ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನಗಳ ʻಒಡಿಶಾ ಉತ್ಸವʼ

ಬೆಂಗಳೂರು: ನಗರದ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್‌ 14 ರಿಂದ 16 ರ ವರೆಗೆ ಒಡಿಶಾ ರಾಜ್ಯದ ವಿಭಿನ್ನ ಹಾಗೂ ಅಪರೂಪದ ಕಲೆ, ಸಂಗೀತ, ನಾಟಕ, ಸಾಹಿತ್ಯ ಪ್ರಕಾರಗಳನ್ನೊಳಗೊಂಡ ವೈಭವದ “ಒಡಿಶಾ ಉತ್ಸವ” ಆಯೋಜಿಸಲಾಗಿದೆ.

ಒಡಿಶಾ ಸರ್ಕಾರದ ವಿವಿಧ ನಿಗಮಗಳು, ಉಭಯ ರಾಜ್ಯಗಳ ರಂಗಕರ್ಮಿಗಳು, ಸಾಹಿತ್ಯ ದಿಗ್ಗಜರು ಉತ್ಸವದಲ್ಲಿ ಭಾಗಿಯಾಗಲಿದ್ದು, ಒಡಿಶಾ ಉತ್ಸವಕ್ಕೆ ಮೆರಗು ನೀಡಲಿದ್ದಾರೆ. ಒಡಿಶಾದ ಬಹುತೇಕ ಕಲಾ ಪ್ರದರ್ಶನಗಳಿಗೆ ಮೂರು ದಿನಗಳ ಕಾಲ ವೇದಿಕೆ ಕಲ್ಲಿಸಿದ್ದು, ಕರ್ನಾಟಕ ರಾಜ್ಯದ ಯಕ್ಷಗಾನ, ಜಾನಪದ ಮತ್ತಿತರ ಕಲಾ ತಂಡಗಳು ಸಹ ಶೀಘ್ರದಲ್ಲೇ ಒಡಿಶಾದಲ್ಲಿಯೂ ಪ್ರದರ್ಶನ ನೀಡಲಿವೆ.

ಬೆಂಗಳೂರು ಪ್ರೆಸ್‌ ಕ್ಲಬ್‌ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಒಡಿಶಾ ಸರ್ಕಾರದ ಒಡಿಯಾ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಮತ್ತು ಹೆಚ್ಚುವರಿ ಕಾರ್ಯದರ್ಶಿ ರಂಜನ್ ಕುಮಾರ್ ದಾಸ್ ಮಾತನಾಡಿ, ನಾಳೆ(ಅಕ್ಟೋಬರ್‌ 14) ಸಂಜೆ 6.30ಕ್ಕೆ ಒಡಿಶಾ ಉತ್ಸವವನ್ನು ಒಡಿಶಾ ಪ್ರವಾಸೋದ್ಯಮ, ಒಡಿಶಾ ಭಾಷೆ, ಸಾಹಿತ್ಯ – ಸಂಸ್ಕೃತಿ ಸಚಿವ ಅಶ್ವಿನಿ ಕುಮಾರ್ ಪಾತ್ರ ಉದ್ಘಾಟಿಸಲಿದ್ದಾರೆ.

ಒಡಿಶಾ ರಾಜ್ಯದ ಹೊರಗೆ ಇದೇ ಮೊದಲ ಬಾರಿಗೆ ಉತ್ಸವವನ್ನು ಆಯೋಜಿಸಲಾಗಿದೆ. ಸಮಾರಂಭದಲ್ಲಿ ಒಡಿಶಾದ ಗಣ್ಯರು ಮತ್ತು ಕರ್ನಾಟಕದ ಅತಿಥಿಗಳಾದ ಡಾ.ಸುಧಾಮೂರ್ತಿ (ಇನ್ಫೋಸಿಸ್), ಅನೂರ್ ಅನಂತ ಕೃಷ್ಣ ಶರ್ಮಾ (ನಿರ್ದೇಶಕರು, ಸಂಗೀತ ನೃತ್ಯ ಅಕಾಡೆಮಿ), ನಿರುಪಮಾ ರಾಜೇಂದ್ರ, ಪ್ರವೀಣ್ ಡಿ ರಾವ್, ಅನನ್ಯ ರಾಘವೇಂದ್ರ, ಮಂಜುನಾಥ್ ಬಿ.ಸಿ, ವೀಣಾ ಮೂರ್ತಿ, ವಿಜಯ್ ಭಾಗವಹಿಸಲಿದ್ದಾರೆ ಎಂದರು.

ಅಲ್ಲದೆ, ಒಡಿಶಾ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಅರುಣಾ ಮೊಹಂತಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ವಿಶ್ವ ವಿಖ್ಯಾತ ಪುರಿ ಜಗನ್ನಾಥ್, ಭಗವಾನ್ ವಿಷ್ಣು ಆಧಾರಿತ ಆಯ ನೀಳ ಸಯಿಳೋ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಇದು ಒಡಿಶಾದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರೇಕ್ಷಕ ಭರ್ತಿಗೃಹದ ಪ್ರದರ್ಶನ ಕಾಣುತ್ತಿರುವ ನಾಟಕವಾಗಿದೆ. ಸಾಹಿತ್ಯಗೋಷ್ಠಿಗಳಲ್ಲಿ ಡಾ.ಚಂದ್ರಶೇಖರ ಕಂಬಾರ, ಎಚ್.ಎಸ್‌. ಶಿವಪ್ರಕಾಶ್‌, ಒಡಿಶಾದ ಖ್ಯಾತ ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ಮೂಲಕ ಒಡಿಶಾದ ಭವ್ಯ ಮತ್ತು ಶ್ರೇಷ್ಠ ಸಾಂಸ್ಕೃತಿಕ ವಲಯದ ವಿಶೇಷತೆಗಳನ್ನು ಹೂಡಿಕೆ ಮಾಡಲು ಕರ್ನಾಟಕಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಇದಲ್ಲದೇ ಒಡಿಶಾದ ಖ್ಯಾತ ಪಟಚಿತ್ರ ಕಲಾ ಪ್ರಕಾರವನ್ನು ಅಲ್ಲಿನ ರಘುರಾಜ್ ಪುರ್ ಹಳ್ಳಿಯ ಕಲಾವಿದರು ಪ್ರದರ್ಶಿಸಲಿದ್ದಾರೆ. ಒಣಗಿದ ಎಲೆಯಲ್ಲಿ ರಾಮಾಯಣ, ಮಹಾಭಾರತ ಮತ್ತಿತರ ವಿಷಯಗಳ ಬಗ್ಗೆ ಕಲಾ ರಚನೆಗಳನ್ನು ಇವರು ಮಾಡಲಿದ್ದಾರೆ. ಗೋಡಾ ನಾಚ್, ಸಂಬಲ್ ಪುರಿ ನೃತ್ಯ, ಚಾವ್ ಡಾನ್ಸ್ ಒಳಗೊಂಡಂತೆ ತುಂಬಾ ಅಪರೂಪದ ನೃತ್ಯ  ಪ್ರದರ್ಶನ ಜೊತೆಗೆ ವೈವಿಧ್ಯಮಯ ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟಾರೆ ಕಲೆ, ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ಅಶ್ವಿನಿ ಕುಮಾರ್ ಪಾತ್ರ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *