ಟಿಪ್ಪುವಿನ ರಾಕೆಟ್ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶ ಕೈಬಿಟ್ಟ ಚಕ್ರತೀರ್ಥ ಸಮಿತಿ

ಜಿ ಮಹಂತೇಶ್‌
ಕೃಪೆ: ದಿ-ಫೈಲ್‌.ಇನ್

ಬೆಂಗಳೂರು; ‘ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ನಡೆಸಿದನು, ರೇಷ್ಮೆ ವ್ಯವಸಾಯ, ರಾಕೆಟ್‌ ತಂತ್ರಜ್ಞಾನ ಬಳಸಿಕೊಂಡಿದ್ದು, ಹಿಂದೂ ದೇವಾಲಯಗಳಿಗೆ ದಾನದತ್ತಿ, ಶೃಂಗೇರಿ ಮಠಕ್ಕೆ ದೇಣಿಗೆ ನೀಡಿದ್ದ ಎಂಬ ಸಾಲೂ ಸೇರಿದಂತೆ ಆರು, ಏಳನೇ ತರಗತಿಯಲ್ಲಿನ ಸಮಾಜ ವಿಜ್ಞಾನ ವಿಷಯದಿಂದ ಟಿಪ್ಪುವಿಗೆ ಸಂಬಂಧಿಸಿದ ಸಾಲುಗಳನ್ನು  ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ಕೈಬಿಟ್ಟಿರುವುದು ಇದೀಗ ಬಹಿರಂಗವಾಗಿದೆ.

ಅಲ್ಲದೆ ಆರನೇ ತರಗತಿಯಲ್ಲಿದ್ದ ‘ನಮ್ಮ ಕರ್ನಾಟಕ-ಚಾರಿತ್ರಿಕ ಹಿನ್ನೆಲೆ, ಮೈಸೂರು ಒಡೆಯರ್ ಪಾಠದಲ್ಲಿ ಟಿಪ್ಪು ಸುಲ್ತಾನ ತಲೆಬರಹದಡಿಯಲ್ಲಿದ್ದ ಮೂರು ಸಾಲುಗಳು ಮತ್ತು ಏಳನೇ ತರಗತಿಯಲ್ಲಿನ ನಾಲ್ಕು ಅಂಶಗಳು ಹಾಗೂ ಪೂರಕವಾದ ಮೂರು ಚಿತ್ರಗಳನ್ನು ತೆಗೆದು ಹಾಕಲಾಗಿದೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯು ಮಾರ್ಚ್‌ 8ರಂದು ನೀಡಿರುವ ವರದಿಯಲ್ಲಿ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಸಾಲುಗಳನ್ನು ಕೈಬಿಟ್ಟಿರುವುದು ಗೊತ್ತಾಗಿದೆ.

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯು ಪಠ್ಯದಲ್ಲಿ ಕೈ ಬಿಟ್ಟಿರುವ ಸಾಲುಗಳು, ಪೂರಕ ಚಿತ್ರಗಳನ್ನೊಳಗೊಂಡ ಪುಟಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ. ಹಾಗೂ ವಾರ್ತಾಭಾರತಿ ದಿನಪತ್ರಿಕೆ ಕೂಡ ಈ ಕುರಿತಾಗಿ ವರದಿ ಪ್ರಕಟಿಸಿದೆ.

ಆರು ಮತ್ತು ಏಳನೇ ತರಗತಿಯಲ್ಲಿನ ಸಮಾಜ ವಿಜ್ಞಾನ ವಿಷಯದಲ್ಲಿ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಸಾಲುಗಳನ್ನು ಕೈಬಿಟ್ಟಿರುವ ಸಮಿತಿಯು 10ನೇ ತರಗತಿಯಲ್ಲಿದ್ದ (2021-22ನೇ ಸಾಲಿನವರೆಗಿದ್ದ) ‘ಕರ್ನಾಟಕದಲ್ಲಿ ಬ್ರಿಟಿಷ್‌ ಆಳ್ವಿಕೆಗೆ ಪ್ರತಿರೋಧಗಳು’ ಪಾಠದಲ್ಲಿ ಟಿಪ್ಪು ಸುಲ್ತಾನ್‌ ತಲೆಬರಹದಡಿಯಲ್ಲಿ ನೀಡಿದ್ದ ಅಂಶಗಳನ್ನು  2022-23ನೇ ಸಾಲಿಗೆ ಪರಿಷ್ಕೃತಗೊಂಡಾಗ ಯಾವುದೇ ವಿಷಯಾಂಶಗಳನ್ನು ಕೈ ಬಿಟ್ಟಿಲ್ಲ.

ಆರನೇ ತರಗತಿಯ (2020-21ನೇ ಸಾಲಿನವರೆಗಿದ್ದ) ‘ನಮ್ಮ ಕರ್ನಾಟಕ ಪಾಠದಲ್ಲಿ ಚಾರಿತ್ರಿಕ ಹಿನ್ನೆಲೆ’ ಅಡಿಯಲ್ಲಿ ಯದುರಾಯ ಅನ್ನುವವರು ಒಡೆಯರ್‌ ಮನೆತನದ ಮೊದಲ ಅರಸು. ಚಿಕ್ಕದೇವರಾಯ ಒಡೆಯರ್‌ ಅವರು ಪ್ರಸಿದ್ಧ ದೊರೆಯಾಗಿದ್ದರು. ಅವರ ನಂತರ ಸಿಂಹಾಸನಕ್ಕೆ ಬಂದ ಅರಸರು ದುರ್ಬಲರಾಗಿದ್ದರು. ಈ ಸಮಯದಲ್ಲಿ ಸೇನಾಧಿಪತಿಯಾಗಿದ್ದ ಹೈದರಾಲಿಯು ಆಳ್ವಿಕೆಯನ್ನು ವಶಪಡಿಸಿಕೊಂಡ ಎಂಬ ಅಂಶವಿತ್ತು.

ಆರನೇ ತರಗತಿ-2020-21ನೇ ಸಾಲಿನವರೆಗಿದ್ದ ಪಾಠಾಂಶದ ಪುಟ

ಅವನು ಮತ್ತು ಅವನ ಮಗ ಟಿಪ್ಪು ಸುಲ್ತಾನ್‌ 1761ರಿಂದ 1799ರವರೆಗೆ ಆಡಳಿತ ನಡೆಸಿದರು. ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ಟಿಪ್ಪು ನಡೆಸಿದನು. ಫ್ರೆಂಚ್‌ರ ಜತೆಯಲ್ಲಿ ಸಹಾಯಕ್ಕೆ ಸಂಧಾನ ನಡೆಸಿ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಟಿಪ್ಪು ಸುಲ್ತಾನ್‌ ಪ್ರಯತ್ನಿಸಿದ. ಟಿಪ್ಪು ಸುಲ್ತಾನನು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡನು. ಈ ಸಾಲುಗಳು 2021-22ನೇ ಸಾಲಿನವರೆಗಿದ್ದವು.

ಆರನೇ ತರಗತಿಯಲ್ಲಿ ಕೈ ಬಿಟ್ಟಿರುವ ಸಾಲುಗಳಿವು

2021-22ನೇ ಸಾಲಿನವರೆಗಿದ್ದ ಸಾಲುಗಳನ್ನು  ಸಮಿತಿಯು ಪರಿಷ್ಕರಿಸಿದೆ. ನಮ್ಮ ಕರ್ನಾಟಕ ಪಾಠದಲ್ಲಿ ಚಾರಿತ್ರಿಕ ಹಿನ್ನೆಲೆ ಎಂಬ ತಲೆಬರಹವನ್ನು ಕೈ ಬಿಟ್ಟು ಅದರ ಬದಲಿಗೆ ಮೈಸೂರು ವಿಭಾಗ ಎಂಬ ಶೀರ್ಷಿಕೆ ನೀಡಿದೆ. ಇದರಲ್ಲಿ ‘ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ಟಿಪ್ಪು ನಡೆಸಿದನು. ಫ್ರೆಂಚ್‌ರ ಜತೆಯಲ್ಲಿ ಸಹಾಯಕ್ಕೆ ಸಂಧಾನ ನಡೆಸಿ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಟಿಪ್ಪು ಸುಲ್ತಾನ್‌ ಪ್ರಯತ್ನಿಸಿದ. ಟಿಪ್ಪು ಸುಲ್ತಾನನು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡನು,’ ಎಂಬ ಸಾಲುಗಳನ್ನು 2022-23ನೇ ಸಾಲಿನಿಂದ ಕೈಬಿಟ್ಟಿರುವುದು ಪುಟಗಳಿಂದ ತಿಳಿದು ಬಂದಿದೆ.

ಪರಿಷ್ಕೃತಗೊಂಡ ನಂತರದ ಪುಟ

ಅಲ್ಲದೆ 2021-22ನೇ ಸಾಲಿನವರೆಗಿದ್ದ ನಮ್ಮ ಕರ್ನಾಟಕ ಚಾರಿತ್ರಿಕ ಹಿನ್ನೆಲೆಯ ಪಾಠವನ್ನೊಳಗೊಂಡ ಪುಟದಲ್ಲಿ ಟಿಪ್ಪು ಸುಲ್ತಾನ್‌ ಭಾವಚಿತ್ರವಿತ್ತು. 2022-23ನೇ ಸಾಲಿಗೆ ಪರಿಷ್ಕೃತಗೊಳಿಸಿರುವ ಸಮಿತಿಯು ಇದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ ವಿಶ್ವೇಶ್ವರಯ್ಯ, ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಭಾವಚಿತ್ರಗಳನ್ನ ಉಳಿಸಿಕೊಂಡು ಟಿಪ್ಪು ಸುಲ್ತಾನ್‌ ಚಿತ್ರವನ್ನು ತೆಗೆದು ಹಾಕಿರುವುದು ಪರಿಷ್ಕೃತಗೊಳಿಸಿರುವ ಪುಟದಿಂದ ಗೊತ್ತಾಗಿದೆ.

2022-23ನೇ ಸಾಲಿಗೆ ಪರಿಷ್ಕೃತಗೊಂಡಿರುವ ಪಾಠದಲ್ಲಿ ಹೈದರಾಲಿಯು ಆಳ್ವಿಕೆಯನ್ನು ಅಕ್ರಮವಾಗಿ ವಶಪಡಿಸಿಕೊಂಡ. ಅವನು ಮತ್ತು ಅವನ ಮಗ ಟಿಪ್ಪು ಸುಲ್ತಾನ್‌ 1761ರಿಂದ 1799ರವರೆಗೆ ಆಡಳಿತ ನಡೆಸಿದರು ಎಂದು ಮುಕ್ತಾಯಗೊಳಿಸಿರುವ ಸಮಿತಿಯು ಟಿಪ್ಪು ಸುಲ್ತಾನನ ಮರಣದ ನಂತರ ಮೈಸೂರಿನ ಆಡಳಿತವು ಮತ್ತೆ ಒಡೆಯರ ಕೈಗೆ ಬಂತು. 1831ರಲ್ಲಿ ಬ್ರಿಟಿಷರು ಆಢಳಿತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ 1881ರಲ್ಲಿ ಮತ್ತೆ ಆಳ್ವಿಕೆಯನ್ನು ಒಡೆಯರ ವಶಕ್ಕೆ ನೀಡಿದರು ಎಂದು 2021-22ನೇ ಸಾಲಿನಲ್ಲಿದ್ದ ಸಾಲುಗಳನ್ನೇ 2022-23ನೇ ಸಾಲಿಗೂ ಮುಂದುವರೆಸಲಾಗಿದೆ.

ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ 2021-22ನೇ ಸಾಲಿನವರೆಗಿದ್ದ ಮೈಸೂರು ಒಡೆಯರ್‌ ಪಾಠದಲ್ಲಿ ಟಿಪ್ಪು ಸುಲ್ತಾನ ತಲೆಬರಹದಡಿಯಲ್ಲಿ ಕೆಲವು ವಿಷಯಾಂಶಗಳನ್ನು ಪರಿಷ್ಕರಿಸಲು ಸಮಿತಿಗೆ ಒಪ್ಪಿಸಲಾಗಿತ್ತು. 2022-23ನೇ ಸಾಲಿಗೆ ಪರಿಷ್ಕೃತಗೊಂಡಾಗ ಟಿಪ್ಪುವಿನ ವ್ಯಕ್ತಿತ್ವ ಮತ್ತು ಸಾಧನೆಗಳು ಅಡಿಯಲ್ಲಿ 4 ಅಂಶಗಳನ್ನು ಹಾಗೂ ಪೂರಕವಾದ 3 ಚಿತ್ರಗಳನ್ನು ಕೈ ಬಿಡಲಾಗಿದೆ.

2021-22ನೇ ಸಾಲಿನವರೆಗೆ ಇದ್ದದ್ದೇನು?

ಟಿಪ್ಪುವಿನ ವ್ಯಕ್ತಿತ್ವ ಮತ್ತು ಸಾಧನೆಗಳು ವಿಷಯದಲ್ಲಿ ವಿಜ್ಞಾನ ಕ್ಷೇತ್ರದ ಸಾಧನೆಗಳ ಬಗ್ಗೆ ಅವನಿಗೆ ಉತ್ತಮ ತಿಳುವಳಿಕೆ ಇತ್ತು. ಅವನು ಒಳ್ಳೆಯ ಗ್ರಂಥಾಲಯವನ್ನು ಹೊಂದಿದ್ದನು.

7ನೇ ತರಗತಿಯ ಪುಟ-2020-21ರಲ್ಲಿದ್ದಂತೆ

ಬೆಂಗಳೂರಿನ ಅರಮನೆ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ (ದರಿಯಾ ದೌಲತ್‌) ನಿರ್ಮಾಣವನ್ನು ಟಿಪ್ಪು ಮಾಡಿಸಿದನು. ಬೇಸಿಗೆ ಅರಮನೆಯ ಗೋಡೆ, ಚಾವಣಿ ಮತ್ತು ಕಂಬಗಳ ಮೇಲೆ ಚಾರಿತ್ರಿಕ ಸಂಗತಿಗಳನ್ನು ಆಕರ್ಷಕವಾಗಿ ಚಿತ್ರಿಸಲಾಗಿದೆ. (ಬೆಂಗಳೂರು ಅರಮನೆಯ ಚಿತ್ರವಿತ್ತು)

ಬೆಂಗಳೂರು ಅರಮನೆ ಚಿತ್ರವಿದ್ದ ಪುಟದ ಪ್ರತಿ

ಟಿಪ್ಪು ರಾಜ್ಯದ ಸಮೃದ್ಧಿಗಾಗಿ ಬಹಳವಾಗಿ ಶ್ರಮಿಸಿದನು. ರೇಷ್ಮೆ ವ್ಯವಸಾಯವನ್ನು ರಾಜ್ಯದಲ್ಲಿ ವ್ಯಾಪಕವಾಗಿ ಜನಪ್ರಿಯಗೊಳಿಸಿದ್ದು ಅವನ ಮುಖ್ಯ ಸಾಧನೆಯಾಗಿದೆ. ಫ್ರೆಂಚ್‌ ಅಧಿಕಾರಿಗಳ ನೆರವಿನಿಂದ ತನ್ನ ಸೈನ್ಯವನ್ನು ಆಧುನಿಕವಾಗಿ ಸಜ್ಜುಗೊಳಿಸಿದನು. ಶ್ರೀರಂಗಪಟ್ಟಣದಲ್ಲಿ ಫಿರಂಗಿಗಳನ್ನು ಎರಕ ಹೊಯ್ಯುತ್ತಿದ್ದರು. ಟಿಪ್ಪು ರಾಕೆಟ್‌ ಬಳಸುವ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡದ್ದು ಒಂದು ವಿಶೇಷ. ಟಿಪ್ಪು ಕೆಲವು ಹಿಂದೂ ದೇವಾಲಯಗಳಿಗೆ ದಾನದತ್ತಿಯನ್ನೂ ಶೃಂಗೇರಿ ಮಠಕ್ಕೆ ದೇಣಿಗೆಯನ್ನೂ ನೀಡಿದನು. ಅವನು ಭೂ ಹಿಡುವಳಿಯಲ್ಲಿ ಸುಧಾರಣೆ ಮಾಡಿ ರೈತರಿಗೆ ಸುಲಭ ಕಂತಿನ ಸಾಲ ಒದಗಿಸುವುದನ್ನು ಒಳಗೊಂಡಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದನು. ಶ್ರೀರಂಗಪಟ್ಟಣದಲ್ಲಿರುವ ಹೈದರಾಲಿಯ ಸಮಾಧಿ ಮತ್ತು ಜುಮ್ಮಾ ಮಸೀದಿ ಟಿಪ್ಪುವಿನ ಭವ್ಯ ನಿರ್ಮಾಣಗಳು. ಮಸೀದಿಯ ಉನ್ನತವಾದ ಮಿನಾರುಗಳು ಆಕರ್ಷಕವಾಗಿವೆ. ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಟಂಕ ಶಾಲೆಗಳನ್ನು ನಿರ್ಮಿಸಿದನು. (ಶ್ರೀರಂಗಪಟ್ಟಣದ ಜುಮ್ಮಾ ಮಸೀದಿ ಚಿತ್ರವಿತ್ತು)

ರಾಕೆಟ್‌ ತಂತ್ರಜ್ಞಾನ ವಿಷಯವಿದ್ದ ಪುಟದ ಪ್ರತಿ

ಸಮಿತಿ ಪರಿಷ್ಕರಿಸಿದ್ದೇನು?

ಟಿಪ್ಪುವಿನ ವ್ಯಕ್ತಿತ್ವ ಮತ್ತು ಸಾಧನೆಗಳು ಎಂಬ ತಲೆಬರಹಕ್ಕೆ ಬದಲಿಗೆ ಟಿಪ್ಪು ಸುಲ್ತಾನ್‌ ಎಂದಷ್ಟೇ ಉಳಿಸಿಕೊಳ್ಳಲಾಗಿದೆ. ತನ್ನ ತಂದೆಯ ಕಾಲದ ಯುದ್ಧಗಳಲ್ಲಿ ಪಾಲ್ಗೊಂಡು ವಿಜಯವನ್ನು ಗಳಿಸಿದ ಟಿಪ್ಪು ಸುಲ್ತಾನ್‌ ಧೀರ ತರುಣನಾಗಿದ್ದ. ತನ್ನನ್ನು ಸುಲ್ತಾನನೆಂದು ಘೋಷಿಸಿ ತನ್ನ ರಾಜ್ಯ ‘ದೈವದತ್ತ’ವೆಂದು ಪ್ರಕಟಿಸಿಕೊಂಡ.

ತಂದೆಯ ಮರಣಾನಂತರ ಆಗ ನಡೆಯುತ್ತಿದ್ದ ಯುದ್ಧವನ್ನು ಟಿಪ್ಪು ಮುಂದುವರೆಸಿದ. ಆತನ ಸಹಾಯಕ್ಕೆ ಯಾರೂ ಬರಲಿಲ್ಲ. ಟಿಪ್ಪು ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಲಾರದೆ ಮಂಗಳೂರಿನಲ್ಲಿ ಒಪ್ಪಂದ ಮಾಡಿಕೊಂಡ. ಮಂಗಳೂರು ಒಪ್ಪಂದ ಉಭಯ ಪಕ್ಷದವರಿಗೂ ಹಿತಕರವಾಗಿದ್ದಿತು. ಇಬ್ಬರೂ ಗೆದ್ದಿದ್ದ ಪ್ರದೇಶಗಳನ್ನು ಬಿಟ್ಟುಕೊಟ್ಟು ಯುದ್ಧ ಖೈದಿಗಳನ್ನು ಹಿಂತಿರುಗಿಸಿದರು.

ಅಲ್ಪಕಾಲದಲ್ಲೇ ಟಿಪ್ಪು ಮತ್ತು ಬ್ರಿಟಿಷ್‌ ನಡುವೆ ಇನ್ನೆರಡು ಯುದ್ಧಗಳು ನಡೆದವು. ಟಿಪ್ಪು ಮತ್ತು ಬ್ರಿಟಿಷರ ನಡುವಣ ಪರಸ್ಪರ ದ್ವೇಷ ಮತ್ತು ಅಪನಂಬಿಕೆಯೇ ಈ ಯುದ್ಧಗಳಿಗೆ ಮೂಲ ಕಾರಣವಾಗಿತ್ತು. ಮೂರನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಆಕ್ರಮಣ ಮಾಡುತ್ತಾ ರಾಜಧಾನಿಯಾದ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಿದರು. ಬೇರೆ ಮಾರ್ಗ ತೋಚದೆ ಟಿಪ್ಪು ಬ್ರಿಟಿಷರೊಡನೆ ಶಾಂತಿ ಒಪ್ಪಂದ ಮಾಡಿಕೊಂಡನು. ಶಾಂತಿ ಒಪ್ಪಂದದಂತೆ ಅವನು ಅರ್ಧ ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದನು. ಅಪಾರ ಪರಿಹಾರ ಧನವನ್ನು ಅವರಿಗೆ ನೀಡಬೇಕಾಯಿತು. ತನ್ನಿಬ್ಬರು ಮಕ್ಕಳನ್ನು ಕೂಡ ಬ್ರಿಟಿಷರಿಗೆ ಒತ್ತೆಯಾಳಾಗಿ ಕೊಡಬೇಕಾಯಿತು.

ಯುದ್ಧದ ಪರಿಣಾಮವಾಗಿ ಟಿಪ್ಪು ಅವಮಾನಗೊಂಡನು. ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ದೃಢಸಂಕಲ್ಪ ಮಾಡಿದನು. ಇದು ನಾಲ್ಕನೆಯ ಮೈಸೂರು ಯುದ್ಧಕ್ಕೆ ನಾಂದಿಯಾಯಿತು. ಯುದ್ಧದಲ್ಲಿ ಶ್ರೀರಂಗಪಟ್ಟಣವು ಮುತ್ತಿಗೆಗೊಳಗಾಯಿತು. ಟಿಪ್ಪು ವೀರಾವೇಶದಿಂದ ಹೋರಾಡಿ ಅಸುನೀಗಿದ. ಟಿಪ್ಪುವು ಮೈಸೂರಿನ ಹುಲಿಯೆಂದು ಪ್ರಸಿದ್ಧನಾಗಿದ್ದಾನೆ. ಟಿಪ್ಪು ಸುಲ್ತಾನನ ಮರಣಾನಂತರ ಮೈಸೂರು ರಾಜ್ಯವು ಬ್ರಿಟಿಷರ ವಶವಾಯಿತು. ಬ್ರಿಟಿಷರು ಒಡೆಯರ ರಾಜವಂಶದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ರಾಜ್ಯವ್ನನು ಹಸ್ತಾಂತರಿಸಿದರು. ಅದರೆ ಮೈಸೂರು ಬ್ರಿಟಿಷರ ಆಶ್ರಿತ ರಾಜ್ಯವಾಯಿತು ಎಂದು ಪರಿಷ್ಕರಿಸಲಾಗಿದೆ.

ಕೈ ಬಿಟ್ಟ ಅಂಶಗಳಿವು

ಆದರೆ ಬೆಂಗಳೂರಿನ ಅರಮನೆ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ, ರೇಷ್ಮೆ ವ್ಯವಸಾಯ, ರಾಕೆಟ್‌ ತಂತ್ರಜ್ಞಾನ ಬಳಸಿಕೊಂಡಿದ್ದು, ಹಿಂದೂ ದೇವಾಲಯಗಳಿಗೆ ದಾನದತ್ತಿ, ಶೃಂಗೇರಿ ಮಠಕ್ಕೆ ದೇಣಿಗೆ ನೀಡಿದ್ದು, ಭೂಹಿಡುವಳಿಯಲ್ಲಿ ತಂದಿದ್ದ ಸುಧಾರಣೆ, ರೈತರಿಗೆ ಸುಲಭ ಕಂತಿನ ಸಾಲ ಒದಗಿಸಿದ್ದು, ಹೈದರಾಲಿ ಸಮಾಧಿ, ಜುಮ್ಮಾ ಮಸೀದಿ, ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಟಂಕ ಶಾಲೆಗಳನ್ನು ನಿರ್ಮಿಸಿದ್ದನ್ನು ಕೈಬಿಟ್ಟಿರುವುದು ಪರಿಷ್ಕೃತಗೊಂಡಿರುವ ಪಠ್ಯದಿಂದ ತಿಳಿದು ಬಂದಿದೆ.

ಈ ಕುರಿತು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ಇಲ್ಲಿ ಕೊಡಲಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಗೆ ನಾನು ಸರ್ವಾಧ್ಯಕ್ಷನಾಗಿದ್ದರೂ ವಿವಿಧ ವಿಷಯಗಳಿಗೆ ಸಂಬಂಧಿಸಿದ 27 ಸಮಿತಿಗಳಿದ್ದವು. ಈ ಸಮಿತಿಗಳಿಗೆ ಪ್ರತ್ಯೇಕವಾಗಿ ಅಧ್ಯಕ್ಷರಿದ್ದರು. ಇವರೆಲ್ಲ ವಿಷಯ ತಜ್ಞರು, ಸಮಾಜ ವಿಜ್ಞಾನ ಪಠ್ಯ ವಿಷಯಗಳನ್ನು, ಇತಿಹಾಸ ವಿಷಯ ತಜ್ಞರೂ ಸೇರಿ ಬರೆದಿದ್ದರು. ಯಾವುದೇ ಪಠ್ಯದಲ್ಲಿ ಅಕಸ್ಮಾತ್‌ ತಪ್ಪು ಮಾಹಿತಿಗಳು ಅರಿವಿಲ್ಲದೇ ಬಂದಿದ್ದರೆ ಅಂಥವನ್ನು ತಿದ್ದುವುದು ತಪ್ಪಲ್ಲ. ಮಾಹಿತಿ ಕೊಡುವುದಕ್ಕೆ ಮತ್ತು ಬಿಡುವುದಕ್ಕೆ ಅಧಾರಗಳಿರಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ.

ಈಗ ಲಭ್ಯ ಮಾಹಿತಿ ಪ್ರಕಾರ ನಾವು ತಿಳಿಸಿದಂತೆ ಟಿಪ್ಪುವಿಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಕೈ ಬಿಡಲಾಗಿದೆ. ಹಿಂದೆ ಇದ್ದ ಮಾಹಿತಿಗಳು ಆಧಾರರಹಿತವಾಗಿರಲಿಲ್ಲ. ಟಿಪ್ಪು ಶೃಂಗೇರಿಯನ್ನೂ ಒಳಗೊಂಡಂತೆ ಕೆಲವು ದೇವಾಲಯಗಳಿಗೆ ಸಹಾಯ ಮಾಡಿದ ವಿಷಯವನ್ನು ಚರಿತ್ರೆಕಾರರು ಹಿಂದಿನಿಂದ ಹೇಳಿದ್ದಾರೆ. ಆತನ ಯೋಜನೆಗಳ ಕುರಿತೂ ಹಿಂದಿನಿಂದ ಹೇಳಲಾಗಿದೆ. ಇವು ಆಧಾರರಹಿತ ಎನ್ನಲು ಆಧಾರ ಕೊಡಬೇಕಾಗುತ್ತದೆ.

ಟಿಪ್ಪುವನ್ನು ಮೈಸೂರು ಹುಲಿ ಎಂದು ಕರೆಯುವ ರೂಢಿಯಿದೆ. ನಾವು ಓದುವಾಗಲೂ ಇದು ರೂಢಿಯಲ್ಲಿತ್ತು. ಇದು ಹೋಗಲಿ ಎಂದರೆ ಉಳಿದವನ್ನು ತೆಗೆಯಲು ಕಾರಣಗಳಿಲ್ಲ. ಅಲ್ಲೆಲ್ಲಾ ಮಾಹಿತಿಯಿದೆ; ಅಗನತ್ಯ ವೈಭವೀಕರಣವಿಲ್ಲ. ಹುಸಿ ವೈಭವೀಕರಣವಾಗಿದ್ದರೆ ತಿದ್ದುಪಡಿ ಮಾಡಲಿ ತಪ್ಪೇನಿಲ್ಲ. ಆದರೆ ಯಾವುದೇ ಪಠ್ಯಪುಸ್ತಕಗಳು ಯಾವುದೇ ಪಕ್ಷ ಪುಸ್ತಕಗಳಲ್ಲ. ಹಾಗೆ ಆಗಬಾರದು.

Donate Janashakthi Media

Leave a Reply

Your email address will not be published. Required fields are marked *