ವಿಧಾನಸಭೆಯಲ್ಲಿ 6 ಮಹತ್ವದ ವಿಧೇಯಕಗಳು ಅಂಗೀಕಾರ

ಬೆಂಗಳೂರು : ಪ್ರಾಚೀನ ಹಾಗೂ ಐತಿಹಾಸಿಕ ಸ್ಮಾರಕ ದತ್ತು ತೆಗೆದುಕೊಳ್ಳಲು ಅವಕಾಶ ನೀಡುವ 2024ನೇ ಸಾಲಿನ ಕರ್ನಾಟಕ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕ ಸೇರಿದಂತೆ 6 ವಿಧೇಯಕಗಳು ವಿಧಾನಸಭೆಯಲ್ಲಿಂದು ಅಂಗೀಕಾರಗೊಂಡವು.

ಬಿಜೆಪಿ-ಜೆಡಿಎಸ್‌‍ ಶಾಸಕರ ಗದ್ದಲದ ನಡುವೆ ನಡೆದ ಶಾಸನ ರಚನಾ ಕಲಾಪದಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಅವರು ವಿಧೇಯಕ ಕುರಿತು ಮಾತನಾಡಿ, ಪ್ರಾಚೀನ ಮತ್ತು ಐತಿಹಾಸಿಕ ಸಾರಕ ಮತ್ತು ಪುರಾತತ್ವ ಸ್ಥಳಗಳ ಸಂರಕ್ಷಣೆ ಮಾಡುವ ಕರ್ತವ್ಯವಿದೆ. ಸಾರಕಗಳನ್ನು ದತ್ತು ತೆಗೆದುಕೊಳ್ಳಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ. ಸೊಸೈಟಿ, ಸಹಕಾರ ಸಂಘಗಳು, ಟ್ರಸ್ಟ್‌ಗಳು, ಸರ್ಕಾರೇತರ ಸಂಸ್ಥೆಗಳು ಆಸಕ್ತಿ ಉಳ್ಳ ವ್ಯಕ್ತಿಗಳನ್ನು ಸಾರಕ ಮಿತ್ರರು ಪಟ್ಟಿಯಲ್ಲಿ ಸೇರಿಸುವುದಕ್ಕೆ ಅರ್ಹರಾಗಿಸುವುದಕ್ಕೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

ಬಳಿಕ ಸಭಾಧ್ಯಕ್ಷರು 2024ನೇ ಸಾಲಿನ ಕರ್ನಾಟಕ ಪ್ರಾಚೀನ, ಐತಿಹಾಸಿಕ ಸಾರಕಗಳು, ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಒಪ್ಪಿಗೆ ದೊರೆಯಿತು.

ಇದನ್ನೂ ಓದಿಕೇಂದ್ರ ಸರ್ಕಾರಕ್ಕೆ ಸಡ್ಡು : ಪ್ರಮುಖ ಮೂರು ನಿರ್ಣಯಗಳ ಅಂಗೀಕಾರ

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಪರವಾಗಿ ಕಾನೂನು ಸಚಿವರು ಪರ್ಯಾಲೋಚಿಸಿದ 2024 ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕಕ್ಕೂ ಸದನ ಒಪ್ಪಿಗೆ ನೀಡಿತು.

ವಿಧೇಯಕ ಕುರಿತು ಮಾತನಾಡಿದ ಕಾನೂನು ಸಚಿವರು, ಹೊರಗುತ್ತಿಗೆಯಲ್ಲಿ ಸಾಮಾಜಿಕ ನ್ಯಾಯವಿರಲಿಲ್ಲ. ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿದ್ದು, ಸದನ ಒಪ್ಪಿಗೆ ನೀಡಬೇಕೆಂದು ಇದಕ್ಕೂ ಮುನ್ನ ಕೋರಿದ್ದರು.ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು ಮಂಡಿಸಿದ 2024 ನೇ ಸಾಲಿನ ರೇಣುಕಾ ಯಲ್ಲಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೂ ಸದನದ ಒಪ್ಪಿಗೆ ದೊರೆಯಿತು.

ವಿಧೇಯಕ ಕುರಿತು ಮಾತನಾಡಿದ ರಾಮಲಿಂಗಾರೆಡ್ಡಿ, ಯಲ್ಲಮ ದೇವಾಲಯಕ್ಕೆ ಕರ್ನಾಟಕ, ಗೋವಾ, ಆಂಧ್ರ, ತೆಲಂಗಾಣದಿಂದ ವಾರ್ಷಿಕ 80 ಲಕ್ಷದಿಂದ 1 ಕೋಟಿ ಭಕ್ತಾದಿಗಳು ಬರುತ್ತಾರೆ. ಹೀಗಾಗಿ ರೇಣುಕಾ ಯಲ್ಲಮ ದೇವಸ್ಥಾನ ಅಭಿವೃದ್ಧಿ ಮತ್ತು ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಸ್ವತಂತ್ರ ಶಾಸನಬದ್ಧ ಪ್ರಾಧಿಕಾರದ ರಚನೆಗೆ ಉಪಬಂಧ ಕಲ್ಪಿಸಲು ಈ ವಿಧೇಯಕವನ್ನು ತರಲಾಗಿದೆ. ರಾಜ್ಯಮಟ್ಟದಲ್ಲಿ ಒಂದು ಸಮಿತಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇನ್ನೊಂದು ಸಮಿತಿ ಕಾರ್ಯ ನಿರ್ವಹಿಸಲಿದೆ. ಆ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಮಂಡಿಸಿದ 2024ನೇ ಸಾಲಿನ ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕಕ್ಕೂ ಒಪ್ಪಿಗೆ ದೊರೆಯಿತು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಮಂಡಿಸಿದ 2024ನೇ ಸಾಲಿನ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕಕ್ಕೂ ಸದನ ಅಂಗೀಕಾರ ನೀಡಿತು.

ಬಳಿಕ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ ಅವರ ಪರವಾಗಿ ಕಾನೂನು ಸಚಿವರು ಮಂಡಿಸಿದ 2024ನೇ ಸಾಲಿನ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣಾ) (ತಿದ್ದುಪಡಿ) ವಿಧೇಯಕಕ್ಕೂ ಸದನದ ಒಪ್ಪಿಗೆ ದೊರೆಯಿತು.

Donate Janashakthi Media

Leave a Reply

Your email address will not be published. Required fields are marked *