ವಿವಿ ಶುಲ್ಕ ಹೆಚ್ಚಳ ಖಂಡಿಸಿ ಜೀವಂತ ಸಮಾಧಿಗೆ ಮುಂದಾದ ವಿದ್ಯಾರ್ಥಿಗಳು

ಪ್ರಯಾಗ್ರಾಜ್ (ಉತ್ತರ ಪ್ರದೇಶ) : ಅಲಹಾಬಾದ್‌ ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳವನ್ನು ಖಂಡಿಸಿ ಕಳೆದ 16 ದಿನಗಳಿಂದ ವಿದ್ಯಾರ್ಥಿಗಳು ಎನ್ಎಸ್‌ಯುಐ ನೇತೃತ್ವದಲ್ಲಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.  ಉತ್ತರಪ್ರದೇಶದ ಯುನಿವರ್ಸಿಟಿ ಆಫ್ ಅಲಹಾಬಾದ್‌ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕವನ್ನು ಶೇ 300 ರಿಂದ 400 ರಷ್ಟು ಹೆಚ್ಚಳ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು 5 ಅಡಿ ಆಳದ ಗುಂಡಿಗಳನ್ನು ತೆಗೆದು ಜೀವಂತ ಸಮಾಧಿಯಾಗಲು ಯತ್ನಿಸಿದ್ದು, ಕೆಲವರು ಗುಂಡಿಗಳಿಗೆ ಇಳಿದು ಮಣ್ಣು ಎಳೆದುಕೊಳ್ಳಲು ಯತ್ನಿಸಿದ್ದಾರೆ. ಶುಲ್ಕ ಹೆಚ್ಚಳವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಹಿಂಪಡೆಯದಿದ್ದರೇ ನಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು  ಗುಂಡಿಗಳಿಂದ ಮೇಲೆ ಎಳೆದೊಯ್ದಿದ್ದಾರೆ. ತಕ್ಷಣ ಹೆಚ್ಚುವರಿ ಪೋಲೀಸರನ್ನು ವಿವಿ ಬಳಿ ನಿಯೋಜಿಸಲಾಗಿದೆ. ನಂತರದಲ್ಲಿ ತೆರೆದಿದ್ದ ಗುಂಡಿಗಳಿಗೆ ಸಸಿಗಳನ್ನು ನೆಡಲಾಗಿದೆ.

ಆದರೆ, ಶುಲ್ಕ ಹೆಚ್ಚಳದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ  ಯುನಿವರ್ಸಿಟಿ ಆಫ್ ಅಲಹಾಬಾದ್‌ ಮುಖ್ಯಸ್ಥರು ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ಇದು ಹೊಸ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಶುಲ್ಕ ಹೆಚ್ಚಳವಾಗಿದೆ ಎಂದಿದ್ದಾರೆ.

ಇಷ್ಟುದಿನ ಯುನಿವರ್ಸಿಟಿ ಆಫ್ ಅಲಹಾಬಾದ್‌ನಲ್ಲಿ ಸಾಮಾನ್ಯವಾಗಿ ಪದವಿ ಕೋರ್ಸುಗಳಿಗೆ ₹1000 ಇತ್ತು. ಈಗ ಅದನ್ನು ₹4000 ಕ್ಕೂ ಮೀರಿ ಹೆಚ್ಚಿಸಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಶುಲ್ಕ ಹೆಚ್ಚಳ ಖಂಡಿಸಿ ವಿವಿ ಕ್ಯಾಂಪಸ್‌ನಲ್ಲಿ ಎಬಿವಿಪಿ ಕೂಡ ಪ್ರತಿಭಟನೆ ನಡೆಸುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಶುಲ್ಕ ಹೆಚ್ಚಳವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *