ವೇಗವಾಗಿ ಬಂದ ಲಾರಿವೊಂದು ಬೈಕಿಗೆ ಗುದ್ದಿದ ಪರಿಣಾಮ ತಾಯಿ- ಮಗು ಸ್ಥಳದಲ್ಲೇ ಸಾವು

ಬೆಂಗಳೂರು: ಅತಿವೇಗವಾಗಿ ಬಂದ ಟಿಪ್ಪರ್ ಲಾರಿವೊಂದು ಮುಂದೆ ಹೋಗುತ್ತಿದ್ದ ಬುಲೆಟ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕೆಳಗೆ ಬಿದ್ದ ತಾಯಿ-ಮಗು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎಚ್‍ಎಎಲ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕೆ.ಆರ್.ಪುರಂ ನಿವಾಸಿ ಶ್ರೀದೇವಿ(21) ಮತ್ತು ಒಂದು ವರ್ಷದ ಗಂಡುಮಗು ದಕ್ಷಿತ್ ಮೃತಪಟ್ಟವರಾಗಿದ್ದಾರೆ. ಮೂಲತಃ ತಮಿಳುನಾಡಿನ ಧರ್ಮಪುರಿಯವರಾದ ಶಿವಕುಮಾರ್ ಕೆ.ಆರ್.ಪುರಂನಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದರು. ಇಂದು ಬೆಳಗ್ಗೆ ಊರಿಗೆ ಹೋಗುವ ಸಲುವಾಗಿ ಪತ್ನಿ ಹಾಗೂ ಮಗುವನ್ನು ಬುಲೆಟ್ ಬೈಕ್‍ನಲ್ಲಿ ಕೆ.ಆರ್.ಪುರಂನಿಂದ ತಮಿಳುನಾಡಿಗೆ ಹೊರಟಿದ್ದರು.

ಮಾರತ್ತಹಳ್ಳಿ ರಿಂಗ್ ರಸ್ತೆ ಬಳಿ ಚಲಿಸುತ್ತಿದ್ದಾಗ ಬೆಳಗ್ಗೆ 7.15ರ ಸುಮಾರಿನಲ್ಲಿ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಿವಕುಮಾರ್ ಎಡಭಾಗಕ್ಕೆ ಬಿದ್ದಿದ್ದಾರೆ. ಬಲಭಾಗಕ್ಕೆ ಬಿದ್ದ ತಾಯಿ-ಮಗು ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಅಪಘಾತ ಕಂಡರೂ ಸಹಾಯಕ್ಕೆ ಬಾರದೆ ಮಾನವೀಯತೆ ಮರೆತು ನೋಡಿಯೂ ನೋಡದಂತೆ ಸ್ಥಳೀಯರು ಹೋಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಚ್‍ಎಎಲ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತಾಯಿ-ಮಗುವಿನ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆಯೇ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಲಾರಿ ಬಿಟ್ಟು ಪರಾರಿಯಾದ ಚಾಲಕನ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಶಾಂತರಾಜು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *