ಬೆಂಗಳೂರು : ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಎಸ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದ ಘಟನೆಯನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾಗಿರುವ ಬಿ.ಎಸ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮುಖ್ಯನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಸಿಜೆಐ
ಡಿವೈಎಫ್ಐ ಖಂಡನೆ : ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದು ಧಾಳಿಗೈದ ದುಷ್ಕೃತ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಹಾಗೂ ನ್ಯಾಯಾಧೀಶರ ಮೇಲೆ ಶೂ ಎಸೆದ ಕೋಮುವಾದಿ ಹೀನ ಮನಸ್ಸಿನ ಆರೋಪಿ ವಕೀಲನ ಮೇಲ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ. ಬೆಂಗಳೂರು
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನಲ್ಲಿ ನೋಂದಾಯಿಸಿಕೊಂಡಿರುವ ಆರೋಪಿ ವಕೀಲನ ಸನ್ನದದನ್ನು ಈ ಕೂಡಲೇ ರದ್ದುಗೊಳಿಸಬೇಕು. ಸರ್ವೋಚ್ಚ ನ್ಯಾಯಾಲಯದಲ್ಲಿ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ದುರುದ್ದೇಶಪೂರ್ವಕವಾಗಿ ಅವಮಾನಗೈದು ಗೂಂಡಾಗಿರಿಯ ವಿಕೃತಿ ಮೆರೆದ ಆರೋಪಿಯನ್ನು ಜಾಮೀನುರಹಿತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಬೆಂಗಳೂರು
ಇದನ್ನೂ ಓದಿ : BJP ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಸಂವಿಧಾನದ ಮೂಲ ಆಶಯದ ಮೇಲೆ ದಾಳಿ: ಅಖಿಲೇಶ್
ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಘನತೆಯ ಹಾಗೂ ಅತ್ಯಂತ ಮುಖ್ಯವಾದ ಸ್ಥಾನದಲ್ಲಿರುವ ಸಿಜೆಐ ಗವಾಯಿ ಅವರ ಮೇಲೆ ನ್ಯಾಯಾಲಯದ ಕೋಣೆಯಲ್ಲಿ ಆರೋಪಿ ವಕೀಲನು ಶೂ ಎಸೆಯುತ್ತಾ, ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿರುವುದು ಅತ್ಯಂತ ಆಘಾತಕಾರಿಯಾದುದು. ಪೂರ್ವನಿಯೋಜಿತವಾಗಿ ದುರುದ್ದೇಶದಿಂದ ನಡೆಸಿದ ಘಟನೆಯ ಹಿಂದೆ ದೇಶದ ಸಂವಿಧಾನದ ಜಾತ್ಯಾತೀತ ಬುನಾದಿಗೆ ವಿರುದ್ಧವಾಗಿ ಕೋಮುವಾದಿ ಹಾಗೂ ಜಾತಿವಾದಿ ಹೀನ ಮನಸ್ಥಿತಿಯ ಶಕ್ತಿಗಳು ಇರುವಂತಿದೆ. ಸಂವಿಧಾನ ಅಪಮೌಲ್ಯಗೊಳಿಸುವ ಕೆಲ ಬಿಜೆಪಿ ನಾಯಕರ ಹೆಳಿಕೆಗಳು ಆರೋಪಿಗೆ ಇಂತಹ ದುಷ್ಕೃತ್ಯ ನಡೆಸಲು ಬಲ ತುಂಬಿವೆ ಎಂದು ಡಿವೈಎಫ್ಐ ಖಂಡಿಸಿದೆ. ಬೆಂಗಳೂರು
ಕೋಮುವಾದಿ ಶಕ್ತಿಗಳು ದುಷ್ಕೃತ್ಯಕ್ಕೆ ಗುರಿಯಾಗಿರುವ ಸಿಜೆಐ ಬಿ.ಆರ್ ಗವಾಯಿ ಅವರಿಗೆ ಕೇಂದ್ರ ಸರ್ಕಾರವು ಸಂಪೂರ್ಣ ರಕ್ಷಣೆಯನ್ನು ಖಾತ್ರಿಪಡಿಸಬೇಕು ಹಾಗೂ ಅಸಹಿಷ್ಣುತೆಯಿಂದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಧಾಳಿಗೆ ಮುಂದಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ.
ವಕೀಲರ ಒಕ್ಕೂಟ ಖಂಡನೆ : ಮತಾಂಧ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಶೂ ಎಸೆದು ಹಲ್ಲೆ ನಡೆಸಲು ಯತ್ನಿಸಿದ ಘಟನೆಯನ್ನು ಅಖಿಲ ಭಾರತ ವಕೀಲರ ಒಕ್ಕೂಟ, ದ.ಕ.ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದೆ.
ಆರ್.ಎಸ್.ಎಸ್. ಸಂಘಟನೆಯ ನೂರು ವರ್ಷದ ಸಂಭ್ರಮಾಚರಣೆಯ ಕರಿ ನೆರಳು ಈ ಮನುವಾದಿ, ದಲಿತ ವಿರೋಧಿ ಕೃತ್ಯದ ಹಿಂದೆ ಅಡಗಿದೆ. ನ್ಯಾಯಮೂರ್ತಿ ಗವಾಯಿಯವರ ತಾಯಿ ಕಮಲಾದೇವಿಯವರು ಆರ್.ಎಸ್.ಎಸ್. 100 ರ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ ಬೆನ್ನಲ್ಲೇ ‘ಸನಾತನ ಧರ್ಮದ ಅವಮಾನ’ ದ ನೆಪದಲ್ಲಿ ನಡೆಸಿದ ಈ ಧಾಳಿ ನ್ಯಾಯಾಂಗದ ಮೇಲಿನ ಆಕ್ರಮಣ ಹಾಗೂ ಒರ್ವ ದಲಿತ ಮುಖ್ಯ ನ್ಯಾಯಮೂರ್ತಿಯವರ ಹೆಸರಿಗೆ ಕಳಂಕ ತರುವ ಹುನ್ನಾರದಿಂದ ಕೂಡಿದ್ದಾಗಿದೆ, ಮಾತ್ರವಲ್ಲ ಉನ್ನತ, ಅತ್ಯುನ್ನತ ಸಂವಿಧಾನಿಕ ಹುದ್ದೆಗಳಲ್ಲಿ ದಲಿತ ಬಂಧುಗಳನ್ನು ಎಷ್ಟಕ್ಕೂ ಸಹಿಸದ ಮನುವಾದಿ ಮನೋಸ್ಥಿತಿಯೂ ಇದರ ಹಿಂದೆ ಅಡಗಿದೆ. ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಈ ಧಾಳಿ ಸಂವಿಧಾನದ ಮೇಲಿನ ಹೇಯ ಅಪಚಾರವಾಗಿದ್ದು ಇಂತಹ ಕೃತ್ಯಗಳನ್ನು ಪ್ರಜಾಪ್ರಭುತ್ವವಾದಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ತಪ್ಪಿತಸ್ಥ ವಕೀಲ ಮತ್ತು ಆತನನ್ನು ಬೆಂಬಲಿಸಿದ ಸಂವಿಧಾನವಿರೋಧಿ ಶಕ್ತಿಗಳ ಮೇಲೆ ಕೂಡಲೇ ಅತ್ಯುಗ್ರ ಕಾನೂನಿನ ಕ್ರಮಗಳನ್ನು ಜರಗಿಸಬೇಕೆಂದು ಅಖಿಲ ಭಾರತ ವಕೀಲರ ಸಂಘವು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
“ದಲಿತ ವ್ಯಕ್ತಿ ಈ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕೂತಿರುವುದು ಸನಾತನಿಗಳಿಗೆ ಇಷ್ಟವಿಲ್ಲ. ಸನಾತನಾ ಧರ್ಮಕ್ಕೆ ಅವಮಾನ ಎಂದು ಶೂ ಎಸೆದಿದ್ದಾನೆ. ಗಾಂಧಿಯನ್ನು ಯಾರು ಕೊಂದರು? ಶಂಭೂಕನ ತಲೆ ಕತ್ತರಿಸಿದವರು ಯಾರು? ಏಕಲವ್ಯನ ಬೆರಳು ಕತ್ತರಿಸಿದವರು ಯಾರು? ಅಂಬೇಡ್ಕರ್ ಅವರಿಗೆ ಧಿಕ್ಕಾರ ಹೇಳಿದವರು ಯಾರು? ಸಂವಿಧಾನಕ್ಕೆ ಯಾರು ಧಿಕ್ಕಾರ ಹೇಳಿದರೋ ಅದೇ ಶಕ್ತಿಗಳು ಈ ಕೆಲಸ ಮಾಡಿವೆ. ಸನಾತನ ಧರ್ಮಗಳ ಮನಸ್ಥಿತಿಗಳ ಅನಾವರಣ ಆಗಿದೆ” ಎಂದು ಹಿರಿಯ ವಕೀಲ ಎಸ್ ಬಾಲನ್ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ(ಎಂ) ಖಂಡನೆ : ಸಿಜೆಐ ಬಿ.ಆರ್. ಗವಾಯಿ ಅವರ ಮೇಲಿನ ದಾಳಿಯನ್ನು ಸಿಪಿಐ(ಎಂ) ಪೊಲೀಟ್ ಬ್ಯೂರೋ ಖಂಡಿಸಿದೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನಲ್ಲಿ ನೋಂದಾಯಿಸಿಕೊಂಡಿರುವ ಮತ್ತು ಬಂಧಿಸಲ್ಪಟ್ಟಿರುವ ಸಂಬಂಧಪಟ್ಟ ವಕೀಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಸಿಜೆಐ ಗವಾಯಿ ಅವರ ಮೇಲೆ ತೆರೆದ ನ್ಯಾಯಾಲಯದ ಕೋಣೆಯಲ್ಲಿ ಶೂ ಎಸೆದಿದ್ದು, ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಲಾಗಿದೆ ಎಂಬುದು ಅತ್ಯಂತ ಆಘಾತಕಾರಿ ಮತ್ತು ಶೋಚನೀಯ. ಜಾತಿವಾದ, ಮನುವಾದಿ ಮತ್ತು ಕೋಮುವಾದಿ ವಿಚಾರಗಳನ್ನು ಉತ್ತೇಜಿಸುವ ಬಿಜೆಪಿ ಮುಖ್ಯಮಂತ್ರಿಗಳು, ಸಚಿವರು ಮತ್ತು ನಾಯಕರ ಇತ್ತೀಚಿನ ಹೇಳಿಕೆಗಳು ಅಂತಹ ಕೃತ್ಯಗಳಿಗೆ ಧೈರ್ಯ ತುಂಬಿವೆ. ಹಿಂದುತ್ವ ಕೋಮುವಾದಿ ಶಕ್ತಿಗಳು ಸಮಾಜಕ್ಕೆ ಮನುವಾದಿ ಮತ್ತು ಕೋಮು ವಿಷವನ್ನು ಚುಚ್ಚುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಇದು ಸಂಘ ಪರಿವಾರದ ಅಸಹಿಷ್ಣುತೆ ಮತ್ತು ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗದ ಯಾವುದೇ ಅಭಿಪ್ರಾಯವನ್ನು ಸ್ವೀಕರಿಸಲು ಇಷ್ಟವಿಲ್ಲದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದಿದೆ.
ಸಿಜೆಐ ಗವಾಯಿ ಅವರಿಗೆ ಕೇಂದ್ರ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ. ಸರ್ಕಾರವು ಅಸಹಿಷ್ಣುತೆಯನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದ ಹಕ್ಕನ್ನು ರಕ್ಷಿಸಬೇಕು ಎಂದು ಸಿಪಿಐ(ಎಂ) ಪತ್ರಿಕಾ ಪ್ರಕಟಣೆ ನೀಡಿದೆ.
ಇದನ್ನೂ ನೋಡಿ : RSS ದೇಶದ್ರೋಹಿ ಸಂಘಟನೆ – ಬಿ.ಕೆ. ಹರಿಪ್ರಸಾದ್ Janashakthi Media
