ಬೆಳಗಾವಿ: ಶಾಸಕರಿಗೆ ದಿನದ ಭತ್ಯೆ ನೀಡಲಾಗುತ್ತಿದೆ. ಇಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಉಚಿತವಾಗಿ ಊಟ, ಉಪಾಹಾರ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅದಕ್ಕೆ ತಗುಲುವ ವೆಚ್ಚವನ್ನು ವಿಧಾನಸಭೆ ಅಧ್ಯಕ್ಷ, ವಿಧಾನ ಪರಿಷತ್ ಸಭಾಪತಿ ಅಥವಾ ಸಂಬಂಧಿತ ಅಧಿಕಾರಿಯಿಂದ ಭರಿಸಿಕೊಳ್ಳುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿವೇಶನ ವೇಳೆ ಊಟ, ಉಪಾಹಾರಕ್ಕಾಗಿ ಶಾಸಕರಿಗೆ ದಿನಕ್ಕೆ ₹2,500 ಭತ್ಯೆ ನೀಡಲಾಗುತ್ತಿದೆ. ಈ ಹಣದಲ್ಲೇ ಶಾಸಕರು ಊಟ, ಉಪಾಹಾರ ಸೇವಿಸಬಹುದು. ಹಾಗಾಗಿ ಅವರಿಗೆ ಉಚಿತವಾಗಿ ಊಟ, ಉಪಾಹಾರ ನೀಡದಂತೆ ವಿಧಾನಸಭೆ ಅಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂದರು.
ಇದನ್ನೂ ಓದಿ : ವಿಜಯಪುರ ರೈಲು ಸಂಚಾರಕ್ಕೆ ಬೈಪಾಸ್ ಮಾರ್ಗ ಸಿದ್ಧ: ಶೀಘ್ರವೇ ಹೊಸ ರೈಲು ಸೇವೆ
‘ಅಧಿವೇಶನದಲ್ಲಿ ಭತ್ಯೆ ಪಡೆದುಕೊಳ್ಳುತ್ತಿರುವ ಶಾಸಕರಿಗೆ ಉಚಿತವಾಗಿ ಊಟ, ಉಪಾಹಾರ ನೀಡಲು ನಿಯಮಾವಳಿಯಲ್ಲಿ ಅವಕಾಶವಿದ್ದರೆ, ಅದರ ಪ್ರತಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ವಿಧಾನಸಭೆ ಸಚಿವಾಲಯದ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ, ಯಾರೂ ನಿಖರ ಮಾಹಿತಿ ನೀಡದೆ ಸತಾಯಿಸುತ್ತಿರುವ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಆರೋಪಿಸಿದರು.
ಸದನದ ಕಲಾಪಗಳಲ್ಲಿ ಕಡ್ಡಾಯವಾಗಿ ಭಾಗವಹಿಸದ ಶಾಸಕರಿಗೆ ಸರ್ಕಾರದಿಂದ ನೀಡಲಾಗುವ ಭತ್ಯೆ ತಡೆಯುವ ಬದಲಿಗೆ, ಹಾಜರಾತಿ ಹೆಚ್ಚಳಕ್ಕಾಗಿ ಸರ್ಕಾರದಿಂದಲೇ ಉಚಿತವಾಗಿ ಊಟ, ಉಪಾಹಾರ ನೀಡುವುದನ್ನು ಮುಂದುವರಿಸುವುದು ಸರಿಯಲ್ಲ’ ಎಂದು ದೂರಿದರು.
ಇದನ್ನೂ ನೋಡಿ : ಕರ್ನಾಟಕದ 17 ಭಾಷೆಗಳಲ್ಲಿ ಸಂವಿಧಾನ ಪೀಠಿಕೆ
