ಕದನ ವಿರಾಮದ ಬೆಳವಣಿಗೆಗಳು ಮತ್ತು ಸಂಬಂಧಿತ ರಾಷ್ಟ್ರೀಯ ತಲ್ಲಣಗಳ ಕುರಿತು ಸಂಸತ್ತಿನ  ವಿಶೇಷ ಅಧಿವೇಶನ ಕರೆಯಲು ವಿನಂತಿ-ಪ್ರಧಾನಿಗಳಿಗೆ ಬೇಬಿಪತ್ರ

ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನ ವಾತಾವರಣ ತಿಳಿಗೊಳ್ಳಲಾರಂಭಿಸಿದೆ,  ಮತ್ತು ಕದನ ವಿರಾಮದ ಪ್ರಕಟಣೆಯಿಂದಾಗಿ ನಮ್ಮ ದೇಶದ ಎಲ್ಲ ಜನವಿಭಾಗಗಳು ಮತ್ತು ಅಂತರ್ರಾಷ್ಟ್ರೀಯ ಸಮುದಾಯವೂ ನಿಟ್ಟುಸಿರು ಬಿಡುವಂತಾಗಿದೆ. ಆದರೂ ಹಲವು ತಲ್ಲಣಗಳು ಇನ್ನೂ ಹಾಗೆಯೇ ಉಳಿದಿವೆ . ಇಂತಹ ಹಿನ್ನೆಲೆಯಲ್ಲಿ, ಸಂಸತ್ತಿನಲ್ಲಿ ಸಿಪಿಐ(ಎಂ)ನ ಸದನ ನಾಯಕರುಗಳು ಈಗಾಗಲೇ ವಿನಂತಿಸಿದಂತೆ, ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕು,  ಮತ್ತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವಲ್ಲಿ ಪ್ರಧಾನ ಮಂತ್ರಿ  ವೈಯಕ್ತಿಕವಾಗಿ ಭಾಗವಹಿಸಬೇಕು ಎಂದು ವಿನಂತಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿಯವರು ಪ್ರಧಾನ ಮಂತ್ರಿಗಳಿಗೆಮೇ 12ರಂದು ಪತ್ರ ಬರೆದಿದ್ದಾರೆ.  

ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

“ಆತ್ಮೀಯ ಶ್ರೀ ನರೇಂದ್ರ ಮೋದೀಜಿ,

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ತಿಳಿಗೊಳ್ಳುತ್ತಿರುವ ಮತ್ತು   ಕದನ ವಿರಾಮದ ಪ್ರಕಟಣೆಯಾಗಿರುವ ಇತ್ತೀಚಿನ ಬೆಳವಣಿಗೆಗಳ ಸಂದರ್ಭದಲ್ಲಿ  ನಾನು ನಿಮಗೆ ಬರೆಯುತ್ತಿದ್ದೇನೆ. ಈ ಪ್ರಕಟಣೆಯು ನಮ್ಮ ದೇಶದ ಎಲ್ಲಾ ವಿಭಾಗಗಳಿಗೆ ಹಾಗೂ ಶಾಂತಿಪ್ರಿಯ ಅಂತರರಾಷ್ಟ್ರೀಯ ಸಮುದಾಯಕ್ಕೆ ಸಮಾಧಾನ ತಂದಿದೆ. ಆದಾಗ್ಯೂ, ಗಮನಿಸಲೇಬೇಕಾದ  ಹಲವು ತಲ್ಲಣಗಳು ಪರಿಹಾರ ಕಾಣದೇ ಉಳಿದಿವೆ – ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದವುಗಳು.

ಏಪ್ರಿಲ್ 22 ರಂದು ಮುಗ್ಧ ಪ್ರವಾಸಿಗರ ಮೇಲೆ ನಡೆದ ಘೋರ ದಾಳಿಯು ರಾಷ್ಟ್ರದ ಆತ್ಮಸಾಕ್ಷಿಯನ್ನು ಆಳವಾಗಿ ಕಲಕಿದೆ. ಆದರೂ, ಅದರ ನಂತರ ದೇಶಾದ್ಯಂತ ನಾಗರಿಕರು ಪ್ರದರ್ಶಿಸಿದ ಅಗಾಧವಾದ ಐಕ್ಯತೆಯು ಒಂದು ಪ್ರಬಲ ಮತ್ತು ಅಮೂಲ್ಯವಾದ ಶಕ್ತಿಯಾಗಿದೆ. ಈ ಒಗ್ಗಟ್ಟನ್ನು ದೇಶದೊಳಗಿನ  ಮತ್ತು ವಿದೇಶಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಮೂಲೆಗುಂಪು ಮಾಡಲು ಬಳಸಿಕೊಳ್ಳಬೇಕು.

ವಿಷಾದಕರವೆಂದರೆ, ರಾಷ್ಟ್ರೀಯ ಐಕ್ಯತೆಯ ಈ ಕ್ಷಣವನ್ನು ದ್ವೇಷ ಮತ್ತು ಅಂಧಾಭಿಮಾನದ ವಿಷಕಾರೀ  ಅಭಿಯಾನಗಳ  ಮೂಲಕ ಹಾಗೂ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡಿಸಿ ದುರ್ಬಲಗೊಳಿಸಲಾಗುತ್ತಿದೆ. ಈ ಕ್ರಿಯೆಗಳು ಸಾರ್ವಜನಿಕರಲ್ಲಿ ಗಮನಾರ್ಹ ಗೊಂದಲ ಮತ್ತು ಅಶಾಂತಿಯನ್ನು ಉಂಟುಮಾಡಿವೆ.

ಇಷ್ಟೇ ಅಲ್ಲ,  ಕದನ ವಿರಾಮದ ಬಗ್ಗೆ ನಮ್ಮ ಪ್ರತಿನಿಧಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಬರುವ ಮೊದಲೇ ಯುಎಸ್ ಅಧ್ಯಕ್ಷರು ಪ್ರಕಟಣೆ ಮಾಡಿರುವುದು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ನಾವು ನಮ್ಮ ವಿವಾದಗಳನ್ನು ದ್ವಿಪಕ್ಷೀಯವಾಗಿ, ಯಾವುದೇ ಮೂರನೇಯವರ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ಇತ್ಯರ್ಥಪಡಿಸಿಕೊಳ್ಳುವುದು ನಮ್ಮ ದೇಶದ ಸ್ಪಷ್ಟವಾಗಿ ಒಪ್ಪಿಕೊಂಡಿರುವ  ನೀತಿಯಾಗಿದೆ. ಆದ್ದರಿಂದ, ಈ ಪರಿಸ್ಥಿತಿಯ ಬಗ್ಗೆ, ನಮ್ಮ ಸರ್ಕಾರದ ಅತ್ಯುನ್ನತ ಮಟ್ಟಗಳಿಂದ ಸ್ಪಷ್ಟ ಮತ್ತು ಆಧಿಕಾರಿಕ ಸ್ಪಷ್ಟೀಕರಣದ ಅಗತ್ಯವಿದೆ.

ಈ ಎಲ್ಲ ಪ್ರಶ್ನೆಗಳ ವಿಷಯಗಳ ಹಿನ್ನೆಲೆಯಲ್ಲಿ, ಸಿಪಿಐ(ಎಂ) ನ ಸದನ ನಾಯಕರುಗಳು ಈಗಾಗಲೇ ವಿನಂತಿಸಿರುವಂತೆ, ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಆಗ್ರಹಿಸುತ್ತೇನೆ ಮತ್ತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವಲ್ಲಿ ಪ್ರಧಾನ ಮಂತ್ರಿಯಾಗಿ ತಾವು ವೈಯಕ್ತಿಕವಾಗಿ  ಭಾಗವಹಿಸಬೇಕು ಎಂದು ಕೋರುತ್ತೇನೆ.”

Donate Janashakthi Media

Leave a Reply

Your email address will not be published. Required fields are marked *