ಬೀದಿ ವ್ಯಾಪಾರಿಗಳು 1053; ಬೀದಿ ವ್ಯಾಪಾರದ ಹೆಸರಿನಲ್ಲಿ ಸಾಲ ಪಡೆದವರು 4000 ಮಂದಿ! | ಮಂಗಳೂರು ಪಾಲಿಕೆಯಿಂದಲೆ ಯೋಜನೆಯ ದುರುಪಯೋಗ?

ಬೀದಿ ವ್ಯಾಪಾರಿ

ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಸ್ವ-ನಿಧಿ ಸಾಲ ಯೋಜನೆಯನ್ನು ಮಂಗಳೂರು ಮಹಾನಗರ ಪಾಲಿಕೆ ಅನರ್ಹರಿಗೆ ನೀಡಿ ಯೋಜನೆಯನ್ನು ದುರುಪಯೋಗ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆರೋಪಿಸಿದ್ದಾರೆ.

ನಗರದಲ್ಲಿ 1053 ಜನರನ್ನು ಬೀದಿಬದಿ ವ್ಯಾಪಾರಿಗಳು ಎಂದು ಗುರುತಿಸಿದ್ದರೂ ಬೀದಿ ವ್ಯಾಪಾರಿಗಳಲ್ಲದ 4000 ಜನರಿಗೆ ಈಗಾಗಲೆ ಸಾಲ ನೀಡಲಾಗಿದ್ದು, ಮತ್ತೆ 3000 ಜನರಿಗೆ ಸಾಲ ನೀಡಲು ಸಾಲ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಇಮ್ತಿಯಾಝ್, “ಬೀದಿಬದಿ ವ್ಯಾಪಾರಸ್ಥರಿಗೆ ನೀಡಲಾಗುವ ಪ್ರಧಾನ ಮಂತ್ರಿಗಳ ಸ್ವ ನಿಧಿ ಸಾಲ ಯೋಜನೆಯಲ್ಲಿ ಬೀದಿಬದಿ ವ್ಯಾಪಾರಿಗಳಲ್ಲದ 4000ಕ್ಕೂ ಹೆಚ್ಚು ಜನರಿಗೆ ಮಂಗಳೂರು ಮಹಾನಗರದಲ್ಲಿ ಸಾಲ ನೀಡಲಾಗಿದೆ. ಇದೀಗ ಮತ್ತೆ ನಾಳೆ 3000 ಸಾವಿರ ಜನರಿಗೆ ಪುರಭವನದಲ್ಲಿ ಬೀದಿ ವ್ಯಾಪಾರಿಗಳ ಹೆಸರಿನಲ್ಲಿ ಸಾಲ ಮೇಳ ಹಮ್ಮಿಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪರ ಚಾನೆಲ್ ಸಂಪಾದಕನ ಮೇಲೆ ಎಫ್‌ಐಆರ್‌; ಪೊಲೀಸ್ ಕಮಿಷನರ್ ವರ್ಗಾವಣೆ?

“2021ರಲ್ಲಿ ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ 1053 ಜನರನ್ನು ಗುರುತಿಸಿದ್ದರು. ಅದರಲ್ಲಿ ನಿಯಮಾನುಸಾರ ವ್ಯಾಪಾರ ನಡೆಸುವ 667ಮಂದಿ ಅರ್ಹರೆಂದು ಅಧಿಕೃತ ಬೀದಿ ವ್ಯಾಪಾರಿಗಳೆಂದು ಗುರುತಿಸಿ ಐಡಿ ಕಾರ್ಡ್ ಮತ್ತು ಪ್ರಮಾಣ ಪತ್ರಕ್ಕೆ ಅನುಮೋದನೆ ನೀದಿತ್ತಾದರೂ ಇದುವರೆಗೂ ಐಡಿ ಕಾರ್ಡ್ ವಿತರಣೆ ಮಾಡಿಲ್ಲ. ಆದರೆ ಈಗಿನ ಸಾಲ ಮೇಳದ ಗುರಿ 3000 ಜನರಾಗಿದ್ದು, ಈ ಹಿಂದೆ ಸಾಲ ಪಡೆದವರು 4000ಮಂದಿ. ಒಟ್ಟು 7000 ಜನರು ಬೀದಿಬದಿ ವ್ಯಾಪಾರಿಗಳ ಹೆಸರಿನಲ್ಲಿ ಸಾಲ ಪಡೆಯಲಿದ್ದಾರೆ” ಎಂದು ಅವರು ಹೇಳಿದ್ದಾರೆ.

ಅಧಿಕೃತ 667 ಬೀದಿ ವ್ಯಾಪಾರಿಗಳಿಗೆ ಸರಿಯಾದ ವ್ಯವಸ್ಥೆ ಮಾಡಲಾಗದ ಪಾಲಿಕೆ ಸಾಲ ಮೇಳದ ಮೂಲಕ ಚುನಾವಣಾ ತಯಾರಿ ನಡೆಸುವವರಿಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿರುವ ಇಮ್ತಿಯಾಝ್, “ಸ್ವನಿಧಿ ಸಾಲ ಪಡೆದ ಜನರೆಲ್ಲರೂ ಐಡಿ ಕಾರ್ಡ್ ಕೇಳಿದರೆ ಪಾಲಿಕೆ ಕೊಡಲೇಬೇಕಾಗುತ್ತದೆ. ವ್ಯಾಪಾರಕ್ಕೂ ಜಾಗವನ್ನು ನೀಡಬೇಕಾಗುತ್ತದೆ. ಬಡ ಬೀದಿಬದಿ ವ್ಯಾಪಾರಿಗಳಿಗಾಗಿ ಇರುವ ಯೋಜನೆಯನ್ನು ಸರಕಾರವೇ ದುರುಪಯೋಗ ಮಾಡುವುದು ಎಷ್ಟು ಸರಿ” ಎಂದು ಅವರು ಪ್ರಶ್ನಿಸಿದ್ದಾರೆ.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಯಾವ ಬಾಯಿಂದ ಮುಗಿದ ಪ್ರಕರಣ ಅಂತ ಹೇಳ್ತೀರಿ? Janashakthi Media

Donate Janashakthi Media

Leave a Reply

Your email address will not be published. Required fields are marked *