ನೋಟು ಕೊಟ್ಟರೆ ವೋಟು ಕೊಡುತ್ತೇವೆ ಎಂದ ತೆಲಂಗಾಣದ ಮಹಿಳೆಯರು

ಹೈದರಾಬಾದ್: ಚುನಾವಣೆ ಬಂದರೆ ಹಣಕ್ಕಾಗಿ ಮತ ಮಾರಿಕೊಳ್ಳುವ ಘಟನೆಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಕೆಲ ಅಭ್ಯರ್ಥಿಗಳು ಸಹ ಪ್ರಚಾರದ ಭರಾಟೆಗೆ ಖರ್ಚು ಮಾಡುವುದಕ್ಕಿಂತ ಮತದಾರರಿಗೆ ಹಣ ಹಂಚಿಕೆ ಮಾಡುವ ಖರ್ಚು ಹೆಚ್ಚಾಗಿರುತ್ತದೆ.

ಈಗಂತೂ ಮತ ನೀಡಬೇಕೆಂದರೆ ಹಣ ನೀಡಬೇಕೆಂದು ಬೇಡಿಕೆ ಇಡುವುದು ಸಾಮಾನ್ಯವಾಗಿಬಿಟ್ಟಿದೆ. ತೆಲಂಗಾಣದ ಹುಜೂರಾಬಾದ್‍ನ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ಮತದಾರರು, ವಿಶೇಷವಾಗಿ ಮಹಿಳೆಯರು ನಾಳೆ(ಅಕ್ಟೋಬರ್‌ 30) ನಡೆಯಲಿರುವ ಉಪಚುನಾವಣೆಗೆ ಮೊದಲೇ ತಮ್ಮ ಅಮೂಲ್ಯ ಮತಕ್ಕಾಗಿ ಹಣ ನೀಡುವಂತೆ ಬಹಿರಂಗವಾಗಿಯೇ ಕೇಳುತ್ತಿದ್ದಾರೆ.

ಮತದಾರರಿಗೆ ಹಣ ಹಂಚಿಕೆ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾದರೂ ಸಹ ಕಠಿಣ ಕಾನೂನುಗಳಿಗೆ ಹೆದರಿ ತೆರೆಮರೆಯಲ್ಲಿ ಹಣ ನೀಡುವುದು ಮತ್ತು ಪಡೆಯುವುದು ನಡೆಯುತ್ತಿರುತ್ತದೆ. ಆದರೆ ತೆಲಂಗಾಣದಲ್ಲಿ ಬೀದಿಯಲ್ಲೇ ನಿಂತು ಮಹಿಳೆಯರು “ಮತ ಬೇಕಂದ್ರೆ ಹಣ ಕೊಡಿ” ಎಂದು ಬೀದಿಯಲ್ಲಿ ನಿಂತು ಜನಪ್ರತಿನಿಧಿಗಳಿಂದ ಬಹಿರಂಗ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಮತ ಪಡೆಯಲು ಎಲ್ಲಾ ಪಕ್ಷಗಳು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತವೆ. ಇದೇ ಸಂದರ್ಭದಲ್ಲಿ ಮತದಾರರು ಸಹ “ಇದು ನಮ್ಮ ಹಕ್ಕು, ನೀವು ನಮಗೆ ಹಣ ನೀಡಬೇಕು. ರಾಜಕಾರಣಿಗಳು ಬೇರೆ ಕಡೆ ಹಣ ಹಂಚುತ್ತಿದ್ದಾರೆ. ಆದರೆ ನಮಗೆ ನೀಡಿಲ್ಲ. ಕೆಲವರಿಗೆ ಹೇಳಿದಷ್ಟು ಪೂರ್ತಿ ಹಣ ನೀಡಿಲ್ಲ” ಎಂದು ಮಹಿಳೆಯರು ಪ್ರತಿಭಟನೆಯನ್ನೇ ನಡೆಸಿದ್ದಾರೆ.

ಕೆಲವು ಪಕ್ಷಗಳು ಹಣವನ್ನು ಹಂಚುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ರಂಗಪುರ್, ಕತ್ರಪಲ್ಲಿ, ಪೆದ್ದಪಾಪಯ್ಯ ಪಲ್ಲೆ ಗ್ರಾಮಗಳ ಮತದಾರರು ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಘಟನೆಯು ನಡೆದಿದೆ. ಆದರೆ ಯಾವುದೇ ರೀತಿಯ ಹಣ ವಿತರಣೆ ಆಗದ ಕಾರಣ ಮತದಾರರು ಪಕ್ಷಗಳ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ.

ರಾಜಕೀಯ ನಾಯಕರು ಕೆಲವರಿಗೆ ಹಣ ನೀಡಿದ್ದಾರೆ. ವೈರಲ್‌ ಆಗಿರುವ ವಿಡಿಯೋ ಒಂದರಲ್ಲಿ ಬಿಜೆಪಿ ಪಕ್ಷದಿಂದ ನೀಡಲಾದ ಕವರ್‌ನಲ್ಲಿ ರೂ.10,000 ಹಣ ನೀಡಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ನಾವೂ ಕೂಡ ಮತದಾರರು ಎಂದು ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿರುವ ಕಾರಣ ಮಾಜಿ ಆರೋಗ್ಯ ಸಚಿವ ಇಯಾತಲ ರಾಜೇಂದ್ರ ಅವರು ರಾಜೀನಾಮೆ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದೆ.

 

Donate Janashakthi Media

Leave a Reply

Your email address will not be published. Required fields are marked *