ನಿಂತಿರುವುದು ಅಸಂಬದ್ಧ ‘ಸೇ’ ನಿಯಮದ ಮೇಲೆ
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಪೂರೈಕೆಯೇ ಬೇಡಿಕೆಯನ್ನು ಸೃಷ್ಟಿಸುತ್ತದೆ ಎಂಬ ಫ್ರೆಂಚ್ ಅರ್ಥಶಾಸ್ತ್ರಜ್ಷ ಜಿ.ಬಿ.ಸೇ ಯವರ ಅಸಂಬದ್ಧವೆಂದು ಆಗಲೇ ಇತ್ಯರ್ಥವಾಗಿದ್ದ ನಿಯಮವನ್ನು ಆಧರಿಸಿದ ‘ರಫ್ತು-ಪ್ರಧಾನ ಬೆಳವಣಿಗೆ’ ಕಾರ್ಯತಂತ್ರವು ವಾಸ್ತವವಾಗಿ ದೇಶಗಳನ್ನು, ಅದರಲ್ಲೂ ವಿಶೇಷವಾಗಿ ಮೂರನೇ ಜಗತ್ತಿನ ದೇಶಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿತು; ಈ ಕಾರ್ಯತಂತ್ರವು ನೈತಿಕವಾಗಿ ಅಸಂಗತವಾಗಿರುವುದರ ಜೊತೆಗೆ, ದಮನಿತ ಜನರ ನಡುವೆ ಪರಸ್ಪರರನ್ನು ಹಾಳುಗೆಡವುವ ಸ್ಪರ್ಧೆಯನ್ನು ಆದರ್ಶೀಕರಿಸುತ್ತದೆ. ಇದು ಈಗ, ವಿಶ್ವ ಅರ್ಥವ್ಯವಸ್ಥೆಯನ್ನು ಮುಂದೆ ಹೋಗಲಾರದಂತಹ ಒಂದು ಸ್ಥಿತಿಗೆ ತಂದಿದೆ. ಮೂರನೇ ಜಗತ್ತಿನ ದೇಶಗಳ ಅರ್ಥವ್ಯವಸ್ಥೆಗಳಿಗೆ ಈ ಬಿಕ್ಕಟ್ಟಿನಿಂದ ಹೊರಬರುವ ಏಕೈಕ ಮಾರ್ಗವೆಂದರೆ ‘ರಫ್ತುಪ್ರಧಾನ ಬೆಳವಣಿಗೆ’ಯ ಕಾರ್ಯತಂತ್ರವನ್ನು ತೊರೆಯುವುದು ಮತ್ತು ಅದಕ್ಕಾಗಿ ಈಗಾಗಲೇ ಬಹಳಷ್ಟು ಹಾನಿ ಮಾಡಿರುವ ‘ಸೇ’ ನಿಯಮದ ಬಿಗಿ ಹಿಡಿತದಿಂದ ಹೊರಬರುವುದು. ಪ್ರಧಾನ
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು : ಕೆ.ಎಂ.ನಾಗರಾಜ್
ಜೀನ್-ಬ್ಯಾಪ್ಟಿಸ್ಟ್ ಸೇ ಎಂಬ ಒಬ್ಬ ಫ್ರೆಂಚ್ ಅರ್ಥಶಾಸ್ತ್ರಜ್ಞ, ‘ಪೂರೈಕೆಯು ತಾನೇ ಅದಕ್ಕೆ ಬೇಡಿಕೆಯನ್ನು ಸೃಷ್ಟಿಸುತ್ತದೆ’ ಎಂಬ ಒಂದು ನಿಯಮವನ್ನು ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ರೂಪಿಸಿದ್ದರು. ಈ ನಿಯಮದ ಪ್ರಕಾರ, ಯಾವುದೇ ಒಂದು ಅರ್ಥವ್ಯವಸ್ಥೆಯಲ್ಲಿ ಉತ್ಪಾದಿಸುವ ಒಟ್ಟು ಮೊತ್ತದ ಸರಕುಗಳ ಮೇಲಿನ ಬೇಡಿಕೆಯು ಎಂದಿಗೂ ಅಸಮರ್ಪಕವಾಗಿರಲು ಸಾಧ್ಯವಿಲ್ಲ. ಪ್ರಧಾನ
ಅವರ ವಾದ ಹೀಗಿತ್ತು: ಉತ್ಪಾದಿಸುವ ಯಾವುದೇ ವಸ್ತುವು ತನ್ನ ಉತ್ಪಾದನೆಗೆ ಸಮಾನ ಪ್ರಮಾಣದ ವರಮಾನವನ್ನು ಈ ಉತ್ಪಾದನೆಗೆ ಸಂಬಂಧಿಸಿದವರಲ್ಲಿ ಉಂಟುಮಾಡುತ್ತದೆ. ಈ ವರಮಾನವನ್ನು ಒಂದೋ ಬಳಕೆ ಮಾಡಲಾಗುತ್ತದೆ ಅಥವಾ ‘ಉಳಿಕೆʼಮಾಡಲಾಗುತ್ತದೆ (ಅಂದರೆ, ಬಳಕೆಯಾಗುವುದಿಲ್ಲ). ಈ ವರಮಾನದಲ್ಲಿ ಎಷ್ಟು ಬಳಕೆಯಾಗಿದೆಯೋ ಅದು ಅದರ ಸಮಾನ ಪ್ರಮಾಣದ ಬೇಡಿಕೆಯನ್ನು ಉತ್ಪಾದಿಸಿದ ಗ್ರಾಹಕ ಸರಕುಗಳ ಮೇಲೆ ಉಂಟುಮಾಡುತ್ತದೆ. ಮತ್ತು, ಎಷ್ಟು ‘ಉಳಿಕೆ’ಯಾಗಿದೆಯೋ ಅಷ್ಟು ಬಂಡವಾಳ ಸರಕುಗಳನ್ನು ಖರೀದಿಸಲು ನೇರವಾಗಿ ಬಳಕೆಯಾಗುತ್ತದೆ, ಅಥವಾ ಬಂಡವಾಳ ಸರಕುಗಳನ್ನು ಖರೀದಿಸುವವರಿಗೆ ಸಾಲವಾಗಿ, ಅಂದರೆ ಹೂಡಿಕೆ ಮಾಡ ಬಯಸುವವರಿಗೆ ಸಾಲ ನೀಡಲು ಬಳಕೆಯಾಗುತ್ತದೆ. ‘ಉಳಿಕೆ’ಯಾದ ಸಕಲವನ್ನೂ ಮತ್ತು ಹೂಡಿಕೆ ಮಾಡಿದ ಸಕಲವನ್ನೂ ಅಂತಿಮವಾಗಿ ಬಡ್ಡಿ ದರಗಳ ಹೊಂದಾಣಿಕೆಯ ಮೂಲಕ ಸರಿದೂಗಿಸಲಾಗುತ್ತದೆ, ಯಾವ ರೀತಿಯಲ್ಲಿ ಅಂದರೆ, ಅಂತಹ ಹೊಂದಾಣಿಕೆಗಳ ಮೂಲಕ ಒಂದು ಅರ್ಥವ್ಯವಸ್ಥೆಯಲ್ಲಿ ಉತ್ಪಾದಿಸಿದ ಎಲ್ಲವೂ ಅಂತಿಮವಾಗಿ ಒಟ್ಟಾರೆ ಬೇಡಿಕೆಯಾಗಿ ಪರಿಣಮಿಸುತ್ತವೆ ಮತ್ತು ಬಂಡವಾಳಶಾಹಿ ಅರ್ಥವ್ಯವಸ್ಥೆಯು ಒಂದು ಗರಿಷ್ಠ ಮಟ್ಟದ ಉತ್ಪಾದನೆಯ ಸ್ಥಿತಿಯಲ್ಲಿರುತ್ತದೆ. ಅಂದರೆ, ಅರ್ಥವ್ಯವಸ್ಥೆಯು ಪೂರ್ಣ ಉದ್ಯೋಗದಲ್ಲಿ ಇರದಿರಲು ಯಾವುದೇ ಕಾರಣಗಳಿಲ್ಲ. ಬೇಡಿಕೆ-ಪೂರೈಕೆಯ ವ್ಯತ್ಯಯಗಳು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಇರಬಹುದೇ ವಿನಃ, ಒಟ್ಟಾರೆಯಾಗಿ ಅಲ್ಲ ಎಂಬುದು ಅವರ ಗ್ರಹಿಕೆ.
ಸೇ ಅವರ ಈ ನಿಯಮದಲ್ಲಿರುವ ಸಮಸ್ಯೆಯೆಂದರೆ, ಅದು ವರ್ತಮಾನದ ಅವಧಿಯಲ್ಲಿ ಗಳಿಸಿದ ವರಮಾನದಿಂದ ಉಂಟಾಗುವ ಎಲ್ಲ ಬೇಡಿಕೆಯೂ ವರ್ತಮಾನದ ಅವಧಿಯಲ್ಲಿ ಉತ್ಪಾದಿಸುವ ಸರಕುಗಳಿಗೆ – ಅದು ಬಳಕೆಯೇ ಇರಬಹುದು ಅಥವಾ ಸಂಪತ್ತಿಗೆ ಕೂಡಿಸುವುದೇ (ಅಂದರೆ, ಹೂಡಿಕೆಯೇ) ಇರಬಹುದು – ಎಂದು ಗ್ರಹಿಸುತ್ತದೆ. ಆದರೆ, ವ್ಯಕ್ತಿಗಳು ತಮ್ಮ ವರಮಾನವನ್ನು ತಾವು ಹೊಂದಿರುವ ಸಂಪತ್ತಿನೊಂದಿಗೆ ಹಣದ ರೂಪದಲ್ಲಿ ಸೇರಿಸಿಕೊಳ್ಳ ಬಯತ್ತಾರೆ (ಸಂಪತ್ತನ್ನು ಅವರು ಭಾಗಶಃವಾಗಿ ಹಣದ ರೂಪದಲ್ಲಿ ಹೊಂದಿದ್ದರೆ ಈ ಬಯಕೆಯು ನಿಜವೂ ಹೌದು).
ಆದರೆ, ಈ ಹಣವು ವರ್ತಮಾನದ ಅವಧಿಯಲ್ಲಿ ಉತ್ಪಾದಿಸಿದ ಒಂದು ಸರಕಲ್ಲ – ಉದಾಹರಣೆಗೆ, ವರ್ತಮಾನದಲ್ಲಿ ತಮ್ಮ ಹಣವನ್ನು ಕಾಗದ ರೂಪದಲ್ಲಿ (paper money) ಹಿಡಿದಿಟ್ಟುಕೊಳ್ಳಲು ಅವರು ಬಯಸಿದ್ದರೆ. ಅಂಥಹ ಒಂದು ಸನ್ನಿವೇಶದಲ್ಲಿ ಉತ್ಪಾದಿಸಿದ ಸರಕುಗಳ ಪೂರೈಕೆಯು, ತತ್ಸಮಾನವಾದ ಬೇಡಿಕೆಯನ್ನು ಉಂಟುಮಾಡುವುದು ಶಕ್ಯವಿಲ್ಲ. ಹಾಗಾಗಿ, ಸಿ-ಎಂ-ಸಿ ಸಂಚಾರಪಥದಲ್ಲಿ (ಇದರಲ್ಲಿ ಸಿ ಅಂದರೆ ಒಂದು ಸರಕು ಎಂ ಅಂದರೆ ಹಣಕ್ಕೆ ಮಾರಾಟವಾಗುತ್ತದೆ; ಆ ಹಣವು ಸಿ ಅಂದರೆ ಮತ್ತೊಂದು ಸರಕನ್ನು ಕೊಳ್ಳುವಲ್ಲಿ ಬಳಕೆಯಾಗುತ್ತದೆ ಮತ್ತು ಬಳಕೆಯೇ ಈ ಸಂಚಾರಪಥದ ಉದ್ದೇಶ) ವ್ಯಕ್ತಿಗಳು ತಮ್ಮ ಹಣವನ್ನು (ಎಂ) ಒಂದು ವೇಳೆ ಸರಕಾಗಿ(ಸಿ) ಪರಿವರ್ತಿಸಬಯಸದಿದ್ದರೆ, ಉತ್ಪಾದನೆಯಾಗುವ ಸರಕುಗಳು ಆಗ ಅತಿ ಎನಿಸುತ್ತವೆ. ಇಂತಹ ಸಾಕಷ್ಟು ಬೇಡಿಕೆಯಿಲ್ಲದ ಸನ್ನಿವೇಶದಲ್ಲಿ ಉತ್ಪಾದಿತ ಸರಕಿನ ಹಣ-ಬೆಲೆ ಇಳಿದರೆ, ಅದರಿಂದ ಸಂಪತ್ತನ್ನು ಹಣ ರೂಪದಲ್ಲಿ ಹೊಂದುವ ಬಯಕೆ ಬಲಗೊಳ್ಳುತ್ತದೆ. ಹಾಗಾಗಿ, ಅತಿ-ಉತ್ಪಾದನೆಯ ಪ್ರವೃತ್ತಿಯು ನಿವಾರಣೆಯಾಗುವುದಿಲ್ಲ.
ಅಸಂಬದ್ಧ ಗ್ರಹಿಕೆ
ಸೇ ಅವರ ನಿಯಮವನ್ನು ಆಧಾರವಿಲ್ಲದೆ ಒಪ್ಪಿಕೊಂಡ ಮುಖ್ಯಧಾರೆಯ ಬೂರ್ಜ್ವಾ ಅರ್ಥಶಾಸ್ತ್ರವು, ಹಣವು ಚಲಾವಣೆಯ ಒಂದು ಮಾಧ್ಯಮವಷ್ಟೇ ಹೊರತು, ಸಂಪತ್ತಿನ ಒಂದು ರೂಪವಲ್ಲ, ಆದುದರಿಂದ, ವ್ಯಕ್ತಿಗಳು ಹಣವನ್ನು ಸಂಪತ್ತಿನ ರೂಪದಲ್ಲಿ ಹಿಡಿಟ್ಟುಕೊಳ್ಳಲು ಬಯಸುವುದಿಲ್ಲ ಎಂದು ಭಾವಿಸಿತು. ಈ ಗ್ರಹಿಕೆಯು ಒಂದು ಅಸಂಬದ್ಧವೇ ಸರಿ. ಅನುಭವಾತ್ಮಕವಾಗಿ ಇದು ಅಸತ್ಯ ಮಾತ್ರವಲ್ಲ, ತಾರ್ಕಿಕವಾಗಿ ಸಮರ್ಥನೀಯವೂ ಅಲ್ಲದುದರಿಂದ, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸಂದರ್ಭದಲ್ಲಿ ಸೇ ಅವರ ನಿಯಮವು ಅಸಂಬದ್ಧವಾಗುತ್ತದೆ. ಈ ನಿಯಮದ ಬಗ್ಗೆ ಮತ್ತು ಒಬ್ಬ ಅರ್ಥಶಾಸ್ತ್ರಜ್ಞರಾಗಿ ಜೆ ಬಿ ಸೇ ಅವರನ್ನು ಕಾರ್ಲ್ ಮಾರ್ಕ್ಸ್ ಸಾಕಷ್ಟು ಕಟುವಾಗಿ ಟೀಕಿಸುತ್ತಿದ್ದರು (ಅವರನ್ನು “trite” Monsieur Say ಅಂದರೆ “ಹಳಸಲು” ಶ್ರೀಮಾನ್ ಸೆ ಎಂದು ಅವರು ಕರೆದಿದ್ದರು) ಮತ್ತು ಬಂಡವಾಳಶಾಹಿಯ ಅಡಿಯಲ್ಲಿ ಅತಿ-ಉತ್ಪಾದನೆಯ ಬಿಕ್ಕಟ್ಟುಗಳ ಸಾಧ್ಯತೆಯನ್ನು ವ್ಯಾಖ್ಯಾನಿಸಿದ್ದರು.
ಇದನ್ನೂ ಓದಿ: ಜೋಳ ಖರೀದಿಸಲು ಸರ್ಕಾರ ವಿಳಂಬ; ಜೂ. 2ರಂದು ಸಿಂಧನೂರು ಬಂದ್
ಹೀಗೆ ಮಾರ್ಕ್ಸ್ ಅವರಿಂದ ಮಾತ್ರವಲ್ಲದೆ 1930ರ ದಶಕದ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ಬೂರ್ಜ್ವಾ ಅರ್ಥಶಾಸ್ತ್ರದಲ್ಲಿ ಉಂಟಾದ ಕೀನ್ಸಿಯನ್ ಕ್ರಾಂತಿಯ ಸನ್ನಿವೇಶದಲ್ಲಿ ಮತ್ತೊಮ್ಮೆ ಬಗೆಹರಿಸಲ್ಪಟ್ಟ ಅರ್ಥಶಾಸ್ತ್ರ ಸಂಬAಧಿತ ಈ ನಿಗೂಢ ಚರ್ಚೆಗಳ ಬಗ್ಗೆ ನಾವೀಗ ಏಕೆ ಮಾತನಾಡುತ್ತಿದ್ದೇವೆ ಎಂದು ಆಶ್ಚರ್ಯಪಡಬಹುದು. ಮಹಾಆರ್ಥಿಕ ಕುಸಿತದ ಸಮಯದಲ್ಲಿ, ಹೀಗೆ ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆ ಎಂದಿಗೂ ಒಟ್ಟು ಬೇಡಿಕೆಯ ಕೊರತೆಯನ್ನು ಕಾಣುವುದಿಲ್ಲ ಎಂದು ಹೇಳುವುದು ಹಾಸ್ಯಾಸ್ಪದ ಸಂಗತಿಯಾಗಿ ಬಿಟ್ಟಿತ್ತು. ಕೀನ್ಸ್ ಬೊಲ್ಶೆವಿಕ್-ಶೈಲಿ ಕ್ರಾಂತಿಯಿAದ ಪಾಶ್ಚ್ಯಾತ್ಯ ಬಂಡವಾಳಶಾಹಿಯನ್ನು ರಕ್ಷಿಸಲು ಬಯಸಿದ್ದರು, ಮತ್ತು ಅದನ್ನು ಸಾಧಿಸುವುದಕ್ಕಾಗಿ, ಬಂಡವಾಳಶಾಹಿಯ ವೈಫಲ್ಯಗಳನ್ನು ಮೊದಲು ಒಪ್ಪಿಕೊಳ್ಳಬೇಕು ಮತ್ತು ಅವುಗಳಿಂದ ಹೊರಬರುವ ಉಪಾಯಗಳ ಮೂಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಸರಿಪಡಿಸುವುದರಿಂದ ಕ್ರಾಂತಿಯನ್ನು ತಡೆಯಬಹುದು ಎಂದು ಅವರು ಗುರುತಿಸಿದರು.
ಘಾತಕ ಮತ್ತು ಮರೆಮಾಚುವ ಹುನ್ನಾರ
ಸೇ ಅವರ ನಿಯಮ ಬಗ್ಗೆ ನಾವು ಮಾತನಾಡುತ್ತಿರುವ ಕಾರಣವೆಂದರೆ, ಈ ನಿಯಮವು ಸದ್ದಿಲ್ಲದೆ ಆರ್ಥಿಕ ಸಂಕಥನಕ್ಕೆ ಮೌನವಾಗಿ ಮರಳಿದೆ. ಈ ಪುನರಾಗಮನದ ಬಗ್ಗೆ ತೋರುತ್ತಿರುವ ಮೌನವು ಅದನ್ನು ಎಷ್ಟು ಪ್ರಭಾವಶಾಲಿಯಾಗಿ ಮಾಡಿದೆಯೋ, ಅದು ಅಷ್ಟೇ ಘಾತುಕವೂ ಆಗಿದೆ. ಹಾಗೆ ನೋಡಿದರೆ, ಇಡೀ ನವ-ಉದಾರವಾದಿ ಆರ್ಥಿಕ ವ್ಯವಸ್ಥೆಯ ತರ್ಕವೇ ಸೇ ನಿಯಮದ ಸಿಂಧುತ್ವವನ್ನು ಒಪ್ಪಿಕೊಂಡಿರುವ ಅಂಶದ ಮೇಲೆ ನಿಂತಿದೆ.
ನವ ಉದಾರವಾದದ ಬೌದ್ಧಿಕ ತಳಹದಿಯನ್ನು ಮತ್ತು ಅದು ಮುನ್ನೆಲೆಗೆ ಬರುವವರೆಗೂ ಪ್ರಚಲಿತವಿದ್ದ ನಿಯಂತ್ರಣ ನೀತಿಗಳ ಕಾರ್ಯತಂತ್ರವನ್ನು (ಭಾರತದಲ್ಲಿ ನಿಯಂತ್ರಣ ನೀತಿಗಳ ಕಾರ್ಯತಂತ್ರವನ್ನು ಬಹುತೇಕವಾಗಿ ನೆಹರು-ಮಹಾಲನೋಬಿಸ್ ಕಾರ್ಯತಂತ್ರ ಎಂದು ಕರೆಯಲಾಗಿದೆ) ತೊರೆಯುವ ಬೌದ್ಧಿಕ ತಳಹದಿಯನ್ನು ಎಪ್ಪತ್ತರ ದಶಕದ ಆರಂಭದಲ್ಲಿ ಹಾಕಲಾಯಿತು. ದಕ್ಷಿಣ ಕೊರಿಯಾ, ತೈವಾನ್, ಹಾಂಗ್ ಕಾಂಗ್ ಮತ್ತು ಸಿಂಗಾಪುರ, ಈ ನಾಲ್ಕು ಪೂರ್ವ ಏಷ್ಯಾದ ‘ಹುಲಿಗಳು’ ಗಮನಾರ್ಹವಾದ ಉನ್ನತ ಆರ್ಥಿಕ ಬೆಳವಣಿಗೆಯ ದರಗಳನ್ನು ತೋರಿಸಿವೆ; ಈ ದೇಶಗಳ ಬೆಳವಣಿಗೆಯು ನಿಯಂತ್ರಣ ನೀತಿಗಳ ಕಾರ್ಯತಂತ್ರವನ್ನು ಅನುಸರಿಸುವ ಭಾರತದಂತಹ ದೇಶಗಳಿಗಿಂತ ಉನ್ನತವಾಗಿದೆ; ಮತ್ತು ಉಳಿದ ದೇಶಗಳೂ ಸಹ ನಿಯಂತ್ರಣ ನೀತಿಗಳ ಕಾರ್ಯತಂತ್ರವನ್ನು (ಅದನ್ನು ವಿಶ್ವ ಬ್ಯಾಂಕ್ ‘ಒಳಮುಖವಾದ’ ಅಭಿವೃದ್ಧಿ ಕಾರ್ಯತಂತ್ರ ಎಂದು ಕರೆದಿತ್ತು) ತ್ಯಜಿಸಿ, ಅದರ ಬದಲಿಗೆ ‘ರಫ್ತು-ಪ್ರಧಾನ ಬೆಳವಣಿಗೆ’ಯನ್ನು ಅನುಸರಿಸಿದರೆ, ಈ ದೇಶಗಳೂ ಸಹ ‘ಏಷ್ಯಾದ ಹುಲಿ’ಗಳ ರೀತಿಯಲ್ಲಿ ಯಶಸ್ವಿಯಾಗಬಹುದು ಎಂಬ ಒಂದು ವಾದವನ್ನು ಮಂಡಿಸಲಾಯಿತು.
ಈ ವಾದವು ಅಸಂಬದ್ಧವಾಗಿದೆ. ವಿಶ್ವದ ಒಟ್ಟು ಬೇಡಿಕೆಯ ಮಟ್ಟವು ಒಂದು ನಿರ್ದಿಷ್ಟ ದರದಲ್ಲಿ ವಿಸ್ತರಿಸುತ್ತಿದ್ದರೆ, ಆಗ ಎಲ್ಲ ದೇಶಗಳ ಒಟ್ಟು ಉತ್ಪಾದನೆಯು ಒಂದು ಹೆಚ್ಚಿನ ದರದಲ್ಲಿ ವಿಸ್ತರಿಸುವುದು ಸಾಧ್ಯವಿಲ್ಲ. ಕೆಲವು ದೇಶಗಳ ಉತ್ಪಾದನೆ ಮಾತ್ರವೇ ವಿಶ್ವದ ಒಟ್ಟು ಬೇಡಿಕೆಗಿಂತಲೂ ಒಂದು ಉನ್ನತವಾದ ದರದಲ್ಲಿ ಒಂದು ವೇಳೆ ವಿಸ್ತರಿಸುತ್ತಿದ್ದರೆ, ಆಗ ಉಳಿದ ದೇಶಗಳ ಉತ್ಪಾದನೆಯ ವಿಸ್ತರಣೆಯು ತಗ್ಗಿದ ದರದಲ್ಲಿರುವುದೇ ಅದಕ್ಕೆ ಕಾರಣವಾಗುತ್ತದೆ. ಇದುವರೆಗೂ ನಿಧಾನವಾಗಿ ಬೆಳೆಯುತ್ತಿದ್ದ ದೇಶಗಳ ಉತ್ಪಾದನಾ ಬೆಳವಣಿಗೆಯು ವೇಗವನ್ನು ಪಡೆದುಕೊಂಡರೆ, ಅದು ಇದುವರೆಗೂ ವೇಗವಾಗಿ ಬೆಳೆಯುತ್ತಿದ್ದ ದೇಶಗಳಿಗೆ ನಷ್ಟ ಉಂಟುಮಾಡುವ ಮೂಲಕ ಮಾತ್ರ ಆಗಿರಬಹುದು. ಆದ್ದರಿಂದ, ಎಲ್ಲಾ ದೇಶಗಳೂ ‘ರಫ್ತು-ಪ್ರಧಾನ ಬೆಳವಣಿಗೆ’ ಕಾರ್ಯತಂತ್ರವನ್ನು ಅನುಸರಿಸಿದರೆ ‘ಏಷ್ಯನ್ ಹುಲಿಗಳ’ ವೇಗದಲ್ಲೇ ಬೆಳೆಯಬಹುದು ಎಂದು ಆಸೆ ತೋರಿಸುವುದು ಅಸಂಬದ್ಧವಾಗಿದೆ; ಅದು ಒಟ್ಟಾರೆ ಬೇಡಿಕೆಯ ಮೇಲಿನ ನಿರ್ಬಂಧವನ್ನು ನಿರ್ಲಕ್ಷಿಸಿದಂತೆಯೇ ಸರಿ, ಅಂದರೆ ಸೇ’ ನಿಯಮವನ್ನು ಒಪ್ಪಿಕೊಳ್ಳುವುದು. ಆದ್ದರಿಂದ ನೆಹರೂ ಅನುಸರಿಸಿದ ಕಾರ್ಯತಂತ್ರವನ್ನು ತೊರೆಯುವ ಕರೆಯ ಹಿಂದೆ, ಈ ಅಸಂಬದ್ಧ ಸೇ’ ನಿಯಮದ ಮೊರೆಹೋಗುವ ಹುನ್ನಾರವಿತ್ತು.
‘ರಫ್ತು-ಪ್ರಧಾನ ಬೆಳವಣಿಗೆ‘ಯ ‘ಯಶಸ್ಸಿ’ನ ಹಿಂದೆ
ಈ ಹುನ್ನಾರವನ್ನು ಮರೆಮಾಚಲಾಯಿತು. ಹಾಗಾಗಿಯೇ ಅದು ಯಶಸ್ವಿಯಾಯಿತು. ಇದು ‘ಸಣ್ಣ ದೇಶಗಳ’ ಉದಾಹರಣೆಯ ರೂಪವನ್ನು ಪಡೆದುಕೊಂಡಿತು. ಒಂದು ಸಣ್ಣ ದೇಶವು, ಅದು ಸಣ್ಣದಾಗಿರುವುದರಿಂದಲೇ, ದೊಡ್ಡ ದೇಶಗಳಿಗೆ ನಷ್ಟವನ್ನು ಉಂಟುಮಾಡುವ ಮೂಲಕ ತಮ್ಮ ರಫ್ತುಗಳನ್ನು ತಳ್ಳಬಲ್ಲವು ಆದರೆ, ಈ ನಷ್ಟಗಳು ದೊಡ್ಡ ದೇಶಗಳು ಗಮನಿಸಬಹುದಾದ ಪ್ರಮಾಣದಲಿರುವುದಿಲ್ಲ್ಲ. ಆದ್ದರಿಂದ ಈ ಸಣ್ಣ ದೇಶಗಳು ತಾವು ಬಯಸಿದರೆ ಇನ್ನೂ ಹೆಚ್ಚಿನದನ್ನು ರಫ್ತು ಮಾಡಬಹುದು ಎಂದು ಭಾವಿಸಿದವು. ಅಂದರೆ, ಅವು ಬೇಡಿಕೆ ನಿರ್ಬಂಧವನ್ನು ಎದುರಿಸುವುದಿಲ್ಲ ಎಂದು ಊಹಿಸಿಕೊಂಡವು ಮತ್ತು ತಮ್ಮ ರಫ್ತುಗಳನ್ನು ಹೆಚ್ಚಿಸಿದವು ಕೂಡ. ಈ ವಿದ್ಯಮಾನವನ್ನೇನೋ ಅರ್ಥಮಾಡಿಕೊಳ್ಳಬಹುದು. ಆದರೆ, ‘ರಫ್ತು-ಪ್ರಧಾನ ಬೆಳವಣಿಗೆ’ಯ ನವ-ಉದಾರವಾದಿ ಕಾರ್ಯತಂತ್ರವನ್ನು, ಪ್ರತಿಯೊಂದು ದೇಶವೂ ಒಂದು ‘ಸಣ್ಣ ದೇಶ’ದಂತೆ ಅಳವಡಿಸಿಕೊಳ್ಳಬಹುದು ಎಂಬ ಮುಚ್ಚುಮರೆಯ ಮೂಲಕ, ಎಲ್ಲ ದೇಶಗಳಿಗೂ ಮಾರಾಟ ಮಾಡಲಾಯಿತು; ಇದಂತೂ ಪಕ್ಕಾ ಅಸಂಬದ್ಧ ಮಾತಾಗಿತ್ತು. ಇದು, ಒಟ್ಟು ಕುಟುಂಬದ ಪ್ರತಿಯೊಬ್ಬರೂ ಕುಟುಂಬದ ಒಟ್ಟು ಆಸ್ತಿಯು ತಮ್ಮದೇ ಎಂದು ಭಾವಿಸುವ ರೀತಿಯ ತಪ್ಪು ಕಲ್ಪನೆಯ ಪ್ರಕರಣವೇ ಸರಿ ಮತ್ತು ಇದು ಸೇ ನಿಯಮದ ಹಿಂಬಾಗಿಲ ಪ್ರವೇಶವೂ ಹೌದು.
ಏಷ್ಯಾದ ಈ ನಾಲ್ಕು ‘ದೇಶಗಳ’ ಯಶಸ್ಸಿನ ನಂತರ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಅದ್ಭುತ ಬೆಳವಣಿಗೆಯ ಯಶಸ್ಸುಗಳು ಕಂಡುಬಂದವು; ನಿಜ, ಅವು ನವ-ಉದಾರವಾದಿ ಕಾರ್ಯತಂತ್ರದ ಅಥವಾ ‘ರಫ್ತು-ಪ್ರಧಾನ ಬೆಳವಣಿಗೆ’ಯ ಪಕ್ಕಾ ಮತ್ತು ಸರಳ ಉದಾಹರಣೆಗಳಲ್ಲ. ಈ ದೇಶಗಳು ರಫ್ತಿನಲ್ಲಿ ಯಶಸ್ಸು ಪಡೆದಿದ್ದರೆ, ಅದಕ್ಕೆ ಬಹು ಮಟ್ಟಿಗೆ ಪಶ್ಚಿಮದ ಮುಂದುವರೆದ ದೇಶಗಳ ಬಂಡವಾಳಗಾರರು ತಮ್ಮ ಮುಂದುವರೆದ ಪಾಶ್ಚಿಮಾತ್ಯ ಮಾರುಕಟ್ಟೆಗಾಗಿ ಉತ್ಪಾದಿಸಲು ತಮ್ಮ ಕಾರ್ಖಾನೆಗಳನ್ನು ಈ ದೇಶಗಳಿಗೆ ಸ್ಥಳಾಂತರಿಸುವ ಮಾರ್ಗವನ್ನು ಆಯ್ಕೆಯನ್ನು ಮಾಡಿಕೊಂಡದ್ದು ಕಾರಣ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ದೇಶಗಳ ಯಶಸ್ಸಿನ ಹಿಂದೆ ಮುಂದುವರೆದ ಬಂಡವಾಳಶಾಹಿ ಅರ್ಥವ್ಯವಸ್ಥೆಗಳ ಬೆಳವಣಿಗೆಯ ನಿಧಾನಗತಿ ಇತ್ತು; ನಿಜ ಇದು ಮುಂದುವರೆದ ದೇಶಗಳ ಬಂಡವಾಳಕ್ಕೆ ಅನ್ವಯಿಸುವುದಿಲ್ಲ. ಇನ್ನು, ಮೂರನೇ ಜಗತ್ತಿನ ಉಳಿದ ದೇಶಗಳು ಈ ಓಟದಲ್ಲಿ ಹೊರಗುಳಿದವು ಎಂಬುದು ಬೇರೇ ಮಾತು. ಅದೇನೇ ಇರಲಿ, ಇದು ದೇಶ ದೇಶಗಳ ನಡುವಿನ ಸ್ಪರ್ಧೆಯಾಗಿತ್ತು ಎಂಬುದಂತೂ ಹೌದು.
ಸೇ ನಿಯಮ ಸರಿಯಾಗಿದೆ ಎಂದು ಭಾವಿಸಿಕೊಂಡ ‘ರಫ್ತು-ಪ್ರಧಾನ ಬೆಳವಣಿಗೆ’ ಕಾರ್ಯತಂತ್ರವು ವಾಸ್ತವವಾಗಿ ದೇಶಗಳನ್ನು, ಅದರಲ್ಲೂ ವಿಶೇಷವಾಗಿ ಮೂರನೇ ಜಗತ್ತಿನ ದೇಶಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿತು; ಉದಾಹರಣೆಗೆ, ಭಾರತವು ಬಾಂಗ್ಲಾದೇಶಕ್ಕೆ ನಷ್ಟವನ್ನು ಉಂಟುಮಾಡುವ ಮೂಲಕ ಮಾತ್ರವೇ ಹೆಚ್ಚು ಹೆಚ್ಚು ಉಡುಪುಗಳನ್ನು ರಫ್ತು ಮಾಡಬಹುದು, ಇತ್ಯಾದಿ. ಅಂದರೆ, ಒಂದು ದೇಶವು ತನ್ನ ದುಡಿಯುವ ಜನರಿಗೆ ಕೆಳ ಮಟ್ಟದ ಕೂಲಿಯನ್ನು ಕೊಡುವ ಮೂಲಕ, ಅವರಿಂದ ಅಧಿಕವಾಗಿ ಕೆಲಸ ತೆಗೆಯುವ ಮೂಲಕ ಮತ್ತು ಅವರಿಗೆ ನೀಡಬೇಕಾದ ಕಾನೂನುಬದ್ಧ ಪಾವತಿಗಳನ್ನು ತಡೆಹಿಡಿಯುವ ವಂಚನೆಯ ಮೂಲಕ ಅವರನ್ನು ಹೆಚ್ಚು ಹಿಂಡಿ, ತನ್ನ ರಫ್ತು ಧಾವಂತದಲ್ಲಿ ಹೆಚ್ಚು ಯಶಸ್ವಿಯಾಗುತ್ತದೆ. ಹೀಗೆ ಅಸಮ ಬೆಳವಣಿಗೆಯನ್ನು ಅಥವಾ ಬಡತನವನ್ನು ಉಂಟುಮಾಡುವ ಬೆಳವಣಿಗೆ ಎಂಬುದು ‘ರಫ್ತು-ಪ್ರಧಾನ ಬೆಳವಣಿಗೆ’ಯ ತರ್ಕದಲ್ಲಿಯೇ ಅಡಕವಾಗಿದೆ.
ಹೊರಬರುವ ಏಕೈಕ ಮಾರ್ಗ
ಆದರೆ ಬೆಳವಣಿಗೆಯನ್ನು ಅಸಮಗೊಳಿಸುವುದು ಎಂದರೆ ವಿಶ್ವ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಬೆಳವಣಿಗೆಯ ದರವು ಅಂತಿಮವಾಗಿ ನಿಧಾನಗೊಳ್ಳುತ್ತದೆ, ಇದರಿಂದ ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರವು ಒಂದು ಬಿಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತದೆ. ಕೊರೊನಾ ಹರಡುವ ಮುನ್ನವೇ, ವಿಶ್ವ ಅರ್ಥವ್ಯವಸ್ಥೆಯ ಒಟ್ಟಾರೆ ಜಿಡಿಪಿಯ ದಶಕದ ಬೆಳವಣಿಗೆಯ ದರವು ಎರಡನೇ ಮಹಾಯುದ್ದಾನಂತರದ ಎಲ್ಲ ದಶಕಗಳಿಗಿಂತಲೂ ಅತಿ ಕೆಳ ಮಟ್ಟದಲ್ಲಿತ್ತು; ಮತ್ತು ಸಾಂಕ್ರಾಮಿಕದ ನಂತರ ಈ ಬೆಳವಣಿಗೆಯ ದರವು ಇನ್ನೂ ಹೆಚ್ಚು ನಿಧಾನಗೊಂಡಿದೆ.
ಈ ಕಾರ್ಯತಂತ್ರವು ನೈತಿಕವಾಗಿ ಅಸಂಗತವಾಗಿರುವುದರ ಜೊತೆಗೆ, ದಮನಿತ ಜನರು ಪರಸ್ಪರರನ್ನು ಹಾಳುಗೆಡವುವ ಸ್ಪರ್ಧೆಯನ್ನು ಆದರ್ಶೀಕರಿಸುತ್ತದೆ. ಇದರ ಪರಿಣಾಮವೆಂದರೆ, ವಿಶ್ವ ಅರ್ಥವ್ಯವಸ್ಥೆಯನ್ನು ಮುಂದೆ ಹೋಗಲಾರದಂತಹ ಒಂದು ಸ್ಥಿತಿಗೆ ತಂದಿದೆ. ಮೂರನೇ ಜಗತ್ತಿನ ದೇಶಗಳ ಅರ್ಥವ್ಯವಸ್ಥೆಗಳಿಗೆ ಈ ಬಿಕ್ಕಟ್ಟಿನಿಂದ ಹೊರಬರುವ ಏಕೈಕ ಮಾರ್ಗವೆಂದರೆ ದೇಶೀಯ ಮಾರುಕಟ್ಟೆಯನ್ನು ವಿಸ್ತರಿಸುವುದು.
ಅದಕ್ಕಾಗಿ ಬೃಹತ್ ವೆಚ್ಚಗಳನ್ನು ಕೈಗೊಳ್ಳುವಂತೆ ಪ್ರಭುತ್ವವನ್ನು ಕ್ರಿಯಾಶೀಲಗೊಳಿಸಬೇಕಾಗುತ್ತದೆ. ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸಲು ಕೃಷಿ ಬೆಳವಣಿಗೆಯ ದರವನ್ನು ಹೆಚ್ಚಿಸಬೇಕಾಗುತ್ತದೆ (ಇದು ರೈತರು ಮತ್ತು ಕೃಷಿ ಕಾರ್ಮಿಕರ ಕೈಯಲ್ಲಿ ಹೆಚ್ಚಿನ ಆದಾಯವನ್ನು ಇರಿಸುತ್ತದೆ), ಕನಿಷ್ಠ ವೇತನದ ಮಟ್ಟವನ್ನು ಹೆಚ್ಚಿಸಬೇಕಾಗುತ್ತದೆ (ಇದು ಕಾರ್ಮಿಕರ ಕೈಯಲ್ಲಿ ಹೆಚ್ಚಿನ ಆದಾಯವನ್ನು ಇರಿಸುತ್ತದೆ) ಮತ್ತು ಕಲ್ಯಾಣ ಪ್ರಭುತ್ವ ಕ್ರಮಗಳನ್ನು ಹೆಚ್ಚಿಸಬೇಕಾಗುತ್ತದೆ (ಇದು ಇಡೀ ದುಡಿಯುವ ಜನಸಮೂಹಗಳ ಜೀವನ ಮಟ್ಟವನ್ನು ಸುಧಾರಿಸುತ್ತದೆ). ಈ ಉದ್ದೇಶಕ್ಕಾಗಿ ಬೇಕಾಗುವ ಹಣವನ್ನು ಸಂಪತ್ತು ತೆರಿಗೆ ಮತ್ತು ಉತ್ತರಾಧಿಕಾರ ತೆರಿಗೆಗಳ ಮೂಲಕ ಒದಗಿಸಿಕೊಳ್ಳುವ ಅಗತ್ಯವಿದೆ.
ಈ ಎಲ್ಲವನ್ನೂ ಕೈಗೊಳ್ಳಲು ಬಂಡವಾಳದ ಹರಿವಿನ ಮೇಲೆ, ವಿಶೇಷವಾಗಿ ಹಣಕಾಸಿನ ಹೊರಹರಿವಿನ ಮೇಲೆ, ನಿಯಂತ್ರಣವನ್ನು ಹೇರುವ ಅಗತ್ಯವಿರುತ್ತದೆ. ಅದಕ್ಕಾಗಿ ವಿದೇಶಗಳೊಂದಿಗಿನ ವ್ಯಾಪಾರಗಳನ್ನು ನಿಯಂತ್ರಿಸುವ ಅಗತ್ಯವಿರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ‘ರಫ್ತುಪ್ರಧಾನ ಬೆಳವಣಿಗೆ’ಯ ಕಾರ್ಯತಂತ್ರವನ್ನು ತೊರೆಯುವುದು ಮತ್ತು ಅದಕ್ಕಾಗಿ ಈಗಾಗಲೇ ಬಹಳಷ್ಟು ಹಾನಿ ಮಾಡಿರುವ ಸೇ ನಿಯಮದ ಬಿಗಿ ಹಿಡಿತದಿಂದ ಹೊರಬರುವುದು ಅಗತ್ಯವಾಗುತ್ತದೆ.
ಇದನ್ನೂ ನೋಡಿ: ಫ್ಯಾಸಿಸಂ ಹುಟ್ಟು ಹೇಗಾಯಿತು ಮತ್ತು ಅದನ್ನು ಮೊದಲಿನಿಂದಲೂ ವಿರೋಧಿಸಿದ ರಾಜಕೀಯ ಶಕ್ತಿಗಳು ಯಾವುವು? Janashakthi