ದಲಿತ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಗ್ರಾಮಸ್ಥರು?

ಹನುಮಸಾಗರ : ಸರಿಯಾಗಿ ನಡೆದಾಡಲು ಬಾರದ ಎರಡು ವರ್ಷದ ಪುಟ್ಟ ಮಗುವೊಂದು ತನ್ನ ಹುಟ್ಟುಹಬ್ಬಕ್ಕಾಗಿ ದೇವರಿಗೆ ನಮಸ್ಕರಿಸಲು ತಂದೆಯ ಜೊತೆ ತೆರಳಿತ್ತು.  ಆ ಮಗು ದೇವಾಲಯದ ಒಳ ಪ್ರವೇಶಿಸಿ ನಮಸ್ಕರಿಸಿದ್ದಕ್ಕೆ 25 ಸಾವಿರ ರೂ ದಂಡ ಹಾಕಲಾಗಿದೆ.  ಅರೇ ಇದೇನಿದು ಯಾಕೆ ಅಂತಿರಾ? ಆ ಮಗು ದಲಿತ ಸಮುದಾಯಕ್ಕೆ ಸೇರಿದ್ದಾದ್ದರಿಂದ ಊರ ಗ್ರಾಮಸ್ಥರು ದಂಡ ಹಾಕಿದ್ದಾರೆ.  ಈ ಘಟನೆಯನ್ನು ನೋಡಿದರೆ ನಾವು ಇನ್ನೂ ಯಾವ ಕಾಲದಲ್ಲಿದ್ದೇವೆ ಎಂಬ ಪ್ರಶ್ನೆ ಮೂಡುತ್ತಿದೆ.

ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್‌ ಆಗಿ ದೇವಾಲಯ ಪ್ರವೇಶ ಮಾಡಿದ್ದಕ್ಕೆ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಕೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ಗ್ರಾಮದ ಮುಖಂಡರು ಶರತ್ತು ವಿಧಿಸಿದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆ ಹನುಮಸಾಗರ ಸಮೀಪದ ಮಿಯಾಪುರದಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಹಿನ್ನಲೆ: ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯ ಮೀಯಾಪುರ ಗ್ರಾಮದ ಚನ್ನದಾಸರ ಸಮುದಾಯದ 2 ವರ್ಷದ ಮಗುವನ್ನು ಸೆ.4ರಂದು ಅದರ ಜನ್ಮದಿನದ ಹಿನ್ನೆಲೆಯಲ್ಲಿ ತಂದೆ ದೇವರ ದರ್ಶನಕ್ಕೆಂದು ಕರೆದುಕೊಂಡು ಹೋಗಿದ್ದರು. ಆ ಊರಿನಲ್ಲಿ  ದೇವಸ್ಥಾನಕ್ಕೆ ದಲಿತರ ಪ್ರವೇಶ ಇಲ್ಲದ ಇರುವುದರಿಂದ ಊರಿನಲ್ಲಿ ಜನ ಕಿರಿಕ್‌ ಮಾಡುತ್ತಾರೆ ಎಂದು ಹೆದರಿದ ಬಾಲಕನ ತಂದೆ ದೇವಸ್ಥಾನದ ಹೊರಗಿಂದಲೇ ನಮಸ್ಕರಿಸಿ ತೆರಳುವ  ಆಲೋಚನೆಯನ್ನು ಹೊಂದಿದ್ದರು.  ಆದರೆ ಮಗು ದೇವಸ್ಥಾನವನ್ನು ಪ್ರವೇಶ ಮಾಡಿದೆ. ಇದನ್ನು ಗಮನಿಸಿದ ತಂದೆ ಮಗುವನ್ನು ಹೊರಗಡೆ ಕರೆದುಕೊಂಡು ಬಂದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೆ.11ರಂದು ಗ್ರಾಮದಲ್ಲಿ ಮುಖಂಡರು ಸಭೆ ನಡೆಸಿ ದೇವಾಲಯ ಅಪವಿತ್ರವಾಗಿದ್ದು, ಹೋಮ ಹವನ ಮಾಡಿ ಸರಿಪಡಿಸಬೇಕು. ಅದಕ್ಕಾಗಿ 25 ಸಾವಿರ ದಂಡ, ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಆಗುವ ವೆಚ್ಚ ನೀಡಬೇಕೆಂದು ಮಗುವಿನ ತಂದೆಗೆ ಷರತ್ತು ವಿಧಿಸಿದ್ದರು.

ಇದನ್ನೂ ಓದಿ : ಕ್ಷೌರ ಮಾಡಿಸಿಕೊಳ್ಳಲು ಬಂದ ದಲಿತ ಯುವಕರ ಮೇಲೆ ಹಲ್ಲೆ : ಮನನೊಂದ ವಿಷ ಸೇವಿಸಿದ ಸಹೋದರರು

ಪೊಲೀಸರಿಗೆ ದೂರು : ಈ ಘಟನೆಯನ್ನು ಖಂಡಿಸಿ ಚನ್ನದಾಸರ ಸಮುದಾಯದವರು ಪೊಲೀಸರ ಮೊರೆ ಹೋಗಿದ್ದರು.  ದೇವಸ್ಥಾನ ಪ್ರವೇಶ ನಮ್ಮ ಹಕ್ಕು, ಆದರೆ ನಮ್ಮೂರಿನಲ್ಲಿ ದಂಡ ಹಾಕುತ್ತಿದ್ದಾರೆ, ಇದನ್ನು ಸರಿಪಡಿಸಬೇಕು ಹಾಗೂ ದಂಡ ಹಾಕಲು ಮುಂದಾದವರ ಮೇಲೆ ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದರು.  ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ಪೊಲೀಸ್‌, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಅಸ್ಪೃಶೃತಾ ನಿವಾರಣೆಯ ಜಾಗೃತಿ ಸಭೆ ನಡೆಸಿ, ಅಸ್ಪೃಶೃತೆ ಸಂಪೂರ್ಣವಾಗಿ ತೊಲಗಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಮಾಡಲು ಎಲ್ಲರಿಗೂ ಸಮಾನ ಅವಕಾಶವಿದೆ. ಅಸ್ಪೃಶೃತೆ ಆಚರಣೆ ಮಾಡುವುದು ಅಕ್ಷಮ್ಯ ಅಪರಾಧ, ಇನ್ನು ಮುಂದೆ ಗ್ರಾಮದಲ್ಲಿ ಈ ರೀತಿ ಚಟುವಟಿಕೆ ನಡೆದರೆ ಕಾನೂನು ಕ್ರಮ ಜರುಗಿಸಲಾಗವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಎಂ.ಸಿದ್ದೇಶ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸಿಪಿಐ ನಿಂಗಪ್ಪ ಎನ್‌.ಆರ್‌, ಪಿಎಸ್‌ಐಗಳಾದ ತಿಮ್ಮಣ್ಣ ನಾಯಕ, ಅಶೋಕ ಬೇವೂರು, ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್‌, ಪಿಡಿಒ ವೆಂಕಟೇಶ ನಾಯ್ಕ್ ಇದ್ದರು.

ಇಲಾಖೆಯ ಜಾಣ ನಡೆ :  ಗ್ರಾಮದಲ್ಲಿ ಅಸ್ಪೃಶ್ಯತಾ ನಿವಾರಣೆ ಕುರಿತು ಅಧಿಕಾರಿಗಳು ಜಾಗೃತಿ ಸಭೆ ನಡೆಸಿದ್ದು ಒಳ್ಳೆಯ ಬೆಳವಣಿಗೆ. ಆದರೆ ದಂಡ ವಿಧಿಸಿದವರಿಗೆ ಶಿಕ್ಷೆ ವಿಧಿಸುವ ಬದಲ,  ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿ ಕೈತೊಳೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಹಳ್ಳಿಗಳಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ ಇದೆ.  ಪ್ರತ್ಯೇಕ ಲೋಟ, ತಟ್ಟೆ ವ್ಯವಸ್ಥೆ,  ಕ್ಷೌರ ನಿರಾಕರಣೆ, ಹೋಟಲ್‌ ಪ್ರವೇಶ ನಿರಾಕರಣೆಯಂತಹ ಪ್ರಕರಣಗಳು ನಡೆಯುತ್ತಲೆ ಇವೆ, ಹಾಗಾಗಿ ಕೇವಲ ವಾರ್ನ್‌ ಮಾಡಿ ಬಿಟ್ಟು ಬಿಡುವುದು ಸರಿಯಾದ ವಿಧಾನವಲ್ಲ. ಅಧಿಕಾರಿಗಳ ಈ ನಡೆ ಮತ್ತಷ್ಟು ಪ್ರಕರಣಗಳನ್ನು ಹೆಚ್ಚಾಗುವ ಸಾಧ್ಯತೆ ಇದ್ದು ಶಿಕ್ಷೆ ನೀಡಬೇಕು ಎಂದು ಜನಪರ ಸಂಘಟನೆಗಳು ಒತ್ತಾಯಿಸಿವೆ.

ಸಂವಧಾನ ಬದ್ಧ ಹಕ್ಕುಗಳನ್ನು ನಾವು ಕೇಳುತ್ತಿದ್ದೇವೆ. ಆದರೆ ಹಳ್ಳಿಗಳಲ್ಲಿ ನಮ್ಮನ್ನು ಕೀಳಾಗಿ ನಡುತ್ತಾರೆ, ಸಮಾನ ಅಕಾಶಗಳನ್ನು ನಿರಾಕರಿಸಲಾಗುತ್ತಿದೆ. ಇಂತಹ ಘಟನೆಗಳಿಂದ ನಮಗೆ ಸಾಕಷ್ಟು ನೋವು, ಅವಮಾನಗಳು ಆಗುತ್ತಿವೆ. ಮಾನಸಿಕವಾಗಿ ಹಂಸೆಯಾಗುತ್ತಿದೆ ಎಂದು ಚನ್ನದಾಸರ ಸಮುದಾಯದ ಮಾರುತಿ ಮಿಯಾಪುರ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *