ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ‌ ಮನಪಾ ಕ್ರಮಕೈಗೊಳ್ಳಲಿ: ಸಿಪಿಐ(ಎಂ)

ಮಂಗಳೂರು: ನಗರದಾದ್ಯಂತ ಸರಕಾರಿ ಅನುದಾನದ ಕಾಮಗಾರಿಗಳಿಗೆ, ಆಟೋ ರಿಕ್ಷಾ ನಿಲ್ದಾಣಗಳಿಗೆ ಸ್ಥಳೀಯ ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ತಮ್ಮ ಅಭಿನಂಧನಾ ಪ್ರಚಾರದ ಭರಾಟೆ ಜೋರಾಗಿ ನಡೆಸುತ್ತಿದ್ದಾರೆ. ಎಲ್ಲೆಂದರಲ್ಲಿ ಬ್ಯಾನರುಗಳು ರಾರಾಜಿಸುತ್ತಿವೆ. ಇಂತಹ ಆಡಂಬರದ ಪ್ರಚಾರದ ಭರಾಟೆ ನಿಯಮಬಾಹಿರವಾಗಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ಶಾಸಕರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ಒತ್ತಾಯಿಸಿದೆ.

ಸಿಪಿಐ(ಎಂ) ಪಕ್ಷದ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಶಾಸಕ ವೇದವ್ಯಾಸ ಕಾಮತ್ ಆಡಂಬರದ ಪ್ರಚಾರದ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ‌ ಮತ್ತು ಆಟೋ ರಿಕ್ಷಾ ನಿಲ್ದಾಣಗಳಿಗೆ ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿ ಕಾರ್ಪೊರೇಟರ್ ಗಳ ಪೋಟೋಗಳುಳ್ಳ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಗಳು ರಾರಾಜಿಸುತ್ತಿವೆ. ಇದರಿಂದ ಸ್ಥಳೀಯ ಜನತೆಗೆ ಸಾಕಷ್ಟು ಕಿರಿಕಿರಿಯುಂಟು ಮಾಡುತ್ತಿವೆ ಎಂದರು.

ಇದನ್ನು ಓದಿ: ರಸ್ತೆ, ಚರಂಡಿ ಅಭಿವೃದ್ಧಿ ವಿಷಯ ಬಿಡಿ, ಲವ್ ಜಿಹಾದ್ ಕಡೆ ಗಮನ ಕೊಡಿ ; ಬಿಜೆಪಿ ರಾಜ್ಯಾಧ್ಯಕ್ಷರ ವಿವಾದಾತ್ಮಕ ಭಾಷಣ

ಜನರ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಿಂದ ನಡೆಯುವ ಸರಕಾರಿ ಅನುದಾನದಿಂದ ಕೈಗೊಳ್ಳುವ ಕಾಮಗಾರಿಗಳಿಗೆ ತಮ್ಮದೇ ಕೊಡುಗೆ ಅನ್ನುವ ರೀತಿಯಲ್ಲಿ ಪುಕ್ಸಟೆ ಪ್ರಚಾರಗಿಟ್ಟಿಸುವ ಶಾಸಕ ವೇದವ್ಯಾಸ ಕಾಮತ್‌ ಅವರ ರಾಜಕೀಯ ನಡೆ ಅತ್ಯಂತ ಕೀಳುಮಟ್ಟದ್ದಾಗಿದೆ ಎಂದು ಆರೋಪಿಸಿದರು.

ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಶಾಸಕ ಕಾಮತರ ಪಾತ್ರ ದೊಡ್ಡದಿದೆ ಎಂಬ ಆರೋಪಗಳು ಸಾರ್ವಜನಿಕವಾಗಿಯೇ ಬಹಿರಂಗಗೊಳ್ಳುತ್ತಿದೆ. ಶಾಸಕರಾಗಿ ಆಯ್ಕೆಯಾಗಿರುವ ವೇದವ್ಯಾಸ ಕಾಮತರು ಜನರ ಬದುಕಿಗೆ ಸಂಬಂಧಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ಅಥವಾ ಯೋಜನೆಗಳನ್ನು ರೂಪಿಸುವಲ್ಲಿ ಒಂದೇ ಒಂದು ಪ್ರಶ್ನೆಯನ್ನು ವಿಧಾನಸೌಧದಲ್ಲಿ ಈವರೆಗೂ ಎತ್ತಲೇ ಇಲ್ಲ. ಕೇವಲ ಇಲ್ಲಿನ ಸಣ್ಣ ಪುಟ್ಟ ರಸ್ತೆ, ಚರಂಡಿ ಕಾಮಗಾರಿಗಳ ಗುದ್ದಲಿ ಪೂಜೆಗೆ, ಉದ್ಘಾಟನೆಗಳಿಗೆ ತೆರಳಿದ ಫೋಟೋಗಳನ್ನು ತಮ್ಮ ಹಿಂಬಾಲಕರ ಮೂಲಕ ಅಲ್ಲಲ್ಲಿ ಮಂಗಳೂರು ನಗರ ಪಾಲಿಕೆ(ಮನಪ)ಯಿಂದ ಅನುಮತಿ ಪಡೆಯದೇ ಅನಧಿಕೃತ  ಬ್ಯಾನರ್, ಫ್ಲೆಕ್ಸ್ ಗಳನ್ನು ಅಳಪಡಿಸುತ್ತಿರುವ ಕಾಯಕದಲ್ಲೇ ತೊಡಗಿಸಿಕೊಂಡು ತಿರುಗಾಡುತ್ತಿರುವುದು ಬಹಳ ಖೇದಕರ ಎಂದು ಸಂತೋಷ್‌ ಬಜಾಲ್‌ ತಿಳಿಸಿದ್ದಾರೆ.

ಇದನ್ನು ಓದಿ: ಶಾಸಕ ವೇದವ್ಯಾಸ್ ಕಾಮತರ ಕಮಿಷನ್ ಆಸೆಗೆ ಮಂಗಳೂರು ನಗರ ಬಲಿ – ಬಿ.ಕೆ ಇಮ್ತಿಯಾಜ್

ಈಗಾಗಲೇ ಕರ್ನಾಟಕ ಉಚ್ಛ ನ್ಯಾಯಾಲಯ ಸೂಚನೆಯಂತೆ ಸರಕಾರಿ ವೆಚ್ಚದಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದ ಫ್ಲೆಕ್ಸ್‌ಗಳು, ಅಭಿನಂಧನಾ ಬ್ಯಾನರುಗಳು ಕಂಡುಬಂದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಅಥವಾ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದೆ. ಹೀಗಿದ್ದು ನ್ಯಾಯಾಲಯದ ಆಜ್ಞೆಯನ್ನು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಪಾಲಿಸದೇ ಇರೋದು ನ್ಯಾಯಾಲಯಕ್ಕೆ ಎಸಗಿದ ಅವಮಾನ ಎಂದು ಹೇಳಿದರು.

ಸರಕಾರಿ ಅನುದಾನ ಕಾಮಗಾರಿಗಳ ಬಗೆಗಿನ ಸ್ವಾರ್ಥ ಪ್ರಚಾರಕ್ಕಾಗಿ ಅಳವಡಿಸಿರುವ ಶಾಸಕ ವೇದವ್ಯಾಸ ಕಾಮತರ ಅಭಿನಂದನಾ ಪ್ರಚಾರ ಫ್ಲೆಕ್ಸ್, ಬ್ಯಾನರ್ ಗಳನ್ನು ಈ ಕೂಡಲೇ ತೆರವುಗೊಳಿಸಲು ಪಾಲಿಕೆ ಆಯುಕ್ತರನ್ನು ಸಿಪಿಐ(ಎಂ) ಪಕ್ಷ ವಿನಂತಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *