20 ವರ್ಷಗಳ ಹಿಂದಿನ ಕರಾವಳಿಯ ಪುಟ್ಟ ಅರೆನಗರವೊಂದರ ಸಾಮಾಜಿಕ ಬದುಕನ್ನು ಕಟ್ಟಿಕೊಡುವ “ಅಗ್ನಿಪಥ,” ಗೆಳೆಯ ಬಿ. ಎಂ. ಬಶೀರ್ ಅವರ ಮೊದಲ ಕಾದಂಬರಿ. ಬಶೀರ್, ತೀರಾ ಸಂಕೀರ್ಣವಾಗುತ್ತಾ ಸಾಗಿರುವ ಬದುಕಿನ ಸರಳ ಸತ್ಯಗಳನ್ನು ಮಿಂಚು ಹೊಳೆಸಿದಂತೆ ಕಟ್ಟಿಕೊಡುವ ಕವನಗಳಿಗಾಗಿ ನನಗೆ ಪ್ರಿಯರು. ಇಂದು
ಈ ಕಾದಂಬರಿಯ ಉದ್ದಕ್ಕೂ ಬರುವ ಎಲ್ಲ ಸಂಗತಿಗಳ ಜೊತೆ, ನನ್ನ ತಲೆಮಾರಿನ ಕರಾವಳಿಯ ಪ್ರತಿಯೊಬ್ಬರೂ ರಿಲೇಟ್ ಮಾಡಿಕೊಳ್ಳಬಹುದು. ಸುದ್ದಿ ಬರವಣಿಗೆಗಳು ಬೇರೆ ಕ್ರಿಯೇಟಿವ್ ಬರವಣಿಗೆಗಳನ್ನೆಲ್ಲ ಕೊಲ್ಲುತ್ತವೆ ಎಂಬ ಮಾತನ್ನು ಬಶೀರ್ ತಮ್ಮ ಕವನಗಳ ಮೂಲಕ ಮಾತ್ರವಲ್ಲದೇ ಈ ಕಾದಂಬರಿಯ ಮೂಲಕವೂ ಹುಸಿಗೊಳಿಸಿದ್ದಾರೆ. ಒಳ್ಳೆಯ ಕಥನ ಶೈಲಿಗೆ, ಪತ್ರಿಕಾಬರೆಹದ ವಿಚಕ್ಷಣಾ ಕೌಶಲವನ್ನೂ ಹದವಾಗಿ ಬೆರೆಸಿಕೊಂಡ, ಆಪ್ತವಾಗಿ ಓದಿಸಿಕೊಂಡು ಹೋಗಬಲ್ಲ ಕಾದಂಬರಿ ಇದು.
ಇಂದು ಕರಾವಳಿಯ ಸಾಮಾಜಿಕ ಸಾಮರಸ್ಯ ತಲುಪಿರುವ ಹಂತಕ್ಕೆ ಹೋಲಿಸಿದರೆ, ಈ ಕಾದಂಬರಿ ವಿವರಿಸುವ ಸನ್ನಿವೇಶಗಳು ಈವತ್ತಿಗೆ ಬಹಳ “ಪ್ಯೂರಿಟಾನ್” ಅನ್ನಿಸಬಹುದು. ಬದುಕು ಆಗ ಇಂದಿನಷ್ಟು ಕಲುಷಿತಗೊಂಡಿರಲಿಲ್ಲ, ಟೆಲಿವಿಷನ್ ಚಾನೆಲ್ಲುಗಳು-ಮುಖಕ್ಕೊಡ್ಡುವ ಮೈಕುಗಳ ಬೈಟ್ ಭಿಕ್ಷುಕರು ಆಗ ಇರಲಿಲ್ಲ.
ಇದನ್ನೂ ಓದಿ: ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ
ದೇಶ ಸೇವೆ ಯಾರ್ಯಾರು ಹೇಗೆ ಮಾಡಬೇಕು-ಮಾಡುತ್ತಾರೆ ಎಂಬ ಇವತ್ತಿನ ವಾಸ್ತವವನ್ನು ಬಿಚ್ಚಿಡುವ ಈ ಕಥಾಹಂದರ ವಿವರಿಸುವ ಸ್ಥಿತಿ ಇಂದಿಗೂ ಬದಲಾಗಿಲ್ಲ; ಆದರೆ ಇನ್ನಿಲ್ಲ ಎಂಬಷ್ಟು ಕಲುಷಿತಗೊಂಡಿದೆ. ನಾನು ಇಲ್ಲಿ ಆಗಾಗ ಹೇಳುವ “ನಮ್ಮ ಸೋಷಿಯಲ್ ಲೀಡರ್ಶಿಪ್ ಹೊಣೆ ಹೊತ್ತಿರುವವರು ಯಾರೆಂಬುದನ್ನು ಗಮನಿಸಿಕೊಳ್ಳಿ” ಎಂಬ ಮಾತುಗಳು ಹುಟ್ಟಲು ಕಾರಣ ಆದ ಹಂತ, ಈ ಕಾದಂಬರಿಯ ಕಾಲಘಟ್ಟ. ಇಂದು ನಾವು ಅದರ ಅತ್ಯಂತ ದರಿದ್ರ ಸ್ಥಿತಿ ತಲುಪಿ ಆಗಿದೆ.
ಶಿಕ್ಷಣ ವ್ಯವಸ್ಥೆಯ ಖಾಸಗೀಕರಣದ ಎರಡು ದ್ರುವಗಳ (ಕಾರಂತರ ಬಾಲವನ ಮತ್ತು ವಿವೇಕಶ್ರೀ ಕಾಲೇಜು) ಮುಖಾಮುಖಿ, ಜಾತಿ ವ್ಯವಸ್ಥೆಯ (ಸೈನಿಕ ವೆಂಕಟನ ಕುಟುಂಬ/ ಕಥಾನಾಯಕ ಪಪ್ಪು/ಗಿರಿಯಪ್ಪ ಪೂಜಾರಿ ) ಮುಖಾಮುಖಿಗಳು, ಧರ್ಮಗಳ (ಪಪ್ಪು-ಕಬೀರ) ಮುಖಾಮುಖಿ, ಜನರೇಶನ್ಗಳ (ಗುರೂಜಿ-ಜಾನಕಿ/ಅನಂತ ಭಟ್ಟರು-ಪಪ್ಪು) ಮುಖಾಮುಖಿ… ಹೀಗೆ ಹಲವು ಮುಖಾಮುಖಿಗಳು ಕಾದಂಬರಿ ಉದ್ದಕ್ಕೂ, ಬಶೀರ ಅವರ ಕವನಗಳ ಟಿಪಿಕಲ್ ಶೈಲಿಯಲ್ಲಿ ಮಿಂಚು ಹೊಳೆಯಿಸುತ್ತಲೇ ಹೋಗುತ್ತದೆ.
ಒಟ್ಟು ಆಶಯವನ್ನು ಕಟ್ಟಿಕೊಡುವ ಕಾಣುವ – “ಪಪ್ಪುವಿನ ತಲೆಭಾಗ ಮೋಂಟುವಿನ ಮಡಿಲಲ್ಲಿದ್ದರೆ, ಅವನೆರಡು ಕಾಲುಗಳ ಭಟ್ಟರ ಮಡಿಲಲ್ಲಿತ್ತು. ರಕ್ತ ಹನಿಹನಿಯಾಗಿ ಇಳಿದು ಇಬ್ಬರ ಮಡಿಲನ್ನೂ ಒದ್ದೆ ಮಾಡುತ್ತಿತ್ತು. ಕಬೀರನ ’ದೇಶಪ್ರೇಮಿ’ ರಿಕ್ಷಾ ಏಳುತ್ತಾಬೀಳುತ್ತಾ ಇನ್ನಿಲ್ಲದ ವೇಗದಲ್ಲಿ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಯ ಕಡೆಗೆ ಸಾಗುತ್ತಿತ್ತು.” ಎಂಬ ಪಾರಾಗ್ರಾಫ್ನೊಂದಿಗೆ ಕಾದಂಬರಿ ವಿಷಾದ ಭಾವದೊಂದಿಗೆ ಮುಗಿಯುತ್ತದೆ.
ಇದನ್ನೂ ನೋಡಿ: ಜಾತಿ ಗಣತಿ ವಿರೋಧಿಸಿದ ಮೋದಿಯವರ ಯು ಟರ್ನ್… ಸಮರ್ಥಿಸಿದ ಸಿದ್ದರಾಮಯ್ಯನವರು ಕವಲು ದಾರಿಯಲ್ಲಿ….