ಆಟೊ,ಕ್ಯಾಬ್‌ ಬಳಕೆದಾರರಿಗೆ ಸಾರಿಗೆ ಇಲಾಖೆ ಪ್ರತ್ಯೇಕ ಆ್ಯಪ್: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಆಟೊ,ಕ್ಯಾಬ್‌ಗಳ ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ವತಿಯಿಂದಲೇ ಹೊಸ ಆ್ಯಪ್ ರೂಪಿಸಲು ಸಿದ್ಧತೆ ನಡೆದಿದ್ದು, ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲಾಭ ಮತ್ತು ನಷ್ಟ ಇಲ್ಲದ ಪರಿಕಲ್ಪನೆಯಲ್ಲಿ ಈ ಆ್ಯಪ್ ಅನ್ನು ಪರಿಚಯಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಕೆಲವೇ ತಿಂಗಳಲ್ಲಿ ಹೊಸ ಆ್ಯಪ್ ಪ್ರಾಥಮಿಕ ಪ್ರಯೋಗಕ್ಕೆ ಚಾಲನೆ ದೊರೆಯಲಿದೆ. ನಂತರ, ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ಜೂನ್‌ 01 ರಿಂದ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ

ಹೊಸ ಆ್ಯಪ್‌ನಲ್ಲಿ ದರ ನಿಗದಿಪಡಿಸುವ ಬಗ್ಗೆ ಇನ್ನೂ  ಯೋಚಿಸಿಲ್ಲ. ಆ್ಯಪ್ ಆಧಾರಿತ ಸಾರಿಗೆ ಸೇವೆ ನೀಡುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಆಟೊ ಮತ್ತು ಕ್ಯಾಬ್‌ ಚಾಲಕರಿಗೆ ಕಡಿಮೆ ಹಣ ನೀಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ವಿವರಿಸಿದರು. ಸಾರಿಗೆ ಇಲಾಖೆಯ ಆ್ಯಪ್ ಆಧಾರಿತ ಸೇವೆಗೆ ನೋಂದಾಣಿ ಮಾಡಿಕೊಳ್ಳಬೇಕು. ಓಲಾ,ಉಬರ್‌ಗಿಂತಲೂ ಚಾಲಕರು ಹೆಚ್ಚಿನ ಲಾಭಗಳಿಸಬಹುದು. ಇಲ್ಲಿ ಯಾವುದೇ ಕಿರುಕುಳ ಇರುವುದಿಲ್ಲ. ಸಾರ್ವಜನಿಕರು ಮತ್ತು ಚಾಲಕರ ಹಿತದೃಷ್ಟಿ ಕೇಂದ್ರೀಕರಿಸಿದ ಆ್ಯಪ್ ಇದಾಗಿದೆ ಎಂದು ವಿವರಿಸಿದರು.

ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲು ಜಿಲ್ಲಾವಾರು ಟೆಂಡರ್‌ ಕರೆದು ಹಂಚಿಕೆ ಮಾಡುವ ಕಾರ್ಯ ಶೀಘ್ರದಲ್ಲೇ ನಡೆಯಲಿದೆ. ಈ ಯೋಜನೆ ಅಡಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರತಿ ದಿನ ಸರಾಸರಿ 59.55 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ ಎಂದು ಹೇಳಿದರು. ಸಾರಿಗೆ ಸಂಸ್ಥೆಯ ಎಲ್ಲಾ ನಿಗಮಗಳ ಸಿಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿಸಲಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು ಶಾಸಕ ಬಸವರಾಜ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 7ನೇ ತಾರೀಕಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 17ನೇ ತಾರೀಕಿಗೆ ವೇತನ ಪಾವತಿಸಲಾಗುತ್ತಿದೆ ಎಂದು ಅಂಕಿ-ಅಂಶ ಸಮೇತ ಮಾಹಿತಿ ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಆರಗ ಜ್ಞಾನೇಂದ್ರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ರಾಮಲಿಂಗಾರೆಡ್ಡಿ ನಾಗಪುರ ಪಾಠಶಾಲೆಯಲ್ಲಿ ವಿಷವಲ್ಲದೆ ಮತ್ತೇನು ಉತ್ಪಾದನೆಯಾಗಲು ಸಾಧ್ಯ ಎಂದು ವಾಗ್ದಾಳಿ ನಡೆಸಿದರು. ಕೇಶವ ಕೃಪಾದಲ್ಲಿ ಇದನ್ನೇ ಬೋಧಿಸಲಾಗುತ್ತಿದೆಯೇ? ಆರ್‌ಎಸ್‌ಎಸ್‌ ಪಾಠ ಶಾಲೆಯಲ್ಲಿ ಇದನ್ನೇ ಕಲಿಸಲಾಗುತ್ತಿದೆಯೇ? ಬಿಜೆಪಿ ಮುಖಂಡರಿಗೆ ವರ್ಣ ಅಂಧತ್ವ ರೋಗವಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಅಭರ್ಥಿಗಳನ್ನು ಘೋಷಿಸಬೇಕು ಮತ್ತು ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಜತೆಗೆ ನಾನು ಸೇರಿದಂತೆ ಕೆಪಿಸಿಸಿ ಕಾರ್ಯಧ್ಯಕ್ಷರಾದವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಕೆಲವು ಜಿಲ್ಲಧ್ಯಕ್ಷರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಂತವರನ್ನು ಕೈಬಿಟ್ಟು ಹೊಸದಾಗಿ ಕೆಪಿಸಿಸಿ ಪುನರ್‌ ರಚಿಸುವಂತೆ ಮನವಿ ಮಾಡಲಾಗಿದೆ. ಶೀ‍ಘ್ರದಲ್ಲೇ ಜಿಲ್ಲಾ ತಾಲ್ಲೂಕು ಘಟಕಗಳ ಕಾಂಗ್ರೆಸ್‌ ಪದಾಧಿಕಾರಿಗಳ ಬದಲಾವಣೆಯಾಗಲಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *