೇಳನದ ಕಲಾಪಗಳ ಬಗ್ಗೆ ಮಾಧ್ಯಮಗಳಿಗೆ ವರದಿ ಮಾಡಲಾಗುವುದು.

ಈ ಮಹಾ ಸಮ್ಮೇಳನದ ಪೂರ್ವದಲ್ಲಿ ರಾಜ್ಯದಲ್ಲಿರುವ ಸಿಐಟಿಯು ನ 2 ಲಕ್ಷದ 60 ಸದಸ್ಯರು ಸಮ್ಮೇಳನದ ಉದ್ದೇಶವನ್ನು ಕರ್ನಾಟಕದ ಮನೆ-ಮನೆಗೆ ತಲುಪಿಸಲು ಶ್ರಮಿಸುತ್ತಿದ್ದಾರೆ. ಸಮ್ಮೇಳನಕ್ಕೆ ತಗುಲುವ ವೆಚ್ಚ ಭರಿಸಲು ಸದಸ್ಯರು ತಮ್ಮ ಒಂದು ದಿನ ವೇತನ / ಕೂಲಿ ನೀಡುವ ಜತೆಗೆ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ನೀಡುತ್ತಿದ್ದಾರೆ. ಸಾಂಸ್ಕೃತಿಕ ಜಾಥಾಗಳು ರಾಜ್ಯಾದ್ಯಂತ ಸಂಚರಿಸಿ, ಹಾಡು, ಬೀದಿ ನಾಟಕದ ಮೂಲಕ ಸಮ್ಮೇಳನದ ಉದ್ದೇಶವನ್ನು ಸಾರುತ್ತಿವೆ. ಇದು ಮಾತ್ರವಲ್ಲದೇ ಸಮ್ಮೇಳನದ ಅಂಗವಾಗಿ ರಾಜ್ಯದೆಲ್ಲೆಡೆ ವಿಚಾರ ಸಂಕಿರಣ, ಕ್ರೀಡಾ/ಸಾಂಸ್ಕೃತಿಕ ಸ್ಪರ್ಧೆ, ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನು ಓದಿಸಿಐಟಿಯು ಅಖಿಲ ಭಾರತ ಸಮ್ಮೇಳನ ಅಂಗವಾಗಿ ಕಲಾ ಜಾಥಾ, ಬಹುಭಾಷಾ ಕವಿಗೋಷ್ಟಿ, ಚಿತ್ರಕಲೆ ರಚನೆ-ಕಿರುಚಿತ್ರ ಸ್ಪರ್ಧೆ

ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್,  ಮಾತನಾಡಿ, ಕಾರ್ಪೋರೇಟ್ ಬಂಡವಾದಾರರ ಪರವಾದ ಉದಾರವಾದಿ ನೀತಿಗಳು ದುಡಿಯುವ ಜನರನ್ನು ಅತ್ಯಂತ ನಿಕೃಷ್ಟ ಸ್ಥಿತಿಗೆ ತಳ್ಳಿವೆ. ಉದ್ಯೋಗದಿಂದ ಹೊರದೂಡಲ್ಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನಿರುದ್ಯೋಗವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ, ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿ ಸರ್ಕಾರ ಕಾರ್ಪೊರೇಟ್ ಧಣಿಗಳ ತುಷ್ಟೀಕರಣಕ್ಕಾಗಿ 29 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ನಾಲ್ಕು ಸಂಹಿತೆಗಳನ್ನಾಗಿಸಿದೆ. ಈ ಸಂಹಿತೆಗಳು  ಕಾರ್ಮಿಕರಿಗೆ ಇದುವರೆಗೂ ಇದ್ದ ಹಕ್ಕುಗಳನ್ನು ನುಂಗಿಹಾಕಿವೆ. ಈ ಸಂಹಿತೆಗಳು ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನು ಕಸಿದುಕೊಂಡು, ಶೋಷಣೆಯನ್ನು ತೀವ್ರಗೊಳಿಸಿವೆ. ಖಾಯಂ ಕೆಲಸಗಳಿಗೆ ತಿಲಾಂಜಲಿ ಇಡಲಾಗಿದೆ. ಬದಲಿಗೆ ನಿಗದಿತ ಅವಧಿ, ಓಜೆಟಿ, ನೀಮ್, ನೆಟಾಫ್ ಕಾರ್ಮಿಕರ ನೇಮಕಕ್ಕೆ ಕಾನೂನಿನ ರಕ್ಷಣೆ ಒದಗಿಸಲಾಗಿದೆ. ಕನಿಷ್ಟವೂ ಅಲ್ಲದ ಕೂಲಿ ಕೊಟ್ಟು ಗರಿಷ್ಟ ದುಡಿಮೆಗೆ ಹಚ್ಚಿ, ಲೂಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಣಗೊಳ್ಳುತ್ತಿದೆ. ಪರಿಣಾಮ ಬಡತನ, ಹಸಿವು, ಅನಾರೋಗ್ಯ, ಅಪೌಷ್ಠಿಕತೆ ಹೆಚ್ಚುತ್ತಿದೆ. ಉಳ್ಳವರು ಮತ್ತು ಇಲ್ಲದವರ ನಡುವೆ ಭಾರಿ ಕಂದಕ ಸೃಷ್ಟಿಯಾಗುತ್ತಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಕೊರೊನಾ ನಿಭಾಯಿಸುವಲ್ಲಿ ಸರ್ಕಾರ ವಿಫಲಾವಾಗಿದ್ದರ ಪರಿಣಾಮ, ಕೊಟ್ಯಾಂತರ ಜನ ಸರಿಯಾದ ಚಿಕಿತ್ಸೆ ಸಿಗದೇ ಹುಳಗಳಂತೆ ಅಸುನೀಗಿದ ದಾರುಣ ಸನ್ನಿವೇಶವನ್ನು ದೇಶ – ಜಗತ್ತು ಕಂಡಿದೆ. ಹೀಗಿದ್ದೂ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಾರ್ಪೊರೇಟ್‌ಗಳ ಕೈಗೆ ಒಪ್ಪಿಸಲು ಸರ್ಕಾರ ಶತ ಪ್ರಯತ್ನ ನಡೆಸಿದೆ.
ಕೇಂದ್ರ – ರಾಜ್ಯ ಸರ್ಕಾರಗಳ ಬೆಲೆಏರಿಕೆ ನೀತಿಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿವೆ. ದಿನಬಳಕೆಯ ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳು, ತೈಲ ಬೆಲೆಗಳು, ಆರೋಗ್ಯ, ಶಿಕ್ಷಣ, ಸೇವೆ ಎಲ್ಲವೂ ದುಬಾರಿಯಾಗಿ ಜನರನ್ನು ಹೈರಾಣಾಗಿಸಿವೆ. ಸರ್ಕಾರಗಳ ರೈತಾಪಿ ಕೃಷಿ ವಿರೋಧಿ ನೀತಿಗಳಿಂದಾಗಿ ಅನ್ನದಾತನ ಆತ್ಮಹತ್ಯೆಗಳು ತೀವ್ರಗೊಂಡಿವೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತ ಮಾಡಲಾಗಿದೆ. ಎಲ್ಲ ಸೇವೆಗಳನ್ನು ಪೇ ಅಂಡ್ ಯೂಸ್ ಮಾಡಲಾಗಿದೆ. ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಅಪಮೌಲ್ಯಗೊಂಡು ಹಣದುಬ್ಬರ ಏರುತ್ತಲೇ, ಬೆಲೆಗಳು ಜನರನ್ನು ಸುಡುತ್ತಿವೆ. ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಹಾಗೂ ರೈತಾಪಿ ಸಂಘಟನೆಗಳು ನಿರಂತರ ಹೋರಾಟ ನಡೆಸಿವೆ. ಸಂಘಟನೆ ಕರೆಕೊಟ್ಟ ಅಖಿಲ ಭಾರತ ಮುಷ್ಕರಗಳಲ್ಲಿ ಕೊಟ್ಯಾಂತರ ಕಾರ್ಮಿಕರು ಭಾಗವಹಿಸಿ ಪ್ರತಿರೋಧ ಒಡ್ಡಿದ್ದಾರೆ. ಆದರೆ ಸರ್ಕಾರ ಹೋರಾಟನಿರತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನಿಸಿತು. ಜತೆಗೆ ದುಡಿಯುವ ಜನರ ಐಕ್ಯತೆಯನ್ನು ಮುರಿಯಲು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತಂದು ಜನರ ಬದುಕಿನ ಪ್ರಶ್ನೆಗಳನ್ನು ಬದಿಗೆ ಸರಿಸುವ ಫ್ಯಾಸಿಸ್ಟ್ ಮಾದರಿಯನ್ನು ಅನುಸರಿಸುತ್ತಾ ಬರಲಾಗಿದೆ. ‘ರಸ್ತೆ, ಚರಂಡಿ ವಿಚಾರ ಬಿಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ’ ಎಂದು ಆಡಳಿತರೂಢ ಪಕ್ಷದ ನಾಯಕರು ಆಡುತ್ತಿರುವ ಮಾತುಗಳು ಇದನ್ನು ಪುಷ್ಟೀಕರಿಸಿದೆ ಎಂದರು.

ಇದೇ ವೇಳೆ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌ಎಸ್‌ ಸುನಂದಾ, ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಇದ್ದರು.

 

Donate Janashakthi Media

Leave a Reply

Your email address will not be published. Required fields are marked *