ಬಿಎಂಟಿಸಿಯಲ್ಲಿ ಭ್ರಷ್ಟಾಚಾರ: 10ಮಂದಿ ಅಮಾನತು, ಇಬ್ಬರ ವರ್ಗಾವಣೆ

ಬೆಂಗಳೂರು : ಬಿಎಂಟಿಸಿ ವಿಭಾಗದಲ್ಲಿ ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ನೌಕರರನ್ನು ಅಮಾನತು ಮಾಡಲಾಗಿದ್ದು, ಇಬ್ಬರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಫೋನ್​ಪೇ, ಗೂಗಲ್ ಪೇ ಮೂಲಕ ಲಂಚ ಪಡೆದ ಪ್ರಕರಣ ಸಂಬಂಧ ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ಜಗದೀಶ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಜಗದೀಶ್ ಅವರನ್ನು ಕೆಎಸ್​​ಆರ್​​​ಟಿಸಿ ರಾಮನಗರ ವಿಭಾಗಕ್ಕೆ ವರ್ಗಾವಣೆ ಮಾಡಿದರೆ, ಚಂದ್ರಶೇಖರ್ ಅವರನ್ನು ಕೆಕೆಆರ್​​ಟಿಸಿ ಕಲಬುರಗಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಬಿಎಂಟಿಸಿಯಲ್ಲಿ ಡ್ಯೂಟಿ ಬೇಕೆಂದರೆ ಚಾಲಕರು, ನಿರ್ವಾಹಕರು ಲಂಚ ನೀಡಬೇಕಾಗಿತ್ತು. ವಾರಕ್ಕೆ 500 ರೂ., ತಿಂಗಳಿಗೆ 2 ಸಾವಿರ ರೂಪಾಯಿ ಲಂಚ ನೀಡಬೇಕಾಗಿತ್ತು. ಈ ಲಂಚದ ಹಣವನ್ನು ಅಧಿಕಾರಿಗಳು ಗೂಗಲ್​ಪೇ, ಫೋನ್​ಪೇ ಮೂಲಕ ಪಡೆಯುತ್ತಿದ್ದರು. ಲಂಚ ಪಡೆದು ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಡ್ಯೂಟಿ ನೀಡಿದ ಆರೋಪ ಬಿಎಂಟಿಸಿಯ 94 ಅಧಿಕಾರಿಗಳು ವಿರುದ್ಧ ಕೇಳಿಬಂದಿತ್ತು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? : ಆರ್​ಆರ್​ ನಗರ ಡಿಪೋ ಬಸ್ ಚಾಲಕ ಕಂ ಕಂಡಕ್ಟರ್​ ಹೊಳೆಬಸಪ್ಪ ಲಂಚ ನೀಡಿರಲಿಲ್ಲ. ಲಂಚ ನೀಡದಿದ್ದಕ್ಕೆ ಡಿಪೋ ಮ್ಯಾನೇಜರ್​ ಮಲ್ಲಿಕಾರ್ಜುನಯ್ಯ ಇವರಿಗೆ ಡ್ಯೂಟಿ ನೀಡಿರಲಿಲ್ಲ. ಇದರಿಂದ ನೊಂದ ಹೊಳೆಬಸಪ್ಪ, ವಿಭಾಗದಲ್ಲಿನ ಲಂಚಾವತಾರದ ಬಗ್ಗೆ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್​ನೋಟ್​ ಆಧಾರಿಸಿ ಬಿಎಂಟಿಸಿ ಎಂಡಿ ಜಿ.ಸತ್ಯವತಿ ಅವರು ತನಿಖೆಗೆ ಆದೇಶಿಸಿದ್ದರು.
ಅದರಂತೆ, ನಿರಂತರ ತನಿಖೆಯ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸುತ್ತಿದ್ದಾರೆ.

ಫೋನ್​ಪೇ ಮೂಲಕ 51,630 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಕಾನ್ಸ್​ಟೇಬಲ್ ಕೆ.ರಮೇಶ್ ಅಮಾನತು ಆಗಿದ್ದಾರೆ. ಗೂಗಲ್​ಪೇ ಮೂಲಕ 20,600 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಮೇಲ್ವಿಚಾರಕ ಮೊಹಮ್ಮದ್ ರಫಿ, ಗೂಗಲ್ ಪೇ ಮೂಲಕ 7,28,045 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಕಿರಿಯ ಸಹಾಯಕ ಕೆ.ಎಸ್.ಚಂದನ್, ಫೋನ್​ಪೇ ಮೂಲಕ 46,631 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಕಾನ್ಸ್​ಟೇಬಲ್ ಇಬ್ರಾಹಿಂ ಜಬೀವುಲ್ಲಾ, ​ಗೂಗಲ್​ಪೇ, ಫೋನ್​ಪೇ ಮೂಲಕ 3,15,182 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಚಾಲಕ ಹೆಚ್.ಎಂ.ಗೋವರ್ಧನ್, ಗೂಗಲ್​ಪೇ, ಫೋನ್​ಪೇ ಮೂಲಕ 64,500 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಅಂಕಿ ಅಂಶ ಸಹಾಯಕ ಕೆ.ಶರವಣ ಅವರನ್ನು ಅಮಾನತು ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *